Advertisement

ಕಾಡುತ್ತಲೇ ಇದ್ದಾಳೆ ಶಕೀಲ

12:01 PM Oct 25, 2017 | |

ಬಿ ಗ್ರೇಡ್‌ ಸಿನಿಮಾಗಳ ನಟಿ ಶಕೀಲ ಕುರಿತು ಮಲಯಾಳಂನಲ್ಲಿ ಆತ್ಮಕತೆ ರಚನೆಗೊಂಡಾಗ, ಅದನ್ನು ಬರೆದ ಲೇಖಕ ಮುಜುಗರಕ್ಕೀಡಾಗಿ, ತನ್ನ ಹೆಸರನ್ನೇ ಹಾಕಿಕೊಂಡಿರಲಿಲ್ಲ. ಆದರೆ, ಕನ್ನಡಕ್ಕೆ ಇದನ್ನು ತರ್ಜುಮೆ ಮಾಡಿದ “ಕೆ.ಕೆ. ಗಂಗಾಧರನ್‌’ ಅವರು ತಮ್ಮ ಹೆಸರನ್ನು ಧೈರ್ಯದಿಂದಲೇ ಹಾಕಿಕೊಂಡಿದ್ದರು. ಆ ಪುಸ್ತಕ ಬಿಡುಗಡೆ ಆಗಿದ್ದೇ ಆಗಿದ್ದು, ಎಲ್ಲಿದ್ದರೋ ಶಕೀಲ ಅಭಿಮಾನಿಗಳು…! ಈಗಲೂ ಒಬ್ಬೊಬ್ಬರಾಗಿ ಕಾಡುತ್ತಲೇ ಇದ್ದಾರೆ. ಹಾಗೆ ಕಾಡಿದ ಕತೆಗಳು ಇಲ್ಲಿವೆ…  

Advertisement

ಮಲಯಾಳಂ ನಟಿ ಶಕೀಲ, ಹಲವರನ್ನು ಹಲವು ಬಗೆಯಲ್ಲಿ ಕನಸಿನಲ್ಲಿ, ಮನಸ್ಸಿನಲ್ಲಿ ಕಾಡಿದ್ದಾರೆ. ಈಗ ನನ್ನನ್ನು ನಿದ್ದೆಯಲ್ಲೂ ಕಾಡುತ್ತಾರೆ. ಹೋದಲ್ಲಿ, ಬಂದಲ್ಲಿ ಅವರ ಮುಖ ಕಣ್ಮುಂದೆ ಬರುತ್ತದೆ. ಇದು ಆಕೆಯ “ರೂಪಸಿರಿ’ಯ ಕಾಟವೆಂದು ನೀವು ತಪ್ಪು ಭಾವಿಸಬೇಡಿ. ಹಾಗೆ “ಸುಂದರಾಂಗಿಯ ಕನಸು’ ಕಾಣುವ ವಯಸ್ಸು ನನ್ನದಲ್ಲ. ಎರಡು ವರುಷದ ಹಿಂದೆ ಅವರ ಬಗ್ಗೆ ಕನ್ನಡದಲ್ಲಿ “ನಟಿ ಶಕೀಲಳ ಆತ್ಮಕತೆ’ ಎಂಬ ಅನುವಾದಿತ ಪುಸ್ತಕ ಬರೆದಿದ್ದೆನಲ್ಲ, ಅದರ ಫ‌ಲಶ್ರುತಿಯ ಕಾಟಗಳು ಇವು!

