Advertisement

ಶೆಟ್ಟಿ ಹಳ್ಳಿಗ್ರಾಮದ ಕೆರೆಗೆ ಬೇಕಿದೆ ಕಾಯಕಲ್ಪ

02:34 PM Oct 31, 2022 | Team Udayavani |

ಚನ್ನಪಟ್ಟಣ: ಒಂದು ಕಾಲದಲ್ಲಿ ಕೃಷಿ ಭೂಮಿಗೆ ನೀರುಣಿಸುತ್ತಿದ್ದ ಶೆಟ್ಟಿಹಳ್ಳಿ ಕೆರೆ ನೂರಾರು ಕುಟುಂಬಗಳ ಮಹಾ ಪೋಷಕನಾಗಿತ್ತು. ಬೆಳದಿಂಗಳಿನಲ್ಲಿ ಕೆರೆಯ ನೀರಿನ ಮೈಮೇಲೆ ಮೂಡುತ್ತಿದ್ದ ಚಂದ್ರನ ಬಿಂಬ ಮನ ಮೋಹಕವಾಗಿ ಕಾಣುತ್ತಿತ್ತು.

Advertisement

ಪ್ರಸಕ್ತ ವರ್ಷದ ಮಳೆಯ ರುದ್ರನರ್ತನ, ಕೆರೆಯ ಸುತ್ತಮುತ್ತಲಿನಲ್ಲಿ ದಿನೇ ದಿನೆ ಆಗುತ್ತಿರುವ ಒತ್ತುವರಿ, ಶೆಟ್ಟಿಹಳ್ಳಿ ಕೆರೆಯ ಅಂದಗೆಡಿಸುತ್ತಿರುವ ಜೊತೆಗೆ ಇನ್ನು ಕೆಲವೇ ವರ್ಷಗಳಲ್ಲಿ ಕೆರೆ ಮಂಗಮಾಯ ವಾಗುವ ಎಲ್ಲಾ ಲಕ್ಷಣಗಳು ಈಗಾಗಲೇ ಗೋಚರಿಸಲಾರಂಭಿಸಿವೆ.

ಕೆರೆಯ ಅಸು-ಪಾಸು ಹಾಗೂ ಸುತ್ತಲಿನ ಪ್ರದೇಶ ದಲ್ಲಿ ನಿರುಪಯುಕ್ತ ಗಿಡ- ಗೆಂಟೆಗಳು ಬೆಳೆದು, ಕೆರೆಯ ಇರುವಿಕೆ ಇಂಚಿಂ ಚೂ ನುಂಗು ಹಾಕುತ್ತಿವೆ.

ಎಗ್ಗಿಲ್ಲದೆ ಕೆರೆ ಒತ್ತುವರಿ: ಈಗಿನ ಶೆಟ್ಟಿಹಳ್ಳಿ ಕೆರೆಯು ರೋಗ-ರುಜಿನ ಹರಡುವ ಕೂಪವಾಗಿ ಮಾರ್ಪಟ್ಟಿದೆ. ಕೆರೆಯ ನೀರು ಕಲುಷಿತಗೊಂಡು ದಶಕಗಳೇ ಕಳೆದಿವೆ. ಕೆರೆಯ ಸುತ್ತಮುತ್ತ ಜಮೀನು ಹೊಂದಿರುವ ನಗರ ನಿವಾಸಿಗಳು ಕೆರೆ ಒತ್ತುವರಿ ಯನ್ನು ಯಾವುದೇ ಎಗ್ಗಿಲ್ಲದೆ ಆರಂಭಿಸಿದ್ದಾರೆ. ಹೀಗಾಗಿ, ಕೆರೆ ಯು ಕಲುಷಿತ ಆಗಿರುವುದರ ಜೊತೆಗೆ ರೋಗಗಳ ಕಾರಸ್ಥಾನವಾಗಿ ಪರಿಣಮಿಸಿದೆ.

