Advertisement

ಶಿರೂರ-ಭಗವತಿ ಏತ ನೀರಾವರಿಗೆ ಅಸ್ತು

06:11 PM Jul 23, 2022 | Team Udayavani |

ಬಾಗಲಕೋಟೆ: ಅಂತೂ-ಇಂತೂ ರೈತರು ಬಹು ದಿನಗಳಿಂದ ಕಾಯುತ್ತಿದ್ದ ಆಶಯ ಇದೀಗ ಈಡೇರುವ ಕಾಲ ಬಂದಿದೆ. ಕಾಲುವೆ ಇದ್ದರೂ, ಹತ್ತಿರದಲ್ಲೇ ನದಿ-ನೀರು ಎಲ್ಲವೂ ಇದ್ದರೂ ಭೂಮಿಗೆ ನೀರು ಕೊಡಲಾಗದ ಸ್ಥಿತಿಯಲ್ಲಿದ್ದ ರೈತರ ಮುಖದಲ್ಲಿ ಈಗ ಕೊಂಚ ಮಂದಹಾಸ ಮೂಡಿದೆ. ಸುಮಾರು 18 ವರ್ಷಗಳಿಂದ ನೀರು ಕಾಣದ ಕಾಲುವೆಗಳಿನ್ನು ನೀರಿನ ಝುಳು ಝುಳು ನಾದ ಕೇಳುವ ಕಾಲ ಬಂದಿದೆ.

Advertisement

ಹೌದು, ಸುಮಾರು 18 ವರ್ಷಗಳ ಹಿಂದೆಯೇ ನೂರಾರು ಕೋಟಿ ಖರ್ಚು ಮಾಡಿ, ನಿರ್ಮಿಸಿದ ಕಾಲುವೆಗೆ ಈವರೆಗೂ ಹನಿ ನೀರು ಬಂದಿರಲಿಲ್ಲ. ಹೊಲದಲ್ಲಿ ಒಣಗಿ ನಿಂತ ಕಾಲುವೆ ಕಂಡು, ರೈತರು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದರು. ನಮ್ಮ ಹೊಲಕ್ಕೂ ನೀರು ಯಾವಾಗ ಬರುತ್ತದೆ ಎಂದು ಬಕಪಕ್ಷಿಯಂತೆ ಕಾಯುತ್ತಿದ್ದರು. ಆದರೆ, 18 ವರ್ಷಗಳಿಂದಲೂ ಕಾಲುವೆಗೆ ಹನಿ ನೀರು ಬಂದಿರಲಿಲ್ಲ.

ಬಾಗಲಕೋಟೆ ತಾಲೂಕಿನ ಭಗವತಿ, ಶಿರೂರ ಹಾಗೂ ಹುನಗುಂದ ತಾಲೂಕಿನ ಕಮತಗಿ ಭಾಗದ ಭೂಮಿಗೆ ನೀರಾವರಿ ಕಲ್ಪಿಸಲು ಈ ಹಿಂದೆ ಸರ್ಕಾರ ತಿಮ್ಮಾಪುರ ಮತ್ತು ಘಟಪ್ರಭಾ ಬಲದಂಡೆ ಯೋಜನೆಯಡಿ ಕಾಲುವೆ ನಿರ್ಮಿಸಿತ್ತು. ತಿಮ್ಮಾಪುರ ಏತ ನೀರಾವರಿ ಯೋಜನೆಯಡಿ ಭಗವತಿ ಭಾಗದ ಭೂಮಿಗೆ ನೀರು ಬರಲಿಲ್ಲ. ಇನ್ನು ಘಟಪ್ರಭಾ ಬಲದಂಡೆ ಯೋಜನೆಯ ಕಾಲುವೆಯ ಕೊನೆಯ ಪ್ರದೇಶಕ್ಕೆ ನೀರಂತೂ ಕನಸಿನ ಮಾತಾಗಿತ್ತು. ಇದಕ್ಕಾಗಿ ರೈತರು ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದರು.

ಇದೀಗ ಜಿಲ್ಲೆಯವರೇ ಆದ ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವರಾದ ಹಿನ್ನೆಲೆಯಲ್ಲಿ ಅವರು ಬಾಗಲಕೋಟೆಗೆ ಬಂಪರ್‌ ಕೊಡುಗೆ ನೀಡಿದ್ದಾರೆ. ಭಗವತಿ ಹಾಗೂ ಶಿರೂರ ಏತ ನೀರಾವರಿ ಯೋಜನೆಗಳಿಗೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯುವಲ್ಲಿ ಯಶಸ್ವಿ ಕೂಡಾ ಆಗಿದ್ದಾರೆ.

