Advertisement

ಸಮಾಜಕ್ಕೋಸ್ಕರ ಬದುಕುವುದು ಸಾರ್ಥಕ

01:35 PM Mar 02, 2021 | Team Udayavani |

ಸವಣೂರ: ಇತರರಿಗೆ ಆದರ್ಶಪ್ರಾಯರಾಗಿ ಸಮಾಜಕ್ಕೋಸ್ಕರ ಬದುಕುವುದು ಸಾರ್ಥಕ ಎಂದು ಗೃಹ, ಕಾನೂನು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ನಗರದ ದೊಡ್ಡ ಹುಣಸೇ ಕಲ್ಮಠದ ಆವರಣದಲ್ಲಿ ಲಿಂ| ಶ್ರೀಗುರು ರಾಚೋಟೇಶ್ವರ ಮಹಾಸ್ವಾಮಿಗಳ 44ನೇ ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದಶರಣ ಸಂಸ್ಕೃತಿ ಸಮಾರಂಭ ಹಾಗೂ ಕಲ್ಪವೃಕ್ಷಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ತಾಯಿ ಗರ್ಭದಲ್ಲಿ ಜೀವಕ್ಕೆ ಆತ್ಮಸಾಕ್ಷಿ ಎಂಬ ಸಂಸ್ಕಾರ ಸಿಕ್ಕರೆ, ಜೀವ ಭೂಗರ್ಭ ಪ್ರವೇಶಿಸಿದೊಡನೆ ಇನ್ನೊಂದು ಬಗೆಯ ಮಾರ್ಗದತ್ತ ಬದುಕು ಮನುಷ್ಯನನ್ನು ಕೊಂಡೊಯ್ಯುತ್ತದೆ. ನಮ್ಮ ಅಂತರಂಗದ ಆತ್ಮಸಾಕ್ಷಿಜೀವಾತ್ಮವಾಗಿದೆ. ಆತ್ಮಸಾಕ್ಷಿ ಎದುರು ಸತ್ಯವಷ್ಟೇ ನಡೆಯುತ್ತದೆ. ನಾವು ಎಲ್ಲರಿಗೂ ಮಿಥ್ಯ ಹೇಳಬಹುದು.ಆದರೆ, ಆತ್ಮಸಾಕ್ಷಿಗೆ ಮಿಥ್ಯ ಹೇಳಲು ಸಾಧ್ಯವಿಲ್ಲ ಎಂದರು.

ದೇವರು ನಮ್ಮೆಲ್ಲರ ಅಂತರಂಗದಲ್ಲಿದ್ದಾನೆ. ಜೀವಾತ್ಮ ಪರಮಾತ್ಮನ ಒಂದು ಅಂಗವಾಗಿದೆ. ತಾಯಿಗರ್ಭದಲ್ಲಿಯೇ ಮನುಷ್ಯ ಜೀವನದ ಪ್ರತಿಯೊಂದು ಭವಿಷ್ಯವೂ ನಿರ್ಧರಿತವಾಗುತ್ತದೆ. ಭೂಮಿಗೆ ಬಂದ ನಂತರ ಬದುಕು ಕೇವಲ ಅದರ ಪರಿಣಾಮವಾಗಿದೆ. ನಮ್ಮದು ಹೋರಾಟದ ಬದುಕಾಗಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ ಎಂದರು.