ಹೊಸ ಬಡಾವಣೆಗಳು ರಚನೆ: ದಶಕಗಳ ಹಿಂದೆ ತರಕಾರಿ, ರಾಗಿ ವಿಶೇಷವಾಗಿ ಭತ್ತ ಬೆಳೆಯಲು ಶೆಟ್ಟಿಹಳ್ಳಿ ಕೆರೆ ಪ್ರಮುಖ ಆಧಾರ ಸ್ತಂಭವಾಗಿತ್ತು. ನಂತರದ ದಿನಗಳಲ್ಲಿ ಶೆಟ್ಟಹಳ್ಳಿ, ನಗರೀಕರಣಕ್ಕೆ ತುತ್ತಾಯಿತು. ಪರಿಣಾಮ, ಇಲ್ಲಿನ ಹೊಲ- ಗದ್ದೆಗಳು ಮಾಯವಾಗಿ ಹೊಸ ಬಡಾವಣೆಗಳು ರಚನೆಯಾದವು. ಸೌಧಗಳು ತಲೆ ಎತ್ತಿ ನಿಂತವು. ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಶೆಟ್ಟಿಹಳ್ಳಿ ಸುತ್ತಲಿನ ಪರಿಸರ ಕಾಂಕ್ರಿಟ್‌ ಕಾಡಾಗಿ ಬದಲಾಯಿತು.

Advertisement

ಕೆರೆ ಇಂದು ನಿರುಪಯೋಗಿ: ಶೆಟ್ಟಿಹಳ್ಳಿ ಗ್ರಾಮದ ಕೃಷಿ ಚಟುವಟಿಕೆಗಳಿಗೆ ನೀರು ಒದಗಿಸುತ್ತಿದ್ದ ಶೆಟ್ಟಹಳ್ಳಿ ಕೆರೆಯಲ್ಲಿ ಈಗ ತ್ಯಾಜ್ಯ ಹಾಗೂ ಹೊಲಸುಗಳದ್ದೇ ಕಾರುಬಾರು. ಕೆರೆಯ ಏರಿಯ ಸುತ್ತ ಎಲ್ಲಾ ಕಡೆಗಳಲ್ಲಿ ಬೆಳೆದಿರುವ ಕಳೆಯಿಂದ ನೀರು ಕಾಣದಂತಾಗಿದೆ. ಉಪಕಾರಿಯಾಗಿದ್ದ ಕೆರೆ ಇಂದು ನಿರುಪಯೋಗಿ. ಕೆರೆಯಲ್ಲಿ ಕಸ-ಕಡ್ಡಿ, ಗಿಡ-ಗಂಟೆಗಳು ಬೆಳೆದು, ಕೊಳೆತು ದುರ್ನಾತ ಬೀರುತ್ತಿದೆ. ಪರಿಣಾಮ ಸಮೀಪದ ಬಡಾವಣೆಯ ನಿವಾಸಿಗಳು ನಿತ್ಯ ಆತಂಕದಿಂದ ಜೀವಿಸುವಂತಾಗಿದೆ.

