Advertisement

ಪಾಲಿಕೆ ಸದಸ್ಯರ ಬಂಧನಕ್ಕೆ ಆಕ್ರೋಶ

01:15 PM Feb 15, 2020 | Naveen |

ಶಿವಮೊಗ್ಗ: ಸ್ಲಂ ಬೋರ್ಡ್‌ನಿಂದ ಕಟ್ಟಲಾಗುತ್ತಿದ್ದ ಮನೆಗಳ ನಿರ್ಮಾಣ ವಿಳಂಬಗೊಳ್ಳುತ್ತಿದೆ ಎಂದು ಆರೋಪಿಸಿ ಪಾಲಿಕೆ ಕಚೇರಿ ಮುಂದೆ ಪಾಲಿಕೆಯ ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರನ್ನು ಕರೆಸಿದ ಬಗ್ಗೆ ಶುಕ್ರವಾರ ನಡೆದ ಪಾಲಿಕೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

Advertisement

ಪೇಜಾವರ ಶ್ರೀಗಳು, ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಸೈನಿಕರು ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ ಜಿ. ಮಾದಪ್ಪನವರ ನಿಧನಕ್ಕೆ ಸಂತಾಪ ಸೂಚಿಸಿದ ನಂತರ ಸಭೆ ಆರಂಭವಾಯಿತು. ಸಭೆ ಆರಂಭಗೊಳ್ಳುತ್ತಿದ್ದಂತೆಯೇ ಸ್ಲಂ ಬೋರ್ಡ್‌ ನಿಂದ ನಿರ್ಮಿಸಲಾಗುತ್ತಿರುವ ಮನೆಗಳ ಯೋಜನೆ ವಿಳಂಬವಾಗುತ್ತಿದೆ ಎಂದು ಸದಸ್ಯ ಎಚ್‌.ಸಿ. ಯೋಗೀಶ್‌ ಮಾತು ಆರಂಭಿಸಿದರು.

ನಂತರ ಧ್ವನಿಗೂಡಿಸಿದ ಸದಸ್ಯ ರಮೇಶ್‌ ಹೆಗ್ಡೆ ಹಾಗೂ ಯಮುನಾ ರಂಗೇಗೌಡ, ಈ ಕುರಿತು ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದಾಗ ಪೊಲೀಸರನ್ನು ಕರೆಸಿ ಪಾಲಿಕೆ ಸದಸ್ಯರನ್ನು ಬಂಧಿಸಲಾಯಿತು. ಹಾಗಾದರೆ ಪ್ರತಿಭಟನೆ ನಡೆಸಲು ಪಾಲಿಕೆ ಸದಸ್ಯರಿಗೆ ಅಧಿಕಾರವಿಲ್ಲವಾ? ಪೊಲೀಸರನ್ನು ಕರೆಸಿದ್ದೇಕೆ ಎಂದು ಬಾವಿಗೆ ಇಳಿದು ಮಾತನಾಡಿದರು.

ನಗರದ ಪಾಲಿಕೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಂತಿ ನಗರ, ಸುಭಾಷ್‌ ನಗರ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸ್ಲಂ ನಿವಾಸಿಗಳಿಗೆ
650 ಮನೆಗಳನ್ನು ಆರು ತಿಂಗಳಲ್ಲಿ ನಿರ್ಮಿಸಿ ಕೊಡಬೇಕಿತ್ತು. ಆದರೆ, ಒಂದು ವರ್ಷವಾದರೂ
ಕೊಳೆಗೇರಿ ನಿವಾಸಿಗಳಿಗೆ ಗೃಹ ಭಾಗ್ಯ ದೊರೆತಿಲ್ಲ ಎಂದು ಪಾಲಿಕೆ ಪ್ರತಿಪಕ್ಷ ನಾಯಕ ರಮೇಶ್‌ ಹೆಗ್ಡೆ ಆರೋಪಿಸಿದರು.