ಹತ್ತಿಮತ್ತೂರ ವಿರಕ್ತಮಠದ ನಿಜಗುಣ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹೊಳೆಮಠ ಬನವಾಸಿಯ ನಾಗಭೂಷಣ ಸ್ವಾಮೀಜಿ ಸಮ್ಮುಖ ವಹಿಸಿ ಆಶೀರ್ವಚನ ನೀಡಿದರು. ಶ್ರೀಮಠದ ಚನ್ನಬಸವಸ್ವಾಮೀಜಿ ನೇತೃತ್ವ ವಹಿಸಿದ್ದರು. ಗೊಟಗೋಡಿ ಜಾನಪದವಿವಿಯ ಸಹಾಯಕ ಪ್ರಾಧ್ಯಾಪಕ ಡಾ|ರಾಜಶೇಖರ ಡೊಂಬರ ಮತ್ತೂರ ಉಪನ್ಯಾಸ ನೀಡಿದರು.ಸೃಜನಿ ನಾಟ್ಯ ಶಾಲೆಯ ವಿದ್ಯಾರ್ಥಿಗಳಾದ ಕು|ಮನುಶ್ರೀ ಯಲಿಗಾರ ಹಾಗೂ ಸಂಗಡಿಗರಿಂದ ವಚನ ನೃತ್ಯ ಪ್ರದರ್ಶನ ನಡೆಯಿತು. ಕು|ಪೃಥ್ವಿ ಶಿರೂರಅವರಿಂದ ವೀರಗಾಸೆ ನೃತ್ಯ ಪ್ರದರ್ಶನ ನಡೆಯಿತು. ಚಿಕ್ಕಮಣಕಟ್ಟಿ ಜೋಡಿ ಬಸವೇಶ್ವರ ಜಾನಪದ ಕಲಾ ತಂಡದವರು ಜಾನಪದ ಸಂಗೀತದ ರಸದೌತಣ ಉಣಬಡಿಸಿದರು. ಯಲವಿಗಿ ಪರಮೇಶ್ವರ ಗವಾಯಿಗಳು ಸಂಗೀತ ಸೇವೆ ನೀಡಿದರು.

Advertisement

ಬೆಂಗಳೂರಿನ ಹೃದಯಸ್ಪರ್ಷ ಎಜುಕೇಶನ್‌ ಟ್ರಸ್ಟ್‌ನ ಸುರೇಶ, ಬೆಂಗಳೂರಿನ ಸಮಾಜ ಸೇವಕಿ ವಿಜಯಲಕ್ಷ್ಮೀ ಎ., ಬೆಂಗಳೂರಿನ ಡಾ| ಹರಿಪ್ರಸಾದ, ತಹಶೀಲ್ದಾರ್‌ ಸಿ.ಎಸ್‌. ಭಂಗಿ, ಹಿರಿಯ ಮುಖಂಡ ಸಿ.ಎಂ ಬೆಣ್ಣಿ, ಬಿಜೆಪಿ ತಾಲೂಕು ಅಧ್ಯಕ್ಷ ಗಂಗಾಧರ ಬಾಣದ, ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರವೀಣ ಚರಂತಿಮಠ, ಕರವೇ ಅಧ್ಯಕ್ಷ ಪರಶುರಾಮ ಈಳಗೇರ ಹಾಗೂ ರಾಮಣ್ಣ ಅಗಸರ ಸೇರಿದಂತೆ ಇತರರನ್ನು ಶ್ರೀಮಠದಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಿ.ಬಿ.ಯಲಿಗಾರ ಸೇವಾ ಸಂಸ್ಥೆ ಅಧ್ಯಕ್ಷ ಶಶಿಧರ ಯಲಿಗಾರ ಹಾಗೂ ತೆಗ್ಗಿಹಳ್ಳಿ ಗ್ರಾಪಂ ಸದಸ್ಯ ರಸೂಲ್‌ಸಾಬ್‌ ಗುಂಡೂರ ದಾಸೋಹ ಸೇವೆ ಕೈಗೊಂಡರು. ಪ್ರಾಚಾರ್ಯ ಆರ್‌.ಎನ್‌.ತೊಂಡೂರ, ಡಿ.ಎಫ್‌. ಬಿಂದಲಗಿ ಸ್ವಾಗತಿಸಿ, ನಿರ್ವಹಿಸಿದರು.

ಮನುಷ್ಯ ನಿರ್ಮಿತ ಕಾನೂನು ಹಾಗೂ ದೇವರ ಕಾನೂನು ಪರಸ್ಪರ ಸನಿಹಕ್ಕೆ ಬಂದಾಗ ಪ್ರಪಂಚ ಸ್ವರ್ಗವಾಗಲಿದೆ. ಮನುಷ್ಯ ಮಾಡಿದ ಕಾನೂನಿನಲ್ಲಿ ಅಪರಾಧಕ್ಕನುಗುಣವಾಗಿ ಶಿಕ್ಷೆ ಇದೆ. ನಿಸರ್ಗ ಮತ್ತು ದೇವರ ಕಾನೂನಿನಂತೆ ಸತ್ಯ, ಧರ್ಮದ ಮಾರ್ಗದಲ್ಲಿ ನಡೆದರೆ ಪುಣ್ಯ ಪ್ರಾಪ್ತಿಯಾಗಲಿದೆ. – ಬಸವರಾಜ ಬೊಮ್ಮಾಯಿ, ಗೃಹ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next