Advertisement

ಬಿಜೆಪಿ ಬಲವರ್ಧನೆಗೆ “ಶಾ’ಹೊಸ ತಂತ್ರ

09:45 AM Sep 20, 2017 | Team Udayavani |

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಉತ್ತರ ಕರ್ನಾಟಕದಿಂದ ಕಣಕ್ಕಿಳಿಸಿ ಆ ಭಾಗದಲ್ಲಿ ಪಕ್ಷದ ಶಕ್ತಿ ಹೆಚ್ಚಿಸಲು ಯೋಚಿಸಿರುವ ಬಿಜೆಪಿ, ಇದೀಗ ದಕ್ಷಿಣ ಕರ್ನಾಟಕ ಮತ್ತು ಕರಾವಳಿ-ಮಲೆನಾಡು ಭಾಗದಲ್ಲೂ ಪಕ್ಷದ ಬಲವರ್ಧನೆಗೆ ಹೊಸ ಕಾರ್ಯತಂತ್ರ ರೂಪಿಸಲು ಮುಂದಾಗಿದೆ.

Advertisement

ಈ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಮತ್ತು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಕರ್ನಾಟಕದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಲು ಚಿಂತನೆ ನಡೆಸಿದ್ದು, ಒಬ್ಬರಿಗೆ ಹಳೇ ಮೈಸೂರು
ಭಾಗ ಮತ್ತು ಇನ್ನೊಬ್ಬರಿಗೆ ಕರಾವಳಿ-ಮಲೆನಾಡು ಭಾಗದ ಉಸ್ತುವಾರಿ ವಹಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವುದರಿಂದ ಅವರು ರಾಜ್ಯಾದ್ಯಂತ ಓಡಾಡಬೇಕಾಗುತ್ತದೆ. ಆದರೂ, ಉತ್ತರ ಕರ್ನಾಟಕ ಭಾಗದ ಕಡೆ ಹೆಚ್ಚಿನ ಗಮನ ಹರಿಸಲಿದ್ದಾರೆ. ಬಿ.ಎಲ್‌. ಸಂತೋಷ್‌ ಅವರು ಕರಾವಳಿ-ಮಲೆನಾಡು ಕರ್ನಾಟಕ ಹಾಗೂ ಸದಾನಂದಗೌಡ ಹಳೇ ಮೈಸೂರು ಭಾಗದತ್ತ ಆದ್ಯತೆ ನೀಡಲಿದ್ದಾರೆ. ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌ ಮತ್ತು ಸಹ ಉಸ್ತುವಾರಿ ಪಿಯೂಷ್‌ ಗೋಯೆಲ್‌ ಅವರು ಈ ಮೂವರ ಮೂಲಕ ಚುನಾವಣಾ ಕಾರ್ಯತಂತ್ರಗಳನ್ನು ಅನುಷ್ಠಾನಕ್ಕೆ ತರಲಿದ್ದಾರೆಂದು ಮೂಲಗಳು ತಿಳಿಸಿವೆ. ರಾಜ್ಯದ ಎಲ್ಲಾ ಭಾಗಗಳಲ್ಲೂ ಏಕಕಾಲದಲ್ಲಿ ಬಿಜೆಪಿಯನ್ನು ಬಲಿಷ್ಠಗೊಳಿಸುವುದರ ಜತೆಗೆ, ವಿಧಾನಸಭೆ ಚುನಾವಣೆಯೊಳಗೆ ಈ ಕೆಲಸ ಪೂರ್ಣಗೊಳಿಸುವ ಉದ್ದೇಶದಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಈ ಕಾರ್ಯತಂತ್ರ ಅನುಸರಿಸುತ್ತಿದ್ದಾರೆ.

