Advertisement

ನೆರೆ ಪರಿಹಾರ ಅರ್ಜಿ ತ್ವರಿತ ವಿಲೇಗೆ ಸೂಚನೆ

04:38 PM Sep 18, 2019 | Naveen |

ಶಿವಮೊಗ್ಗ: ಭಾರೀ ಮಳೆಯಿಂದ ಸಂತ್ರಸ್ತರಾದ 5060 ಕುಟುಂಬಗಳಿಗೆ 10 ಸಾವಿರ ರೂ. ಕೊಡಲಾಗಿದೆ. ಹೊಸದಾಗಿ ಬಂದಿರುವ 1600 ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಿ ಅವರಿಗೂ ಪರಹಾರ ಕೊಡಬೇಕೆಂದು ಸಚಿವ ಕೆ.ಎಸ್‌. ಈಶ್ವರಪ್ಪ ಸೂಚಿಸಿದರು.

Advertisement

ಮಂಗಳವಾರ ಜಿಪಂ ಸಭಾಂಗಣದಲ್ಲಿ ನಡೆದ ಮಹಾನಗರ ಪಾಲಿಕೆ ವ್ಯಾಪ್ತಿಯ ಕಾಮಗಾರಿಗಳು, ಎಸ್‌ಎಫ್‌ಸಿ, ಲೋಕೋಪಯೋಗಿ, ನೀರಾವರಿ ಇಲಾಖೆ, ಆಶ್ರಮ ಮನೆ ಹಂಚಿಕೆ ಕುರಿತಂತೆ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಪೂರ್ಣ, ಭಾಗಶಃ ಮನೆ ಕಳೆದುಕೊಂಡವರ ವಿವರಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು. ಮನೆಗೆ ನೀರು ನುಗ್ಗಿದ, ಮನೆ ಬಿದ್ದಿರುವ ಬಗ್ಗೆ ಹೊಸದಾಗಿ 1600 ಅರ್ಜಿಗಳು ಪಾಲಿಕೆ ಕಡೆಯಿಂದ ಬಂದಿವೆ. ಅವುಗಳಲ್ಲಿ ಬ್ಯಾಂಕ್‌ ಅಕೌಂಟ್ ವಿವರ, ಹೆಸರು, ವಾರ್ಡ್‌ ಬಿಟ್ಟರೆ ಬೇರೆ ಯಾವುದೇ ಮಾಹಿತಿ ಇಲ್ಲ. ನಿಜವಾದ ಫಲಾನುಭವಿಗಳನ್ನು ಹುಡುಕುವುದು ಹೇಗೆ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದರು. ತಹಸೀಲ್ದಾರ್‌ ಗಿರೀಶ್‌ ಅಸಹಾಯಕತೆ ವ್ಯಕ್ತಪಡಿಸಿದರು. ಉಪ ಮೇಯರ್‌ ಚನ್ನಬಸಪ್ಪ ಮಧ್ಯ ಪ್ರವೇಶಿಸಿ, ಹಳೇ ವಿಷಯ ಮನಸ್ಸಲ್ಲಿ ಇಟ್ಟುಕೊಂಡು ಬಡವರ ಮೇಲೆ ಸೇಡು ತೀರಿಸಿಕೊಳ್ಳಬೇಡಿ. ಅರ್ಜಿಗಳನ್ನು ಪರಿಶೀಲಿಸಿ ಅವರಿಗೆ ಪರಿಹಾರ ಕೊಡಿ ಎಂದರು. ಸಚಿವ ಕೆ.ಎಸ್‌. ಈಶ್ವರಪ್ಪ ಕೂಡ ಇದಕ್ಕೆ ಧ್ವನಿಗೂಡಿಸಿದರು.

