Advertisement

ಪುತ್ತೂರು ಜಿಲ್ಲೆ ಹೋರಾಟಕ್ಕೆ  ಸಮಿತಿ ರಚನೆ 

11:41 AM Nov 12, 2018 | |

ಪುತ್ತೂರು: ಭೌಗೋಳಿಕ ಹಾಗೂ ಭಾವನಾತ್ಮಕ ಭಿನ್ನತೆಯನ್ನು ಸರಿದೂಗಿಸಿ, ಪುತ್ತೂರನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಲು ಒತ್ತಡ ತರುವ ಅನಿವಾರ್ಯತೆ ಎದುರಾಗಿದೆ. ಮುಂದಿನ ಹೋರಾಟ ಅಥವಾ ನಡೆಯನ್ನು ನಿರ್ಧರಿಸಲು ಪುತ್ತೂರಿನಲ್ಲಿ ತಾತ್ಕಾಲಿಕ ಸಂಘಟನ ಸಮಿತಿ ಅಸ್ತಿತ್ವಕ್ಕೆ ಬಂದಿದೆ.

Advertisement

ನ. 11ರಂದು ಪುತ್ತೂರು ನ್ಯಾಯಾಲಯ ಸಂಕೀರ್ಣದಲ್ಲಿರುವ ಪರಾಶರ ಸಭಾಂಗಣದಲ್ಲಿ ನಡೆದ ಪುತ್ತೂರು ಜಿಲ್ಲೆ ರಚನೆಯ ಹಕ್ಕೊತ್ತಾಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಸಂಚಾಲಕರಾಗಿ ಉದ್ಯಮಿ ಅಶೋಕ್‌ ಕುಮಾರ್‌ ರೈ ಅವರನ್ನು ಸರ್ವಾನುಮತದಿಂದ ಆರಿಸಲಾಯಿತು. ಅಭಿಪ್ರಾಯ ಸಂಗ್ರಹಿಸಿ,ಹೋರಾಟದ  ರೂಪರೇಖೆ ತಯಾರಿಸಲು ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಲಾಯಿತು.  

ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ಹಾಗೂ ಬಂಟ್ವಾಳದ ಒಂದು ಭಾಗದ ಸಂಘ-ಸಂಸ್ಥೆ, ಜನರ ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸುವ ಕೆಲಸ ಮುಂದೆ ನಡೆಯಬೇಕಾಗಿದೆ. ಡಿಸೆಂಬರ್‌ನಲ್ಲಿ ಎಲ್ಲ ತಾಲೂಕುಗಳ ಜನರನ್ನು ಒಂದೆಡೆ ಸೇರಿಸಿ, ಮಹಾಸಭೆ ನಡೆಸುವ ಅಗತ್ಯ ಇದೆ. ಈ ಮಹಾಸಭೆಗೆ ರೂಪು ನೀಡುವ ನಿಟ್ಟಿನಲ್ಲಿ ತಾತ್ಕಾಲಿಕ ಸಂಘಟನಾತ್ಮಕ ಸಮಿತಿ ರಚಿಸುವ ತೀರ್ಮಾನ ಕೈಗೊಳ್ಳಲಾಯಿತು.

ಹೋರಾಟ ಸಮಿತಿ ರಚಿಸುವ ಬಗ್ಗೆಯೇ ಸಭೆ ಕರೆಯಲಾಗಿತ್ತು. ಆದರೆ ಸಭೆ ನಡೆಯುತ್ತಿದ್ದಂತೆ ಜನಸಂಖ್ಯೆ ಕಡಿಮೆ ಆಗತೊಡಗಿತು. ಇದನ್ನು ಗಮನಿಸಿದ ಅಶೋಕ್‌ ಕುಮಾರ್‌ ರೈ, ಸಮಿತಿ ರಚಿಸುವ ಬಗ್ಗೆ ಇನ್ನೊಮ್ಮೆ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂದು ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭೆ, ಈಗಲೇ ಸಮಿತಿ ರಚಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿತು.