ಜಾತಿವಾರು, ಹಿಂದುತ್ವದ ಲೆಕ್ಕಾಚಾರ: ಅಮಿತ್‌ ಶಾ ಅವರ ಈ ತಂತ್ರಗಾರಿಕೆ ಹಿಂದೆ ಜಾತಿವಾರು ಮತ್ತು ಹಿಂದುತ್ವದ ಲೆಕ್ಕಾಚಾರವೂ ಇದೆ. ಈ ಕಾರಣಕ್ಕಾಗಿಯೇ ಯಡಿಯೂರಪ್ಪಗೆ ಶಿಕಾರಿಪುರದ ಜತೆ ಸುದೀರ್ಘ‌ ಮತ್ತು ಭಾವನಾತ್ಮಕ ಸಂಬಂಧವಿದೆ ಎಂಬ ಅರಿವಿದ್ದರೂ ಅವರನ್ನು ಉತ್ತರ
ಕರ್ನಾಟಕ ಪ್ರದೇಶಕ್ಕೆ ಹೋಗುವಂತೆ ಸಲಹೆ ಮಾಡಿದ್ದು. ಯಡಿಯೂರಪ್ಪ ಅವರು ವೀರಶೈವ-ಲಿಂಗಾಯತ ಮಾತ್ರವಲ್ಲದೆ, ಹಿಂದುಳಿದವರ ಜತೆಗೂ ಹೆಚ್ಚು ಆಪ್ತರಾಗಿದ್ದಾರೆ. ಅಲ್ಲದೆ, ಹಿಂದುಳಿದ ಸಮುದಾಯಕ್ಕೆ ಸೇರಿದ ಸಂಸದ ಶ್ರೀರಾಮುಲು ಆತ್ಮೀಯರಾಗಿರುವುದು ಕೂಡ ಯಡಿಯೂರಪ್ಪ ಅವರಿಗಿರುವ ಲಾಭ. ಉತ್ತರ ಕರ್ನಾಟಕ ಭಾಗದಲ್ಲಿ ಈ ಸಮುದಾಯಗಳು ನಿರ್ಣಾಯಕ ವಾಗಿರುವುದರಿಂದಲೇ ಈ ತೀರ್ಮಾನಕ್ಕೆ ಬರಲಾಗಿದೆ.
ಅದೇ ರೀತಿ, ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದವರು ಹೆಚ್ಚು ಪ್ರಭಾವ ಹೊಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಬಿಜೆಪಿ ಸೇರಿದ್ದಾರಾದರೂ ಹೆಚ್ಚು ಓಡಾಡಿ ಸಂಘಟನೆ ಮಾಡುವುದು ಅವರಿಂದ ಕಷ್ಟಸಾಧ್ಯ. ಇನ್ನು ಪ್ರಮುಖವಾಗಿರುವವರು ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಮತ್ತು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ. ಅಶೋಕ್‌ ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಅವರು ಎಲ್ಲಾ ಕಡೆ ಓಡಾಡಲು ಸಾಧ್ಯವಿಲ್ಲ. ಈ ಕಾರಣಕ್ಕೆ ಸದಾನಂದಗೌಡ ಅವರಿಗೆ ವಿಧಾನಸಭೆ ಚುನಾವಣೆ ವೇಳೆ
ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಲು ಅಮಿತ್‌ ಶಾ ಮುಂದಾಗಿದ್ದಾರೆ ಎನ್ನಲಾಗಿದೆ.

ಹಿಂದುತ್ವದ ಅಜೆಂಡಾ
ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಬಿ.ಎಲ್‌.ಸಂತೋಷ್‌ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡುವಲ್ಲಿ ಹಿಂದುತ್ವದ ಅಜೆಂಡಾ ಅಡಗಿದೆ. 2013ರಲ್ಲಿ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ನಿರೀಕ್ಷಿತ ಫ‌ಲಿತಾಂಶ ಪಡೆಯುವಲ್ಲಿ ಬಿಜೆಪಿ ವಿಫ‌ಲವಾಗಿತ್ತು. ಇದಕ್ಕೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಳೀಯವಾಗಿ ಆದ ಕೆಲವು ಬೆಳವಣಿಗೆಗಳು ಕಾರಣ. ಆ ಭಾಗದಲ್ಲಿ ಹಿಂದುತ್ವದ ಅಜೆಂಡವೇ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು 2014ರ ಲೋಕಸಭೆ ಚುನಾವಣೆಯಲ್ಲಿ ಸಾಬೀತಾಗಿತ್ತು. ಅಲ್ಲದೆ, ಸಂಘ ಪರಿವಾರ ಮೂಲದವರಾಗಿರುವ ಸಂತೋಷ್‌ ಅವರು ಆ ಭಾಗದಲ್ಲಿ ಸ್ವಲ್ಪ ಪ್ರಭಾವ ಹೊಂದಿದ್ದು, ಅದರ ಲಾಭ ಪಡೆಯುವುದು ಸಂತೋಷ್‌ ಅವರಿಗೆ ಆದ್ಯತೆ ನೀಡಲು ಮುಂದಾಗಿರುವುದರ ಉದ್ದೇಶ ಎಂದು ತಿಳಿದು ಬಂದಿದೆ.