ನಗರಸಭೆ ನಿರ್ಲಕ್ಷ್ಯ: ಕೆರೆಯ ಒತ್ತುವರಿ ಜೋರಾಗಿದೆ. ಈ ಬಗ್ಗೆ ನಗರಸಭೆ ಆಡಳಿತ ಗಮನಹರಿಸದೇ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಸುಮಾರು 25 ಎಕರೆ ಯನ್ನು, ವಿಸ್ತೀರ್ಣವಿದ್ದ ಕೆರೆ ಇಂದು 15 ಎಕರೆಗೆ ಬಂದಿದೆ. ಸಿ.ಪಿ. ಯೋಗೇಶ್ವರ್‌, ಶಾಸಕರಾಗಿದ್ದ ಅವಧಿಯಲ್ಲಿ ಕೆರೆಯ ಪಕ್ಕದಲ್ಲೇ ಸಮೀಪದ ಗ್ರಾಮಗಳಿಗೆ ಸಂಪರ್ಕ ರಸ್ತೆ ನಿರ್ಮಿಸಲಾಗಿತ್ತು. ಆದರೆ, ಕೆರೆಯ ಸಮಸ್ಯೆಗೆ ಇತಿಶ್ರೀ ಹಾಡುವ ಕೆಲಸಗಳು ಸ್ಥಳೀಯರ ಆಶಯದಂತೆ ಕೆರೆ ಇರುವ ಜಾಗ ಮಾತ್ರ ಇನ್ನು ಭರವಸೆಯಾಗಿಯೇ ಉಳಿದಿದೆ. ದುಸ್ಥಿತಿಗೆ ತಲುಪಿದ ಕೆರೆಯನ್ನು ಮುಚ್ಚಿ ಹಾಕಿ ಈ ಜಾಗದಲ್ಲಿ ಬೇರ ಏನನ್ನಾದರೂ ನಿರ್ಮಾಣ ಮಾಡುವ ಕಾರ್ಯ ಆಗಬೇಕಿದೆ.

ಮೀನುಗಾರಿಕೆಗೆ ಪೆಟ್ಟು : ವ್ಯವಸ್ಥೆಯ ನಿರ್ಲಕ್ಷ್ಯದಿಂದ ಶೆಟ್ಟಿಹಳ್ಳಿ ಕೆರೆಗೆ ಚರಂಡಿ ನೀರು ಹರಿಯ ತೊಡಗಿತು. ಇಂದಿರಾ ಕಾಟೇಜ್‌ ಹಾಗೂ ಸುತ್ತಮುತ್ತಲಿನ ಪ್ರದೇಶದ ಶೌಚಾಲಯಗಳ ಕೊಳವೆಗಳನ್ನು ಕೆರೆಗೆ ನೇರವಾಗಿ ಬಿಡಲಾಯಿತು. ಇದರಿಂದ ಈ ಕೆರೆಯಲ್ಲಿ ನಡೆಯುತ್ತಿದ್ದ ಮೀನು ಗಾರಿಕೆಗೂ ಪೆಟ್ಟು ಬಿದ್ದಿತು. ಹುಣ್ಣಿಮೆಯಲ್ಲಿ ನೀರಿನ ಮೇಲೆ ಮೇಲೆ ನಗುತ್ತಿದ್ದ ಚಂದ್ರನ ಮುಖದ ಮೇಲೆ ಕ್ರಮೇಣ ಮಾಲಿನ್ಯದ ಕಲೆಗಳು ಕಾಣಲು ಪ್ರಾರಂಭಿಸಿದವು.

ಒಂದು ಕಾಲದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಉಪಕಾರಿಯಾಗಿದ್ದ ಶೆಟ್ಟಿಹಳ್ಳಿ ಕೆರೆ ಇಂದು ನಿರುಪಯೋಗಿ.

ಕೆರೆಯಲ್ಲಿ ಕಸ-ಕಡ್ಡಿ, ಗಿಡ-ಗಂಟೆಗಳು ಬೆಳೆದು, ಕೊಳೆತು ದುರ್ನಾತ ಬೀರುತ್ತಿದೆ. ಪರಿಣಾಮ ಸಮೀಪದ ಬಡಾವಣೆ ನಿವಾಸಿಗಳು ನಿತ್ಯ ಆತಂಕದಿಂದ ಜೀವಿಸುವಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿ ವರ್ಗ ಕೆರೆಯನ್ನು ಅಭಿವೃದ್ಧಿ ಮಾಡಲು ಮುಂದಾಗಬೇಕು. ಎಂ.ಕೆ.ನಿಂಗಪ್ಪ, ಸ್ಥಳೀಯ ನಿವಾಸಿ

ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next