ಭಗವತಿ ಯೋಜನೆಗೆ ಅಸ್ತು: ಬಾಗಲಕೋಟೆ ತಾಲೂಕಿನ ಭಗವತಿ ಏತ ನೀರಾವರಿ ಯೋಜನೆ ಮತ್ತು ಭಗವತಿ, ಹಳ್ಳೂರು, ಬೇವೂರು ಹಾಗೂ ಸಂಗಾಪುರ ಕೆರೆಗಳಿಗೆ ಆಲಮಟ್ಟಿ ಅಣೆಕಟ್ಟಿನ ಹಿನ್ನೀರಿನಿಂದ (ಘಟಪ್ರಭಾ ನದಿುಂದ) ನೀರನ್ನು ಎತ್ತಿ ತುಂಬಿಸುವ 346 ಕೋಟಿ ರೂ. ನೀರಾವರಿ ಯೋಜನೆಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಮಂಜೂರಾತಿ ನೀಡಿದೆ.

Advertisement

ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಂಚಿಕೆ ಆಗಿರುವ ಒಟ್ಟಾರೆ 303 ಟಿ.ಎಂ.ಸಿ. ಅಡಿ ನೀರಿನಲ್ಲಿ ಈ ಯೋಜನೆಯ 1.563 ಟಿ.ಎಂ.ಸಿ. ನೀರನ್ನು ಎತ್ತುವಳಿ ಮೂಲಕ ತುಂಬಿಸಲು ಕೃಷ್ಣಾ ಭಾಗ್ಯ ಜಲ ನಿಗಮದಿಂದ ಎರಡು ಹಂತದಲ್ಲಿ ಕೈಗೆತ್ತಿಕೊಳ್ಳಲು ಅನುಮೋದನೆ ದೊರೆತಿದೆ. ಒಟ್ಟು 14 ಗ್ರಾಮಗಳ 8390 ಹೆಕ್ಟೇರ್‌ ಕೃಷಿ ಭೂಮಿಗೆ ಈ ಯೋಜನೆಯಿಂದ ನೀರಾವರಿಯಾಗಲಿದೆ.

1.56 ಟಿಎಂಸಿ ನೀರು ಅಗತ್ಯ: ಭಗವತಿ ಏತ ನೀರಾವರಿ ಯೋಜನೆಗೆ ಒಟ್ಟಾರೆ ಅವಶ್ಯಕ 1.563 ಟಿ.ಎಂ.ಸಿ. ನೀರನ್ನು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-1, 2 ಮತ್ತು 3ರಡಿ ನೀರಿನ ಸಾಂದ್ರತೆಯನ್ನು ಶೇ.100ರಂತೆ ಪರಿಗಣಿಸಿ ಲಭ್ಯವಾಗುವ ಉಳಿತಾಯದ ನೀರಿನ ಪ್ರಮಾಣದಲ್ಲಿ (ತಿಮ್ಮಾಪುರ ಏತ ನೀರಾವರಿ ಯೋಜನೆಯಲ್ಲಿ ಉಳಿತಾಯವಾಗುವ 0.48 ಟಿಎಂಸಿ ನೀರಿನ ಪ್ರಮಾಣ ಒಳಗೊಂಡಂತೆ) ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ಒಟ್ಟಾರೆ ನೀರಿನ ಬಳಕೆಗೆ ಹಂಚಿಕೆಯಾಗಿರುವ 303 ಟಿಎಂಸಿ ನೀರಿನ ಹಂಚಿಕೆಯಲ್ಲಿ ಪರಿಗಣಿಸುವ ಕುರಿತು ಸರ್ಕಾರದ ಹಂತದಲ್ಲಿ ವಿವರ ಪರಿಶೀಲನೆ ನಡೆಸಿ ಈ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಲಾಗಿತ್ತು.

ಬಾಗಲಕೋಟೆ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಹಳ್ಳೂರು, ಬೇವೂರು, ಸಂಗಾಪುರ, ಬಿಲಕೆರೂರು, ಅಚನೂರು, ಮೂಡಪಲಜೀವಿ, ಕಡ್ಲಿಮಟ್ಟಿ, ಮುಗಳೊಳ್ಳಿ, ಭಗವತಿ, ಮನಿಕಟ್ಟಿ, ಬೆನಕಟ್ಟಿ, ಶಿರೂರು, ತಿಮ್ಮಾಪುರ, ಅಚತಾಪುರ ಗ್ರಾಮಗಳು ಬರಪೀಡಿತ ಗ್ರಾಮಗಳಾಗಿವೆ.