ಎನ್‌.ಕೆ. ಜಗನ್ನಿವಾಸ್‌ ರಾವ್‌ ಮಾತನಾಡಿ, ತಾತ್ಕಾಲಿಕ ಸಮಿತಿ ರಚಿಸುವುದು ಹೆಚ್ಚು ಸೂಕ್ತ. ಸಮಿತಿಗೆ ಸಂಚಾಲಕ ಹಾಗೂ ಸಹ ಸಂಚಾಲಕರನ್ನು ನೇಮಿಸಿ, ಮುಂದೆ ಮಹಾ ಸಭೆ ಇಟ್ಟುಕೊಳ್ಳುವುದು ಒಳಿತು. ಆ ಸಭೆಗೆ ಪ್ರಸ್ತಾವಿತ ಪುತ್ತೂರು ತಾಲೂಕಿನ ಜನರನ್ನು ಆಹ್ವಾನಿಸಿ, ಮಾತುಕತೆ ನಡೆಸಬೇಕು. ಇದರಲ್ಲಿ ಸಮಿತಿ ರಚನೆ ನಡೆಯಲಿ. ಇದಕ್ಕೆ ಬೇಕಾದ ಪೂರ್ವ ತಯಾರಿಗಳನ್ನು ತಾತ್ಕಾಲಿಕ ಸಮಿತಿಗೆ ವಹಿಸುವ ಅಭಿಪ್ರಾಯಕ್ಕೆ ಸಭೆ ಸಮ್ಮತಿಸಿತು. ಸಂಚಾಲಕರನ್ನಾಗಿ ಅಶೋಕ್‌ ಕುಮಾರ್‌ ರೈ ಅವರನ್ನು ಆಯ್ಕೆ ಮಾಡಲಾಯಿತು. ಸಹ ಸಂಚಾಲಕರಾಗಿ ಸಭೆಗೆ ಆಗಮಿಸಿದ ಎಲ್ಲರನ್ನು ನೇಮಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸಭೆ, ದೊಡ್ಡ ಸಂಖ್ಯೆಯಲ್ಲಿ ಸಹ ಸಂಚಾಲಕರನ್ನು ನೇಮಿಸುವುದು ಬೇಡ. 7 ಜನರನ್ನು ಆಯ್ಕೆ ಮಾಡಿ, ಕೆಲಸ ಮಾಡುವುದು ಉತ್ತಮ ಎಂದಿತು. ಪ್ರತಿಕ್ರಿಯಿಸಿದ ಅಶೋಕ್‌ ಕುಮಾರ್‌ ರೈ, ಜಿಲ್ಲಾ ರಚನೆಯ ಹೋರಾಟ ನಡೆಸಲು 7 ಅಥವಾ 11 ಜನರಿಂದ ಸಾಧ್ಯವಿಲ್ಲ. 500 ಜನರಿದ್ದರೂ ಕಡಿಮೆಯೇ. ಯಾವ ವ್ಯಕ್ತಿಗಳನ್ನು ಎಲ್ಲಿ ಬಳಕೆ ಮಾಡಬೇಕು ಎನ್ನುವುದನ್ನು ನಾವು ತೀರ್ಮಾನ ಕೈಗೊಳ್ಳುತ್ತೇವೆ. ಎಲ್ಲರನ್ನು ಹೊಂದಿಸಿಕೊಂಡು ಕೆಲಸದ ಬಗ್ಗೆ ರೂಪರೇಖೆ ತಯಾರಿಸಲಾಗುವುದು. ಈ ವಿಷಯದಲ್ಲಿ ಗೊಂದಲ ಬೇಡ ಎಂದು ಚರ್ಚೆಗೆ ತೆರೆ ಎಳೆದರು. ಸಭೆ ಚಪ್ಪಾಳೆ ಮೂಲಕ ಸಮ್ಮತಿಸಿತು.

Advertisement

ಮನವರಿಕೆ ಮಾಡೋಣ
ಕೇಶವ ನಾರಾಯಣ ಮುಳಿಯ ಮಾತನಾಡಿ, ಎಲ್ಲ ಗ್ರಾ.ಪಂ., ಅಧಿಕಾರಿಗಳು ನಿರ್ಣಯ ಕೈಗೊಳ್ಳುವುದು ಉತ್ತಮ ಎಂದರು. ಭಾಗ್ಯೇಶ್‌ ರೈ ಮಾತನಾಡಿ, ಜಿಲ್ಲೆಯನ್ನು ಪ್ರತ್ಯೇಕ ಮಾಡುವುದು ಬೇಡ ಎಂಬ ಭಾವನೆ ಬರುವ ಸಾಧ್ಯತೆ ಇದೆ. ಭಾವನಾತ್ಮಕವಾಗಿ ದ.ಕ. ಜಿಲ್ಲೆ ಒಂದೇ. ಆದರೆ ಆಡಳಿತಾತ್ಮಕ ಉದ್ದೇಶದಿಂದ ಪ್ರತ್ಯೇಕ ಜಿಲ್ಲೆ ಕೇಳುವ ಅವಶ್ಯಕತೆ ಇದೆ ಎನ್ನುವುದನ್ನು ಮಂಗಳೂರು ಭಾಗದ ಜನರಿಗೆ ಮನವರಿಕೆ ಮಾಡುವ ಕೆಲಸ ಆಗಬೇಕಿದೆ ಎಂದರು.

