Advertisement

ಶಿರ್ವ :ಬಟ್ಟೆ ಖರೀದಿಗೆಂದು ತಾಯಿಜೊತೆ ಬಂದು ನಾಪತ್ತೆಯಾಗಿದ್ದ ಮಗು ಶವವಾಗಿ ಬಾವಿಯಲ್ಲಿ ಪತ್ತೆ

10:02 PM Apr 03, 2021 | Team Udayavani |

ಶಿರ್ವ: ಅದಮಾರಿನಿಂದ ಬಟ್ಟೆ ಖರೀದಿಗೆಂದು ತಾಯಿಯ ಜತೆ ಮುದರಂಗಡಿಗೆ ಬಂದು ನಾಪತ್ತೆಯಾಗಿದ್ದ ಹೆಣ್ಣು ಮಗು ಬಟ್ಟೆ ಅಂಗಡಿ ಹಿಂಬದಿಯ ಬಾವಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಮುದರಂಗಡಿ ಪೇಟೆಯಲ್ಲಿ ಶನಿವಾರ ಸಂಜೆ ಸಂಭವಿಸಿದೆ.

Advertisement

ಅದಮಾರು ವಾಜಪೇಯಿ ಕಾಲನಿಯ ನಿವಾಸಿ ಕೃಷ್ಣ- ಜಯಲಕ್ಷ್ಮಿ ದಂಪತಿ ಪುತ್ರಿ 2 ವರ್ಷ 9 ತಿಂಗಳ ಪ್ರಾಯದ ಮಗು ಪ್ರಿಯಾಂಕಾ ಮೃತಪಟ್ಟಾಕೆ.

ಘಟನೆಯ ವಿವರ
ಮೃತ ಬಾಲಕಿ ಮತ್ತು ಆಕೆಯ ತಾಯಿ ಬಟ್ಟೆ ಖರೀದಿಗೆಂದು ಅದಮಾರಿನಿಂದ ರಿಕ್ಷಾದಲ್ಲಿ 4-30ರ ವೇಳೆಗೆ ಮುದರಂಗಡಿಯ ಬಟ್ಟೆ ಅಂಗಡಿಗೆ ಬಂದಿದ್ದರು. ತಾಯಿ ಬಟ್ಟೆ ಖರೀದಿಸುವಾಗ ಅಂಗಡಿಯ ಒಳಗೆ ಮತ್ತು ಹೊರಗೆ ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ಗಾಬರಿಗೊಂಡ ತಾಯಿ ಮತ್ತು ಅಂಗಡಿ ಮಾಲಕರು, ಸಿಬಂದಿ, ಸ್ಥಳೀಯರು ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಶಿರ್ವ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಇದನ್ನೂ ಓದಿ :ಈ ಮಣ್ಣಿನ ಮಗನೇ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ : ದೀದಿಗೆ ಮೋದಿ ತಿರುಗೇಟು

ಮಗುವಿನ ಬ್ಯಾಗ್‌ ಪತ್ತೆಯಾಗಿತ್ತು
ಮಗು ನಾಪತ್ತೆಯಾದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಎಲ್ಲೆಡೆ ಹುಡುಕಾಟ ನಡೆಸಲಾಗಿತ್ತು. ಬಟ್ಟೆ ಅಂಗಡಿ ಸಿಬಂದಿ ಮತ್ತೋರ್ವ ಮಹಿಳೆ ಅಂಗಡಿ ಸಮೀಪದ ಬಾವಿಯಲ್ಲಿ ಇಣುಕಿದಾಗ ಮಗುವಿನ ಕುತ್ತಿಗೆಯಲ್ಲಿದ್ದ ನೀಲಿ ಬಣ್ಣದ ಬ್ಯಾಗ್‌ ನೀರಿನಲ್ಲಿರುವುದು ಕಂಡುಬಂದಿತ್ತು. ತತ್‌ಕ್ಷಣ ಶಿರ್ವ ಪೊಲೀಸರು, ಅಗ್ನಿಶಾಮಕ ಸಿಬಂದಿ ಮತ್ತು ಸ್ಥಳೀಯ ಕೆಲವರು ಹುಡುಕಾಟ ನಡೆಸಿದರು. ಶವ ಸಿಗದಿದ್ದಾಗ ಮುಳುಗು ತಜ್ಞ ದೆಂದೂರುಕಟ್ಟೆಯ ಅಶೋಕ್‌ ಶೆಟ್ಟಿ ಸುಮಾರು 25 ಅಡಿ ನೀರಿರುವ ಬಾವಿಗಿಳಿದು ಶವವನ್ನು ಮೇಲಕ್ಕೆತ್ತಿದ್ದಾರೆ.

Advertisement

ಬಾವಿಗೆ ಬಿದ್ದಿರುವ ಶಂಕೆ
ಅಂಗಡಿಯ ಹೊರಗೆ ಆಟವಾಡುತ್ತಿದ್ದ ಮಗು ಕಟ್ಟಡದ ಬದಿಯ ಓಣಿಯಲ್ಲಿ ಹೋಗಿ ಕಟ್ಟಡದ ಹಿಂಬದಿಯಲ್ಲಿದ್ದ ಕಡಿಮೆ ಎತ್ತರದ ಆವರಣವಿರುವ ಸುಮಾರು 65 ಅಡಿ ಆಳದ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಶಿರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next