Advertisement

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಮಿಂಚಿದ ಗೌಳಿ ಪ್ರತಿಭೆ

06:32 PM Oct 16, 2021 | Team Udayavani |

ಮುಂಡಗೋಡ: ತಾಲೂಕಿನ ಪುಟ್ಟ ಗ್ರಾಮ ಚಳಗೇರಿಯ ಧನಗರ ಗೌಳಿ ಕುಟುಂಬದ ಯುವತಿಯೊಬ್ಬಳು ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ನಲ್ಲಿ ಮಿಂಚಿ 18 ವರ್ಷದ ವಯೋಮಿತಿಯಲ್ಲಿ ಕರ್ನಾಟಕದಿಂದ ಪ್ರತಿನಿಧಿಸಿದ ಹಿಂದುಳಿದ ಜನಾಂಗದ ಏಕೈಕ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ.

Advertisement

ಹೌದು. ಚಳಗೇರಿಯ ನಯನಾ ಕೊಕರೆ ಪ್ರಸ್ತುತ ಮುಂಡಗೋಡದ ಜೂನಿಯರ್‌ ಕಾಲೇಜ್‌ನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾಳೆ. ಇಲ್ಲಿನ ಬ್ರಿಜಸ್‌ ಆಫ್‌ ಸ್ಟೋಟ್ಸ್‌ನಿಂದ ತರಬೇತಿ ಪಡೆದ ನಯನಾ 2021ರ ಅಕ್ಟೋಬರ್‌ 11ರಂದು ದೆಹಲಿಯ ಜವಾಹರಲಾಲ ನೆಹರು ಕ್ರೀಡಾಂಗಣದಲ್ಲಿ ನಡೆದ 3ನೇ ನ್ಯಾಷನಲ್‌ ಓಪನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ ಶಿಪ್‌ನಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿ 400 ಮೀಟರ್‌ ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ರಾಜ್ಯ, ಜಿಲ್ಲೆ ಮತ್ತು ತಾಲೂಕಿನ ಕೀರ್ತಿ ಪತಾಕೆ ಹಾರಿಸಿದ್ದಾರೆ.

ದಟ್ಟ ಅಡವಿಯಲ್ಲಿ ವಾಸಿಸುವ ದನಗರ ಗೌಳಿ ಜನಾಂಗದ ಗಂಗಾರಾಮ ಕೊಕರೆ ಮತ್ತು ಗಂಗೂಬಾಯಿ ದಂಪತಿಯ ಪುತ್ರಿ ನಯನಾ. ಅವಳು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ತಮ್ಮ ಗ್ರಾಮ ಚಳಗೇರಿಯಲ್ಲಿ ಮುಗಿಸಿದ್ದು, ಕಾತೂರಿನ ಪ್ರೌಢಶಾಲೆಯಲ್ಲಿ 8 ಮತ್ತು 9ನೇ ತರಗತಿವರೆಗೆ ವ್ಯಾಸಂಗ ಮಾಡಿ ನಂತರ ಲೊಯೋಲ ಪ್ರೌಢಶಾಲೆಯಲ್ಲಿ ಎಸ್‌ಎಸ್‌ ಎಲ್‌ಸಿ ಮುಗಿಸಿದ್ದಾಳೆ. 7ನೇ ತರಗತಿಯಲ್ಲಿದ್ದಾಗ ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ 100ಮೀ., 200ಮೀ., ಮತ್ತು 400ಮೀ. ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾಳೆ.

10ನೇ ತರಗತಿಯಲ್ಲಿ ಓದುತ್ತಿರುವಾಗ ರಾಜ್ಯಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಿ 4ನೇ ಸ್ಥಾನ ಪಡೆದಿದ್ದಾಳೆ. ಬಾಲ್ಯದಿಂದಲೂ ಅಥ್ಲೆಟಿಕ್ಸ್‌ನಲ್ಲಿ ತುಂಬಾ ಆಸಕ್ತಿ ಹೊಂದಿದ ಮಗಳು ನಯನಾಗೆ ಅವರ ತಂದೆ-ತಾಯಿ ಕಷ್ಟದಲ್ಲಿಯೂ ಅವರಿಗೆ ಆತ್ಮಸ್ಥೆçರ್ಯ ತುಂಬುತ್ತಾ ಬಂದಿದ್ದಾರೆ.

