Advertisement

Houthi militant; ಹಡಗು ದಾಳಿಕೋರರಿಗೆ ಕಠಿನ ಶಿಕ್ಷೆ ಆಗಲಿ

12:39 AM Jan 02, 2024 | Team Udayavani |

ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ಧ ಇತ್ತೀಚಿನ ದಿನಗಳಲ್ಲಿ ಒಂದು ಪ್ರದೇಶ ಮತ್ತು ರಾಷ್ಟ್ರಗಳ ನಡುವಿನ ವ್ಯಾಜ್ಯ ಹಾಗೂ ಸಂಘರ್ಷಕ್ಕೆ ಸೀಮಿತವಾಗುವಂತೆ ಕಾಣುತ್ತಿಲ್ಲ. ಸಂಘರ್ಷ ಈ ಜಗತ್ತಿಗೆ ಆತಂಕ ತಂದೊಡ್ಡಲಿದೆಯೇ ಎಂಬ ಭೀತಿ ವ್ಯಕ್ತವಾಗತೊಡಗಿದೆ. ಅದಕ್ಕೆ ಕಾರಣಗಳೂ ಇಲ್ಲದೇ ಇಲ್ಲ. ಅರಬಿ ಸಮುದ್ರದಲ್ಲಿ ಮಂಗಳೂರಿಗೆ ಬರುತ್ತಿದ್ದ ತೈಲ ಸಾಗಣೆ ಹಡಗು, ಎಂ.ವಿ.ಸಾಯಿಬಾಬಾ ಎಂಬ ಮತ್ತೂಂದು ತೈಲ ಸಾಗಣೆ ಹಡಗಿನ ಮೇಲೆ ದಾಳಿ ಇರಾನ್‌ ಬೆಂಬಲ ಇರುವ ಹೌತಿ ಬಂಡುಕೋರರು ನಡೆಸಿದ್ದಾರೆ ಎಂದು ಹೇಳಲಾಗಿರುವ ಡ್ರೋನ್‌ ದಾಳಿಯೇ ಇದಕ್ಕೆ ಕಾರಣ.

Advertisement

ಜಗತ್ತಿನ ಅರ್ಥ ವ್ಯವಸ್ಥೆಯ ಭವಿಷ್ಯ ಮತ್ತು ವಹಿವಾಟನ್ನು ನಿರ್ಧರಿಸುವ ಕೆಂಪು ಸಮುದ್ರ ಮತ್ತು ಗಲ್ಫ್ ಅಫ್ ಈಡನ್‌ ಮೂಲಕ ಸಾಗುವ ಸರಕು ಸಾಗಣೆ, ತೈಲ ಸಾಗಣೆ ಹಡಗುಗಳ ಸಂಚಾರ ಈ ಎರಡು ಪ್ರದೇಶಗಳ ಮೇಲೆಯೇ ಸಂಚರಿಸುತ್ತಿವೆ. ಗಲ್ಫ್ ಆಫ್ ಈಡೆನ್‌ ಮೂಲಕ ಭಾರತವೂ ಸೇರಿದಂತೆ ಜಗತ್ತಿನ ಹೆಚ್ಚಿನ ಭಾಗಗಳಿಗೆ ಕಚ್ಚಾ ತೈಲ ರವಾನೆಯಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಪ್ರದೇಶದಲ್ಲಿ ಪರ್ಷಿಯನ್‌ ಗಲ್ಫ್ ಪ್ರದೇಶದಲ್ಲಿರುವ ಕಚ್ಚಾ ತೈಲ ಸ್ಥಾವರಗಳು ಜಗತ್ತಿನ ಹೆಚ್ಚಿನ ಭಾಗಗಳಿಗೆ ಅನುಕೂಲಕರವಾಗಿಯೇ ಇದೆ.

ಅದನ್ನು ಗಮನದಲ್ಲಿಟ್ಟುಕೊಂಡೇ ಇರಾನ್‌ ಬೆಂಬಲಿತ ಹೌತಿ ಬಂಡುಕೋರರು ಕೆಂಪು ಸಮುದ್ರ ಮತ್ತು ಗಲ್ಫ್ ಆಫ್ ಈಡನ್‌ ಪ್ರದೇಶಗಳಲ್ಲಿ ಸಂಚರಿಸುವ, ಇಸ್ರೇಲ್‌ ಜತೆಗೆ ಬಾಂಧವ್ಯ ಹೊಂದಿರುವ ರಾಷ್ಟ್ರಗಳಿಗೆ ಲಿಂಕ್‌ ಆಗಿರುವ ಸರಕು ಸಾಗಣೆ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಬಗ್ಗೆ ಈ ಹಿಂದೆಯೇ ಎಚ್ಚರಿಕೆ ನೀಡಿದ್ದರು.
ಮೂರು ವರ್ಷಗಳ ಹಿಂದೆ ಚೀನ ಪ್ರೇರಿತ ಕೋವಿಡ್‌ನಿಂದಾಗಿ ಜಗತ್ತಿನ ವ್ಯವಸ್ಥೆ ಹಳಿತಪ್ಪಿ ಕೋಟ್ಯಂತರ ಜನರಿಗೆ ತೊಂದರೆಯಾಗಿತ್ತು. ಇದೀಗ ಇಸ್ರೇಲ್‌- ಹಮಾಸ್‌ ಯುದ್ಧದಿಂದಾಗಿ ಜಗತ್ತಿನ ಅರ್ಥ ವ್ಯವಸ್ಥೆ, ಆಹಾರ ಮತ್ತು ಅಗತ್ಯ ವಸ್ತುಗಳ ಪೂರೈಕೆ ಸರಪಣಿಯನ್ನು ಛೇದಿಸುವ ಕುತ್ಸಿತ ಯತ್ನ ನಡೆಸಲಾಗುತ್ತಿದೆ.