ಮಲಯಾಳಂನಿಂದ ನೂರಾರು ಕತೆಗಳನ್ನು ಕನ್ನಡಕ್ಕೆ ಅನುವಾದಿಸಿರುವ ನನ್ನನ್ನು, ಹೋದಲ್ಲಿ ಬಂದಲ್ಲಿ ಅನೇ ಕ ರು ಗುರುತಿಸುವುದು, “ಶಕೀಲ ಕೃತಿಯ ಲೇಖಕ’ನೆಂದೇ! ಆರಂಭದ ಒಂದು ನೆನಪು ಈಗಲೂ ಅಲೆಅಲೆಯಾಗಿ ನನ್ನ ನೆನಪಿನ ಬಂಡೆಗಲ್ಲಿಗೆ ಅಪ್ಪಳಿಸುತ್ತಿದೆ. ದಿನಪತ್ರಿಕೆಯೊಂದರಲ್ಲಿ ಬಂದ ನನ್ನ ಫೋಟೊವನ್ನು ನೋಡಿದ ಯುವತಿಯೊಬ್ಬಳು ಶಕೀಲ ಪುಸ್ತಕವನ್ನು ಓದಿ ಪುಳಕಿತಳಾಗಿ, ಫೋನು ಮಾಡಿದ್ದಳು. “ಸಾರ್‌…ನಾನು ನನ್ನ ಗಂಡನಿಗೆ ಡೈವೋಸ್‌ ನೀಡಿ, ನಿಮ್ಮೊಂದಿಗೆ ಬಂದು ಸಂಸಾರ ಮಾಡುತ್ತೇನೆ’ ಎಂದು ಹಠಕ್ಕ ಬಿದ್ದಳು.

ನಾನು ನನ್ನ ನಿಜ ಬದುಕಿನ ಚಿತ್ರಣ, ವಯಸ್ಸು ಎಲ್ಲವನ್ನೂ ಆಕೆಗೆ ತಿಳಿಸಿದೆ. ಆದರೂ ಆಕೆ ಒಪ್ಪಲಿಲ್ಲ. ಅವಳನ್ನು ಕೈಬಿಟ್ಟರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದಳು. ಕೊನೆಗೆ ನನ್ನ ಹೆಂಡತಿಗೆ “ನಂಬು ಮಾರಾಯ್ತಿ, ಹೀಗೆಲ್ಲ ಆಗಿಹೋಗಿದೆ’ ಎಂದು ಮನದಟ್ಟು ಮಾಡಿಸಿದೆ. ಆಗ ನನ್ನ ಪತ್ನಿಯೇ ಆಕೆಗೆ ಬಿಡಿಸಿ ಹೇಳಬೇಕಾಯಿತು. ತಪ್ಪು ಹೆಜ್ಜೆ ಇಡದಂತೆ ಆಕೆಗೆ ಎಚ್ಚರಿಸಿದಳು.ಮತ್ತೆಂದೂ ಆಕೆ ಫೋನು ಮಾಡಲಿಲ್ಲ.

ಇದು ಶಿವಮೊಗ್ಗದ ವೈದ್ಯರೊಬ್ಬರ ಕತೆ. ಅವರದ್ದು ಒಂದೇ ಬೇಡಿಕೆ; “ನಾನು ಶಕೀಲಳನ್ನು ಮದ್ವೆ ಆಗುತ್ತೇನೆ. ನೀವು ಮಧ್ಯೆ ನಿಂತು, ಮದ್ವೆ ಮಾಡಿಸಿ…’ ಅಂತ. ಈ ಶಕೀಲ, ತನ್ನ ರಂಗುರಂಗಿನ ಮತ್ತು ದುರಂತ ಕಾವ್ಯವಾಗಿ ನನ್ನನ್ನು ಎಂಥ ಸಂಕಟಕ್ಕೆ ತಳ್ಳುತ್ತಿದ್ದಾಳೆ ಎಂದು ವ್ಯಥೆಪಡುವ ಸರದಿ ನನ್ನದು. ಆ ವೈದ್ಯರು ನನ್ನನ್ನು ಬಿಡಲೇ ಇಲ್ಲ. ಕೊನೆಗೆ ಆಫ‌ರ್‌ ಅನ್ನೂ ಕೊಟ್ಟುಬಿಟ್ಟರು.