ಇದಕ್ಕೆ ದನಿಯಾದ ಯಮುನಾ ರಂಗೇಗೌಡ ಇತ್ತೀಚೆಗೆ ನ್ಯಾಯ ಕೇಳುವುದಕ್ಕಾಗಿ ಸ್ಲಂ ನಿವಾಸಿಗಳು ಹಾಗೂ ಪ್ರತಿಪಕ್ಷ ನಾಯಕರು ಬಂದಾಗ ಪೊಲೀಸರನ್ನು ಬಿಟ್ಟು ಅರೆಸ್ಟ್‌ ಮಾಡಿಸಿ, ಡಿಎಆರ್‌ ಮೈದಾನಕ್ಕೆ ಕರೆದೊಯ್ಯಲಾಗಿತ್ತು. ಈ ಕುರಿತು ಪ್ರಶ್ನಿಸಿದ್ದಕ್ಕೆ ಸಚಿವರ ಭೇಟಿ ಹಿನ್ನೆಲೆಯಲ್ಲಿ ಬಂಧಿಸಿರುವುದಾಗಿ ಹೇಳಲಾಗಿತ್ತು. ನ್ಯಾಯ ಸಿಗದಿದ್ದರೆ ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಅದನ್ನು ಯಾರೂ ಕಸಿಯುವಂತಿಲ್ಲ. ಪಾಲಿಕೆ ಪಕ್ಷ ಅಥವಾ ಸಚಿವರಿಗೆ ಸೀಮಿತವಾಗಿಲ್ಲ ಎಂದು ಒಕ್ಕೊರಲಿನಿಂದ ವಿರೋಧಿಸಿದರು.

Advertisement

ಬಿಜೆಪಿಯ ಶಂಕರ್‌ ಗನ್ನಿ ಮಾತನಾಡಿ, ಪೊಲೀಸರು ತಮ್ಮ ಕೆಲಸ ಮಾಡಿದ್ದಾರೆ. ಅದೂ ಅಲ್ಲದೆ ಈ ಪ್ರತಿಭಟನೆ ನಡೆದು ಒಂದು ತಿಂಗಳಾಗಿದೆ ಎಂದ ನಂತರ ಕಾಂಗ್ರೆಸ್‌ ಸದಸ್ಯರ ಮಾತುಗಳು ಏರು ಧ್ವನಿಯಲ್ಲಿ ನಡೆಯಿತು. ಮಾಜಿ ಉಪ ಮೇಯರ್‌ ಎಸ್‌.ಎನ್‌. ಚನ್ನಬಸಪ್ಪ
ಮಧ್ಯ ಪ್ರವೇಶಿಸಿ ಮಾತನಾಡಲು ಯತ್ನಿಸಿದಾಗ ಸಭೆಯಲ್ಲಿ ಕೋಲಾಹಲ ಉಂಟಾಯಿತು. ಯಮುನಾ, ರಮೇಶ್‌ ಹೆಗ್ಡೆ ಸದನದ ಬಾವಿಗಿಳಿದರು. ವಿಳಂಬಕ್ಕೆ ಕಾರಣವೇನೆಂಬ ಬಗ್ಗೆ ಮಾಹಿತಿ ನೀಡುವಂತೆ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿ ಜ್ಯೋತಿ ಅವರಿಗೆ ಸೂಚಿಸಲಾಯಿತು.

