Advertisement

ಉತ್ತಮ ಬೆಲೆ ನಿರೀಕ್ಷೆಯಲ್ಲಿ ಸೇವಂತಿಗೆ ಬೆಳೆಗಾರರು

09:58 PM Jan 10, 2021 | Team Udayavani |

ಕುಂದಾಪುರ: ಹೆಮ್ಮಾಡಿ ಸೇವಂತಿಗೆಯು ಅರಳಿ ನಿಂತಿದ್ದು, ಕೊಯ್ಯಲು ಸಿದ್ಧವಾಗಿದೆ. ಆದರೆ ಕೋವಿಡ್ ಅನಿಶ್ಚಿತತೆ ಹಿನ್ನೆಲೆಯಲ್ಲಿ ಈ ಬಾರಿ ಹೆಮ್ಮಾಡಿ ಸೇವಂತಿಗೆ ಕಡಿಮೆ ಪ್ರಮಾಣದಲ್ಲಿ ಬೆಳೆದಿರುವುದರಿಂದ ಈ ಬಾರಿ ಸೇವಂತಿಗೆ ಬೆಳೆಗಾರರರು ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದಾರೆ.

Advertisement

ಕೋವಿಡ್ ಸಂಕಷ್ಟದಿಂದಾಗಿ ಈ ವರ್ಷವೂ ಕುಂದಾಪುರ ಭಾಗದ ದೇವಸ್ಥಾನಗಳ ವಾರ್ಷಿಕ ಜಾತ್ರೆ, ದೈವಸ್ಥಾನಗಳ ಕೆಂಡೋತ್ಸವ ಅದ್ದೂರಿಯಾಗಿ ನಡೆಯುವುದು ಅನುಮಾನ ಎನ್ನುವ ಕಾರಣಕ್ಕೆ, ಹೆಚ್ಚು ಹೂವು ಬೆಳೆದಲ್ಲಿ, ಜಾತ್ರೆಗಳಿಗೆ ಅವಕಾಶವಿಲ್ಲವಾದರೆ ನಷ್ಟವಾಗಲಿದೆ ಎನ್ನುವ ಕಾರಣಕ್ಕೆ ಹೆಚ್ಚೆಚ್ಚು ಹೂವು ಬೆಳೆಯುತ್ತಿದ್ದ ಬೆಳೆಗಾರರು ಈ ಬಾರಿ ಕಡಿಮೆ ಬೆಳೆದಿದ್ದಾರೆ.

ಹೆಮ್ಮಾಡಿ ಸೇವಂತಿಗೆ ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ ದೇವರಿಗೆ ಇಷ್ಟದ ಹೂವು. ಸೇವಂತಿಗೆ ಬೆಳೆಗಾರರು ತಮ್ಮಲ್ಲಿ ಬೆಳೆದ ಹೂವನ್ನು ಮೊದಲಿಗೆ ಮಕರ ಸಂಕ್ರಮಣದಂದು ನಡೆಯುವ ಮಾರಣಕಟ್ಟೆಯ ಜಾತ್ರೆಯಂದು ಬ್ರಹ್ಮಲಿಂಗೇಶ್ವರನಿಗೆ ಅರ್ಪಿಸಿದ ಬಳಿಕವೇ ಮಾರಾಟಕ್ಕೆ ಮುಂದಾಗುವುದು ವಾಡಿಕೆ.

ಹೂವು ಮಾರಾಟಕ್ಕೆ ಅವಕಾಶ :

ವಾರ್ಷಿಕ ಜಾತ್ರೆ, ಕೆಂಡ ಸೇವೆಗಳಲ್ಲಿ ಹೂವು ಮಾರಾಟಕ್ಕೆ ಅವಕಾಶ ನೀಡಬೇಕು ಎನ್ನುವುದಾಗಿ ಹೆಮ್ಮಾಡಿ ಸೇವಂತಿಗೆ ಬೆಳೆಗಾರರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದ್ದು, ಅವರು ಕೂಡಲೇ ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದು ಸಹಕರಿಸುವಂತೆ ಸೂಚಿಸಿದ್ದು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದು ಬೆಳೆಗಾರರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ.