Advertisement

“ನೀವು ಶಕೀಲಳನ್ನು ನನ್ನೊಂದಿಗೆ ಮದ್ವೆಗೆ ಒಪ್ಪಿಸಿದರೆ, ಜೀವನಪೂರ್ತಿ ನಿಮಗೆ ಉಚಿತ ಚಿಕಿತ್ಸೆ ನೀಡುವೆ. ನಿಮ್ಮ ಶುಗರುÅ, ಬಿಪಿಯನ್ನು ನಾನೇ ಕಂಟ್ರೋಲು ಮಾಡುವೆ’ ಎಂದು ಆಮಿಷವೊಡ್ಡಿದರು. ಇದನ್ನು ಕೇಳಿ ನನಗೆ ನಗುಬಂತು. ಅವರಿಗೆ ಹೇಳಿದೆ; “ನಾನೊಬ್ಬ ಅನುವಾದಕನಷ್ಟೇ, ಬ್ರೋಕರ್‌ ಅಲ್ಲ. ದಯವಿಟ್ಟು ತಪ್ಪಾಗಿ ಭಾವಿಸಬೇಡಿ’. ಇಷ್ಟೆಲ್ಲಾ ಹೇಳಿದರೂ ಅವರು ನನಗೆ ಫೋನು ಮಾಡುತ್ತಲೇ ಇದ್ದರು. ಕೊನೆಗೆ ನನ್ನಿಂದ ಪ್ರಯೋಜನವಿಲ್ಲವೆಂದು ತಿಳಿಯಿತೇನೋ, ಸುಮ್ಮನಾದರು!

ಒಮ್ಮೆ ಕನ್ನಡಭವನದ ಆಫೀಸಿಗೆ ಹೋಗಿದ್ದೆ. ಕಚೇರಿಯಲ್ಲಿ ಇಬ್ಬರು ವಿದ್ವಾಂಸರು ಕುಳಿತಿದ್ದರು. ನನ್ನೆರಡು ಪುಸ್ತಕಗಳನ್ನು ಕೊಟ್ಟು ಸ್ವೀಕೃತಿ ಪತ್ರ ಪಡೆದು ಹಿಂತಿರುಗುತ್ತಿದ್ದೆ. ಕೂಡಲೇ ಯಾರೋ ಬಂದು ನನ್ನನ್ನು ಕರೆದರು. ನಾನು ಪುನಃ ಅಕಾಡೆಮಿಯ ಕಚೇರಿಗೆ ಹೋದೆ. ಅಲ್ಲಿ ಕುಳಿತಿದ್ದ ಒಬ್ಬ ವಿದ್ವಾಂಸರು, “ಶಕೀಲ ಪುಸ್ತಕವನ್ನು ಬರೆದವರು ನೀವೇನಾ?’ ಎಂದು ಕೇಳಿದರು. ಹೌದೆಂದು ತಲೆಯಾಡಿಸಿದ್ದೇ ತಡ, ಅಲ್ಲಿನ ಸಹಾಯಕರೊಬ್ಬರು ಒಂದು ಕುರ್ಚಿಯನ್ನು ಹಾಕಿ ಕೂರುವಂತೆ ಹೇಳಿದರು. ಕಾಫಿಯೂ ಬಂತು.

“ನಿಮ್ಮ ಅನುವಾದ ಚೆನ್ನಾಗಿದೆ’ ಎಂದು ಮೆಚ್ಚುಗೆ ಸೂಚಿಸಿದರು. ನಾನು ಕೊಟ್ಟಿದ್ದ ಎರಡು ಪುಸ್ತಕಗಳು ನನ್ನನ್ನು ನೋಡಿ ಅಣಕಿಸುವಂತೆ ತೋರಿತು. ಕಾಫಿ ಕುಡಿದು ಮಾತುಕತೆಯೆಲ್ಲ ಮುಗಿದ ನಂತರ ನಾನು ವಿದ್ವಾಂಸರನ್ನು ನೋಡುತ್ತಾ ಹೇಳಿದೆ, “ಸರ್‌, ಈ ಎರಡು ಪುಸ್ತಕಗಳು ಖ್ಯಾತ ಮಲಯಾಳಂ ಸಾಹಿತಿಗಳದ್ದು. ಆದರೆ, ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ ನನಗೆ ಕುರ್ಚಿ ಹಾಕಿ ಕಾಫಿ ಕುಡಿಸಿದ್ದು ಶಕೀಲ ಎಂಬ ಗ್ಲ್ಯಾಮರ್‌ ನಟಿ… ಥ್ಯಾಂಕ್ಸ್‌’ ಎನ್ನುತ್ತಾ ಮೇಲೆದ್ದೆ. ಅಲ್ಲಿದ್ದ ಮೂವರ ಜತೆ ನಾನೂ ನಕ್ಕೆ. 