ಅಲ್ಲದೇ ಭಗವತಿ, ಹಳ್ಳೂರು, ಬೇವೂರು ಹಾಗೂ ಸಂಗಾಪೂರ ಕೆರೆಗಳು ಸಣ್ಣ ನೀರಾವರಿ ಕೆರೆಗಳಾಗಿದ್ದು, ತುಂಬಾ ಕಡಿಮೆ ಮತ್ತು ಅನಿಶ್ಚಿತ ಮಳೆ ಬೀಳುವ ಪ್ರದೇಶಗಳಲ್ಲಿ ಇರುವುದರಿಂದ ಸಂಪೂರ್ಣ ಭರ್ತಿಯಾಗದೇ ನೀರಿನ ಕೊರತೆ ನೀಗಿಸಲು ಮತ್ತು ಆ ಗ್ರಾಮಗಳ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.

ಭಗವತಿ ಗ್ರಾಮದ ಸುತ್ತಲಿನ ಸುಮಾರು 9,123 ಹೆಕ್ಟೇರ್‌ ಜಮೀನುಗಳು ಎತ್ತರದ ಪ್ರದೇಶದಲ್ಲಿದ್ದು (ತಿಮ್ಮಾಪುರ ಏತ ನೀರಾವರಿ ಮತ್ತು ಘಟಪ್ರಭಾ ಬಲದಂಡೆ ಕಾಲುವೆ ಅಚ್ಚುಕಟ್ಟು ನಡುವಿನ ಪ್ರದೇಶ) ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-1, 2 ಮತ್ತು 3ರ ಯಾವುದೇ ಯೋಜನೆಗಳಿಂದ ನೀರಾವರಿಗೆ ಒಳಪಟ್ಟಿಲ್ಲ.

ಬೇಸಿಗೆ ಕಾಲದಲ್ಲಿ ಕೆರೆಗಳ ವ್ಯಾಪ್ತಿಯಲ್ಲಿ ಬರುವ ಭೂ ಪ್ರದೇಶದಲ್ಲಿಯ ಅಂತರ್ಜಲ ಮಟ್ಟ ಹೆಚ್ಚಿಸಿ ಕೊಳವೆ ಬಾವಿಗಳಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರನ್ನು ಪೂರೈಸುವ ಅನಿವಾರ್ಯತೆ ಇತ್ತು. ಇದೀಗ ಈ ಯೋಜನೆ ಅನುಷ್ಠಾನಗೊಂಡಲ್ಲಿ ನೀರಿನ ಸಮಸ್ಯೆ ನೀಗಲಿದೆ.

ನೀರೇ ಬರಲಿಲ್ಲ: ಘಟಪ್ರಭಾ ಬಲದಂಡೆ ಕಾಲುವೆಯು ಕೇವಲ 2 ಸಾವಿರ ಕ್ಯೂಸೆಕ್‌ ಹರಿವನ್ನು ಮಾತ್ರ ತೆಗೆದುಕೊಳ್ಳುವ ಸಾಮರ್ಥಯವಿದ್ದು, ಕಾಲುವೆಯ ಮೇಲ್ಭಾಗದಲ್ಲಿ ವಿನ್ಯಾಸಿಸಿರುವಂತೆ 2100 ಕ್ಯೂಸೆಕ್ ಬದಲು 2000 ಕ್ಯೂಸೆಕ್‌ ಮಾತ್ರ ಬಿಡಲಾಗುತ್ತಿದೆ. ಕಾಲುವೆಯ ಮೇಲ್ಭಾಗದ ಪ್ರದೇಶದಲ್ಲಿ ವಾಣಿಜ್ಯ ಬೆಳೆ ಬೆಳೆಯಲಾಗುತ್ತಿದ್ದು, ಇದರಿಂದಾಗಿ ಯೋಜಿತ ಬಳಕೆಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಕಾಲುವೆ ಮೇಲ್ಭಾಗದಲ್ಲಿ ಬಳಸಲಾಗುತ್ತಿರುವುದರಿಂದ ಘಟಪ್ರಭಾ
ಬಲದಂಡೆ ಕಾಲುವೆ ನಿರ್ಮಾಣಗೊಂಡಾಗಿನಿಂದ ಕಿ.ಮೀ. 148.00ರ ನಂತರದ ಪ್ರದೇಶಕ್ಕೆ ನೀರು ಹರಿದಿಲ್ಲ. ಈ ಅಂಶ ಅಧ್ಯಯನದ ಮೂಲಕ ಪರಿಗಣಿಸಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ.

ಈ ಯೋಜನೆಯ ಜಾರಿಯಿಂದ 10224.57 ಹೆಕ್ಟೇರ್‌ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ಬಾಗಲಕೋಟೆ ವಿತರಣಾ ಕಾಲುವೆಯಿಂದ ಇಂಗಳಗಿ ವಿತರಣಾ ಕಾಲುವೆವರೆಗೆ ನೀರಾವರಿ ಸೌಲಭ್ಯ ಕಲ್ಪಿಸಲು ಬಾಗಲಕೋಟೆ ತಾಲೂಕಿನ ಮಲ್ಲಾಪುರ ಗ್ರಾಮದ ಹತ್ತಿರ ಶಿರೂರು ಏತ ನೀರಾವರಿ ಯೋಜನೆಯನ್ನು ಪ್ರಸ್ತಾಪಿಸಿ, ಅನುಷ್ಠಾನಗೊಳಿಸಲಾಗುತ್ತಿದೆ.

