Advertisement

ಶಾಸ್ತ್ರಿ ಸರ್ಕಲ್‌ ಇಂದಿರಾ ಕ್ಯಾಂಟೀನ್‌ ವಾರದಲ್ಲಿ ಸಿದ್ಧ

06:00 AM Sep 28, 2018 | |

ಕುಂದಾಪುರ: ಇಲ್ಲಿನ ಶಾಸ್ತ್ರಿ ಸರ್ಕಲ್‌ ಬಳಿ ಕಳೆದ ಮಾರ್ಚ್‌ನಿಂದ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್‌ ಕಾಮಗಾರಿ ವಾರದಲ್ಲಿ ಪೂರ್ಣವಾಗಲಿದೆ. ಪುರಸಭೆಗೆ ಆಡಳಿತ ಮಂಡಳಿ ಇಲ್ಲದ ಕಾರಣ ಜಿಲ್ಲಾಧಿಕಾರಿಗಳು ದಿನಾಂಕ ನಿಗದಿ ಪಡಿಸಲಿದ್ದು ಅನಂತರ ಉದ್ಘಾಟನೆಯಾಗಲಿದೆ. ಕಾಂಗ್ರೆಸ್‌ ಸರಕಾರದ ಯೋಜನೆಯನ್ನು ಕಾಂಗ್ರೆಸ್‌ನವರೇ ಆದ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಅವರೇ ಉದ್ಘಾಟಿಸುವ ಸಾಧ್ಯತೆಯಿದೆ.  

Advertisement

ವಿಳಂಬ ಕಾಮಗಾರಿ
ಹಿಂದಿನ ಸಿದ್ದರಾಮಯ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್‌ ಕುಂದಾಪುರಕ್ಕೆ  ಬಂದಾಗ ಜನ ಸಂತಸಪಟ್ಟಿದ್ದರು. ಆದರೆ ಅದೀಗ ಊಟಕ್ಕಿನ್ನೂ ಸಿಕ್ಕದ ಇಂದಿರಾ ಕ್ಯಾಂಟೀನ್‌ ಎಂದಾಗಿದೆ. ಮಾರ್ಚ್‌ನಲ್ಲಿ ಆರಂಭವಾದ ಕ್ಯಾಂಟೀನ್‌ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಬಹುತೇಕ ಕಾಮಗಾರಿ ಮುಗಿದಿದ್ದರೂ ಉದ್ಘಾಟನೆಗೆ ಮುನ್ನವೇ ಸೋರತೊಡಗಿದ್ದರಿಂದ ಅದನ್ನು ಸರಿಪಡಿಸಲು ಗುತ್ತಿಗೆದಾರ ಸಂಸ್ಥೆಗೆ ಸೂಚಿಸಲಾಗಿದೆ. ರಾಜ್ಯಾದ್ಯಂತ ಒಟ್ಟು 247 ಕ್ಯಾಂಟೀನ್‌ಗಳನ್ನು ನಿರ್ಮಿಸಲು ಆದೇಶ ಹೊರಡಿಸಿದ್ದ ಸರ್ಕಾರ, ಯೋಜನೆ ಜಾರಿಗಾಗಿ 211 ಕೋ. ರೂ. ಅನುದಾನ ಬಿಡುಗಡೆಗೊಳಿಸಿತ್ತು. ಚುನಾವಣೆ ಮುನ್ನ ಬಡವರ ಹಸಿವಿನ ಮೇಲೆ ಇದ್ದ ರಾಜಕಾರಣಿಗಳ ಆಸಕ್ತಿ ಈಗ ಸಮ್ಮಿಶ್ರ ಸರಕಾರದಲ್ಲಿ ಕುಂದಿದೆ ಎಂಬ ಟೀಕೆ ಕೇಳಿ ಬರುತ್ತಿದೆ.

ಕಟ್ಟಡ ಸಿದ್ಧ 
ಶಾಸ್ತ್ರಿ ಸರ್ಕಲ್‌ ಬಳಿಯ ಪಶು ವೈದ್ಯಕೀಯ ಆಸ್ಪತ್ರೆಯ ಪಕ್ಕದ ಜಾಗದಲ್ಲಿ ಕ್ಯಾಂಟೀನ್‌ ಮಾಡಲಾಗಿದೆ. ಕಟ್ಟಡ ಸಿದ್ಧವಾಗಿ ಇತರ ಕೆಲಸಗಳು ಕೂಡಾ ಪೂರ್ಣವಾಗಿದೆ. ಮೆಟಲ್‌ ಫ್ಲೈವುಡ್‌, ಸ್ಲಾéಬ್‌ ಗೋಡೆಗಳನ್ನು ಜೋಡಿಸಿ ಕಟ್ಟಡ ಮಾಡಲಾಗಿದೆ. ಅಡುಗೆ ಕೋಣೆ ಕಾಮಗಾರಿ, ವಿದ್ಯುತ್‌ ವಯರಿಂಗ್‌ ಕೆಲಸಗಳು ಮುಗಿದಿವೆ. 20 ದಿನದೊಳಗೆ ಮುಕ್ತಾಯವಾಗಬೇಕಿದ್ದ ಕಾಮಗಾರಿ 180 ದಿನಗಳಾದರೂ ಮುಗಿಯದೆ ಜನೋಪಯೋಗಕ್ಕೆ ಸಿಕ್ಕಿಲ್ಲ.

