Advertisement

ಏಳು ಸಲ ನೋಂದಣಿ ಮಾಡಿಸಿದರೂ ಬರಲಿಲ್ಲ ಆಧಾರ್‌!

10:44 AM Jun 24, 2018 | |

ಕೆಯ್ಯೂರು: ಸರಕಾರದ ಎಲ್ಲ ಸೌಲಭ್ಯಗಳಿಗೆ ಆಧಾರ್‌ ಕಾರ್ಡ್‌ ಕಡ್ಡಾಯ ಮಾಡಲಾಗಿದೆ. ಆದರೆ, ಆಧಾರ್‌ ನೋಂದಣಿ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳ ಪರಿಹಾರಕ್ಕೆ ಮಾತ್ರ ಇನ್ನೂ ಪರಿಹಾರ ಕಂಡುಕೊಂಡಿಲ್ಲ. ಶಾಲೆಯ ವಿದ್ಯಾರ್ಥಿಯೊಬ್ಬ ಏಳು ಸಲ ಫೋಟೋ ತೆಗೆಸಿ, ಆಧಾರ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರೂ ಆತನಿಗೆ ಇನ್ನೂ ಆಧಾರ್‌ ಗುರುತಿನ ಚೀಟಿ ಬಂದಿಲ್ಲ. ಆನ್‌ ಲೈನ್‌ನಲ್ಲಿ ನೋಂದಣಿ ಮಾಡಿ ಐದು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ಅಬ್ದುಲ್‌ ಹಮೀದ್‌ ಅವರ ಪುತ್ರ ಮಹಮ್ಮದ್‌ ಫಯಾಜ್‌ (12) ಎಂಬ ಬಾಲಕನಿಗೆ ಸಮಸ್ಯೆಯಾಗುತ್ತಿದೆ.

Advertisement

ಪ್ರಸ್ತುತ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಏಳನೇ ತರಗತಿಯಲ್ಲಿ ಕಲಿಯುತ್ತಿರುವ ಮಹಮ್ಮದ್‌ ಫಯಾಜ್‌ನ ಕುಟುಂಬದವರು 6 ವರ್ಷಗಳ ಹಿಂದೆ ಮೊದಲ ಬಾರಿ ಆಧಾರ್‌ ಕಾರ್ಡ್‌ಗೆ ಅರ್ಜಿ ನೋಂದಣಿ ಮಾಡಿದ್ದರು. ಪತಿ- ಪತ್ನಿ, ನಾಲ್ವರು ಮಕ್ಕಳು ಸಹಿತ ಆರು ಜನರ ಫೋಟೋ, ಬಯೋಮೆಟ್ರಿಕ್‌ ನೀಡಲಾಗಿತ್ತು. ಆನ್‌ಲೈನ್‌ ಅರ್ಜಿ ಭರ್ತಿ ಮಾಡಿದ್ದರಲ್ಲಿ ಮಹಮ್ಮದ್‌ ಫ‌ಯಾಜ್‌ ಹೊರತುಪಡಿಸಿ, ಕುಟುಂಬದ ಇತರ ಐವರು ಸದಸ್ಯರಿಗೆ ಕೆಲವೇ ಸಮಯದಲ್ಲಿ ಆಧಾರ್‌ ಕಾರ್ಡ್ ಗಳು ಬಂದವು.

ಆನ್‌ಲೈನ್‌ನಲ್ಲಿ ಪರಿಶೀಲಿಸಿದಾಗ ಅರ್ಜಿ ತಿರಸ್ಕೃತವಾಗಿದೆ ಎಂಬ ಹಿಂಬರಹವಿತ್ತು. ಮೊದಲ ಬಾರಿ ಕೆಯ್ಯೂರು
ಗ್ರಾ.ಪಂ. ಕಚೇರಿಯಲ್ಲಿ ಆಧಾರ್‌ ನೋಂದಣಿ ಮಾಡಲಾಯಿತು. ಇದಾದ ಬಳಿಕ ಪ್ರಗತಿ ಶಾಲೆಯಲ್ಲಿ 1 ಬಾರಿ, ಪುತ್ತೂರು ಪುರಭವನದ ನೋಂದಣಿ ಕಚೇರಿಯಲ್ಲಿ 2 ಬಾರಿ, ಮಿನಿ ವಿಧಾನಸೌಧದಲ್ಲಿ 1 ಬಾರಿ, ಡಿಸಿಸಿ ಬ್ಯಾಂಕ್‌ ಸಮೀಪದ ನೋಂದಣಿ ಕೇಂದ್ರದಲ್ಲಿ 1 ಬಾರಿ ನೋಂದಣಿ ಮಾಡಲಾಗಿದೆ. ಮತ್ತೆ ಮತ್ತೆ ಪ್ರಯತ್ನಿಸಿದೆ. ಎ. 28ರಂದು ಏಳನೇ ಬಾರಿಗೆ ಅಂಚೆ ಕಚೇರಿಯಲ್ಲಿ ನೋಂದಣಿ ಮಾಡಿಸಿದೆ. ಎರಡು ತಿಂಗಳು ಕಳೆಯುತ್ತ ಬಂದರೂ ಆಧಾರ್‌ ಕಾರ್ಡ್‌ ಬರಲಿಲ್ಲ. ಈಗ ನೋಡಿದರೂ ಅದೇ ಉತ್ತರ. ಏನು ಮಾಡುವುದು ಎಂದು ಬಾಲಕನ ತಂದೆ ಅಬ್ದುಲ್‌ ಹಮೀದ್‌ ಪ್ರಶ್ನಿಸುತ್ತಾರೆ.

ವಿಳಾಸ ಸಹಿತ ಎಲ್ಲ ಮಾಹಿತಿಯೂ ಸರಿಯಾಗಿದೆ. ಏಳು ಬಾರಿ ನೋಂದಣಿ ಮಾಡಿದಾಗ ಸಿಕ್ಕಿದ ಸ್ವೀಕೃತಿಯೂ ಇದೆ. ಕುಟುಂಬದ ಇತರರಿಗೆ ಆಧಾರ್‌ ಗುರುತಿನ ಚೀಟಿ ಬಂದಿರುವಾಗ ನನ್ನ ಮಗನಿಗೆ ಕೊಡಲು ಏನು ಅಡ್ಡಿ? ಶಾಲೆಯಲ್ಲಿ ಆಧಾರ್‌ ಕಾರ್ಡ್‌ ಬೇಕೆಂದು ಹೇಳುತ್ತಿದ್ದಾರೆ. ಅವರಿಗೆ ಸ್ವೀಕೃತಿಯನ್ನಷ್ಟೇ ನೀಡಿದ್ದೇನೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (ಯುಐಡಿಎಐ) ಬೆಂಗಳೂರು ಕಚೇರಿಯನ್ನು ಸಂಪರ್ಕಿಸಿ ನೋಂದಣಿ ಸಂಖ್ಯೆ ನೀಡಿದರೆ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ ಎಂಬ ಸಲಹೆ ಮಿತ್ರರಿಂದ ಬಂದಿದೆ. ಆ ಪ್ರಯತ್ನವನ್ನೂ ಮಾಡುತ್ತೇವೆ ಎಂದು ಹಮೀದ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next