Advertisement

ಶಿವ ಶಿವ ಎಂದರೆ ಭಯವಿಲ್ಲ..

11:23 PM Feb 21, 2020 | Lakshmi GovindaRaj |

ಶಿವರಾತ್ರಿ ಪ್ರಯುಕ್ತ ರಾಜ್ಯದ ಹಲವೆಡೆ ಶುಕ್ರವಾರ ಮುಂಜಾನೆಯಿಂದಲೇ ಶಿವ ದೇಗುಲಗಳಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ಪುರಾಣ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವರಿಗೆ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು. ದಕ್ಷಿಣ ಕಾಶಿ ಖ್ಯಾತಿಯ ಹಂಪಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

Advertisement

ಶೃಂಗೇರಿ ಶ್ರೀ ಶಾರದಾ ಪೀಠದ ಬೆಟ್ಟದ ಶ್ರೀ ಮಲಹಾನಿಕರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಭಾರತೀತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಪೂಜೆ ಸಲ್ಲಿಸಿದರು. ಕೂಡಲಸಂಗಮಕ್ಕೆ 10 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ಸಂಗಮನಾಥನಿಗೆ ಪೂಜೆ ಸಲ್ಲಿಸುವ ಮೂಲಕ ಸಂಭ್ರಮದಿಂದ ಹಬ್ಬ ಆಚರಿಸಿದರು.

ಶ್ರೀ ಮಲಹಾನಿಕರೇಶ್ವರ ಸ್ವಾಮಿಗೆ ಶ್ರೀಗಳಿಂದ ಪೂಜೆ
ಶೃಂಗೇರಿ: ಶಿವರಾತ್ರಿ ಪ್ರಯುಕ್ತ ಶ್ರೀ ಶಾರದಾ ಪೀಠದ ಬೆಟ್ಟದ ಶ್ರೀ ಮಲಹಾನಿಕರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಬೆಳಗ್ಗೆ ಶ್ರೀಮಠದ ಎಲ್ಲಾ ದೇವಾಲಯಗಳಿಗೂ ತೆರಳಿ ದೇವರ ದರ್ಶನ ಪಡೆದು ಶ್ರೀ ಶಾರದಾ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು.

ಬಳಿಕ ಕಾಲ್ನಡಿಗೆಯಲ್ಲಿ ಬೆಟ್ಟದ ಶ್ರೀ ಮಲಹಾನಿಕರೇಶ್ವರ ಸ್ವಾಮಿ ಸನ್ನಿಧಿಗೆ ತೆರಳಿದರು. ಉಭಯ ಜಗದ್ಗುರುಗಳು ಬೆಟ್ಟದಲ್ಲಿರುವ, ಸ್ತಂಭ ಗಣಪತಿ, ಭವಾನಿ ಅಮ್ಮನವರಿಗೆ ಪೂಜೆ ಸಲ್ಲಿಸಿದ ಬಳಿಕ ಶ್ರೀ ಮಲಹಾನಿಕರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಸ್ವಾಮಿಗೆ ಶತರುದ್ರಾಭಿಷೇಕ, ಪಂಚಾಮೃತಾಭಿಷೇಕ, ಶ್ರೀಸೂಕ್ತ ಪಠಣ, ಪುರುಷಸೂಕ್ತ ಪಠಣದೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಶ್ರೀಮಠದ ಪುರೋಹಿತರಾದ ಕೃಷ್ಣಭಟ್‌, ಶಿವಕುಮಾರ ಶರ್ಮ, ಸೀತಾರಾಮ ಶರ್ಮ, ನಾಗರಾಜ ಭಟ್‌, ಶ್ರೀ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳಿಂದ ರುದ್ರ ಪಠಣ ನಡೆಯಿತು.

ತದನಂತರ ಜಗದ್ಗುರುಗಳು ಗುರುಭವನಕ್ಕೆ ತೆರಳಿ ಭಕ್ತಾದಿಗಳಿಗೆ ದರ್ಶನ ನೀಡಿದರು. ಶ್ರೀಮಠದ ಗುರುಭವನದಲ್ಲಿ ಶುಕ್ರವಾರ ರಾತ್ರಿ ಉಭಯ ಜಗದ್ಗುರುಗಳು ಶ್ರೀ ಚಂದ್ರಮೌಳೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿದರು. ಶಿವರಾತ್ರಿ ಅಂಗವಾಗಿ ಫೆ.23ರಂದು ಬೆಟ್ಟದ ಶ್ರೀ ಮಲಹಾನಿಕರೇಶ್ವರ ಸ್ವಾಮಿಯ ರಥೋತ್ಸವ ಪಟ್ಟಣದಲ್ಲಿ ನಡೆಯಲಿದೆ.