ಪುರಸಭೆಯಿಂದ 13.5 ಲಕ್ಷ ರೂ.
ಜಾಗಕ್ಕೆ ಕಂಪೌಂಡ್‌, ಬೋರ್ಡ್‌ಗಳು, ಟೋಕನ್‌, ಮೆನು ಬೋರ್ಡ್‌, ನೀರಿನ ಸೌಲಭ್ಯ, ರಸ್ತೆ ಸಂಪರ್ಕ, ಎಲ್ಲ ಸೇರಿದಂತೆ ಸುಮಾರು 13.5 ಲಕ್ಷ ರೂ. ಅನ್ನು ಪುರಸಭೆ ಭರಿಸುತ್ತದೆ. ಕೆಇಎಫ್‌ ಇನ್‌ಫ್ರಾಸ್ಟ್ರಕ್ಚರ್‌ ಸಂಸ್ಥೆಗೆ ಕಟ್ಟಡ ನಿರ್ಮಾಣ ಕಾಮಗಾರಿ ವಹಿಸಿಕೊಡಲಾಗಿದೆ.

2 ಮಾತ್ರ ಕಾರ್ಯ ನಿರ್ವಹಣೆ 
ಜಿಲ್ಲೆಗೆ 4 ಇಂದಿರಾ ಕ್ಯಾಂಟೀನ್‌ ಮಂಜೂರಾಗಿದ್ದು 2 ಮಾತ್ರ ಕಾರ್ಯನಿರ್ವಹಿಸುತ್ತಿದೆ. ಆರಂಭದಲ್ಲಿ ಕುಂದಾಪುರದಲ್ಲಿ ಜಾಗದ ಸಮಸ್ಯೆಯಿಂದ ವಿಳಂಬವಾಗಿತ್ತು. ಪಶು ವೈದ್ಯಕೀಯ ಆಸ್ಪತ್ರೆಯ ಜಾಗಕ್ಕೆ ಹೋಗುವ ದಾರಿ ಸಮಸ್ಯೆ ಇದ್ದು, ಅಲ್ಲಿ ಗೂಡಂಗಡಿ ಇದ್ದುದರಿಂದ ಅದರ ತೆರವು ಕಾರ್ಯ ನಡೆಸಿ ಅನಂತರ ಕಾಮಗಾರಿ ಮಾಡಲಾಗಿತ್ತು.

Advertisement

ವಾರದಲ್ಲಿ ಪೂರ್ಣ
ಇಂದಿರಾ ಕ್ಯಾಂಟೀನ್‌ ಕಾಮಗಾರಿ ಮಳೆಯಿಂದಾಗಿ ವಿಳಂಬವಾಗಿದೆ. ನಂತರ ಸೋರುತ್ತಿರುವುದು ಗಮನಕ್ಕೆ ಬಂದು ದುರಸ್ತಿಗೆ ಸೂಚಿಸಲಾಗಿದೆ. ವಾರದಲ್ಲಿ ಕಾಮಗಾರಿ ಪೂರ್ಣವಾಗಲಿದೆ. ಅನಂತರ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಉದ್ಘಾಟನಾ ದಿನಾಂಕ ನಿಗದಿಯಾಗಲಿದೆ. ಅಕ್ಟೋಬರ್‌ನಲ್ಲಿ ಜನರಿಗೆ ಉಪಯೋಗಕ್ಕೆ ದೊರೆಯಲಿದೆ.
– ಗೋಪಾಲಕೃಷ್ಣ ಶೆಟ್ಟಿ,
ಮುಖ್ಯಾಧಿಕಾರಿ, ಪುರಸಭೆ

ಶಾಸ್ತ್ರಿ ಸರ್ಕಲ್‌ ಬಳಿಯ ಪಶು ವೈದ್ಯಕೀಯ ಆಸ್ಪತ್ರೆಯ ಪಕ್ಕದ ಜಾಗದಲ್ಲಿ ನಿರ್ಮಿಸಲಾದ ಕ್ಯಾಂಟೀನ್‌.

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next