Advertisement

ಹೊಸ ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ

03:49 PM Oct 23, 2020 | Suhan S |

ಶಿವರಾಜ್‌ ಕುಮಾರ್‌ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಅದು ಹೊಸ ನಿರ್ದೇಶಕನ ಚಿತ್ರ ಎಂಬುದು ವಿಶೇಷ.ಆರ್‌ಕೆ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಚೌಧರಿ ಅವರು ನಿರ್ಮಿಸುತ್ತಿರುವ, ನೂತನ ಚಿತ್ರದಲ್ಲಿ ನಾಯಕರಾಗಿ ಅಭಿನಯಿಸಲಿದ್ದಾರೆ.

Advertisement

ಕೊಟ್ರೇಶ್‌ ಚಪ್ಪರದಹಳ್ಳಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಎ.ಹರ್ಷ, ಯೋಗಿ ಜಿ ರಾಜ್‌ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ಕೊಟ್ರೇಶ್‌ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಸಾಮಾಜಿಕ ಕಾಳಜಿಯಿರುವ ಈ ಚಿತ್ರದ ಕಥೆಯನ್ನು ಶಿವರಾಜಕುಮಾರ್‌ಅವರ ಬಳಿ ಹೇಳಿದಾಗ, ಕಥೆ ತುಂಬಾ ಚೆನ್ನಾಗಿದೆ ಎಂದು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. “ಶಿವಣ್ಣ ಹೊಸಬರಿಗೆ ನೀಡುವ ಪೋ›ತ್ಸಾಹ ನಿಜಕ್ಕೂ ನನ್ನಂಥಹ ನೂತನ ನಿರ್ದೇಶಕರಿಗೆ ಕಾರ್ಯ ನಿರ್ವಹಿಸಲು ಮತ್ತಷ್ಟು ಸ್ಫೂರ್ತಿದಾಯಕ’ ಎನ್ನುತ್ತಾರೆ ಕೊಟ್ರೇಶ್‌ ಚಪ್ಪರದಹಳ್ಳಿ.

ಈಗಷ್ಟೇ ಶಿವರಾಜಕುಮಾರ್‌ ಅವರು ನಾಯಕರಾಗಿ ನಟಿಸಲು ಒಪ್ಪಿಗೆ ನೀಡಿದ್ದು, ಇನ್ನು ಮುಂದೆ ಉಳಿದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಆಯ್ಕೆ ಪ್ರಾರಂಭಿಸುವುದಾಗಿ ನಿರ್ದೇಶಕರು ತಿಳಿಸಿದ್ದಾರೆ. ಸದ್ಯ ಶಿವರಾಜಕುಮಾರ್‌ ಅವರು ಭಜರಂಗಿ-2 ಚಿತ್ರೀಕರಣಮುಗಿಸಿದ್ದು, ಈ ಚಿತ್ರವನ್ನು ಎ. ಹರ್ಷನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲೂ ಶಿವರಾಜಕುಮಾರ್‌ ಅವರ ಗೆಟಪ್‌ ವಿಭಿನ್ನವಾಗಿದ್ದು, ಇತ್ತೀಚೆಗಷ್ಟೇ ಟೀಸರ್‌ ಬಿಡುಗಡೆಯಾಗಿದೆ. ­

 

ತೆರೆಮೇಲೆ ಆದಿ ಶಂಕರರ ಜೀವನ ಚರಿತ್ರೆ :

Advertisement

ಆದಿ ಶಂಕರಾಚಾರ್ಯರಜೀವನ – ಸಾಧನೆಗಳನ್ನು ಕುರಿತು ಹಲವು ಕೃತಿಗಳು, ಸಾಕ್ಷ್ಯಚಿತ್ರಗಳು, ಸಿನಿಮಾಗಳು ಈಗಾಗಲೇ ಬಂದಿವೆ. ಈಗಶಂಕರಾಚಾರ್ಯ ಜೀವನದ ಇನ್ನಷ್ಟು ಅಂಶಗಳನ್ನು ತೆರೆಮೇಲೆ ಹೇಳುವಂಥ ಮತ್ತೂಂದು ಹೊಸಚಿತ್ರ ತಯಾರಾಗುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು “ಆಚಾರ್ಯ ಶ್ರೀಶಂಕರ’.

ಭಾರತದ ಸನಾತನ ಸಂಸ್ಕೃತಿಯನ್ನು ಇಡೀ ಜಗತ್ತಿಗೆ ಸಾರಿ ಹೇಳಿದವರು ಶಂಕರಾಚಾರ್ಯರು. ಕೇವಲ 32 ವಯಸ್ಸಿಗೆ ಭಾರತದ ಮೂಲೆ ಮೂಲೆಗಳಿಗೆ ಸಂಚರಿಸಿ ಅದ್ವೆ„ತ ಸಿದ್ಧಾಂತವನ್ನು ಪ್ರತಿಪಾದಿಸಿ, ಅದನ್ನು ಜಗತ್ತಿಗೆ ಸಾರಿದ ಆದಿ ಶಂಕರರ ಜೀವನ ಬಾಲ್ಯ, ಯೌವ್ವನ ಮತ್ತು ನಿರ್ಗಮನದ ಅಪರೂಪದ ಸಂಗತಿಗಳು “ಆಚಾರ್ಯ ಶ್ರೀ ಶಂಕರ’ ಚಿತ್ರದಲ್ಲಿದೆಯಂತೆ.