ಹಾಗೆ ನೋಡಿದರೆ, ಆರಂಭದಲ್ಲಿಯೇ ಶಕೀಲ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಅವತ್ತು ಆತ್ಮಕತೆ ಕೃತಿಯ ಬಿಡುಗಡೆ ಬೆಂಗಳೂರಿನ ಸ್ವಾತಂತ್ರÂ ಉದ್ಯಾನವನದಲ್ಲಿತ್ತು. ಬೆಂಗಳೂರಿಗೆ ಬಂದ ಶಕೀಲರ ಸಂದರ್ಶನಕ್ಕೆ ಖಾಸಗಿ ವಾಹಿನಿಗಳು ಕಾದಿದ್ದವು. ಶಕೀಲ ಪೂರ್ತಿ ಮೇಕಪ್‌ನಲ್ಲಿದ್ದರು. ದೃಶ್ಯ ಮಾಧ್ಯಮದ ಸಂದರ್ಶಕ, ಆತ್ಮಕತೆಯಲ್ಲಿ ತಾಯಿಯ ಬಗ್ಗೆ ಬರೆದ ಮಾತುಗಳ ಬಗ್ಗೆ ಕೇಳಿದಾಗ ಶಕೀಲ ಕೆಂಡಾಮಂಡಲ.

“ನಾನು ಹಾಗೆ ಹೇಳಲೇ ಇಲ್ಲ’ ಎಂದು ವಾದಿಸಿದರು. ಸಂದರ್ಶಕ “ಪುಸ್ತಕದಲ್ಲಿ ಇದೆಯಲ್ಲ..?’ ಎಂದಾಗ, ತಕ್ಷಣ ಕ್ಯಾಮೆರಾ ಆಫ್ ಮಾಡುವಂತೆ ಹೇಳಿ, ಶಕೀಲ ನನ್ನತ್ತ ತಿರುಗಿ ದೊಡ್ಡ ಗಂಟಲಿನಲ್ಲಿ ಗುಡುಗಿದರು. “ಮಲಯಾಳಂನಲ್ಲಿ ನೀವು ಏನು ಬರೆದಿದ್ದೀರೋ ಅದನ್ನಷ್ಟೇ ಕನ್ನಡದಲ್ಲಿ ಬರೆದಿದ್ದೇನೆ. ನಾನು ಯಾವುದನ್ನೂ ಸೇರಿಸಿಲ್ಲ, ತೆಗೆದೂ ಇಲ್ಲ’ ಎಂದೆ. ಅವರಿಗೆ ತೃಪ್ತಿಯಾಗಲಿಲ್ಲ.

ತಾಯಿಯ ಬಗ್ಗೆ ಈ ರೀತಿ ಹೇಳಿದ್ದಾರೆ ಎಂದಾಗ ನಿಮಗೆ ಅನುಮಾನವೇ ಬರಲಿಲ್ಲವೇ? ಎಂದೆಲ್ಲಾ ರೇಗಿದರು. ಕೊನೆಗೆ ಪ್ರಕಾಶಕರಾದ ಜಮೀಲ್‌ ಮಧ್ಯೆ ಪ್ರವೇಶಿಸಿ ಅವರನ್ನು ಸಮಾಧಾನಪಡಿಸಿದರು. ಅನುವಾದಕರ ತಪ್ಪೇನೂ ಇಲ್ಲವೆಂದು ಖಚಿತಪಡಿಸಿದರು. ಆಗಲೇ ಶಕೀಲ ಮೂಲ ಲೇಖಕನ ಹೆಸರನ್ನು ಬಹಿರಂಗಪಡಿಸಿದ್ದು! ಆತ ಕೇರಳದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕತೆಗಾರನಂತೆ.

