Advertisement

ಮಳೆಗೆ ಬೆದರಿ ಉದುರುತ್ತಿರುವ ಶಂಕರಪುರ ಮಲ್ಲಿಗೆ : ಬೆಳೆಗಾರರು ತತ್ತರ

03:28 PM Nov 18, 2021 | Team Udayavani |

ಕಟಪಾಡಿ: ಅಕಾಲಿಕ ಮಳೆಯಿಂದ ಪ್ರಾಪಂಚಿಕವಾಗಿ ಗುರುತಿಸಲ್ಪಟ್ಟ ಶಂಕರಪುರ ಮಲ್ಲಿಗೆ ಬೆಳೆಗಾರರು ತತ್ತರಿಸಿದ್ದು, ಮಲ್ಲಿಗೆ ಗಿಡಗಳು ಸರಿಯಾಗಿ ಮೊಗ್ಗು ಬಿಡದೆ ಇಳುವರಿ ಕಡಿಮೆಯಾಗಿ ಪರಿತಪಿಸುವಂತಾಗಿದೆ. ಮಳೆಗೆ ಬೆದರಿ ಉದುರುತ್ತಿರುವ ಶಂಕರಪುರ ಮಲ್ಲಿಗೆ ಬೆಳೆಗಾರರನ್ನು ತತ್ತರಿಸುವಂತೆ ಮಾಡಿದೆ.

Advertisement

ಮಲ್ಲಿಗೆ ಗಿಡದಲ್ಲಿ ಹೂವಿನ ಮೊಗ್ಗು ಸಣ್ಣದಾಗಿ ಬೆಳೆಯುತ್ತಿದ್ದು, ಸರಿಯಾಗಿ ಬೆಳೆಯದೆ ಅರಳುತ್ತಿಲ್ಲ. ಉದುರಿ ಹೋಗುತ್ತಿದೆ. ಕಾಂಡಗಳು ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ಎಲೆಗಳು ಕರಟಿ ಹೋದಂತೆ ಕಂಡು ಬರುತ್ತಿದ್ದು, ಮಲ್ಲಿಗೆ ಮೊಗ್ಗು ಸಹಿತವಾದ ಮಲ್ಲಿಗೆ ಗಿಡಗಳ ಗೆಲ್ಲುಗಳು ತುಂಡಾಗಿ ಮಣ್ಣು ಪಾಲಾಗುತ್ತಿದೆ. ಒಣಗಿದಂತೆ ಗೆಲ್ಲುಗಳು, ಎಲೆಗಳು, ಹೂವಿನ ಮೊಗ್ಗುಗಳು ಉದುರಿ ಹೋಗುತ್ತಿದೆ. ಮಲ್ಲಿಗೆ ಹೂವು ಸಹಜವಾದ ಮಟ್ಟಕ್ಕೆ ಬೆಳೆದು ನಿಲ್ಲದೆ ಇದ್ದು, ಇಳುವರಿ ಕುಂಠಿತವಾಗಿದೆ. ಸುಮಾರು 8-10 ಚೆಂಡುಗಳಷ್ಟು ಶಂಕರಪುರ ಮಲ್ಲಿಗೆ ಹೂವನ್ನು ಪಡೆಯುತ್ತಿದ್ದ ಬೆಳೆಗಾರರು ಇದೀಗ ಕೇವಲ 300-400 ಬಿಡಿ ಹೂವುಗಳನ್ನು ಪಡೆಯುವಲ್ಲಿ ಸಂತೃಪ್ತಿ ಕಾಣಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾಮೂಲಿಗಿಂತ ಅರ್ಧಕ್ಕರ್ಧ ಶಂಕರಪುರ ಮಲ್ಲಿಗೆ ಮಾರುಕಟ್ಟೆಗೆ ಬರುತ್ತಿದೆ ಎಂದು ಶಂಕರಪುರ ಮಲ್ಲಿಗೆ ಹೂವಿನ ವ್ಯಾಪಾರಿ ವಿನ್ಸೆಂಟ್ ರಾಡ್ರಿಗಸ್ ಅವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಮಲ್ಲಿಗೆ ಬೆಳೆಗಾರರಾದ ಶಂಕರಪುರದ ಬಿಬಿಯಾನ್ ಹಿಲ್ಡಾ ಲೋಬೋ ಹೇಳುವಂತೆ ವಿಪರೀತ ಮಳೆಯಿಂದ ಶಂಕರಪುರ ಮಲ್ಲಿಗೆ ಕೊಳೆತು ಹೋಗಿದೆ. ಗಿಡಗಳು ರೋಗ ಬಾತವಾಗಿದೆ. ಫಂಗಸ್ ಬಂದಿದ್ದು, ಚಿಗುರು ಬರುವುದಿಲ್ಲ. ಸುಮಾರು 8 -10 ಚೆಂಡು ಹೂವು ಪಡೆಯುತ್ತಿದ್ದು ಇದೀಗ ಕೇವಲ 300, 400 ಬಿಡಿ ಹೂವು ಮಾತ್ರ ಸಿಗುತ್ತದೆ.ಮೊಗ್ಗು ಸರಿಯಾಗಿ ಅರಳುತ್ತಿಲ್ಲ ಚಿಂತೆ ವ್ಯಕ್ತಪಡಿಸುತ್ತಿದ್ದಾರೆ.

ಕುರ್ಕಾಲು ಸುಭಾಸ್ ನಗರದ ಶಂಕರಪುರ ಮಲ್ಲಿಗೆ ಬೆಳೆಗಾರರಾದ ಭವಾನಿ ಅವರು ಕುಟುಂಬ ನಿರ್ವಹಣೆಗೆ ಮಲ್ಲಿಗೆ ಹೂವನ್ನೇ ನೆಚ್ಚಿಕೊಂಡಿದ್ದು ಮಲ್ಲಿಗೆ ಹೂವಿನ ಬೆಳೆಯು ಕೈಕೊಡುತ್ತಿದ್ದು, ಸಮಸ್ಯೆ ಆಗಿದೆ. ಸಿರಿ ತುಂಡಾಗಿ ಕೆಳಗೆ ಬೀಳುತ್ತಿದೆ. ಕೆಲ ಗಿಡಗಳು, ಮಲ್ಲಿಗೆ ಮೊಗ್ಗು ಸತ್ತಿದೆ. ಸುಮಾರು 6 ಚೆಂಡು ನಿತ್ಯ ಲಭಿಸುತ್ತಿದ್ದ ಮಲ್ಲಿಗೆ ಹೂವು ಇದೀಗ 200ರಷ್ಟು ಬಿಡಿ ಹೂವು ಮಾತ್ರ ಕೈ ಸೇರುತ್ತಿದೆ ದಿಕ್ಕೇ ತೋಚುತ್ತಿಲ್ಲ ಎಂದು ಚಿಂತಾಕ್ರಾಂತರಾಗಿದ್ದಾರೆ.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಮಲ್ಲಿಗೆ ಬೆಳೆಗಾರರ ಸಂಕಟಕ್ಕೆ ಕೈ ಜೋಡಿಸುವಂತೆ ಬೆಳೆಗಾರರು ಆಗ್ರಹಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next