ಶಿರೂರ ಏತ ನೀರಾವರಿ ಯೋಜನೆಗೂ ಜೈ
ಜಿಲ್ಲೆಯ ಬಾದಾಮಿ ಹಾಗೂ ಬಾಗಲಕೋಟೆ ತಾಲೂಕಿನ ಘಟಪ್ರಭಾ ಬಲದಂಡೆ ಕಾಲುವೆ ಕಿ.ಮಿ.182.560 ರಿಂದ 199.093 ವರೆಗಿನ ಸುಮಾರು 10224.57 ಹೆಕ್ಟೇರ್‌ ನೀರಾವರಿ ವಂಚಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುವ ಶಿರೂರು ಏತ ನೀರಾವರಿ ಯೋಜನೆಯ ರೂ.243.00 ಕೋಟಿ ಮೊತ್ತದ ಕಾಮಗಾರಿಯನ್ನು 2 ಹಂತಗಳಲ್ಲಿ ಕೈಗೊಳ್ಳುವ ಯೋಜನೆಗೂ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಘಟಪ್ರಭಾ ಬಲದಂಡೆ ಕಾಲುವೆಯು 199.093 ಕಿ.ಮೀ. ಉದ್ದವಿದ್ದು, ಡಿಸಾcರ್ಜ್‌ 66.56 ಕ್ಯೂಮೆಕ್ಸ್‌ ಮೂಲಕ 1,69,129 ಹೆಕ್ಟೇರ್‌ ನೀರಾವರಿ ಅಚ್ಚುಕಟ್ಟು ಪ್ರದೇಶ ಹೊಂದಿರುತ್ತದೆ. ಆದರೆ, 2004ರಲ್ಲಿ ಘಟಪ್ರಭಾ ಬಲದಂಡೆ ಕಾಲುವೆಯ ನಿರ್ಮಾಣದ ನಂತರ ಘಟಪ್ರಭಾ ಬಲದಂಡೆ ಕಾಲುವೆಯ 148.00 ಕಿ.ಮೀ. ನಂತರದ ಪ್ರದೇಶಕ್ಕೆ ನೀರು ಹರಿಯುತ್ತಿಲ್ಲವಾದ್ದರಿಂದ ಆ ಪ್ರದೇಶಗಳು ಒಣ ಪ್ರದೇಶವಾಗಿದ್ದು, ಇದರಿಂದ ಈ ಪ್ರದೇಶ ನೀರಾವರಿ ವಂಚಿತ ಪ್ರದೇಶವನ್ನಾಗಿ ಪರಿಗಣಿಸಲಾಗಿದೆ. ಘಟಪ್ರಭಾ ಬಲದಂಡೆ ಕಾಲುವೆಯ ಕಿ.ಮೀ. 182.560 ರಿಂದ 199.093ರವರೆಗಿನ ಸುಮಾರು 10,224.57 ಹೆಕ್ಟೇರ್‌ ನೀರಾವರಿ ವಂಚಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸಲು ಪರ್ಯಾಯ ವ್ಯವಸ್ಥೆಯಾಗಿ ಶಿರೂರು ಏತ ನೀರಾವರಿ ಯೋಜನೆ ಪ್ರಸ್ತಾಪಿಸಲಾಗಿತ್ತು.

ಬಾಗಲಕೋಟೆ ತಾಲೂಕಿನ ಶಿರೂರ ಹಾಗೂ ಭಗವತಿ ಭಾಗದ ನೀರಾವರಿ ಕಾಣದ ಕಾಲುವೆಗೆ ನೀರಾವರಿ ಕಲ್ಪಿಸುವ ಎರಡೂ ಪ್ರಮುಖ ಏತ ನೀರಾವರಿ ಯೋಜನೆಗಳಿಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಭಗವತಿ ಏತ ನೀರಾವರಿ ಯೋಜನೆಯಿಂದ 8390 ಹೆಕ್ಟೇರ್‌, ಶಿರೂರ ಏತ ನೀರಾವರಿ ಯೋಜನೆಯಿಂದ 10224 ಹೆಕ್ಟೇರ್‌ ಭೂಮಿಗೆ ನೀರಾವರಿ ದೊರೆಯಲಿದೆ. ಜತೆಗೆ ಕೆಲವು ಕೆರೆಗಳಿಗೂ ನೀರು ತುಂಬಿಸಲಾಗುವುದು.
*ಗೋವಿಂದ ಕಾರಜೋಳ,
ಜಲ ಸಂಪನ್ಮೂಲ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next