ಒಲಿಂಪಿಕ್ಸ್‌ಗಾಗಿ ತಾಲೀಮು
ಗಂಗಾರಾಮ ಕೊಕರೆ ಮತ್ತು ಗಂಗೂಬಾಯಿ ದಂಪತಿಗೆ ಐವರು ಮಕ್ಕಳು. ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರು. ಇವರಲ್ಲಿ ನಯನಾ ಚಿಕ್ಕವಳು. ಗೌಳಿ ಜನಾಂಗವು ಹಿಂದುಳಿದ ಜನಾಂಗವಾಗಿದೆ. ಈ ಸಮುದಾಯದಲ್ಲಿ ಹುಟ್ಟಿ ತನ್ನ ಕಷ್ಟದ ಜೀವನದಲ್ಲಿಯೂ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ನಯನಾ ಮಿಂಚುತ್ತಿದ್ದಾರೆ. ಮುಂದೆ 2023-24ರಲ್ಲಿ ನಡೆಯುವ ಒಲಿಂಪಿಕ್ಸ್‌ಗಾಗಿ ತಾಲೀಮು ಕೂಡ ನಡೆಸಿದ್ದಾರೆ.

Advertisement

ಕಳೆದ ಮೂರು ವರ್ಷದಿಂದ ಬ್ರಿಜಸ್‌ ಆಫ್‌ ಸ್ಟೋರ್ಟ್ಸ್ ನಿಂದ ಅಥ್ಲೆಟಿಕ್ಸ್‌ನ ತರಬೇತಿ ಪಡೆಯುತ್ತಾ ಬಂದಿದ್ದೇನೆ. ಕ್ರೀಡೆಯಲ್ಲಿ ಆಸಕ್ತಿ ಇದ್ದವರು ತಾಲೂಕಿನಲ್ಲಿ ಬಹಳಷ್ಟು ಕ್ರೀಡಾಪಟುಗಳು ಇದ್ದಾರೆ. ಅದರಲ್ಲಿಯೂ ಚೆನ್ನಾಗಿ ಸಾಧನೆ ಮಾಡುವವರು 13 ಪ್ರತಿಭೆಗಳು ಇದ್ದಾರೆ. ಉತ್ತಮ ಅಭ್ಯಾಸಕ್ಕಾಗಿ ತಾಲೂಕಿನ ಕ್ರೀಡಾಂಗಣದ ಓಡುವ ಟ್ರಾಕ್‌ ಸರಿಪಡಿಸಿದರೆ ಇನ್ನೂ ಹೆಚ್ಚಿನ ಪ್ರತಿಭೆಗಳು ಸಾಧನೆ ಮಾಡಬಹುದು. ಮೊನ್ನೆ ದೆಹಲಿಯಲ್ಲಿ ನಡೆದ ಕ್ರೀಡಾಕೂಟದ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ್ದೇನೆ. ಮುಂಬರುವ ಒಲಿಂಪಿಕ್ಸ್‌ಗಾಗಿ ಹೆಚ್ಚಿನ ತರಬೇತಿ ಪಡೆದು ಗುರಿ ಮುಟ್ಟುವ ಪ್ರಯತ್ನ ಮಾಡುತ್ತೇನೆ.
ನಯನಾ ಕೊಕರೆ, ಅಥ್ಲೀಟ್‌

ನಯನಾ ಹಾಗೆ ತಾಲೂಕಿನಲ್ಲಿ ಬಹಳಷ್ಟು ಪ್ರತಿಭೆಗಳು ಇದ್ದಾರೆ. ಅವರು ಕೂಡ ಮುಂದೆ ಬರಬೇಕು. ಅಂತಹ ಕ್ರೀಡಾಪಟುಗಳಿಗೆ ಬ್ರಿಜಸ್‌ ಆಫ್‌ ಸ್ಟೋರ್ಟ್ಸ್ ಬೆನ್ನೆಲುಬು ಆಗಿ ನಿಲ್ಲುತ್ತದೆ. ಗ್ರಾಮೀಣ ಭಾಗದ ಕೆಲವು ಕಡೆ ಹೆಣ್ಣು ಮಕ್ಕಳಿಗೆ ಬಾಲ್ಯದಲ್ಲಿಯೇ ಬೇಗ ಮದುವೆ ಮಾಡಿ ಬಿಡುತ್ತಾರೆ. ಅಂತಹ ಸಾಧನೆ ಮಾಡುವ ಪ್ರತಿಭೆಗಳ ಆಸೆಗೆ ತಣ್ಣೀರು ಎರಚಿದಂತಾಗುತ್ತದೆ. ಕ್ರೀಡೆಯಲ್ಲಿ ಆಸಕ್ತಿ ಇದ್ದ ಮಕ್ಕಳಿಗೆ  ಪಾಲಕರು ಪ್ರೋತ್ಸಾಹ ನೀಡಬೇಕು. ಮುಂದೆ ಅವರು ನಿಮ್ಮ ಹೆಸರು
ತರುತ್ತಾರೆ.
ರಿಜ್ವಾನ್‌ ಬೆಂಡಿಗೇರಿ, ಬ್ರಿಜಸ್‌
ಆಫ್‌ ಸ್ಟೋಟ್ಸ್‌ನ ತರಬೇತುದಾರ

*ಮುನೇಶ ಬಿ. ತಳವಾರ

Advertisement

Udayavani is now on Telegram. Click here to join our channel and stay updated with the latest news.

Next