Advertisement

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಲಿ

07:52 PM Dec 07, 2019 | Naveen |

ಶಿವಮೊಗ್ಗ: ನೂತನವಾಗಿ ರೂಪಿಸಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದಲ್ಲಿ, ಈಗಿನ ಏಕಶಿಸ್ತೀಯ ಉನ್ನತ ಶಿಕ್ಷಣ ತೆರೆಮರಿಗೆ ಸರಿದು, ಬಹುಶಿಸ್ತೀಯ ಶಿಕ್ಷಣ ಪದ್ಧತಿ ಅಸ್ತಿತ್ವಕ್ಕೆ ಬರಲಿದೆ ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಕರಡು ರಚನಾ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರೊ| ಎಂ. ಎನ್‌. ಶ್ರೀಧರ್‌ ಅಭಿಪ್ರಾಯಪಟ್ಟರು.

Advertisement

ಕುವೆಂಪು ವಿಶ್ವವಿದ್ಯಾಲಯದ ಪಿ.ಎಂ.ಇ. ಮಂಡಳಿಯು ಶುಕ್ರವಾರ ಪ್ರೊ| ಎಸ್‌.ಪಿ.ಹಿರೇಮಠ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಅವರು ರಾಷ್ಟ್ರೀಯ ಶಿಕ್ಷಣ ನೀತಿ 2019ರ ಕುರಿತು ಮಾತನಾಡಿದರು.

ಪ್ರಸ್ತುತವಿರುವ ಮೆಡಿಕಲ್‌, ಟೆಕ್ನಾಲಜಿಕಲ್‌, ಸಾಂಪ್ರಾದಾಯಿಕ ವಿವಿಗಳ ಏಕನಿಕಾಯ ಬೋಧನೆಯನ್ನು ತೆರವುಗೊಳಿಸಿ, ಎಲ್ಲ ನಿಕಾಯ-ವಿಷಯಗಳನ್ನು ಒಳಗೊಂಡ ಸಮಗ್ರ ಬಹುಶಿಸ್ತೀಯ ಮಾದರಿಯನ್ನು ಜಾರಿಗೆ ತರಲಿದೆ ಎಂದರು.

ಪದವಿ ಹಂತದಲ್ಲಿ ಲಿಬರಲ್‌ ಆರ್ಟ್ಸ್ ಎಂಬ ಕೋರ್ಸ್‌ ಇರಲಿದ್ದು, ಕಲಾ, ವಿಜ್ಞಾನ, ವಾಣಿಜ್ಯ, ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಪರಸ್ಪರ ಶಿಸ್ತಿನ ಒಂದೊಂದು ಅಥವಾ ಅವರಿಚ್ಛೆಯ ವಿಷಯಗಳನ್ನು ಅಭ್ಯಸಿಸಬಹುದು. ಒಂದು ವಿಷಯ ತಜ್ಞತೆಗೆ ಸೀಮಿತಗೊಳ್ಳದೇ ಜ್ಞಾನಗಳಿಕೆಯ ಹಂಬಲವನ್ನು ಇದು ಪೂರೈಸಲಿದೆ. ಈ ವ್ಯವಸ್ಥೆಯಲ್ಲಿ ಕಲಿಕೆಯು ವಿದ್ಯಾರ್ಥಿಗಳ ಆಸಕ್ತಿ, ಸ್ವಾತಂತ್ರ ಮತ್ತು ಸಾಮಾಜಿಕ ಓಳಗೊಳ್ಳುವಿಕೆಗಳನ್ನು ಕೇಂದ್ರೀಕರಿಸಿಕೊಂಡು ನಡೆಯಲಿದೆ. ಭಾರತದ ನಳಂದ, ತಕ್ಷಶಿಲಾ ವಿವಿಗಳ ಶಿಕ್ಷಣ ಪರಂಪರೆ, ಸುಸ್ಥಿರ ಅಭಿವೃದ್ಧಿ ಗುರಿಗಳೆಲ್ಲವನ್ನು ಒಟ್ಟುಗೂಡಿಸಿ ನೀತಿಯನ್ನು ರೂಪಿಸಿಲಾಗಿದೆ. ಇದಕ್ಕೆ ಅನುಗುಣವಾಗಿ ಶಿಕ್ಷಣ ಸಂಸ್ಥೆಗಳನ್ನು ಮರುರೂಪಿಸುವ ಸವಾಲು ಸರ್ಕಾರದ ಮುಂದಿದೆ ಎಂದು ತಿಳಿಸಿದರು.

