Advertisement

Shirva Mescom: ವಿದ್ಯುತ್‌ ಕಣ್ಣ ಮುಚ್ಚಾಲೆ; ಪರಿಹಾರ ಕಾಣದ ಸಮಸ್ಯೆ; ರೋಸಿ ಹೋದ ಜನತೆ

10:47 AM Jul 22, 2024 | Team Udayavani |

ಶಿರ್ವ: ಶಿರ್ವ ಮೆಸ್ಕಾಂ ಉಪ ವಿಭಾಗದ ವ್ಯಾಪ್ತಿ ದೊಡ್ಡದಿದ್ದು ಬಂಟಕಲ್ಲು ಪಡುಬೆಳ್ಳೆ, ಕುರ್ಕಾಲು ಶಿರ್ವ, ಶಂಕರಪುರ, ಮಟ್ಟಾರು, ಪಾಂಬೂರು,ಜಾಲಮೇಲು, ಕುತ್ಯಾರು,ಪಾದೂರು,ಶಾಂತಿಗುಡ್ಡೆ ಮತ್ತಿತರ ಪ್ರದೇಶಗಳಿವೆ. ಸಿಬಂದಿ ಕೊರತೆ ಎದುರಿಸುತ್ತಿರುವ ಶಿರ್ವ ಮೆಸ್ಕಾಂ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಕರು ಮತ್ತು ವಿದ್ಯುತ್‌ ಬಳಕೆದಾರರ ಸಮಸ್ಯೆಗಳ ಸರಮಾಲೆಯೇ ಇದೆ. ಪರಿಸರದಲ್ಲಿ ವಿದ್ಯುತ್‌ ಕಣ್ಣಮುಚ್ಚಾಲೆ ಇದ್ದು, ಪದೇಪದೇ ವಿದ್ಯುತ್‌ ಸ್ಥಗಿತಗೊಂಡು ಜನರು ತೊಂದರೆ ಅನುಭವಿಸುತ್ತಿದ್ದಾರೆ.

Advertisement

ಕೆಲವೆಡೆ ಸಿಂಗಲ್‌ ಫೇಸ್‌, ಕೆಲವೆಡೆ ಲೋವೋಲ್ಟೆàಜ್‌ ವಿದ್ಯುತ್‌ ಸಮಸ್ಯೆಯಿಂದ ಗೃಹ ಬಳಕೆಯ ಎಲೆಕ್ಟ್ರಾನಿಕ್‌ ಉಪಕರಣಗಳು ಹಾಳಾಗುತ್ತಿದ್ದು,ಬಳಕೆದಾರರು ರೋಸಿ ಹೋಗಿದ್ದಾರೆ. ವಿದ್ಯಾರ್ಥಿಗಳಿಗೆ,ಗೃಹಿಣಿಯರಿಗೆ, ವ್ಯಾಪಾರ‌ಸ್ಥರಿಗೆ, ಉದ್ದಿಮೆದಾರರಿಗೆ, ವರ್ಕ್‌ ಫ್ರಂ ಹೋಂ ಮಾಡುತ್ತಿರುವ ಉದ್ಯೋಗಿಗಳಿಗೆ ಲ್ಯಾಪ್‌ಟಾಪ್‌, ಇಂಟರ್‌ನೆಟ್‌ ಮೊದಲಾದ ಕೆಲಸಗಳಿಗೆ ವಿದ್ಯುತ್‌ ಅನಿವಾರ್ಯ ವಾಗಿದ್ದು ತೊಂದರೆಯಾಗುತ್ತಿದೆ.

ಶಿರ್ವ ಮೆಸ್ಕಾಂ ಕಚೇರಿ ವ್ಯಾಪ್ತಿಯಲ್ಲಿ ಕೇವಲ ಬೆರಳೆಣಿಕೆಯ ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಬಂದಿ ಕೊರತೆಯಿಂದ ಸಕಾಲದಲ್ಲಿ ವಿದ್ಯುತ್‌ ಲೈನ್‌ ಸರಿಪಡಿಸಲು ಸಮಸ್ಯೆಯಾಗುತ್ತಿದೆ. ಲಭ್ಯವಿದ್ದ ಸಿಬಂದಿ ಶಿಫ್ಟ್‌ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು , ಅವರಿಗೆ ಕೆಲಸದ ಒತ್ತಡ ಹೆಚ್ಚಾಗುತಿರುವುದರಿಂದ ಬಳಕೆದಾರರ ಸಮಸ್ಯೆ ಪರಿಹಾರ ಕಾಣುವುದಿಲ್ಲ.