ನೂರುದ್ದೀನ್‌ ಸಾಲ್ಮರ, ಸುದರ್ಶನ ಗೌಡ, ರವಳನಾಥ, ಜಗನ್ನಾಥ್‌ ರೈ, ಡಾ| ಯು.ಪಿ. ಶಿವಾನಂದ್‌, ಕೆ.ಪಿ. ಜೇಮ್ಸ್‌, ರಾಮಣ್ಣ ರೈ, ಸಂದೀಪ್‌ ಲೋಬೊ, ಶ್ರೀಧರ್‌ ರೈ ಬೈಲುಗುತ್ತು ಮೊದಲಾದವರು ಸಲಹೆ ನೀಡಿದರು. ಅಪೇಕ್ಷಾ ಪೈ ನಾಡಗೀತೆ ಹಾಡಿದರು. ಪುತ್ತೂರು ಜಿಲ್ಲೆ ಘೋಷಣೆಯ ಹೋರಾಟಕ್ಕೆ ಚಾಲನೆ ನೀಡಿದ ಸತೀಶ್‌ ರೈ ನೀರ್ಪಾಡಿ ಸ್ವಾಗತಿಸಿ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ವಂದಿಸಿದರು. ಬಡೆಕ್ಕಿಲ ಪ್ರದೀಪ್‌ ನಿರೂಪಿಸಿದರು.

ಜಿಲ್ಲೆ ಆಗಲೇಬೇಕು
ಶಾಸಕ ಸಂಜೀವ ಮಠಂದೂರು ಮಾತನಾಡಿ, ಕೆಎಸ್‌ಆರ್‌ಟಿಸಿ ಡಿಸಿ, ಸಹಾಯಕ ಆಯುಕ್ತರು, ಸಹಕಾರಿ ಸಂಘಗಳ ರಿಜಿಸ್ಟ್ರಾರ್‌, ಮೆಸ್ಕಾಂ ಇಇ, ಅಧಿಕಾರದ ಕೇಂದ್ರ ಸ್ಥಾನ ಪುತ್ತೂರು. ಆದ್ದರಿಂದ ಪುತ್ತೂರು ಜಿಲ್ಲಾ ಕೇಂದ್ರ ಆಗಬೇಕು. ಹೆದ್ದಾರಿ, ರೈಲ್ವೇ, ಹೆಲಿಪ್ಯಾಡ್‌ ಮೊದಲಾದ ಸೌಕರ್ಯ ಗಳು ಇಲ್ಲಿಗೆ ಬರಬೇಕಿದೆ. ಜತೆಗೆ ಮೂಲ ಸೌಕರ್ಯ ಅಭಿವೃದ್ಧಿಗೆ ಪುತ್ತೂರು ಜಿಲ್ಲಾಕೇಂದ್ರ ಆಗಬೇಕಾದ ಅನಿವಾರ್ಯ ಇದೆ ಎಂದರು.

ಜನಪ್ರತಿನಿಧಿಗಳ ನಿರ್ಣಯವೂ ಅಗತ್ಯ
ವಕೀಲ ರಾಮ್‌ಮೋಹನ್‌ ರಾವ್‌ ಮಾತನಾಡಿ, ವೇಣೂರಿನ 2 ಗ್ರಾಮಗಳನ್ನು ಹೊರತುಪಡಿಸಿ ಬಂಟ್ವಾಳವೂ ಪುತ್ತೂರು ಜಿಲ್ಲೆಗೆ ಸೇರಬೇಕೆಂಬ ಬಗ್ಗೆ ಬೇಡಿಕೆ ಬಂದಿದೆ. ಜಿಲ್ಲಾ ಕೇಂದ್ರವಾಗಿ ಮಾಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ನಿರ್ಣಯ ಅಗತ್ಯ. ರೈತರಿಲ್ಲದೇ ಸರಕಾರವೇ ಇಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದ್ದರಿಂದ ಅವರ ನಿರ್ಣಯವೂ ಬೇಕು ಎಂದ ