Advertisement

ಅತ್ಯಾಧುನಿಕ ಇ-ಮೊಗ್ಗೆ ತಂತ್ರಾಂಶ ಲೋಕಾರ್ಪಣೆ

03:36 PM Dec 14, 2019 | Naveen |

ಶಿವಮೊಗ್ಗ: ನಗರದ ಜನರ ಆಶೋತ್ತರಗಳಿಗೆ ಸ್ಪಂದಿಸಲು ಶಿವಮೊಗ್ಗ ಮಹಾನಗರ ಪಾಲಿಕೆ ಮಹತ್ವದ ಹೆಜ್ಜೆ ಇರಿಸಿದ್ದು, ಪಾಲಿಕೆಗೆ ವಿವಿಧ ಸೌಲಭ್ಯಗಳನ್ನು ಬಯಸಿ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ತ್ವರಿತಗತಿಯ ಸೇವೆ ದೊರಕಿಸಿಕೊಡಲು ಅನುಕೂಲವಾಗುವಂತೆ ರೂಪಿಸಿ ಅನುಷ್ಠಾನಗೊಳಿಸಿರುವ ಅತ್ಯಾಧುನಿಕ ಇ-ಮೊಗ್ಗೆ ತಂತ್ರಾಂಶವನ್ನು ಮಹಾನಗರ ಪಾಲಿಕೆ ಮಹಾಪೌರರಾದ ಲತಾ ಗಣೇಶ್‌ ಅವರು ಲೋಕಾರ್ಪಣೆಗೊಳಿಸಿದರು.

Advertisement

ಶುಕ್ರವಾರ ಮಹಾನಗರ ಪಾಲಿಕೆಯ ಪರಿಷತ್‌ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತಂತ್ರಾಂಶ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ನೀಡುವುದು, ನಿಗ ದಿತ ಸಮಯದಲ್ಲಿ ಆಸ್ತಿ ತೆರಿಗೆ ಪಾವತಿಸಲು ಇದು ಸಹಕಾರಿಯಾಗಲಿದೆ ಎಂದರು.

ಉಪಮಹಾಪೌರ ಚನ್ನಬಸಪ್ಪ ಮಾತನಾಡಿ, ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ಮಹತ್ವದ ನಿರ್ಣಯ ಕೈಗೊಂಡು ಅನುಷ್ಠಾನಕ್ಕೆ ತಂದಿರುವುದು ಹರ್ಷದ ಸಂಗತಿಯಾಗಿದೆ. ಜನಸಾಮಾನ್ಯರ ಅರ್ಜಿಗಳು ಸಕಾಲದಲ್ಲಿ ವಿತರಣೆಯಾಗದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳು ಸಾಮಾನ್ಯವಾಗಿದ್ದವು.

ಇ-ತಂತ್ರಾಂಶದಿಂದಾಗಿ ಈ ದೂರುಗಳಿಗೆ ಮುಕ್ತಿ ದೊರೆಯಲಿದೆ ಎಂಬ ಆಶಯ ಹೊಂದಿರುವುದಾಗಿ ತಿಳಿಸಿದ ಅವರು, ವಿಶೇಷವಾಗಿ ಕಂದಾಯ ವಿಭಾಗದ ಅರ್ಜಿಗಳ ಸಕಾಲಿಕವಾಗಿ ವಿಲೇವಾರಿಯಾಗಲಿದೆ. 2020ರ ಜನವರಿ 01ರಿಂದ ಇ-ತಂತ್ರಾಂಶ ಅಧಿಕೃತವಾಗಿ ಕಾರ್ಯರೂಪಕ್ಕೆ ಬರಲಿದೆ ಎಂದರು.

ಪ್ರಸ್ತುತ ವಿಭಾಗದಲ್ಲಿ ಎಲ್ಲಾ ಖಾತೆಗಳ ವರ್ಗಾವಣೆಯನ್ನು ಪಿ.ಎಲ್‌.ಒ. ತಂತ್ರಾಂಶದಲ್ಲಿ ನಿರ್ವಹಿಸಿ ಅನುಮೋದನೆಯಾದ ನಂತರದಲ್ಲಿ ಓಯಸಿಸ್‌ ತಂತ್ರಾಂಶದಲ್ಲಿ ವರ್ಗಾವಣೆ/ಬದಲಾವಣೆಗಳನ್ನು ಮಾಡಲಾಗುತ್ತಿತ್ತು. ಪ್ರತಿ ಸ್ವತ್ತಿಗೂ ತಂತ್ರಾಂಶದಲ್ಲಿ ಪ್ರತ್ಯೇಕ ಪಿ.ಐ.ಡಿ. (ಆಸ್ತಿ ಸಂಖ್ಯೆ) ನೀಡಲಾಗಿದೆ. ಪ್ರತಿ ಸ್ವತ್ತಿನ ಸಂಪೂರ್ಣ ಮಾಹಿತಿಗಳೊಂದಿಗೆ ಸ್ವತ್ತಿನ ಛಾಯಾಚಿತ್ರವನ್ನು ಅಳವಡಿಸಲಾಗಿದೆ. ಆಸ್ತಿ ತೆರಿಗೆ ಸಂಗ್ರಹಣೆಯನ್ನು ಸಂಪೂರ್ಣ ಆನ್‌ಲೈನ್‌ ಮೂಲಕ ನಿರ್ವಹಿಸಲಾಗುತ್ತಿದೆ ಎಂದರು.