ಹೀಗಾಗಿಯೇ ಕಳೆದ ವರ್ಷದ ಸೆ.9ರಂದು ಹೊಸದಿಲ್ಲಿಯಲ್ಲಿ ನಡೆದ್ದ ಜಿ20 ರಾಷ್ಟ್ರಗಳ ಸಮ್ಮೇಳನದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾರತ ಮಧ್ಯಪ್ರಾಚ್ಯ ಸರಕು ಸಾಗಣೆಯ ಮಾರ್ಗವನ್ನು ಅಭಿವೃದ್ಧಿಪಡಿಸುವ ಬಗ್ಗೆ ಪ್ರಸ್ತಾವನೆ ಮಂಡಿಸಿದ್ದರು. ಗ್ರೀಸ್‌ನ ಪರಿಯಸ್‌ನಿಂದ ಆರಂಭವಾಗುವ ಜಲ, ನೆಲ ಮಾರ್ಗಗಳ ಮೂಲಕ ಇಸ್ರೇಲ್‌ನ ಹೈಫಾ, ಸೌದಿ ಅರೇಬಿಯಾ ಮತ್ತು ಇಸ್ರೇಲ್‌ ಗಡಿಭಾಗದಲ್ಲಿ ಇರುವ ಅಲ್‌-ಹದಿತಾ, ರಿಯಾದ್‌, ಹರ್ದಾ, ಅಲ್‌-ಗುವೈಫ‌ಟ್‌, ಜೆಬೆಲ್‌ ಅಲಿ ಮೂಲಕ ಮುಂಬಯಿ ಅಥವಾ ಗುಜರಾತ್‌ನ ಮುಂದ್ರಾ ಬಂದರಿಗೆ ಸರಕುಗಳನ್ನು ತರಿಸುವ ಮತ್ತು ರಫ್ತು ಮಾಡುವ ಬಗ್ಗೆ ಪ್ರಸಾವ ಮಾಡಿದ್ದರು.

ಉದ್ದೇಶಿತ ಪ್ರಧಾನಿ ಮೋದಿಯವರ ಸರಕು ಸಾಗಣೆಯ ದಾರಿ ಪೂರ್ಣ ಪ್ರಮಾಣದಲ್ಲಿ ಅಲ್ಲದೆ ಇದ್ದರೂ, ಕೆಲವೊಂದು ಪ್ರದೇಶಗಳ ಮೂಲಕ ಸರಕು ಸಾಗಣೆ ಮಾಡಲು ಯೋಗ್ಯವಾಗಿಯೇ ಇದೆ. ಸದ್ಯ ನಡೆಯುತ್ತಿರುವ ಹಡಗುಗಳ ಮೇಲೆ ದಾಳಿಗೆ ಹೌತಿ ಬಂಡುಕೋರರು ಕಾರಣ ಎನ್ನುವುದು ಕೇವಲ ಒಂದು ಘಟನೆಯಲ್ಲಿ ದೃಢಪಟ್ಟಿದೆ. ಹಾಗೆಂದು ಉಳಿದ ಪ್ರಕರಣಗಳಿಗೆ ರೂವಾರಿ ಯಾರು ಎನ್ನುವುದು ಗೊತ್ತಾಗಿಲ್ಲ. ಇಂಥ ಕಿಡಿಗೇಡಿತನದ ಹಂಚಿಕೆ ಯನ್ನು ಖಂಡಿಸಿ, ತಂಟೆಕೋರರಿಗೆ ಬುದ್ಧಿಕಲಿಸಲೇಬೇಕಾಗಿದೆ.

Advertisement

ಇದರ ಜತೆಗೆ ಜಗತ್ತಿಗೆ ಸರಕು ಸಾಗಣೆ, ತೈಲ ಪೂರೈಕೆ, ಆಹಾರ ವಸ್ತುಗಳ ಪೂರೈಕೆಗೆ ಸಾಂಪ್ರದಾಯಿಕ ಸೂಯಜ್‌ ಕಾಲುವೆ, ಕೆಂಪು ಸಮುದ್ರ ಮತ್ತು ಗಲ್ಫ್ ಆಫ್ ಈಡೆನ್‌ಗಳನ್ನು ಬಿಟ್ಟು ಪ್ರಧಾನಿ ಮೋದಿ ಜಿ20 ರಾಷ್ಟ್ರಗಳ ಸಮ್ಮೇಳನದಲ್ಲಿ ಪ್ರಸ್ತಾವ ಮಾಡಿದ ಬದಲಿ ಕಾರಿಡಾರ್‌ ಅನ್ನು ಬಳಕೆ ಮಾಡುವುದರ ಬಗ್ಗೆ ಮುಂದಡಿ ಇಡುವುದು ಸೂಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next