Advertisement

ಕೃಷ್ಣ-ಮಲಪ್ರಭೆ ಸಂಗಮದಲ್ಲಿ ಪುಣ್ಯಸ್ನಾನ
ಕೂಡಲಸಂಗಮ: ಸುಕ್ಷೇತ್ರ ಕೂಡಲಸಂಗಮಕ್ಕೆ ಶುಕ್ರವಾರ ರಾಜ್ಯದ ವಿವಿಧ ಭಾಗಗಳಿಂದ 10 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ಸಂಗಮನಾಥನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಂಭ್ರಮದಿಂದ ಶಿವರಾತ್ರಿ ಆಚರಿಸಿದರು. ಕೆಲ ಭಕ್ತರು ಗುರುವಾರ ರಾತ್ರಿಯೇ ಸುಕ್ಷೇತ್ರಕ್ಕೆ ಆಗಮಿಸಿ ವಾಸ್ತವ್ಯ ಮಾಡಿದ್ದರು. ಬೆಳಗ್ಗೆ ಕೃಷ್ಣ, ಮಲಪ್ರಭೆಯ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ವಿವಿಧ ಧಾರ್ಮಿಕ ಕಾರ್ಯಗಳನ್ನು ಕೈಗೊಂಡರು. ಇನ್ನೂ ಕೆಲವರು ಬೆಳಗ್ಗೆ ಆಗಮಿಸಿ ನದಿಯಲ್ಲಿ ಸ್ನಾನ ಮಾಡಿ ದಡದಲ್ಲಿ ಶಿವಸ್ಮರಣೆ ಮಾಡಿದರು.

ಸಾಯಂಕಾಲ 4ಕ್ಕೆ ಪುನಃ ಸ್ನಾನ ಮಾಡಿ ಸಂಗಮನಾಥನ ದರ್ಶನ ಪಡೆದರು. ಶಿವರಾತ್ರಿ ನಿಮಿತ್ತ ಸುಕ್ಷೇತ್ರಕ್ಕೆ ಆಗಮಿಸಿದ ಭಕ್ತರಿಗೆ ಕೂಡಲಸಂಗಮ ಅಭಿವೃದ್ಧಿ ಮಂಡಳಿ ದಾಸೋಹ ಭವನದಲ್ಲಿ ಬೆಳಗ್ಗೆಯಿಂದಲೇ ನಿರಂತರ ದಾಸೋಹ ಏರ್ಪಡಿಸಿತ್ತು. ಮುಜರಾಯಿ ಇಲಾಖೆ ವತಿಯಿಂದ ಬಂದ ಗಂಗಾ ಜಲವನ್ನು ಸಂಗಮನಾಥನಿಗೆ ಅರ್ಪಿಸಿದ ನಂತರ ಭಕ್ತರಿಗೆ ವಿತರಿಸಲಾಯಿತು.

ಬಿಲ್ವಪತ್ರೆಗಳಿಂದ ಅಲಂಕಾರ
ಗೋಕರ್ಣ: ಪುರಾಣ ಪ್ರಸಿದ್ಧ ಶ್ರೀ ಮಹಾಬಲೇಶ್ವರ ದೇವರ ಶಿವರಾತ್ರಿ ಜಾತ್ರಾ ಮಹೋತ್ಸವದ ಶಿವಯೋಗ ಮಹಾಪರ್ವದ ಶಿವಪೂಜೆಗೆ ಶುಕ್ರವಾರ ದೇಶದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು. ನಸುಕಿನ ಎರಡು ಗಂಟೆಯಿಂದಲೇ ಊರಿನ ಸುತ್ತಮುತ್ತಲಿನ ಭಕ್ತರು ಹಾಗೂ ಹಿಂದಿನ ದಿನವೇ ಮಹಾರಾಷ್ಟ್ರ, ಗೋವಾ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಬಂದಿಳಿದಿದ್ದ ಭಕ್ತರು “ಹರಹರ ಮಹಾದೇವ’ ಎಂದು ಭಕ್ತಿ ಭಾವದಿಂದ ಘೋಷಣೆ ಕೂಗುತ್ತಾ ಸಾಗಿದರು.

ಮೊದಲಿಗೆ ಕೋಟಿ ತೀರ್ಥ ಹಾಗೂ ರಾಮತೀರ್ಥಗಳಲ್ಲಿ ಪುಣ್ಯ ಸ್ನಾನ ಮಾಡಿ, ಇಲ್ಲಿನ ಶ್ರೀ ಮಹಾಗಣಪತಿ ಮಂದಿರದ ಸರದಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿ ಶ್ರೀ ಮಹಾಬಲೇಶ್ವರ ದೇವಾಲಯದ ಉದ್ದದ ಸಾಲಿನಲ್ಲಿ ನಿಂತು ಪರಶಿವನ ಆತ್ಮಲಿಂಗಕ್ಕೆ ಭಕ್ತಿ-ಭಾವದಿಂದ ಪೂಜೆ ಸಲ್ಲಿಸಿದರು. ನಂತರ ಪಾರ್ವತಿ ಮಂದಿರಕ್ಕೆ ತೆರಳಿ ದರ್ಶನ ಪಡೆದರು.ಅನಂತರ ಸಮುದ್ರ ತೀರಕ್ಕೆ ತೆರಳಿ ಮರಳಿನ ಲಿಂಗ ಮಾಡಿ ಭಕ್ತಿ ಭಾವದಿಂದ ಅರಿಸಿನ, ಕುಂಕುಮ, ಅಕ್ಷತೆ, ಬಿಲ್ವಪತ್ರೆಗಳಿಂದ ಪೂಜಿಸಿ, ಫಲಪುಷ್ಪಗಳನ್ನು ಸಮ ರ್ಪಿಸಿ ಶಿವಪಂಚಾಕ್ಷರಿ ಜಪಗಳನ್ನು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next