Advertisement

ಫಸಲ್‌ ಬಿಮಾದಡಿ ಹೆಸರು ನೋಂದಣಿಗೆ ಕ್ರಮ ಕೈಗೊಳ್ಳಿ

01:24 PM Jul 03, 2020 | Naveen |

ಶಿವಮೊಗ್ಗ: ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಈಗಾಗಲೇ ಸಾಲ ಪಡೆಯದ ರೈತರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಸೂಚನೆ ನೀಡಿದರು.

Advertisement

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು. ಇದುವರೆಗೆ ಯೋಜನೆಯಡಿ ಜಿಲ್ಲೆಯಲ್ಲಿ ಕೇವಲ 504 ರೈತರು ಮಾತ್ರ ಹೆಸರು ನೋಂದಾಯಿಸಿದ್ದಾರೆ. ಇವರ ಪೈಕಿ 266 ಮಂದಿ ಸಾಲ ಪಡೆದಿದ್ದು, 238 ಸಾಲ ಪಡೆಯದ ರೈತರು ಇದ್ದು, 952ಎಕ್ರೆ ವಿಸ್ತೀರ್ಣವಿದೆ. ಇದುವರೆಗೆ ಸಾಲ ಪಡೆದ ರೈತರು ಕಡ್ಡಾಯವಾಗಿ ಯೋಜನೆ ವ್ಯಾಪ್ತಿಗೆ ಒಳಪಡುತ್ತಿದ್ದರು. ಆದರೆ ಈ ಬಾರಿ ಬೆಳೆ ವಿಮೆಯಿಂದ ತಮ್ಮನ್ನು ಕೈಬಿಡುವಂತೆ ಸಾಲ ಪಡೆದ ರೈತರು ಘೋಷಣಾ ಪತ್ರ ನೀಡಿದರೆ ಅವರನ್ನು ಕೈಬಿಡಲಾಗುವುದು. ಈ ಹಿನ್ನೆಲೆಯಲ್ಲಿ ಸಾಲ ಪಡೆಯದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯಡಿ ಹೆಸರು ನೋಂದಾಯಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು. ರೈತರ ಸಹಾಯಕ್ಕಾಗಿ ಬೆಳೆ ವಿಮೆ ಸಂಸ್ಥೆಯು ಪ್ರತಿ ತಾಲೂಕಿನಲ್ಲಿ ತನ್ನ ಪ್ರತಿನಿಧಿಗಳನ್ನು ನಿಯೋಜಿಸಬೇಕು. ಬೆಳೆ ವಿಮೆ ನೋಂದಣಿ ಮತ್ತು ಪರಿಹಾರ ಇತ್ಯರ್ಥ ಕುರಿತಾಗಿ ಬ್ಯಾಂಕುಗಳು ಮತ್ತು ವಿಮಾ ಸಂಸ್ಥೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.

ಬ್ಯಾಂಕ್‌ಗಳಿಗೆ ಸೂಚನೆ: ಕೋವಿಡ್ ವೇಳೆ ಸರ್ಕಾರ ವಿವಿಧ ಫಲಾನುಭವಿಗಳಿಗೆ ನೀಡುವ ಸಹಾಯಧನದ ಮೊತ್ತವನ್ನು ಬ್ಯಾಂಕುಗಳು ಯಾವುದೇ ಕಾರಣಕ್ಕೂ ಅವರ ಸಾಲದ ಮೊತ್ತಕ್ಕೆ ವರ್ಗಾಯಿಸಬಾರದು. ಈ ಕುರಿತು ಯಾವುದೇ ದೂರುಗಳು ಬರಬಾರದು ಎಂದು ಡಿಸಿ ಬ್ಯಾಂಕರ್‌ಗಳಿಗೆ ಎಚ್ಚರಿಕೆ ನೀಡಿದರು.

ಅಂತಿಮ ದಿನಾಂಕ: ಯೋಜನೆಯಡಿ ಭತ್ತ, ರಾಗಿ ಮತ್ತು ಜೋಳದ ಬೆಳೆಗಳಿಗೆ ಹೆಸರು ನೋಂದಾಯಿಸಲು ಆಗಸ್ಟ್‌ 14 ಮತ್ತು ಮುಸುಕಿನ ಜೋಳಕ್ಕೆ ವಿಮೆ ಮಾಡಿಸಲು ಜುಲೈ 31 ಅಂತಿಮ ದಿನವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next