ಬ್ಯಾಂಕ್‌ ಸಾಲ ಸಿಗದ ಕಾರಣದಿಂದಾಗಿ ಮನೆ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಕೊಳೆಗೇರಿ ನಿವಾಸಿಗಳಿಗೆ ಮನೆ ನೀಡುವಾಗ ಈ ಬಗ್ಗೆ ಗೊತ್ತಿರಲಿಲ್ಲವೇ? ಟೆಂಡರ್‌ನಲ್ಲೊಂದು- ನಂತರ ಮತ್ತೂಂದು ಹೀಗೆ ಷರತ್ತುಗಳನ್ನು ಏಕೆ ಬದಲಾಗುತ್ತಿದೆ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ನ ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಬಡವರಿಗೆ ಸೂರು ನೀಡುವ ಬಗ್ಗೆ ಪಾಲಿಕೆ ಆಡಳಿತ ಪಕ್ಷ ಗಂಭೀರವಾಗಿ ಪರಿಗಣಿಸಬೇಕು. ಬಡವರು ಬಾಡಿಗೆ ಮನೆಯಲ್ಲಿದ್ದು, ಸಾವಿರಾರು ರೂ. ಖರ್ಚಾಗುತ್ತಿದೆ. ಸರಕಾರ ಕೂಡ ಈ ನಿಟ್ಟಿನಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು. ತಕ್ಷಣ ಎದ್ದು ನಿಂತು ಚನ್ನಬಸಪ್ಪ, “ಎಲ್ಲ
ವಿಷಯಗಳಲ್ಲೂ ರಾಜಕೀಯ ಎಳೆದು ತರಬೇಡಿ, ನಿಮ್ಮ ಹೋರಾಟ ಮತ್ತು ಕಾಳಜಿಯ ಬಗ್ಗೆ ನನಗೂ ಗೌರವವಿದೆ. ಈಗ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚಿಸೋಣ. ಸ್ಲಂ ಬೋರ್ಡ್‌ ಜತೆ ಕುಳಿತು ಚರ್ಚಿಸೋಣ ಎಂದು ಹೇಳಿದರು.

ಮಧ್ಯ ಪ್ರವೇಶಿಸಿದ ಸದಸ್ಯ ನಾಗರಾಜ್‌ ಕಂಕಾರಿ, ರಮೇಶ್‌ ಹೆಗ್ಡೆ ಇತರರು ಮಾತನಾಡಿ, ಜಿಲ್ಲಾಧಿಕಾರಿಗಳು ಲೀಡ್‌ ಬ್ಯಾಂಕ್‌ ಮ್ಯಾನೇಜರ್‌, ಸ್ಲಂ ಬೋರ್ಡ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕೊಳೆಗೇರಿಯವರಿಗೆ ಮನೆ ನಿರ್ಮಿಸಿ ಕೊಡುವ ವಿಚಾರಕ್ಕೆ ತಾರ್ಕಿಕ ಅಂತ್ಯ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು. ಈ ಕುರಿತು ಸಚಿವರೊಂದಿಗೆ ಚರ್ಚಿಸಿ ನಿರ್ಣಯಕ್ಕೆ ಬರುವುದಾಗಿ ಮೇಯರ್‌ ಉತ್ತರಿಸಿದರು.

ನಂತರ ಬಿಜೆಪಿ ಸದಸ್ಯ  ಧೀರರಾಜ್‌ ಹೊನ್ನವಿಲೆ ಮಾತನಾಡಿ, ರಾಗಿಗುಡ್ಡದಲ್ಲಿ ನಡೆಯುತ್ತಿರುವ ಈ ಮನೆಗಳ ಕಾಮಗಾರಿ ನನ್ನ ಕ್ಷೇತ್ರದಲ್ಲಿ ನಡೆಯುತ್ತಿದೆ. ಒಂದೂವರೆ ವರ್ಷದಿಂದ ನಡೆಯುತ್ತಿರುವ ಕಾಮಗಾರಿಗೆ ಹಲವು ಅಡೆತಡೆಗಳು ಬಂದಾಗ ಸಚಿವ ಈಶ್ವರಪ್ಪನವರು ಬಗೆಹರಿಸಿದ್ದಾರೆ. ಆದರೆ ಬಡವರಿಗಾಗಿ ನಡೆಯಬೇಕಿದ್ದ ಸ್ಲಂಬೋರ್ಡ್‌ ನ ಮನೆಗಳು ಆದಷ್ಟು ಬೇಗ ಪೂರ್ಣಗೊಳ್ಳದೆ ಇರುವ ಬಗ್ಗೆ ಕಳಕಳಿ ವ್ಯಕ್ತಪಡಿಸಿದರು. ಮೇಯರ್‌ ಸುವರ್ಣಾ ಶಂಕರ್‌, ಉಪಮೇಯರ್‌ ಸುರೇಖಾ ಮುರಳೀಧರ್‌, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next