ಹಾನಗಲ್ಲ: ಮೋದಿ ನೇತೃತ್ವದ ಕೇಂದ್ರ ಸರಕಾರ ತರಾತುರಿಯಲ್ಲಿ ಕೃಷಿಗೆ ಮಾರಕವಾದ ಕಾನೂನನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸಿರುವುದು ದೇಶದ ಕೃಷಿ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಕೃಷಿ ಪ್ರಧಾನ ದೇಶದಲ್ಲಿ ರೈತರ ಧ್ವನಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚೆಳ್ಳೇರ ಕಿಡಿಕಾರಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ದೆಹಲಿಯಲ್ಲಿ ರೈತರ ಪ್ರತಿಭಟನೆಗೆ 52 ದಿನಗಳು ಕಳೆದಿದೆ. ನೂರಾರು ಜನ ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಇನ್ನೂ ಸರಕಾರದ ಕಣ್ಣು ತೆರೆದಿಲ್ಲ. ಮಕ್ಕಳು, ಮಹಿಳೆಯರು, ವಯೋವೃದ್ಧರು, ಪ್ರಗತಿಪರ ಚಿಂತಕರು ಚಳವಳಿಗೆ ಬೆಂಬಲ ನೀಡಿದ್ದಾರೆ. ರಾಜ್ಯದಲ್ಲೂ ಚಳವಳಿ ನಡೆದಿವೆ. ಆದರೆ ಸರಕಾರ ಮೊಂಡುತನ ಬಿಡುತ್ತಿಲ್ಲ. ಕಾನೂನಿನಲ್ಲಿ ಬದಲಾವಣೆ ತರುತ್ತೇವೆ. ಆದರೆ ಕಾನೂನು ವಾಪಸ್ ಪಡೆಯುವುದಿಲ್ಲ ಎನ್ನುತ್ತಾರೆ. ರೈತರ ಚಳವಳಿ ಗೌರವಿಸದ ಕೇಂದ್ರ ಸರಕಾರ ಪ್ರತಿಭಟನೆಗೆ ಬರುವ ರೈತರ ಮಾರ್ಗದಲ್ಲಿ ರಸ್ತೆಗಳನ್ನು ಬಂದ ಮಾಡಿದರು. ಜಲ ಫಿರಂಗಿ, ಅಶ್ರುವಾಯು ಸಿಡಿಸಿ ಪ್ರತಿಭಟನೆ ನಡೆಯದಂತೆ ಅಧಿ ಕಾರ ದುರುಪಯೋಗಪಡಿಸಿಕೊಂಡಿದೆ ಎಂದು ದೂರಿದರು.
ಇದನ್ನೂ ಓದಿ:ಬಿಇಒ ನೇತೃತದಲ್ವಿ ಮುಖ್ಯ ಶಿಕ್ಷಕರ ಭವನ ಸ್ವಚ್ಛತೆ
ಇದುವರೆಗೂ 10 ಸುತ್ತಿನ ಮಾತುಕತೆಯಾದರೂ ಫಲಪ್ರದವಾಗಿಲ್ಲ. ಹೀಗಾಗಿ, ಹಾವೇರಿಯಲ್ಲಿ ಜನವರಿ 26 ರಂದು ಪ್ರಜಾಪ್ರಭುತ್ವ ಉಳಿಸಿ ರೈತರ ರಕ್ಷಣೆ ಮಾಡಿ, ರೈತರ ಬಗ್ಗೆ ಗೌರವವಿರಲಿ ಎಂಬ ಸಂದೇಶ ಸಾರುವ ಉದ್ದೇಶದಿಂದ ಟ್ರ್ಯಾಕ್ಟರ್ಗಳ ಪರೇಡ್ ನಡೆಸಿ ಪ್ರತಿಭಟಿಸಲಾಗುವುದು ಎಂದರು. ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಜ.26 ರಂದು ಹಾವೇರಿಯಲ್ಲಿ ನಡೆಯುವ ಟ್ರ್ಯಾಕ್ಟರ್ ಚಳವಳಿಯಲ್ಲಿ ಪ್ರತಿ ಗ್ರಾಮಗಳಿಂದ ತಮ್ಮ ತಮ್ಮ ಟ್ರ್ಯಾಕ್ಟರ್ಗಳನ್ನು ತೆಗೆದುಕೊಂಡು ಪಾಲ್ಗೊಳ್ಳಬೇಕು. ಆ.26ರಂದು10 ಗಂಟೆಗೆ ಹಾವೇರಿಯ ಕಾಗಿನೆಲೆ ಕ್ರಾಸ್ ನಿಂದ ಪ್ರತಿಭಟನೆ ಆರಂಭಗೊಳ್ಳಲಿದ್ದು, ಪಕ್ಷಾತೀತವಾಗಿ, ಜಾತ್ಯತೀತವಾಗಿ ರೈತ ಕುಲದ ಉಳಿವಿಗಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ರೈತರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಬ್ಯಾಡಗಿ ತಾಲೂಕು ಅಧ್ಯಕ್ಷ ರುದ್ರಗೌಡ ಕಾಡನಗೌಡ್ರು, ಹಿರೇಕೇರೂರಿನ ಪ್ರಭುಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ ಇದ್ದರು.