ಮಳೆ ನೀರು ನುಗ್ಗಿದ್ದ 72 ಜನ ಅಂಗಡಿ ಮಾಲೀಕರಿಗೂ ಪರಿಹಾರ ಕೊಡಬೇಕೆಂದು ಚೇಂಬರ್‌ ಆಫ್‌ ಕಾಮರ್ಸ್‌ನಿಂದ ಮನವಿ ಕೊಟ್ಟಿದ್ದಾರೆ. ಸಿಎಂ ಕೂಡ ವಿಶೇಷ ಪ್ರಕರಣವೆಂದು ಪರಿಗಣಿಸಿ 25 ಸಾವಿರ ರೂ. ಕೊಡಲು ಸೂಚಿಸಿದ್ದಾರೆ. ಅವರನ್ನು ಪಟ್ಟಿಯಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಟೆಂಡರ್‌ ಕರೆಯಿರಿ: ಆಶ್ರಯ ಸಮಿತಿ ಅಡಿ 2242 ಫಲಾನುಭವಿಗಳು 80 ಸಾವಿರ ರೂ. ಹಣ ಕಟ್ಟಿದ್ದಾರೆ. 1313 ಜನ ಹೊಸದಾಗಿ ಅರ್ಜಿ ಹಾಕಿದ್ದಾರೆ. ಅವರಿನ್ನು ಹಣ ಕಟ್ಟಬೇಕಿದೆ ಎಂದು ಅಧಿಕಾರಿ ತಿಳಿಸಿದರು. ಒಟ್ಟು 4836 ಮನೆಗಳಿಗೆ ಟೆಂಡರ್‌ ಕರೆಯಿರಿ ಎಂದು ಸಚಿವರು ಸೂಚಿಸಿದರು. ಹಣ ಕಟ್ಟದೆ ಟೆಂಡರ್‌ ಕರೆಯುವುದು ಕಷ್ಟ ಎಂದು ಅಧಿಕಾರಿ ತಿಳಿಸಿದಾಗ, ಟೆಂಡರ್‌ ಕರೆದು ಕಾಮಗಾರಿ ಆರಂಭಿಸುವಷ್ಟರಲ್ಲಿ ಅವರು ಹಣ ಕಟ್ಟುತ್ತಾರೆ. ನೀವು ಟೆಂಡರ್‌ ಕರೆಯಿರಿ ಎಂದು ಮತ್ತೂಮ್ಮೆ ಸೂಚನೆ ಕೊಟ್ಟರು. ಕೊನೆಗೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಮಧ್ಯ ಪ್ರವೇಶಿಸಿ ಈಗಾಗಲೇ ಹಣ ಪಾವತಿಸಿರುವವರನ್ನು ಪ್ಯಾಕೇಜ್‌ 1, ಉಳಿದವರನ್ನು ಪ್ಯಾಕೇಜ್‌ 2 ಎಂದು ಪರಿಗಣಿಸಿ ವಾರದೊಳಗೆ ಟೆಂಡರ್‌ ಕರೆಯಿರಿ ಎಂದರು.

Advertisement

ಕಾರ್ಮಿಕರಿಗೂ ಸಹ ಆಶ್ರಯ ಮನೆ ಕಟ್ಟಿಕೊಡಲಾಗುತ್ತಿದ್ದು ಅವರು ಹೆಚ್ಚುವರಿ ಹಣ ಹಾಕಿ ಮನೆ ದೊಡ್ಡ ಮನೆ ಕಟ್ಟಿಕೊಳ್ಳಲು ಸಿದ್ಧರಿದ್ದಾರೆ. ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದರು.

ಪಾರ್ಕ್‌ ಅಭಿವೃದ್ಧಿ: ನಗರದಲ್ಲಿ ಒಟ್ಟು 392 ಪಾರ್ಕ್‌ಗಳಿದ್ದು, ಅದರಲ್ಲಿ 100 ಪಾರ್ಕ್‌ಗಳನ್ನು ಅಭಿವೃದ್ಧಿ ಮಾಡಲು ಕೈಗೆತ್ತಿಕೊಳ್ಳಲಾಗಿದೆ. ಸ್ಮಾರ್ಟ್‌ಸಿಟಿ, ಅಮೃತ್‌ ಯೋಜನೆ ಅಡಿ 24 ಪಾರ್ಕ್‌ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದರು. ಎಲ್ಲ ಪಾರ್ಕ್‌ಗಳನ್ನು ಡಿಸೆಂಬರ್‌ ಒಳಗೆ ಅಭಿವೃದ್ಧಿ ಮಾಡಬೇಕು ಎಂದು ಸಚಿವರು ಆದೇಶಿಸಿದರು. ಪಾಲಿಕೆ ವತಿಯಿಂದ 35 ವಾರ್ಡ್‌ಗಳಲ್ಲೂ ಒಂದೊಂದು ಪಾಕ್‌ ನಿರ್ಮಾಣ ಕೈಗೆತ್ತಿಕೊಂಡು, ಸ್ಥಳೀಯ ವಾರ್ಡ್‌ ಸದಸ್ಯರ ಸಹಕಾರದಿಂದ ಅವುಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಸೂಚಿಸಿದರು.

ನಗರದಲ್ಲಿನ 82 ಶಾಲೆಗಳ ದುರಸ್ತಿಗೆ 8 ಕೋಟಿ ಅಗತ್ಯವಿದೆ. ಪಾಲಿಕೆ, ಎನ್‌ಡಿಆರ್‌ಎಫ್‌ ನಿಧಿ ಹಾಗೂ ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ಅವುಗಳನ್ನು ಅಭಿವೃದ್ಧಿಪಡಿಸಲು ಸೂಚಿಸಿದರು. ಶಾಲೆ ದುರಸ್ತಿಯನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಿ. ನವೆಂಬರ್‌ ಒಳಗೆ ಕಾಮಗಾರಿ ಮುಗಿಸಿ. ಹಣದ ಸಮಸ್ಯೆ ಈಗಿಲ್ಲ ಎಂದರು.

ಜಿಪಂ ಸಿಇಒ ಎಲ್.ಎಂ. ವೈಶಾಲಿ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌, ಉಪಮೇಯರ್‌ ಚನ್ನಬಸಪ್ಪ ಇತರೆ ಇಲಾಖೆ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next