Advertisement

ಅವಳು ಮತ್ತು ಶ್ರಾವಣ: ಹೆಣ್ಣಿಗೇಕೆ ಶ್ರಾವಣ ಶ್ರೇಷ್ಠ?

01:20 PM Aug 09, 2017 | |

ಶ್ರಾವಣ ಮಾಸಕ್ಕೂ ಹೆಣ್ಮಕ್ಕಳಿಗೂ ಅವಿನಾಭಾವ ಸಂಬಂಧ. ಎಲ್ಲರ ಮನೆಯಲ್ಲೂ ಸುಂದರವಾದ ಗೌರಿ ಮೂರ್ತಿಗಳು ಹೊಸ ವಸ್ತ್ರ, ಒಡವೆ, ವಿದ್ಯುದ್ದೀಪಗಳ ಅಲಂಕಾರ. ಈ ಸಮಯದಲ್ಲಿ ಮುತ್ತೆ„ದೆಯರು ಅವರಿವರ ಮನೆಯ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ತಮ್ಮ ಬಾಂಧವ್ಯವನ್ನು, ಆತ್ಮೀಯತೆಯನ್ನು ಹೆಚ್ಚಿಸಿಕೊಳ್ಳುತ್ತಾರೆ…

Advertisement

– ಶ್ರಾವಣ ಮಾಸ ಆರಂಭವಾದ ಎರಡನೇ ಶುಕ್ರವಾರದಿಂದ ಸ್ತ್ರೀಯರು ಶುಕ್ರಗೌರಿ ವ್ರತ ಹಿಡಿಯುತ್ತಾರೆ. ಅದೇ ರೀತಿ ಮಂಗಳವಾರದಿಂದ ಮಂಗಳಗೌರಿ ವ್ರತವನ್ನು ಆಚರಿಸುತ್ತಾರೆ. ಒಮ್ಮೆ ಪೂಜೆಯನ್ನು ಆರಂಭಿಸಿದರೆ ಅದನ್ನು 5 ವರ್ಷ ಆಚರಿಸುತ್ತಲೇ ಇರಬೇಕು. ಈ ಪೂಜೆಯನ್ನು ಕನ್ಯೆಯರು, ಹೊಸದಾಗಿ ಮದುವೆಯಾದವರು, ಮಕ್ಕಳಾಗದೇ ಇರುವರು ಮತ್ತು ಮನೆಯ ಪರಿಸ್ಥಿತಿ ಸರಿಯಿಲ್ಲದವರು ಆಚರಿಸುತ್ತಾರೆ.

– ಮೊದಲನೇ ಬಾರಿಗೆ ಪೂಜೆ ಮಾಡುವರು ತುಂಬಿದ ಬಿಂದಿಗೆ ಮೇಲೆ ತೆಂಗಿನಕಾಯಿ ಇಟ್ಟು ಅದನ್ನು ಶುಚಿಗೊಳಿಸಿ, ಅದಕ್ಕೆ ಹಾಲು, ತುಪ್ಪ, ಬೆಣ್ಣೆ ಮತ್ತು ಜೇನು ತುಪ್ಪದಿಂದ ಆ ತೆಂಗಿನಕಾಯಿ ಮೇಲೆ ಅಭಿಷೇಕ ಮಾಡಬೇಕು. ಇದೇ ರೀತಿ ಐದು ಬಾರಿ ಮಾಡಿ, ಮತ್ತೆ ಪವಿತ್ರ ಜಲದಿಂದ ಅದನ್ನು ತೊಳೆಯಬೇಕು. ನಂತರ ಹೊಸ ಸೀರೆ ಅಥವಾ ಹೊಸ ವಸ್ತ್ರವನ್ನು ಆ ತೆಂಗಿನಕಾಯಿಗೆ ಉಡಿಸಬೇಕು. ಇಲ್ಲಿ ತೆಂಗಿನಕಾಯಿ ಲಕ್ಷ್ಮೀಯ ರೂಪವಾಗಿರುತ್ತೆ. ಹಾಗಾಗಿ ಅದಕ್ಕೆ ಹೊಸ ಒಡವೆ, ಹೂವು, ಬಿಲ್ವಪತ್ರೆ ಮುಂತಾದ ವಿಶೇಷ ಹೂವುಗಳಿಂದ ಶೃಂಗರಿಸಿ, ಬಾಳೆಹಣ್ಣು, ಸೇಬು, ಪೇರಳೆ, ದಾಳಿಂಬೆ ಮತ್ತು ಚಿಕ್ಕು ಮುಂತಾದ ಹಣ್ಣುಗಳನ್ನು ಮತ್ತು ಗೋಡಂಬಿ- ದ್ರಾಕ್ಷಿ, ಉತ್ತತ್ತಿ, ಸಕ್ಕರೆ- ಪುಟಾಣಿ, ಉಡಿ ತುಂಬುವ ಸಾಮಗ್ರಿ ಅಂದರೆ ಅರಿಶಿನ- ಕುಂಕುಮ, ಹಸಿರು ಗಾಜಿನ ಬಳೆಗಳು, ಅರಿಶಿನದ ಕೊಂಬು, ಕಾಲುಂಗುರ ಮತ್ತು ಮಲ್ಲಿಗೆ ಹೂವು- ಇವುಗಳನ್ನು ಒಂದೊಂದು ಬಟ್ಟಲುಗಳಲ್ಲಿ ಇಟ್ಟು ಪೂಜೆಯನ್ನು ಆರಂಭಿಸುತ್ತಾರೆ. ಅನುಕೂಲಸ್ಥರು ಈ ರೀತಿ ಮನೆಯಲ್ಲಿ ಮಾಡಬಹುದು. ಅದು ಸಾಧ್ಯವಾಗದೇ ಇದ್ದವರು, ದೇಗುಲಗಳಿಗೆ ಹೋಗಿ ಉಡಿ ತುಂಬುವ ಸಾಮಗ್ರಿಗಳನ್ನು ಕೊಟ್ಟು ದೇವಿಗೆ ಪೂಜೆ ಮಾಡಿಸಿ ನಂತರ ಅದೇ ಸಾಮಗ್ರಿಯನ್ನು ಮನೆಯಲ್ಲಿಟ್ಟು ಪೂಜಿಸಬಹುದು.

