Advertisement

ಶಿಮಂತೂರು: ಮಹಿಳೆಯ ಕೊಲೆ; ಆರೋಪಿ ಬಂಧನ

10:05 AM Dec 16, 2019 | sudhir |

ಮೂಲ್ಕಿ: ಇಲ್ಲಿಗೆ ಸಮೀಪದ ಶಿಮಂತೂರು ಬಳಿಯ ಪರೆಂಕಿಲ ತೋಟದ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ ಶಾರದಾ ಶೆಟ್ಟಿ (78) ಎಂಬವರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ರವಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

Advertisement

ಈ ಸಂಬಂಧ ತುಕಾರಾಮ ಶೆಟ್ಟಿ ಯಾನೆ ಬೊಗ್ಗು ಶೆಟ್ಟಿ (50) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಕೃತ್ಯ ಬೆಳಕಿಗೆ ಬಂದು 8 ತಾಸಿನೊಳಗೆ ಆರೋಪಿಯನ್ನು ಬಂಧಿಸುವ ಮೂಲಕ ಪೊಲೀಸರು ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮಹಿಳೆಯನ್ನು ಅವರ ಮನೆಯ ಬಾಗಿಲಿನ ಹೊರ ಭಾಗದಲ್ಲಿ ಕಲ್ಲಿನಿಂದ ಜಜ್ಜಿ ಕೊಂದು ಸ್ವಲ್ಪ ದೂರದಲ್ಲಿರುವ ಬಾವಿಯ ಕಟ್ಟೆಯವರೆಗೆ ಎಳೆದುಕೊಂಡು ಹೋದಂತೆ ಕಂಡುಬಂದಿದೆ.

ರವಿವಾರ ಬೆಳಗ್ಗೆ ಈ ಮಾರ್ಗವಾಗಿ ಹೋಗುತ್ತಿದ್ದ ಪಕ್ಕದ ಮನೆಯವರಿಗೆ ಶವ ಕಂಡುಬಂದ ಬಳಿಕ ಘಟನೆ ಬಹಿರಂಗವಾಗಿದೆ. ಕೊಲೆ ನಡೆದ ಮನೆಯ ಸಮೀಪದಲ್ಲಿ ಯಾವುದೇ ಮನೆಗಳು ಇಲ್ಲದ ಕಾರಣ ಘಟನೆ ನಡೆಯುವ ಹೊತ್ತಿಗೆ ಯಾರಿಗೂ ಗೊತ್ತಾಗಲಿಲ್ಲ ಎಂದು ಹೇಳಲಾಗುತ್ತಿದೆ.

ಪುತ್ರಿ ಮುಂಬಯಿಯಲ್ಲಿ
ಶಾರದಾ ಶೆಟ್ಟಿಗೆ ಒಬ್ಬರೇ ಮಗಳಿದ್ದು, ಅವರು ಮುಂಬಯಿಯಲ್ಲಿ ನೆಲೆಸಿದ್ದಾರೆ. ಸುಮಾರು 7 ತಿಂಗಳ ಹಿಂದೆ ತಾಯಿಗೆ ಮನೆ ಕಟ್ಟಿ ಕೊಟ್ಟು ಗೃಹಪ್ರವೇಶದ ಬಳಿಕ ಮುಂಬಯಿಗೆ ಮರಳಿದ್ದರು.

Advertisement

ಆಭರಣ ಕಳವಾಗಿಲ್ಲ
ಮಹಿಳೆ ಧರಿಸಿರುವ ಯಾವುದೇ ಚಿನ್ನಾಭರಣಗಳು ಕಳವಾಗಿಲ್ಲ. ಅವೆಲ್ಲವೂ ಆಕೆಯ ದೇಹದಲ್ಲಿಯೇ ಇರುವ ಕಾರಣ ದರೋಡೆ ಉದ್ದೇಶದಲ್ಲಿ ಈ ಕೃತ್ಯ ಮಾಡಿರುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಯಾವುದೋ ವಿವಾದಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆದು ಕೊಲೆಯಲ್ಲಿ ಅಂತ್ಯವಾಗಿರಬಹುದು ಅಥವಾ ಪೂರ್ವದ್ವೇಷ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಬಂಧಿತನನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗುತ್ತಿದೆ.

ಮಾನಸಿಕ ಅಸ್ವಸ್ಥನಂತೆ ವರ್ತನೆ
ಆರೋಪಿಯು ಕುಡಿತದ ಚಟ ಹೊಂದಿದ್ದು, ಕುಡಿದ ಬಳಿಕ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ಈ ಹಿಂದೆ ದೈವಸ್ಥಾನವೊಂದರ ಕಾಣಿಕೆ ಡಬ್ಬಿಯನ್ನು ಕದ್ದು ಪೇಟೆಯಲ್ಲಿ ತಲೆಯಲ್ಲಿ ಹೊತ್ತು ಸುತ್ತಾಡುತ್ತಿದ್ದ ಎಂದೂ ಸ್ಥಳೀಯರು ತಿಳಿಸಿದ್ದಾರೆ. ಈತನು ಕೊಲೆ ಬಳಿಕ ಸಮೀಪದ ಮನೆಗಳ ಹೊರಗಿದ್ದ ಬಟ್ಟೆಗಳಿಗೆ ಕೈ ಉಜ್ಜಿಕೊಂಡು ಹೋಗಿದ್ದು, ಅಲ್ಲಿ ರಕ್ತದ ಕಲೆ ಕಂಡು ಬಂದಿದೆ.

ಶ್ವಾನದಳದೊಂದಿಗೆ ಪೊಲೀಸರು ಆಗಮಿಸಿ ತನಿಖೆ ಪರಿಶೀಲಿಸಿದ್ದಾರೆ. ಮೂಲ್ಕಿ ಪೊಲೀಸರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next