ಕನ್ನಡ, ತೆಲುಗು ಮತ್ತು ಸಂಸ್ಕೃತ ಭಾಷೆಗಳಲ್ಲಿ ಏಕಕಾಲದಲ್ಲಿ ತಯಾರಾಗುತ್ತಿರುವ “ಆಚಾರ್ಯ ಶ್ರೀ ಶಂಕರ’ ಚಿತ್ರಕ್ಕೆ ವೃತ್ತಿಯಲ್ಲಿ ಲೆಕ್ಕ ಪರಿಶೋಧಕರಾಗಿರುವ ವೈ. ಎನ್‌. ಶರ್ಮಾ ಮತ್ತು ವಿಜಯಲಕ್ಷ್ಮೀ “ಎಮ್ಮನೂರು ಕ್ರಿಯೇಷನ್ಸ್‌’ ಬ್ಯಾನರ್‌ನಲ್ಲಿ ನಿರ್ಮಿಸುತ್ತಿದ್ದಾರೆ. ಈ ಹಿಂದೆರಿಯಲ್‌ಸ್ಟಾರ್‌ ಉಪೇಂದ್ರ ಅಭಿನಯದ “ಶ್ರೀಮತಿ’, “ಭಗವದ್‌ ಶ್ರೀರಾಮಾನುಜ’,”ಅಷ್ಟಾವಕ್ರ’ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ರಾಜಾ ರವಿಶಂಕರ್‌, “ಆಚಾರ್ಯ ಶ್ರೀ ಶಂಕರ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಇನ್ನೊಂದು ವಿಶೇಷವೆಂದರೆ, ಶೃಂಗೇರಿ ದಕ್ಷಿಣಾಮ್ನಾಯ ಶಾರದಾ ಪೀಠದ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು “ಆಚಾರ್ಯ ಶ್ರೀ ಶಂಕರ’ ಚಿತ್ರದ ಕಥೆ, ಚಿತ್ರಕತೆ ಮತ್ತು ಸಂಭಾಷಣೆಯನ್ನು ಪರಾಮರ್ಶಿಸಿ, ಸಮ್ಮತಿಸಿದನಂತರವಷ್ಟೇ ಚಿತ್ರೀಕರಣ ಆರಂಭಿಸಲಾಗಿತ್ತು. ಇನ್ನು “ಆಚಾರ್ಯ ಶ್ರೀ ಶಂಕರ’ ಚಿತ್ರದಲ್ಲಿ ಶಂಕರಾಚಾರ್ಯರ ಪಾತ್ರದಲ್ಲಿ ರವೀಂದ್ರಭಾಗವತ್‌ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಹಿರಿಯ ನಟರಾದ ರಾಮಕೃಷ್ಣ, ರಮೇಶ ಭಟ್‌, ಮಾ. ಲಿಖೀತ ಶರ್ಮಾ, ಮಾ. ಬಿ. ಪಿ. ರೋಹಿತ್‌ ಶರ್ಮಾ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಸಿ. ನಾರಾಯಣ ಛಾಯಾಗ್ರಹಣ, ಆರ್‌. ದೊರೆರಾಜ್‌ (ಆರ್‌.ಡಿ ರವಿ) ಸಂಕಲನವಿದೆ. ಚಿತ್ರದ ಹಾಡುಗಳಿಗೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

ಇದೇ ಜನವರಿ ತಿಂಗಳಲ್ಲಿಶೃಂಗೇರಿಯಲ್ಲಿ ಸೆಟ್ಟೇರಿದ್ದ “ಆಚಾರ್ಯ ಶ್ರೀ ಶಂಕರ’ ಚಿತ್ರದ ಚಿತ್ರೀಕರಣವನ್ನು ತೀರ್ಥಹಳ್ಳಿ, ಕುಂದಾಪುರ, ದೇವರಾಯನ ದುರ್ಗ ಮೊದಲಾದ ಕಡೆಗಳಲ್ಲಿ ನಡೆಸಲಾಗಿದೆ. ಸದ್ಯ ಚಿತ್ರದ ಶೂಟಿಂಗ್‌ ಮುಕ್ತಾಯವಾಗಿದ್ದು, ಡಬ್ಬಿಂಗ್‌ ಮತ್ತಿತರ ಪೋಸ್ಟ್‌ ಪ್ರೊಡಕ್ಷನ್‌ ಕಾರ್ಯಗಳು ಭರದಿಂದ ನಡೆಯುತ್ತಿದೆ. ಚಿತ್ರತಂಡದ ಯೋಜನೆಯಂತೆ ಎಲ್ಲ ಸರಾಗವಾಗಿ ನಡೆದರೆ, ಮುಂದಿನ ವರ್ಷ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next