Advertisement

ಗೆಳತಿ ಮೇಲೆ ಲೈಂಗಿಕ ದೌರ್ಜನ್ಯ: ಇಬ್ಬರ ಬಂಧನ

11:58 AM Jan 19, 2017 | Team Udayavani |

ಬೆಂಗಳೂರು: ಕುಡಿದ ಅಮಲಿನಲ್ಲಿದ್ದ ತಮ್ಮ ಗೆಳತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ದೂರಿನ ಮೇಲೆ ವಿದೇಶಿ ಪ್ರಜೆ ಸೇರಿದಂತೆ ಇಬ್ಬರನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆದರೆ, ಈ ಆಪಾದನೆಯ ನೈಜತೆ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಯಮನ್‌ ದೇಶದ ಅಯೂಬ್‌ ಖಾನ್‌ ಹಾಗೂ ರಿಕ್ಕಿ ಅಲಿಯಾಸ್‌ ತಿಮ್ಮಣ್ಣ ಉತ್ತಪ್ಪ ಬಂಧಿತರು. 

Advertisement

ಐದು ದಿನಗಳ ಹಿಂದೆ ಎಂ.ಜಿ.ರಸ್ತೆ ಹತ್ತಿರದ ಫ್ಯೂಷನ್‌ ಬಾರ್‌ನಲ್ಲಿ ಸಂತ್ರಸ್ತ ಯುವತಿ ಜತೆ ಕಂಠಪೂರ್ತಿ ಮದ್ಯಸೇವಿಸಿದ ಬಳಿಕ ಆಕೆಯನ್ನು ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪವಿದೆ. ಯುವತಿ ನೀಡಿದ ದೂರಿನ ಮೇಲೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಬಾರ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಅದರಲ್ಲಿ ಸಂತ್ರಸ್ತೆ ಪಾನಮತ್ತಳಾಗಿ ತೂರಾಡುತ್ತಿರುವ ಹಾಗೂ ಆಕೆಯನ್ನು ಯುವಕರಿಬ್ಬರು ಕರೆದುಕೊಂಡು ಹೋಗಿದ್ದ ಕಾರಿನ ಸಂಖ್ಯೆ ಪತ್ತೆಯಾಗಿತ್ತು. ಈ ಸುಳಿವಿನ ಮೇರೆಗೆ ಆರೋಪಿಗಳನ್ನು ಬಂಧಿಸಿರುವುದಾಗಿ  ಹೇಳಿದ್ದಾರೆ. 

ತಾನೇ ಕರೆ ಮಾಡಿಸಿ ಕರೆಸಿಕೊಂಡಿದ್ದಳು: ಜ. 13 ರಂದು ತನ್ನ ಗೆಳೆಯನೊಬ್ಬನಿಗೆ ಕರೆ ಮಾಡಿದ ಸಂತ್ರಸ್ತ ಯುವತಿ ರಾತ್ರಿ ಪಾರ್ಟಿಗೆ ಕರೆದಿದ್ದಳು. ಆ ಸ್ನೇಹಿತ ಬಾರದ ಕಾರಣ ಅಯೂಬ್‌ಖಾನ್‌ ಮತ್ತು ರಿಕ್ಕಿಗೆ ಕರೆ ಮಾಡಿ ಎಂ.ಜಿ.ರಸ್ತೆಯ ಫ್ಯೂಷನ್‌ ಬಾರ್‌ಗೆ ಕರೆಸಿಕೊಂಡಿದ್ದಳು. ಗೆಳೆಯರ ಜತೆ ಮೂರು ಪೆಗ್‌ ಟೆಕಿಲಾ ಸೇವಿಸಿದ ಆಕೆ, ಕೆಲ ನಿಮಿಷದಲ್ಲೇ ಬಾರ್‌ನಲ್ಲೇ ಪ್ರಜ್ಞೆ ಕಳೆದುಕೊಂಡಿದ್ದಳು. ಆಗ ಜತೆಯಲ್ಲಿದ್ದ ಸ್ನೇಹಿತರು, ಆಕೆಯನ್ನು ಬಾರ್‌ನಿಂದ ಕರೆತಂದು ನಂತರ ಕಾರಿನಲ್ಲಿ ಕೂರಿಸಿಕೊಂಡು ಆಕೆಯನ್ನು ಪಿಜಿಗೆ ಕರೆದೊಯ್ದಿದ್ದರು.  