Advertisement

ಪಿ.ಒ.ಎಸ್‌. ಯಂತ್ರಗಳ ಮೂಲಕ ಸ್ವತ್ತಿನ ಪ್ರದೇಶದಲ್ಲಿಯೇ ಕರ ವಸೂಲಿಗಾರರಿಂದ ಆನ್‌ ಲೈನ್‌ ಮೂಲಕ ತೆರಿಗೆ ಸಂಗ್ರಹಣೆ ಪ್ರಗತಿಯಲ್ಲಿದೆ. ಆಸ್ತಿ ತೆರಿಗೆ ನಮೂನೆ-3ನ್ನು ಏಕಗವಾಕ್ಷಿಯ ಮೂಲಕ ಗಣಕೀಕೃತ ನಕಲನ್ನು ನೀಡಲಾಗುತ್ತಿದೆ. ಪ್ರಸ್ತುತ ಕಾಲಮಿತಿ ಇದ್ದರೂ ಸಹ ನಿಗ ತ ಅವಧಿಯಲ್ಲಿ ವಿಲೇಯಾಗದ ಕಡತಗಳ ವಿಲೇವಾರಿಯ ಬಗ್ಗೆ ಮಾಹಿತಿ ಲಭ್ಯವಾಗುತ್ತಿರಲಿಲ್ಲ. ಈ ನ್ಯೂನತೆ ಸರಿಪಡಿಸಲಾಗಿದೆ ಎಂದರು.

ಅರ್ಜಿದಾರರಿಗೆ ಕಡತದ ಸ್ಥಿತಿಗತಿಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ಹಾಗೂ ಕಡತ ಅನುಮೋದನೆಯಾದ ಬಗ್ಗೆ ಆಸ್ತಿ ವರ್ಗಾವಣೆ ಶುಲ್ಕದ ಕುರಿತು ಅರ್ಜಿದಾರರಿಗೆ ತಕ್ಷಣದ ಮಾಹಿತಿ ಲಭ್ಯವಾಗಲಿದೆ. ಅಲ್ಲದೇ ಕಡತಗಳನ್ನು ಅನುಕ್ರಮವಾಗಿ ಆದ್ಯತೆಯ ಮೇರೆಗೆ ವಿಲೇ ಮಾಡಲು ಅನುಕೂಲವಾಗಲಿದೆ ಎಂದರು. ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಮಾತನಾಡಿ, ಕಂದಾಯ ವಿಭಾಗದಲ್ಲಿ ಕಡತಗಳ ನಿರ್ವಹಣೆಗೆ ಹಾಗೂ ಖಾತೆಗಳ ವಿವರ/ಮಾಹಿತಿಗಳನ್ನು ಒಳಗೊಂಡಂತೆ ಎಲ್ಲಾ ಕಾರ್ಯಗಳನ್ನು ಡಿಜಿ ಫೈಲ್‌ ಎಂಬ ಒಂದೇ ತಂತ್ರಾಂಶದಲ್ಲಿ ನಿರ್ವಹಿಸಲಾಗುತ್ತಿರುವುದು ವಿಶೇಷವಾಗಿದೆ ಎಂದರು.

ಇಂತಹ ತಂತ್ರಾಂಶದ ಅಳವಡಿಕೆಯಿಂದ ತ್ವರಿತ ಸೇವೆ ಜೊತೆಗೆ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ ಎಂದ ಅವರು, ಈ ತಂತ್ರಾಂಶದಿಂದ ಕಡತ ವಿಲೇವಾರಿಯ ಹಂತಗಳ ಬಗ್ಗೆ ಅರ್ಜಿದಾರರ ಮೊಬೈಲ್‌ಗೆ ಸಕಾಲಿಕ ಸಂದೇಶ ರವಾನೆಯಾಗಲಿದೆ. ತಂತ್ರಾಂಶ ಬಳಕೆಯಿಂದ ಅಧಿ ಕಾರಿ/ಸಿಬ್ಬಂದಿಗಳಿಗೆ ಕಾರ್ಯದ ಒತ್ತಡ ಕಡಿಮೆಯಾಗಿ ಶೀಘ್ರವಾಗಿ ಸೇವೆ ನೀಡಲು ಅವಕಾಶವಾಗಲಿದೆ.

ಅರ್ಜಿದಾರರಿಗೆ ಮೊಬೈಲ್‌ ಮೂಲಕವೇ ಸಂದೇಶ ರವಾನೆಯಾಗುವುದರಿಂದ ಅನವಶ್ಯಕವಾಗಿ ಕಚೇರಿಗೆ ಅಲೆದಾಡುವುದು ತಪ್ಪಲಿದೆ ಎಂದರು. ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುರೇಖಾ, ಸುವರ್ಣ ಶಂಕರ್‌, ಶಂಕರ್‌, ಜ್ಞಾನೇಶ್ವರ್‌, ಮಹಾನಗರಪಾಲಿಕೆ ಆಯುಕ್ತ ಚಿದಾನಂದ ಎಸ್‌. ವಟಾರೆ ಸೇರಿದಂತೆ ಮಹಾನಗರ ಪಾಲಿಕೆಯ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next