Advertisement

ಶಿರಾಡಿ ಘಾಟಿ ರಸ್ತೆ : ಎರಡನೇ ಹಂತದ ಕಾಂಕ್ರೀಟ್‌ ಕಾಮಗಾರಿಗೆ ಸಿದ್ಧತೆ

12:27 PM Jan 19, 2018 | Team Udayavani |

ಉಪ್ಪಿನಂಗಡಿ: ಶಿರಾಡಿ ಘಾಟಿ ರಸ್ತೆಯ 2ನೇ ಹಂತದ ಕಾಂಕ್ರೀಟ್‌ ರಸ್ತೆ ಕಾಮಗಾರಿ 26 ತಿಂಗಳು ವಿಳಂಬವಾಗಿ
ಆರಂಭವಾಗುತ್ತಿದ್ದು, ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ.

Advertisement

2015ರ ಮಳೆಗಾಲ ಮುಗಿದ ಮೇಲೆ ಆರಂಭವಾಗಬೇಕಿದ್ದ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಲಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಂಪುಹೊಳೆಯಿಂದ ಅಡ್ಡಹೊಳೆ ತನಕ 12.38 ಕಿ.ಮೀ. ಕಾಂಕ್ರೀಟ್‌ ರಸ್ತೆ 2ನೇ ಹಂತದ ಕಾಮಗಾರಿಗೆ 2015ರಲ್ಲಿ 85.28 ಕೋಟಿ ರೂ. ಮಂಜೂರಾಗಿತ್ತು. ಇದರಲ್ಲಿ 12.38 ಕಿ.ಮೀ. ಕಾಂಕ್ರೀಟೀಕರಣಕ್ಕೆ 63.10 ಕೋಟಿ ರೂ., 21 ಕಿ.ಮೀ. ಡಾಮರೀಕರಣಕ್ಕೆ 22.18 ಕೋಟಿ ರೂ. ವಿಂಗಡಿಸಲಾಗಿದೆ. ಕಾಂಕ್ರೀಟ್‌ ರಸ್ತೆ 8.5 ಮೀಟರ್‌, ಡಾಮರ್‌ ರಸ್ತೆ 7 ಮೀಟರ್‌ ಅಗಲ ಆಗಲಿದೆ. ಓಷಿಯನ್‌ ಕನ್‌ಸ್ಟ್ರಕ್ಷನ್‌ ಇಂಡಿಯಾ ಕಂಪೆನಿ ಕಾಮಗಾರಿ ನಿರ್ವಹಿಸಲಿದೆ.

ಜರ್ಮನಿಯ ಯಂತ್ರ
ಮೊದಲ ಹಂತದ ಕಾಮಗಾರಿ ನಡೆಸಿದಾಗ ಜರ್ಮಿನಿಯಿಂದ 7.5 ಕೋಟಿ ಮೌಲ್ಯದ ಅತ್ಯಾಧುನಿಕ ಯಂತ್ರವನ್ನು ತರಿಸಿಕೊಳ್ಳಲಾಗಿತ್ತು. ಸದ್ಯ ಎರಡನೇ ಹಂತದ ಕಾಮಗಾರಿಗಾಗಿ ಮತ್ತೆ 10 ಕೋಟಿ ರೂ. ಮೌಲ್ಯದ ಯಂತ್ರವನ್ನು ತರಿಸಿಕೊಳ್ಳಲಾಗಿದೆ. ಕಾಮಗಾರಿಗೆ ಅಗತ್ಯವಾದ ಜಲ್ಲಿ, ಮರಳು ಇತ್ಯಾದಿಗಳನ್ನು ಶೇ. 50 ಪ್ರಮಾಣದಲ್ಲಿ ಶೇಖರಣೆ
ಮಾಡಿಕೊಳ್ಳ ಲಾಗಿದೆ ಎಂದು ಓಷಿಯನ್‌ ಕನ್‌ಸ್ಟ್ರಕ್ಷನ್‌ ಇಂಡಿಯಾ ಕಂಪೆನಿಯ ಆಡಳಿತ ನಿರ್ದೇಶಕ ಇನಾಯತ್‌ ಆಲಿ ತಿಳಿಸಿದ್ದಾರೆ. 