Advertisement

ಹೆಮ್ಮಾಡಿ, ಕಟ್‌ಬೆಲ್ತೂರು, ಕನ್ಯಾನ ಗ್ರಾಮಗಳ ಅಂದಾಜು 22 ಎಕರೆ ಪ್ರದೇಶಗಳಲ್ಲಿ ಸೇವಂತಿಗೆ 50ಕ್ಕೂ ಅಧಿಕ ಮಂದಿ ಹೂವು ಬೆಳೆಯುತ್ತಿದ್ದು, ಈ ಬಾರಿ ಇವರಲ್ಲಿ ಕೆಲವರು ನಿರಾಸಕ್ತಿ ತೋರಿದ್ದಾರೆ.

ಕೆಂಡ ಸೇವೆ- ಜಾತ್ರೆಗಳಿಗೆ ಬಲು ಬೇಡಿಕೆ :

ಹೆಮ್ಮಾಡಿ ಸೇವಂತಿಗೆ ಹೂವಿಗೆ ಕುಂದಾಪುರ ಭಾಗದ ಮಾರಣಕಟ್ಟೆ ಜಾತ್ರೆಯಿಂದ ಆರಂಭಗೊಂಡು, ಉಡುಪಿ, ಮಂಗಳೂರು, ಭಟ್ಕಳ, ಹೊನ್ನಾವರದ ಕೆಂಡ ಸೇವೆ, ವಾರ್ಷಿಕ ಜಾತ್ರೋತ್ಸವಗಳಲ್ಲಿ ಬಲು ಬೇಡಿಕೆಯಿದೆ. ಕುಂದಾಪುರ ಭಾಗದಲ್ಲಿ ಜನವರಿಯಿಂದ ಆರಂಭಗೊಂಡು ಮಾರ್ಚ್‌ವರೆಗೂ ನಿರಂತರವಾಗಿ ದಿನಕ್ಕೆರಡು ದೇವಸ್ಥಾನ, ದೈವಸ್ಥಾನಗಳ ಕೆಂಡ ಸೇವೆ- ಜಾತ್ರೆಗಳಿಗೆ ಹೆಮ್ಮಾಡಿ ಸೇವಂತಿಗೆಗೆ ಬೇಡಿಕೆಯಿರುವುದು ವಿಶೇಷ. ಈ ಬಾರಿ ಸದ್ಯಕ್ಕೆ 1 ಸಾವಿರ ಹೂಗಳಿಗೆ 200 ರೂ.ನಲ್ಲಿ ಮಾರಾಟವಾಗುತ್ತಿದೆ. ಕಳೆದ ಬಾರಿಯೂ ಈ ಸಮಯ 200 ರಿಂದ 250 ರೂ. ಇತ್ತು. ಇದು ಹೆಚ್ಚು ಆಗಬಹುದು ಅಥವಾ ಕಡಿಮೆಯೂ ಆಗಬಹುದು ಎನ್ನುತ್ತಾರೆ ಬೆಳೆಗಾರರು.

ಈ ಬಾರಿ ಚಳಿ ಕಡಿಮೆಯಾಗಿದ್ದರಿಂದ, ಮೋಡದಿಂದಾಗಿ ಸೇವಂತಿಗೆ ಹೂವಿನ ಬೆಳೆಗೆ ಸಂಕಷ್ಟ ಎದುರಾಗಿತ್ತು. ಆದರೆ ಈಗ ಕೆಲವು ದಿನಗಳಿಂದ ಮಳೆ ಬರುತ್ತಿರುವುದರಿಂದ ಸ್ವಲ್ಪ ಮಟ್ಟಿಗೆ ಹೂವಿಗೆ ಅನುಕೂಲವಾಗಿದೆ. ಈ ಬಾರಿ ಕಡಿಮೆ ಬೆಳೆದಿದ್ದರೂ ಒಳ್ಳೆ ಯ ಬೆಳೆ ಬಂದಿದೆ. ಉತ್ತಮ ಬೆಲೆಯ ನಿರೀಕ್ಷೆಯಿದೆ. ಆದರೆ ಜಾತ್ರೆಗಳಲ್ಲಿ ಜನ ಕಡಿಮೆ ಬರುವುದರಿಂದ ಬೇಡಿಕೆ ಇರುತ್ತೋ ? ಇಲ್ಲವೋ ನೋಡಬೇಕು. ಪ್ರಶಾಂತ್‌ ಭಂಡಾರಿ ಹೆಮ್ಮಾಡಿ, ಸೇವಂತಿಗೆ ಬೆಳೆಗಾರರು

Advertisement

Udayavani is now on Telegram. Click here to join our channel and stay updated with the latest news.

Next