Advertisement

ಕೆರೆಗೆ ಸೇರುತ್ತಿದೆ ಚರಂಡಿ ಕಲುಷಿತ ನೀರು

01:44 PM Dec 08, 2021 | Team Udayavani |

ಗುಂಡ್ಲುಪೇಟೆ: ಉತ್ತೂರು ಏತ ನೀರಾವರಿ ಯೋಜನೆಯಡಿ ತುಂಬಿರುವ ಬೊಮ್ಮಲಾಪುರ ಕೆರೆಗೆ ಗ್ರಾಮದ ಚರಂಡಿ ನೀರು ಸೇರುತ್ತಿದೆ. ಇದರಿಂದ ಕೆರೆ ಸಂಪೂರ್ಣವಾಗಿ ಕಲುಷಿತವಾಗುತ್ತಿದೆ.

Advertisement

ಕಳೆದ ಹಲವು ವರ್ಷಗಳಿಂದಲೂ ಬರಿದಾಗಿದ್ದ ಬೊಮ್ಮಲಾಪುರ ಕೆರೆ ಏತ ನೀರಾವರಿ ಯೋಜನೆಯಡಿ ಕಳೆದ 10 ದಿನಗಳ ಹಿಂದೆ ತುಂಬಿ ಕೋಡಿ ಬಿದ್ದು, ಮುಂದಿನ ಶಿವಪುರ ಕಲ್ಕಟ್ಟ ಕೆರೆಗೆ ಹರಿಯುತ್ತಿದೆ. ಆದರೆ ಬೊಮ್ಮಲಾಪುರ ಗ್ರಾಮಸ್ಥರು ಚರಂಡಿ ನೀರನ್ನು ಕೆರೆಗೆ ಬಿಡುತ್ತಿರುವ ಹಿನ್ನೆಲೆ ಕೋಡಿ ನೀರಿನ ಜೊತೆ ಕಲುಷಿತ ಚರಂಡಿ ನೀರು ಮುಂದಿನ ಕೆರೆಗೆ ಹೋಗುವಂತಾಗಿದೆ. ಇದರಿಂದ ಕೆರೆಯಲ್ಲಿರುವ ಹಲವು ಜಲಚರ ಪ್ರಾಣಿಗಳ ಜೀವಕ್ಕೆ ಕುತ್ತು ಬಂದಂತಾಗಿದೆ.

ಗ್ರಾಪಂ ಬೇಜವಾಬ್ದಾರಿ: ಗ್ರಾಮದ ಹಲವು ಚರಂಡಿ ಹೂಳು ತುಂಬಿದ್ದು, ಇನ್ನು ಕೆಲವು ಚರಂಡಿ ನೀರು ಕೆರೆಗೆ ಸೇರುತ್ತಿದ್ದರೂ ಗ್ರಾಪಂ ಆಡಳಿತ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ಗ್ರಾಮದ ಕಲುಷಿತ ನೀರು ಕೆರೆಗೆ ಹೋಗುತ್ತಿದೆ. ಈ ಬಗ್ಗೆ ಕ್ರಮ ವಹಿಸಿ ಕೆರೆಗೆ ನೀರು ಸೇರದಂತೆ ನೋಡಿಕೊಳ್ಳಬೇಕೆಂದು ಸ್ಥಳೀಯರಾದ ಜಯರಾಂ ಒತ್ತಾಯಿಸಿದ್ದಾರೆ. ರಾಸುಗಳಿಗೆ ಕಲುಷಿತ ನೀರು: ಬೊಮ್ಮಲಾಪುರ ಕೆರೆ ತುಂಬಿ ಶಿವಪುರ ಕೆರೆಗೆ ನೀರು ಹರಿಯುತ್ತಿದೆ. ಈ ಮಾರ್ಗವಾಗಿ ಹಲವು ಕಾಲುವೆಗಳು ಸಿಗುತ್ತಿದ್ದು, ಆ ಭಾಗದ ಅಧಿಕ ಮಂದಿ ರೈತರು ಕೆರೆಯ ನೀರನ್ನೆ ದನ-ಕರುಗಳಿಗೆ ಕುಡಿಸುತ್ತಿದ್ದಾರೆ. ಇದರಿಂದ ಮೂಖ ಪ್ರಾಣಿಗಳು ಅನಾರೋಗ್ಯಕ್ಕೆ ತುತ್ತಾಗುವ ಭೀತಿ ರೈತರಿಗೆ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next