ಮಳೆ ಆರಂಭವಾಗುತ್ತಿದ್ದಂತೆ ಸಣ್ಣದಾಗಿ ಗಾಳಿ ಬೀಸಿದರೂ ಸಾಕು, ಶಾರ್ಟ್‌ ಸರ್ಕ್ನೂಟ್‌ ಆಗಿ ಸಮಸ್ಯೆ ಪ್ರಾರಂಭ. ಸಿಂಗಲ್‌ಲೈನ್‌,ವೋಲ್ಟೆàಜ್‌ ಏರಿಳಿತ ಸಮಸ್ಯೆ ಉಂಟಾಗಿ ಗೃಹಬಳಕೆಯ ಉಪಕರಣಗಳು ,ಕೃಷಿ ಪಂಪುಸೆಟ್ಟುಗಳು ಸುಟ್ಟು ಹೋಗುತ್ತವೆ. ಹಳೆಯದಾದ ತಂತಿಗಳು- ಟ್ರಾನ್ಸ್‌ಫಾರ್ಮರ್‌, ಓವರ್‌ ಲೋಡ್‌ ಮತ್ತು ತಂತಿ ಪಕ್ಕದಲ್ಲಿರುವ ಮರಗಳ ಗೆಲ್ಲುಗಳನ್ನು ಕಡಿಯದೆ ಇರುವುದರಿಂದ ಸಮಸ್ಯೆಗಳು ಉಂಟಾಗುತ್ತಿವೆ. ವಿದ್ಯುತ್‌ ಮಾರ್ಗದಲ್ಲಿರುವ ಜೋತಾಡುವ ಹಳೆಯ ತಂತಿ ಇರುವ ಪ್ರದೇಶಗಳಲ್ಲಿ ಒವರ್‌ಲೋಡ್‌ ಆದಾಗ ತಂತಿಗಳು ತುಂಡಾಗಿ ವಿದ್ಯುತ್‌ ವ್ಯತ್ಯಯವಾಗಿ ಸಿಬಂದಿ ಕೊರತೆಯಿಂದ ತತ್‌ಕ್ಷಣ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ. ಈ ಬಾರಿ ಮಳೆ ಜೋರಾಗಿರುವುದರಿಂದ ಹಲವು ದಿನಗಳಿಂದ ವಿದ್ಯುತ್‌ ಸಮಸ್ಯೆ ಕಾಡುತ್ತಲೇ ಇದೆ.

Advertisement

ನಾಗರಿಕರಿಂದ ಪ್ರತಿಭಟನೆ

ಮೆಸ್ಕಾಂ ಇಲಾಖೆಯ ಶಿರ್ವ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅನಿಯಮಿತ ವಿದ್ಯುತ್‌ಕಡಿತ ಮತ್ತು ಶಿರ್ವ ಮೆಸ್ಕಾಂ ಕಚೇರಿಯಲ್ಲಿನ ಸಿಬಂದಿ ಕೊರತೆ ಸಮಸ್ಯೆಯನ್ನು ಪ್ರತಿಭಟಿಸಿ 2022ರ ಜು.16 ರಂದು ಶಿರ್ವ ಮೆಸ್ಕಾಂ ಕಚೇರಿಯ ಮುಂದೆ ಬಳಕೆ ದಾರರು ಬೃಹತ್‌ ಪ್ರತಿಭಟನೆ ನಡೆಸಿ ವಿದ್ಯುತ್‌ ಅವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಉದಯವಾಣಿ ಸುದಿನ ವಿದ್ಯುತ್‌ ಬಳಕೆದಾರರ ಸಮಸ್ಯೆಗಳ ಬಗ್ಗೆ ಹಲವು ಬಾರಿ ವರದಿ ಪ್ರಕಟಿಸಿತ್ತು.

ಹುಸಿಯಾದ ಮೇಲಾಧಿಕಾರಿಗಳ ಭರವಸೆ

ಶಿರ್ವ ಗ್ರಾ.ಪಂ. ವ್ಯಾಪ್ತಿಗೆ 11 ಕೆವಿ ಶಿರ್ವ, 11 ಕೆವಿ ಮುದರಂಗಡಿ ಮತ್ತು 11 ಕೆವಿ ಬಂಟಕಲ್ಲು ಸೇರಿ 3 ಫೀಡರ್‌ಗಳು ಇದ್ದು ಹೆಚ್ಚುವರಿಯಾಗಿ 11 ಕೆವಿ ಮಟ್ಟಾರು ಫೀಡರ್‌ ಸ್ಥಾಪನೆಗೊಂಡಿದೆ. ಬೆಳಪು 110 ಕೆವಿ ಪವರ್‌ ಸ್ಟೇಷನ್‌ ಆದ ಬಳಿಕ ಶಿರ್ವಕ್ಕೆ ನಿರಂತರ ವಿದ್ಯುತ್‌ ಪೂರೈಕೆಯಾಗಲಿದೆ. ಹೆಚ್ಚುವರಿ ಸಿಬಂದಿ ನೇಮಿಸಿ ತಾಂತ್ರಿಕ ತೊಂದರೆಯಿರುವ ಕಂಡಕ್ಟರ್‌ ಮತ್ತು ಇನ್ಸುಲೇಟರ್‌ಗಳನ್ನು ಬದಲಾಯಿಸಿ ,ಟ್ರಾನ್ಸ್‌ಫಾರ್ಮರ್‌ಗಳ ಉನ್ನತೀಕರಣ,ಸಂಬಂಧಪಟ್ಟ ಪರಿಕರಗಳ ಬದಲಾವಣೆ ನಡೆಸಿ ಮುಂದಿನ ದಿನಗಳಲ್ಲಿ ವಿದ್ಯುತ್‌ಸಮಸ್ಯೆ ಪರಿಹರಿಸಲು ಪ್ರಯತ್ನ ನಡೆಸಲಾಗುವುದು ಎಂದು ಅಧಿಕಾರಿಗಳು ನೀಡಿದ ಭರವಸೆ ಪರಿಹಾರ ಕಾಣದೆ ಹುಸಿಯಾಗಿದೆ.

ಶಿರ್ವ ಮೆಸ್ಕಾಂ ಸಿಬಂದಿಗೆ ಹ್ಯಾಟ್ಸ್‌ ಅಪ್‌

ಶಿರ್ವ ಮೆಸ್ಕಾಂ ವ್ಯಾಪ್ತಿ ದೊಡ್ಡದಾಗಿರುವುದರಿಂದ 25 ರಿಂದ 30 ಖಾಯಂ ಲೈನ್‌ಮ್ಯಾನ್‌ಗಳ ಅಗತ್ಯವಿದೆ. ಪ್ರಸ್ತುತ ಇಲ್ಲಿ ಕಾರ್ಯನಿರ್ವಹಿಸುತ್ತಿರುವವರು ಬೆರಳೆಣಿಕೆಯ ಮಂದಿ ಮಾತ್ರ. ಅವರಿಗೆ ಅನಾರೋಗ್ಯದ ಸಮಸ್ಯೆ ಕಾಡಿದರಂತೂ ದೇವರೇ ಗತಿ..!  ಲಭ್ಯವಿದ್ದ ಸಿಬಂದಿ ದಿನದ 24 ಗಂಟೆ ಓಡಾಡಿದರೂ ಎಲ್ಲಾ ಪ್ರದೇಶಗಳ ವಿದ್ಯುತ್‌ ಸಮಸ್ಯೆಯನ್ನು ಮಳೆಗಾಲದಲ್ಲಿ ನಿಭಾಯಿಸುವುದು ಒಂದು ಪವಾಡವೇ ಸರಿ. ರಾತ್ರಿ ಹಗಲೆನ್ನದೆ ಕೆಲಸ ನಿರ್ವಹಿಸಿ ಸೇವೆ ನೀಡುತ್ತಿರುವ ಶಿರ್ವ ಮೆಸ್ಕಾಂ ಸಿಬಂದಿಗಳಿಗೆ ಹ್ಯಾಟ್ಸ್‌ ಅಪ್‌… ಎನ್ನಲೇಬೇಕು.

ಮೆಸ್ಕಾಂ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳು ,ಶಾಸಕರು,ಜಿಲ್ಲಾಡಳಿತ, ಮೆಸ್ಕಾಂ ಮೇಲಾಧಿಕಾರಿಗಳು ಸರಕಾರದ ಮೇಲೆ ಒತ್ತಡ ತಂದು ಪೂರ್ಣಕಾಲಿಕ ಸಿಬಂದಿ ನೇಮಿಸಿ ವಿದ್ಯುತ್‌ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಗಮನ ನೀಡಬೇಕಾಗಿದೆ.