ತನ್ನ “ಇಮೇಜ್‌’ನ ಉಳಿವಿಗಾಗಿ ಶಕೀಲ ಆತ್ಮಕತೆಯಲ್ಲಿ ತನ್ನ ಹೆಸರನ್ನು ಹಾಕಿರಲಿಲ್ಲವೆಂದು ಆ ಮೇಲೆ ತಿಳಿಯಿತು! ಇಂಥ ಸಿಹಿಕಹಿ ಅನುಭವಗಳನ್ನು ಶಕೀಲ ಪುಸ್ತಕ ನನಗೆ ಕೊಟ್ಟಿದೆ. ಕೇರಳದ ಜ್ಞಾನಪೀಠ ಪ್ರಶಸ್ತಿ ವಿಜೇತರ, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರ ಅನೇಕ ಕತೆ- ಕಾದಂಬರಿಗಳನ್ನು ಅನುವಾದಿಸಿದ ನನಗೆ ಶಕೀಲ ಪುಸ್ತಕ ಖ್ಯಾತಿ, ಅಪಖ್ಯಾತಿಗಳೆರಡನ್ನೂ ತಂದುಕೊಟ್ಟಿದೆ.

ಓದಿ ಕಣ್ಣೀರಿಟ್ಟಳು ಆ ನಟಿ!
ಕನ್ನಡದ ಮೂವರು ನಟಿಯರು ಪುಸ್ತಕವನ್ನು ಓದಿ ಪ್ರತಿಕ್ರಿಯಿಸಿದ್ದರು. “ಸರ್‌, ನಿಮ್ಮ ಅನುವಾದ ಓದಿದೆ. ಒಬ್ಬ ನಟಿಯ ಜೀವನ ಇದಕ್ಕಿಂತ ದುರಂತಮಯವಾಗಿರುತ್ತೆ’. “ಇದೇ ನಮ್ಮೆಲ್ಲರ ಬದುಕು. ಶಕೀಲ ಆತ್ಮಕಥೆ ಓದಿ ಕಣ್ಣೀರು ಬಂತು’ ಎಂದೆಲ್ಲಾ ಹೇಳಿದಾಗ ನಾನು ಬರೆದದ್ದು ಸಾರ್ಥಕವೆನಿಸಿತ್ತು.

ಮತ್ತೂಮ್ಮೆ ಸಾಹಿತ್ಯ ಮಿತ್ರರೊಂದಿಗೆ ಬೆಂಗಳೂರಿನ ಯಾವುದೋ ಕಚೇರಿಗೆ ಆಟೋದಲ್ಲಿ ಹೋಗುತ್ತಿದ್ದೆ. ಮಾತಿನ ನಡುವೆ ಅವರು, “ಈಗ ನೀವು ಕೆ.ಕೆ. ಗಂಗಾಧರನ್‌ ಅಲ್ಲ, ಶಕೀಲ ಗಂಗಾಧರನ್‌’ ಎಂದು ಹೇಳಿ ನಕ್ಕರು. ತಕ್ಷಣ ಆಟೋ ಡ್ರೈವರ್‌, ಆಟೋ ಬದಿಯಲ್ಲಿ ನಿಲ್ಲಿಸಿ, “ಶಕೀಲ ಪುಸ್ತಕ ಬರೆದಿದ್ದು ನೀವಾ ಸರ್‌? ಸಖತ್ತಾಗಿದೆ…’ ಎಂದು ಅವನದ್ದೇ ಸ್ಟೈಲಿನಲ್ಲಿ ಮೆಚ್ಚುಗೆ ಸೂಚಿಸಿದ. 

* ಕೆ.ಕೆ. ಗಂಗಾಧರನ್‌

Advertisement

Udayavani is now on Telegram. Click here to join our channel and stay updated with the latest news.

Next