ಪಾಪ, ಯಡಿಯೂರಪ್ಪಗೆ ಸ್ಪರ್ಧಿಸಲು ಕ್ಷೇತ್ರವೇ ಇಲ್ಲ
ಕಲಬುರಗಿ: “ಪಾಪ, ಯಡಿಯೂರಪ್ಪ ಅವರಿಗೆ ಕಣಕ್ಕಿಳಿಯಲು ಕ್ಷೇತ್ರವಿಲ್ಲ. ಅದಕ್ಕೆ ಜನರಿಂದ ಹೇಳಿಸಿಕೊಳ್ತಾ ಉತ್ತರ ಕರ್ನಾಟಕಕ್ಕೆ ಬರ್ತಾ ಇದ್ದಾರೆ. ಅಂತಹ ಅನಿವಾರ್ಯತೆ ನನಗೇನೂ ಇಲ್ಲ.  ಯಾವುದೇ ಕಾರಣಕ್ಕೂ ನನ್ನ ಕ್ಷೇತ್ರ ಬಿಡುವ ಪ್ರಮೇಯವೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಗ ರಾಘವೇಂದ್ರನಿಗಾಗಿ ಭದ್ರವಾದ ಕ್ಷೇತ್ರ ಹುಡುಕಬೇಕಾದ ಜವಾಬ್ದಾರಿ ಅವರ ಹೆಗಲ ಮೇಲಿದೆ. ಅದಕ್ಕಾಗಿ ಇರುವ ಕ್ಷೇತ್ರವನ್ನು ಮಗನಿಗೆ ಬಿಟ್ಟು ಕೊಟ್ಟು ತಾವು ಎಲ್ಲಿಯಾದರೂ ನಿಲ್ಲಬೇಕಲ್ಲ. ಅದಕ್ಕಾಗಿ ತಮ್ಮ ಪಕ್ಷದವರಿಂದ ಹೇಳಿಸಿಕೊಂಡು
ನಾನು ಉತ್ತರ ಕರ್ನಾಟಕದಿಂದ ಸ್ಪರ್ಧಿಸುತ್ತೇನೆ. ಇದರಿಂದ ಈ ಭಾಗದಲ್ಲಿ ಪ್ರಭಾವ ಬೀರಲಿದೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಬಾಗಲಕೋಟೆಯಲ್ಲಿ ಅವರು ಸ್ಪರ್ಧಿಸಿದರೆ ಹೇಗೆ ಬಿಜೆಪಿಗೆ ಲಾಭವಾಗುತ್ತದೆ? ಹಾಗಿದ್ದರೆ, ಈಗಿರುವವರು ಏನೂ ಕೆಲಸ ಮಾಡಿಲ್ಲ ಅಂತಾಯಿತು ಅಲ್ಲವೇ ಎಂದು ಪ್ರಶ್ನಿಸಿದರು.

ವಿಜಯಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಲಿ
ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ ನಗರ ಕ್ಷೇತ್ರದಿಂದ ಕಣಕ್ಕಿಳಿದರೆ 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸುತ್ತೇವೆ ಎಂದು ಮೇಲ್ಮನೆ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ. 

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪನವರು ವಿಜಯಪುರ ನಗರ ಮತಕ್ಷೇತ್ರದಿಂದ ಸ್ಪರ್ಧಿಸಲಿ. ಅವರನ್ನು ಗೆಲ್ಲಿಸುವ ಸೌಭಾಗ್ಯ ನಮಗೆ ದೊರೆಯಲಿ ಎಂದರು. “ಬರುವ ವಿಧಾನಸಭೆ ಚುನಾವಣೆಯೊಳಗೆ ನನ್ನನ್ನು ಮರಳಿ ಬಿಜೆಪಿಗೆ ಸೇರ್ಪಡೆಗೊಳಿಸಲು ಯಡಿಯೂರಪ್ಪ ಆಸಕ್ತಿ ಹೊಂದಿದ್ದಾರೆ. ಆದರೆ, ಜಿಲ್ಲೆಯವರೇ ಆಗಿರುವ ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಮಾಜಿ ಸಿಎಂ ಜಗದೀಶ ಶೆಟ್ಟರ್‌, ಸಂಸದ ಪ್ರಹ್ಲಾದ ಜೋಶಿ ನನ್ನನ್ನು ಸೇರ್ಪಡೆ ಮಾಡಿಕೊಳ್ಳದಂತೆ ಕುತಂತ್ರ ನಡೆಸಿದ್ದಾರೆ. ಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್‌ ಕೇಳಲ್ಲ. ಯಡಿಯೂರಪ್ಪ ಅವರು ಸ್ಪ ರ್ಧಿಸದಿದ್ದರೆ ನಾನು ನಗರ ಕ್ಷೇತ್ರದಿಂದ ಪಕ್ಷೇತರನಾಗಿ ಕಣಕ್ಕಿಳಿಯುತ್ತೇನೆ’ ಎಂದರು.