ನೇಮಕಾತಿ ಸರಕಾರಿ ಮಟ್ಟದಲ್ಲಿ

ಜಿಲ್ಲೆಯಲ್ಲಿ ಲೈನ್‌ಮ್ಯಾನ್‌ಗಳ ಹೆಚ್ಚಿನ ಹುದ್ದೆ ಖಾಲಿಯಿದ್ದು, ಮಳೆಗಾಲದ ಕೆಲಸ ನಿರ್ವಹಣೆಗಾಗಿ ತಾತ್ಕಾಲಿಕವಾಗಿ 189 ¬ಗ್ಯಾಂಗ್‌ಮನ್‌ಗಳನ್ನು ನೇಮಿಸಿಕೊಳ್ಳಲಾಗಿದೆ. ಶಿರ್ವದಲ್ಲಿ ಕೆಲಸದ ಒತ್ತಡ ಹೆಚ್ಚಿರುವುದರಿಂದ 4 ಮಂದಿ ಹೆಚ್ಚುವರಿ ಗ್ಯಾಂಗ್‌ಮನ್‌ಗಳನ್ನು ನೇಮಿಸಿಕೊಳ್ಳಲು ತಿಳಿಸಲಾಗಿದೆ. ಲೈನ್‌ಮ್ಯಾನ್‌ಗಳ ಪೂರ್ಣಾವಧಿ ನೇಮಕಾತಿ ಸರಕಾರಿ ಮಟ್ಟದಲ್ಲಿ ಆಗಬೇಕಿದೆ. – ದಿನೇಶ್‌ ಉಪಾಧ್ಯ. ಕಾರ್ಯಪಾಲಕ ಅಭಿಯಂತರರು. ಉಡುಪಿ

ಕೆಲಸ ನಿರ್ವಹಣೆ: ಗಾಳಿ ಮಳೆ ಬಂದಾಗ ಮೈನ್‌ ಲೈನ್‌ ಆಫ್‌ ಆಗುತ್ತದೆ. ಮಳೆ ಬಂದಾಗ ಕೆಲಸ ಮಾಡಲು ಸಮಸ್ಯೆಯಾಗುವುದಿಲ್ಲ ಆದರೆ ಆಗಾಗ್ಗೆ ಬಲವಾದ ಗಾಳಿ ಬೀಸುವುದೇ ಸಮಸ್ಯೆಯಾಗಿದೆ. ಗಾಳಿ ಮಳೆಯ ನಡುವೆಯೂ ವಿದ್ಯುತ್‌ ಸರಬರಾಜು ನೀಡಲು ಲಭ್ಯವಿದ್ದ ಮೆಸ್ಕಾಂ ಸಿಬಂದಿಯೊಂದಿಗೆ ಹೆಚ್ಚುವರಿ ಸಿಬಂದಿ ಹಾಕಿ ಕೆಲಸ ನಿರ್ವಹಿಸುತ್ತಿದ್ದೇವೆ. – ಮಂಜಪ್ಪ, ಮೆಸ್ಕಾಂ ಸೆಕ್ಷನ್‌ ಆಫೀಸರ್‌,ಶಿರ್ವ

ಭರವಸೆ ಕಾರ್ಯಗತಗೊಂಡಿಲ್ಲ : ಶಿರ್ವ ಮೆಸ್ಕಾಂ ಉಪ ವಿಭಾಗದಲ್ಲಿ ವಿದ್ಯುತ್‌ ಸಮಸ್ಯೆ ಇದ್ದು ಲೈನ್‌ಮ್ಯಾನ್‌ಗಳ ನೇಮಕದ ಬಗ್ಗೆ ಕಾಪು ತಾ| ಆಡಳಿತ ಸೌಧದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ|ಕೆ. ವಿದ್ಯಾ ಕುಮಾರಿ ಅವರಿಗೆ ನಾಗರಿಕರ ಪರವಾಗಿ ಮನವಿ ಸಲ್ಲಿಸಲಾಗಿತ್ತು. ಜನಸಂಪರ್ಕ ಸಭೆಯಲ್ಲಿಯೂ ಮೆಸ್ಕಾಂ ಅಧಿಕಾರಿಗಳು ಸಮಸ್ಯೆ ಸರಿಪಡಿಸುವ ಭರವಸೆ ನೀಡಿದ್ದು ಕಾರ್ಯಗತಗೊಂಡಿಲ್ಲ. -ಕೆ.ಆರ್‌. ಪಾಟ್ಕರ್‌, ಅಧ್ಯಕ್ಷ ರು,ಬಂಟಕಲ್ಲು ನಾಗರಿಕ ಸಮಿತಿ.

-ಸತೀಶ್ಚಂದ್ರ ಶೆಟ್ಟಿ, ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next