Advertisement

ಯುವತಿ ಜತೆ ಅಸಭ್ಯ ವರ್ತನೆ: ಭದ್ರತಾ ಸಿಬ್ಬಂದಿ ಬಂಧನ

06:34 AM Feb 04, 2019 | Team Udayavani |

ಬೆಂಗಳೂರು: ಯುವ ವಕೀಲೆ ಜತೆ ಅಸಭ್ಯವಾಗಿ ವರ್ತಿಸಿದ ಭದ್ರತಾ ಸಿಬ್ಬಂದಿಯನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶ ಮೂಲದ ರಾಜೇಶ್‌ ಸಿಂಗ್‌ (25) ಬಂಧಿತ ಆರೋಪಿ. ಜ.25ರಂದು ಯುವ ವಕೀಲೆ ಜತೆ ಅಸಭ್ಯವಾಗಿ ವರ್ತಿಸಿದ್ದ ಆರೋಪಿ, ಹಲ್ಲೆ ಕೂಡ ನಡೆಸಿದ್ದ. ಈ ಸಂಬಂಧ ಸಂತ್ರಸ್ತೆ ದೂರು ನೀಡಿದ್ದರು ಎಂದು ಅಶೋಕನಗರ ಪೊಲೀಸರು ಹೇಳಿದರು.

Advertisement

ಸರ್ಜಾಪುರದಲ್ಲಿ ವಾಸವಾಗಿರುವ 23 ವರ್ಷದ ವಕೀಲೆ, ಅಶೋಕನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಕಟ್ಟಡವೊಂದರ ಮೊದಲ ಮಹಡಿಯಲ್ಲಿ ಕಚೇರಿ ಹೊಂದಿದ್ದಾರೆ. ಅದೇ ಕಚೇರಿಯ ಭದ್ರತಾ ಸಿಬ್ಬಂದಿಯಾಗಿರುವ ರಾಜೇಶ್‌ ಸಿಂಗ್‌ ಜ.25ರಂದು ರಾತ್ರಿ 9.30ರ ಸುಮಾರಿಗೆ ಕಚೇರಿಗೆ ಬಂದು ಕಟ್ಟಡದ ಮೇಲ್ಛಾವಣಿ ಸೋರುತ್ತಿದೆ ಎಂದು ಹೇಳಿ ವಾಪಸ್‌ ಹೋಗಿದ್ದಾನೆ.

ತಡರಾತ್ರಿ 11.50ರಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಕಚೇರಿ ಬಳಿ ಲೈಟ್‌ ಆಫ್‌ ಆಗಿತ್ತು. ಈ ಹಿನ್ನೆಲೆಯಲ್ಲಿ ವಕೀಲೆ ಮೊಬೈಲ್‌ ಟಾರ್ಚ್‌ ಸಹಾಯದೊಂದಿಗೆ ಕಚೇರಿಯಿಂದ ಹೊರ ಬಂದಿದ್ದಾರೆ. ನೆಲಮಹಡಿಗೆ ಬಂದಾಗ ರಾಜೇಶ್‌ ಸಿಂಗ್‌ ಕೂಡ ಅಲ್ಲಿಗೆ ಬಂದಿದ್ದಾನೆ. ನಂತರ ವಕೀಲೆಯನ್ನು ಅಸಭ್ಯವಾಗಿ ನೋಡಿ, ನೆಲ ಮಹಡಿಯ ಬಾಗಿಲು ಹಾಕಿದ್ದಾನೆ.

ನಂತರ ವಕೀಲೆಯನ್ನು ಕೆಳಗೆ ಬೀಳಿಸಲು ಪ್ರಯತ್ನಿಸಿದ್ದು, ಇದನ್ನು ವಕೀಲೆ ಪ್ರತಿರೋಧಿಸಿದಾಗ ಅವರ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಆತಂಕಗೊಂಡ ವಕೀಲೆ ಜೋರಾಗಿ ಕೂಗಿಕೊಂಡಾಗ, ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಪ್ರಕರಣ ಸಂಬಂಧ ಕಾರ್ಯಾಚರಣೆ ನಡೆಸಿದ ಅಶೋಕನಗರ ಪೊಲೀಸರು ಮಧ್ಯಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next