Advertisement

ಶಶಿಕುಮಾರ್‌ ಪುತ್ರನ “ಸೀತಾಯಣ’

12:32 PM Mar 12, 2020 | Lakshmi GovindaRaj |

ಕನ್ನಡ ಚಿತ್ರರಂಗದ ಸುಪ್ರೀಂ ಹೀರೋ ಖ್ಯಾತಿಯ ನಟ ಶಶಿಕುಮಾರ್‌ ಪುತ್ರ ಅಕ್ಷಿತ್‌ ಶಶಿಕುಮಾರ್‌ ಈ ಹಿಂದೆ “ಮೊಡವೆ’ ಎನ್ನುವ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿಕೊಡಲಿದ್ದಾರೆ ಎನ್ನಲಾಗಿತ್ತು. ಆದರೆ ಸದ್ಯ ಆ ಚಿತ್ರದ ನಡುವೆಯೇ ಅಕ್ಷಿತ್‌, ಈಗ “ಸೀತಾಯಣ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸುತ್ತಿದ್ದಾರೆ. ಹೌದು, ಅಕ್ಷಿತ್‌ ಶಶಿಕುಮಾರ್‌ ಅಭಿನಯದ “ಸೀತಾಯಣ’ ಚಿತ್ರದ ಶೂಟಿಂಗ್‌ ಸದ್ದಿಲ್ಲದೆ ಪೂರ್ಣಗೊಂಡಿದ್ದು, ಸದ್ಯ ಈ ಚಿತ್ರದ ಡಬ್ಬಿಂಗ್‌ ಮತ್ತಿತರ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಅಂತಿಮ ಹಂತಕ್ಕೆ ತಲುಪಿದೆ.

Advertisement

ಪಕ್ಕಾ ರೊಮ್ಯಾಂಟಿಕ್‌ ಕಂ ಕ್ರೈಂ ಸ್ಟೋರಿ ಎಳೆಯನ್ನು ಹೊಂದಿರುವ “ಸೀತಾಯಣ’ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ. ತೆಲುಗು ಮೂಲದ ನಿರ್ದೇಶಕ ಪ್ರಭಾಕರ್‌ ಆರಿಪಕ್‌ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಬೆಂಗಳೂರು, ಮಂಗಳೂರು, ಆಗುಂಬೆ, ವೈಜಾಕ್‌, ಹೈದರಾಬಾದ್‌, ಬ್ಯಾಂಕಾಕ್‌ ಮೊದಲಾದ ಕಡೆಗಳಲ್ಲಿ ಸುಮಾರು 63 ದಿನಗಳ ಕಾಲ ಚಿತ್ರೀಕರಣ ನಡೆಸಿರುವ ಚಿತ್ರತಂಡ ಸದ್ಯ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿದೆ.

“ಕಲರ್‌ ಕ್ಲೌಡ್ಸ್‌ ಎಂಟರ್‌ಟೈನ್ಮೆಂಟ್ಸ್‌’ ಬ್ಯಾನರ್‌ನಲ್ಲಿ ರೋಹನ್‌ ಭಾರದ್ವಾಜ್‌, ಲಲಿತಾ ರಾಜಲಕ್ಷ್ಮೀ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಉಪೇಂದ್ರಕುಮಾರ್‌ ಅವರ ಕುಟುಂಬದ ಕುಡಿ ಪದ್ಮನಾಭ ಭಾರದ್ವಾಜ್‌ ಈ ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ನಟ ಪುನೀತ್‌ ರಾಜಕುಮಾರ್‌ ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದು, ಕವಿರಾಜ್‌ ಮತ್ತು ಗೌಸ್‌ಫೀರ್‌ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಇನ್ನು ಚಿತ್ರದಲ್ಲಿ ಅಕ್ಷಿತ್‌ಗೆ ನಾಯಕಿಯಾಗಿ ಮುಂಬೈ ಬೆಡಗಿ ಅನಹಿತ್‌ ಭೂಷಣ್‌ ಜೋಡಿಯಾಗಿ ಹೆಜ್ಜೆ ಹಾಕಿದ್ದಾರೆ.

ಉಳಿದಂತೆ ಅಜಯ್‌ ಜೋಶ್‌, ಮದುನಂದನ್‌, ಹಿತೇಶ್‌, ಮೇಘನಾ ಗೌಡ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಪ್ರಭಾಕರ್‌ ಆರಿಪಕ್‌, “ಇದೊಂದು ಕಂಪ್ಲೀಟ್‌ ಫ್ಯಾಮಿಲಿ ಎಂಟರ್‌ಟೈನ್ಮೆಂಟ್‌ ಕಥಾಹಂದರ ಹೊಂದಿರುವ ಸಿನಿಮಾ. ಒಂದು ಹುಡುಗ, ಹುಡುಗಿ, ಮದುವೆ, ಫ್ಯಾಮಿಲಿ ಸೆಂಟಿಮೆಂಟ್‌ಗಳ ಸುತ್ತ ಸಿನಿಮಾ ನಡೆಯುತ್ತದೆ. ಸಿನಿಮಾದಲ್ಲಿ ಬರುವ ಕೆಲವೊಂದು ಟ್ವಿಸ್ಟ್‌ಗಳು ಮತ್ತೂಂದು ಕಡೆ ಪ್ರೇಕ್ಷರನ್ನು ಕರೆದುಕೊಂಡು ಹೋಗುತ್ತದೆ.

ಕೆಲವೊಂದು ಕನ್ನಡ ಮತ್ತು ತೆಲುಗು ಸಿನಿ ಪ್ರೇಕ್ಷಕರಿಗೆ ಇಷ್ಟವಾಗುವಂಥ ಎಲ್ಲ ಅಂಶಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಸದ್ಯ ಸಿನಿಮಾ ಪೋಸ್ಟ್‌ ಪ್ರೊಡಕ್ಷನ್‌ ಕೊನೆ ಹಂತದಲ್ಲಿದ್ದು, ಆದಷ್ಟು ಬೇಗ ಸಿನಿಮಾದ ಪ್ರಮೋಶನ್‌ ಕೆಲಸಗಳನ್ನು ಶುರು ಮಾಡಲಿದ್ದೇವೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇದೇ ಏಪ್ರಿಲ್‌ ಕೊನೆವಾರ ಅಥವಾ ಮೇ ಸಿನಿಮಾವನ್ನು ರಿಲೀಸ್‌ ಮಾಡುವ ಪ್ಲಾನ್‌ ಇದೆ’ ಎಂದು ಮಾಹಿತಿ ನೀಡುತ್ತಾರೆ. ಅಂದಹಾಗೆ, “ಮೊಡವೆ’ ಚಿತ್ರದ ಮುಹೂರ್ತ ಸಮಯದಲ್ಲಿ ಶಶಿಕುಮಾರ್‌ ಪುತ್ರನ ಹೆಸರು ಆದಿತ್ಯ ಎಂದಿತ್ತು. ಆದರೆ, ಈಗ ಅಕ್ಷಿತ್‌ ಎಂದು ಹೆಸರು ಬದಲಿಸಿಕೊಂಡಂತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next