ಉನ್ನತ ಶಿಕ್ಷಣವನ್ನು ಸಂಶೋಧನಾ ಸಂಸ್ಥೆ, ಶಿಕ್ಷಣ ಸಂಸ್ಥೆ ಮತ್ತು ಪದವಿ ನೀಡುವ ಸ್ವಾಯತ್ತ ಕಾಲೇಜು ಸಂಸ್ಥೆಗಳು ಎಂಬ ಮೂರು ವಿಭಾಗಗಳಾಗಿ ರೂಪಿಸಲಾಗುತ್ತದೆ. ಆಗ ಸಂಶೋಧನೆಗೆ ಒತ್ತು ದೊರೆಯುವ ಜೊತೆಗೆ ಸ್ಥಳೀಯ ಅಗತ್ಯಗಳನ್ನು ಅರಿತು ವಿಶೇಷ ಕೋರ್ಸ್‌ಗಳನ್ನು ರೂಪಿಸಿ ಪೂರೈಸುವ ಕಾರ್ಯ ಆಗಲಿದ್ದು, ಶಿಕ್ಷಣ ವಿಕೇಂದ್ರೀಕರಣವಾಗಲಿದೆ. ಆಡಳಿತವನ್ನು ಅನುದಾನ, ಗುಣಮಟ್ಟ ನಿರ್ಧಾರ, ಮಾನ್ಯತೆ ಮತ್ತು ನಿಯಂತ್ರಣ ಎಂಬ ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದ್ದು, ಆಯಾ ವಿಭಾಗದ ಕಾರ್ಯಚಟುವಟಿಕೆಯನ್ನು ಇದು ಸುಗಮಗೊಳಿಸಲಿದೆ ಎಂದು ಹೇಳಿದರು.

Advertisement

ಏಕಶಿಸ್ತೀಯ ಶಿಕ್ಷಣವು ಉದ್ಯೋಗಕ್ಕಾಗಿ ಮಾತ್ರ ವಿದ್ಯಾರ್ಥಿಗಳನ್ನು ರೂಪಿಸುತ್ತಿದೆ. ಹೊಸ ನೀತಿಯಲ್ಲಿ ದೊರೆಯುವ ಶಿಕ್ಷಣವು ಬದಲಾಗುವ ಜಾಗತಿಕ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿಯೂ ಸಫಲವಾಗುವ ಕ್ರಿಯಾತ್ಮಕ ಶಿಕ್ಷಣ ನೀಡಲಿದೆ. ಸಾಂಪ್ರದಾಯಿಕ ಶಿಕ್ಷಣದ ಜೊತೆಜೊತೆಗೆ ವೃತ್ತಿಪರ ಶಿಕ್ಷಣ ವಿಷಯಗಳನ್ನು ವಿದ್ಯಾರ್ಥಿಗಳು ಕಲಿಯುವ ಅವಕಾಶವನ್ನು ನೀತಿ ಒದಗಿಸಲಿದೆ. ಏಕವಿಷಯ ತಜ್ಞತೆಯು ಆವಿಷ್ಕಾರಿ ಮನೋಭಾವವನ್ನು ಕ್ಷೀಣಗೊಳಿಸುತ್ತದೆ.

ಪಾಶ್ಚಿಮಾತ್ಯರಲ್ಲಿನ ಬಹುಶಿಸ್ತೀಯ ಶಿಕ್ಷಣವು ನೋಬೆಲ್‌ ವಿದ್ವಾಂಸರನ್ನು ರೂಪಿಸುತ್ತಿದೆ ಎಂದರು. ಕುಲಪತಿ ಪ್ರೊ| ಬಿ.ಪಿ.ವೀರಭದ್ರಪ್ಪ ಮಾತನಾಡಿ, 2019ರ ಶಿಕ್ಷಣ ನೀತಿಯು ಎಲ್ಲರನ್ನು ಒಳಗೊಳ್ಳುವ ಭೌದ್ಧಿಕ ಆಸಕ್ತಿಯನ್ನು ಪೂರೈಸುವ ಸಮಗ್ರ ಶಿಕ್ಷಣ ವ್ಯವಸ್ಥೆಯಾಗಿದ್ದು, ಅಧ್ಯಾಪಕರು, ಪ್ರಾಂಶುಪಾಲರು ಹಾಗೂ ಶಿಕ್ಷಣ ಆಡಳಿತಗಾರರಿಗೆ ಶೈಕ್ಷಣಿಕೆ ಸ್ವಾತಂತ್ರ್ಯ ನೀಡುತ್ತದೆ.

ಇದನ್ನು ಬಳಸಿಕೊಂಡು ಬರುವ ದಿನಗಳಲ್ಲಿ ಹೊಸ ರೀತಿಯ ಸಾಧನೆ ಮಾಡಿ ತೋರಬೇಕಿದೆ ಎಂದರು. ವಿಶ್ವವಿದ್ಯಾಲಯದ ಕುಲಸಚಿವ ಪ್ರೊ| ಎಸ್‌.ಎಸ್‌. ಪಾಟೀಲ್‌ ಮಾತನಾಡಿದರು. ವಿವಿ ವ್ಯಾಪ್ತಿಯ ಕಾಲೇಜುಗಳ ಪ್ರಾಂಶುಪಾಲರು, ಅಧ್ಯಾಪಕರು ಮತ್ತು ಸಂಶೋಧನಾರ್ಥಿಗಳು ಇದ್ದರು. ಉಪನ್ಯಾಸದ ನಂತರ ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಂವಾದದಲ್ಲಿ ಪ್ರೊ| ಶ್ರೀಧರ್‌ ಪ್ರಶ್ನೆಗಳಿಗೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next