ವಿರ್ಟ್‌ಜನ್‌ ಕಂಪೆನಿಯ ಟಿಸಿಎಂ- 180 ಸೆನ್ಸರ್‌ ಪೇವರ್‌ ಯಂತ್ರವನ್ನು ಖರೀದಿ ಮಾಡಿದ್ದು, ಈ ಯಂತ್ರದಲ್ಲಿ ಸೆಂಟ್ರಿಂಗ್‌ ಇಲ್ಲದೆ ಕಾಮಗಾರಿ ನಡೆಸಬಹುದು. ಈ ಮೊದಲಿನದಕ್ಕಿಂತಲೂ ಅತ್ಯಾಧುನಿಕ ಯಂತ್ರ ಇದಾಗಿದ್ದು, ಅತಿ ವೇಗದಲ್ಲಿ ಕಾಮಗಾರಿ ನಡೆಸಲು ಅವಕಾಶ ಇದೆ ಎಂದು ಇನಾಯತ್‌ ಆಲಿ ತಿಳಿಸಿದ್ದಾರೆ. ಯಂತ್ರವನ್ನು ಶಿರಾಡಿ ಬಳಿ ಅಡ್ಡಹೊಳೆ ಪ್ಲಾಂಟ್‌ನಲ್ಲಿ ಪ್ರತಿಷ್ಠಾಪಿಸಲಾಗಿದೆ.

ಮೊದಲ ಹಂತದ ಕೆಲಸಕ್ಕೆ ಪ್ರಶಂಸೆ
ಮೊದಲ ಹಂತದ ಕಾಮಗಾರಿ ಹೆಗ್ಗದ್ದೆಯಿಂದ ಕೆಂಪುಹೊಳೆ ತನಕ 11.77 ಕಿ.ಮೀ. ಕಾಂಕ್ರಿಟೀಕರಣ 69.90 ಕೋಟಿ ರೂ. ವೆಚ್ಚದಲ್ಲಿ ಆಗಿದ್ದು, ಇದನ್ನು ಓಷಿಯನ್‌ ಕನ್‌ ಸ್ಟ್ರಕ್ಷನ್‌ ಸಂಸ್ಥೆಯೇ ನಿರ್ವಹಿಸಿತ್ತು. 2015 ಆಗಸ್ಟ್‌ 9ರಂದು ಲೋಕೋಪಯೋಗಿ ಸಚಿವ ಎಚ್‌.ಸಿ. ಮಹದೇವಪ್ಪ ಅವರು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಕೇಂದ್ರ ಭೂಸಾರಿಗೆ ಮಾಜಿ ಸಚಿವ ಆಸ್ಕರ್‌ ಫೆರ್ನಾಂಡಿಸ್‌ ಉಪಸ್ಥಿತಿಯಲ್ಲಿ ಉದ್ಘಾಟನೆ ನಡೆದಿತ್ತು. ಕಾಮಗಾರಿ ಗುಣಮಟ್ಟದ ಬಗ್ಗೆ ಜನಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಹೆದ್ದಾರಿ ಇಲಾಖೆಯಿಂದಲೂ ಪ್ರಶಂಸೆ ವ್ಯಕ್ತವಾಗಿತ್ತು.

Advertisement

ಶಿರಾಡಿ ಘಾಟಿ ರಸ್ತೆ ಬಂದ್‌
ಬೆಂಗಳೂರು-ಮಂಗಳೂರು ನಡುವಿನ ಪ್ರಯಾಣಕ್ಕೆ ಅತಿ ಹೆಚ್ಚಾಗಿ ಬಳಕೆಯಾಗುವ ಶಿರಾಡಿ ಘಾಟಿ ರಸ್ತೆಯನ್ನು ಜ. 20ರಿಂದ ಕಾಮಗಾರಿ ಮುಗಿಯುವ ತನಕ ಬಂದ್‌ ಮಾಡಲಾಗುತ್ತಿದೆ. ಕಾಮಗಾರಿ ಸಂದರ್ಭದಲ್ಲಿ ವಾಹನಗಳು ಹಾದು ಹೋದರೆ ಗುಣಮಟ್ಟ ಕುಸಿಯುತ್ತದೆ. ಹೀಗಾಗಿ, ರಸ್ತೆ ಸಂಚಾರವನ್ನು ಸಂಪೂರ್ಣ ಬಂದ್‌ ಮಾಡಲು ಇಲಾಖೆ ನಿರ್ಧರಿಸಿದೆ. ವಾಹನಗಳ ಸಂಚಾರಕ್ಕೆ ಬದಲಿ ರಸ್ತೆಯನ್ನೂ ತೋರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next