ಯುವತಿ ಜೆ.ಪಿ.ನಗರಕ್ಕೆ ವಾಸ್ತವ್ಯ ಬದಲಿಸದ ಮಾಹಿತಿ ಇಲ್ಲದ ಗೆಳೆಯರು ಮೊದಲು ಆಕೆಯನ್ನು ಹಿಂದೆ ವಾಸವಿದ್ದ ಕಮ್ಮನಹಳ್ಳಿಯ ಪಿಜಿಗೆ ಕರೆತಂದಿದ್ದರು. ಅಲ್ಲಿಂದ ಆಕೆಯನ್ನು ಖಾಲಿ ಮಾಡಿಸಿದ್ದ ವಿಷಯ ತಿಳಿದು  ಮದ್ಯ ಸೇವಿಸಿ ಮೈಮೇಲೆ ಪರಿಜ್ಞಾನವಿಲ್ಲದ ಯುವತಿಗೆ ಆಶ್ರಯ ನೀಡುವಂತೆ  ಸ್ಥಳೀಯರಲ್ಲಿ  ಮನವಿ ಮಾಡಿ ಬಿಟ್ಟು ಹೋಗಿದ್ದರು ಎನ್ನಲಾಗಿದೆ.

ಸಂತ್ರಸ್ತೆ ದೂರಿನಲ್ಲೇನಿದೆ?
ಜ.13 ರ ರಾತ್ರಿ ತಾನು ಎಂ.ಜಿ.ರಸ್ತೆಯ ಪ್ಯೂಷನ್‌ ಬಾರ್‌ಗೆ ಹೋಗಿದ್ದೆ. ಅಲ್ಲಿ ಪಾನಮತ್ತಳಾದ ಬಳಿಕ ನಿಯಂತ್ರಣ ಕಳೆದುಕೊಂಡೆ. ಆಗ ಬಾರ್‌ನಿಂದ ನನ್ನನ್ನು ಇಬ್ಬರು ಅಪರಿಚಿತರು ಕಮ್ಮನಹಳ್ಳಿಗೆ ಕರೆದುಕೊಂಡು ಹೋಗಿ ಅಲ್ಲಿ ಬಿಟ್ಟಿದ್ದಾರೆ. ಅಲ್ಲಿ ನನ್ನ ಪರಿಸ್ಥಿತಿ ಗಮನಿಸಿದ ಸ್ಥಳೀಯ ಮಹಿಳೆಯೊಬ್ಬರು ಆಶ್ರಯ ನೀಡಿದರು. ಮರು ದಿನ ಎಚ್ಚರವಾದಾಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿಯಿತು ಎಂದು ತಿಳಿಸಿದ್ದಾಳೆ.

Advertisement

“ಪಾರ್ಟಿ’ ಸ್ನೇಹ
ಯಮನ್‌ ದೇಶದ ಅಯೂಬ್‌, ಹಲವು ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿದ್ದಾನೆ. ನಗರದ ಖಾಸಗಿ ಕಾಲೇಜಿನಲ್ಲಿ ಬಿಸಿಎ ಮುಗಿಸಿದ ಆತ, ಪ್ರಸುತ್ತ ಖಾಸಗಿ ಕಂಪನಿಯೊಂದಲ್ಲಿ ಉದ್ಯೋಗದಲ್ಲಿದ್ದಾನೆ. ಮತ್ತೂಬ್ಬ ಆರೋಪಿ ರಿಕ್ಕಿ ಎಂಜಿನಿಯರಿಂಗ್‌ ಪದವೀಧರನಾಗಿದ್ದು, ಕಾಲ್‌ಸೆಂಟರ್‌ ಉದ್ಯೋಗಿಯಾಗಿದ್ದಾನೆ. ಸ್ನೇಹಿತರೊಂದಿಗೆ ಮೋಜು ಮಸ್ತಿ ಮಾಡುತ್ತಿದ್ದ ಯುವತಿಗೆ ಆರೋಪಿಗಳೊಂದಿಗೆ ಆರು ತಿಂಗಳ ಹಿಂದೆ ಬಾರ್‌ವೊಂದಲ್ಲಿ ಸ್ನೇಹವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. 

ಕಮ್ಮನಹಳ್ಳಿ ಘಟನೆ ಬಳಿಕ ಮನೆ ಖಾಲಿ 
ಸಂತ್ರಸ್ತ ಯುವತಿ ಮೊದಲು ಕಮ್ಮನಹಳ್ಳಿ ಬಳಿ ಪಿಜಿಯೊಂದರಲ್ಲಿ ನೆಲೆಸಿದ್ದು ಪ್ರತಿ ದಿನ ಮದ್ಯ ಸೇವಿಸಿ ಬಂದು ಗಲಾಟೆ ಮಾಡುತ್ತಿದ್ದಳು. ಕಮ್ಮನಹಳ್ಳಿ ಬಳಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಬಳಿಕ ಪಿಜಿ ಮಾಲಿಕರು ಆಕೆಯನ್ನು ಅಲ್ಲಿಂದ ತೆರವು ಮಾಡಿಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next