– ಹೆಸರುಬೇಳೆ ಪಾಯಸ ಈ ವ್ರತಕ್ಕೆ ಬೇಕಾದ ಮತ್ತು ಇರಲೇಬೇಕಾದ ಶ್ರೇಷ್ಠವಾದ ನೈವೇದ್ಯ. ಪೂಜೆ ಮಾಡುವರು ವ್ರತ ಮುಗಿಯುವವರೆಗೂ ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ದೀಪ ಹಚ್ಚಿ ದೇವಿಯ ಸ್ತೋತ್ರವನ್ನು ಬೆಳಗ್ಗೆ ಮತ್ತು ಸಾಯಂಕಾಲ ಶುದ್ಧ ಮನಸ್ಸಿನಿಂದ ಪಠಿಸಬೇಕು. ಈ ರೀತಿ ಮಾಡುವುದರಿಂದ ಅಂದುಕೊಂಡದ್ದೆಲ್ಲಾ ನೆರವೇರುತ್ತದೆ ಎಂಬ ನಂಬಿಕೆಯಿದೆ.

– ಮುಖ್ಯವಾಗಿ ಈ ವ್ರತ ಮಾಡುವಾಗ ಮಗಳೊಟ್ಟಿಗೆ ತಾಯಿ ಇರಲೇಬೇಕು. ಮಗಳು ಪೂಜಾ ತಯಾರಿಗೆ ತಾಯಿಯನ್ನು ಹೊರತುಪಡಿಸಿ ಬೇರೆಯವರ ಸಹಾಯ ಪಡೆಯುವಂತಿಲ್ಲ ಮತ್ತು ಈ ವ್ರತ ಮುಗಿಯುವವರೆಗೂ ತಾಯಿ ಇರಲೇಬೇಕು ಅಂದರೆ ತಾಯಿಯ ಉಪಸ್ಥಿತಿಯಲ್ಲಿಯೇ ನಡೆಯಬೇಕು. ಮಗಳು ದೇವಿಯ ಸ್ತೋತ್ರಗಳನ್ನು ಓದುತ್ತಿರುವಾಗ ತಾಯಿಯಾದವಳು ಅವಳ ಜಡೆಯನ್ನು ಹೆಣೆಯತ್ತಿರಬೇಕಂತೆ. ಇದರಿಂದ ಮಗಳ ಬೇಡಿಕೆಗಳು ಆದಷ್ಟು ಬೇಗ ಈಡೇರುತ್ತವೆ ಎಂಬ ನಂಬಿಕೆಯಿದೆ.

Advertisement

– ವ್ರತದ ಕೊನೆಗೆ ಪೂಜೆ ಮಾಡಿದವರು ಕನಿಷ್ಠವೆಂದರೆ, ಐದು ಮುತ್ತೆ„ದೆಯರನ್ನಾದರೂ ಆಹ್ವಾನಿಸಿ ಅವರಿಗೆ ಮುತ್ತೈದೆ ಸಂಕೇತಗಳಾದ ಹೂವು, ಅರಿಶಿನ- ಕುಂಕುಮ, ಬಳೆ, ಉಡಿ ತುಂಬುವ ಸಾಮಗ್ರಿಗಳನ್ನು ಮರದಲ್ಲಿಟ್ಟು ಬಾಗೀನ ಕೊಡುತ್ತಾರೆ. ಇನ್ನೊಂದು ವಿಶೇಷವೆಂದರೆ, ಈ ಪೂಜೆ ವೇಳೆ ಹೆಣ್ಣುಮಕ್ಕಳು ಹೊಸ ಸೀರೆಗಳನ್ನುಟ್ಟು ಸಾಕ್ಷಾತ್‌ ಲಕ್ಷ್ಮೀಯಂತೆ, ಸಾಕಷ್ಟು ಒಡವೆಗಳನ್ನು ಧರಿಸುತ್ತಾರೆ. 

– ಅಣ್ಣ- ತಂಗಿಯರ ಬೆಸೆಯುವ ರಕ್ಷಾಬಂಧನದಲ್ಲೂ ಸ್ತ್ರೀಗೆ ಒಂದು ಭದ್ರತಾ ಭಾವ ದಕ್ಕುತ್ತದೆ. ಆಕೆಯ ಭಾವಬಂಧಗಳು ಗಟ್ಟಿಯಾಗುತ್ತವೆ.

ಗೌರಿ ಭೀ. ಕಟ್ಟಿಮನಿ
 

Advertisement

Udayavani is now on Telegram. Click here to join our channel and stay updated with the latest news.

Next