ಸಿಎಂ ಬಯಸಿದ್ರೆ ಕಲಘಟಗಿ ಕ್ಷೇತ್ರವ ಬಿಟ್ಟು ಕೊಡುವೆ
ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುವುದಾದರೆ ಸ್ವತಃ ಕಲಘಟಗಿ ಕ್ಷೇತ್ರವನ್ನೇ ಬಿಟ್ಟು ಕೊಡುವುದಾಗಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ತಿಳಿಸಿದ್ದಾರೆ. ತಾಲೂಕಿನ ಮನಸೂರ ಗ್ರಾಮದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, “ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿ ಸ್ಪರ್ಧಿಸಿದರೂ ಗೆಲ್ಲುತ್ತಾರೆ. ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದ ಅವರು ನನ್ನನ್ನು ಕೇಳಿದರೆ ನಾನು ಕಲಘಟಗಿ ಕ್ಷೇತ್ರ ಬಿಟ್ಟು ಕೊಡಲು ಸಿದ್ಧ’ ಎಂದರು. “ಅವರು ಉತ್ತರ ಕರ್ನಾಟಕದ ಕ್ಷೇತ್ರವೊಂದರಿಂದ ಸ್ಪ ರ್ಧಿಸಲಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಕುರಿತು ನಾನು ಅವರೊಂದಿಗೆ ಮಾತನಾಡಿಲ್ಲ ಎಂದರು.

ಈಶ್ವರಪ್ಪ ಅವರು ಲಿಂಗಾಯತ-ವೀರಶೈವರ ಮಧ್ಯೆ ಮುಖ್ಯಮಂತ್ರಿ ಬೆಂಕಿ ಇಟ್ಟಿದ್ದಾರೆಂದು ಆರೋಪಿಸುತ್ತಿದ್ದಾರೆ. ಅವರಿಗೆ ತಲೆ ಬುರಡೆನೇ ಇಲ್ಲ ಬಿಡ್ರಿ. ಪೋನ್‌ ಕದ್ದಾಲಿಕೆ ನಮ್ಮ ಜಾಯಮಾನವಲ್ಲ. ಅದು ಬಿಜೆಪಿಯವರದ್ದು. ಯಾವುದನ್ನಾದರೂ ಕದ್ದು ಮಾಡುವುದು, ಕದ್ದು ಕೇಳುವುದು ಮತ್ತು ಸುಳ್ಳು ಹೇಳಿಕೊಂಡು ಓಡಾಡೋದು ನಮ್ಮಲ್ಲಿ ಇಲ್ಲ. ಅದೆಲ್ಲವೂ ಬಿಜೆಪಿ ಸಂಸ್ಕೃತಿ.
ಸಿದ್ದರಾಮಯ್ಯ, ಮುಖ್ಯಮಂತ್ರಿ

ಯಡಿಯೂರಪ್ಪ ಅವರು ಬಾಗಲಕೋಟೆ ಜಿಲ್ಲೆಯ ಯಾವುದೇ ಕ್ಷೇತ್ರದಿಂದ ಬೇಕಾದರೂ ಸ್ಪರ್ಧಿಸಲಿ. ಸ್ವತಃ ತೇರದಾಳದಿಂದ ಸ್ಪರ್ಧಿಸಲಿ ಎಂದು ಅವರ ಎದುರೇ ಹೇಳಿದ್ದೇನೆ. ಅವರ ಸ್ಪರ್ಧೆಯಿಂದ ಈ ಭಾಗದಲ್ಲಿ ಪಕ್ಷ ಇನ್ನಷ್ಟು ಬಲಿಷ್ಠವಾಗುವುದರ ಜತೆಗೆ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ. ನಮ್ಮ ಜಿಲ್ಲೆಯಿಂದ ಸ್ಪರ್ಧಿಸಲು ನಾವು ಒತ್ತಾಯ ಮಾಡಿದ್ದೇವೆ.
ಸಿದ್ದು ಸವದಿ, ಬಾಗಲಕೋಟೆ ಬಿಜೆಪಿ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next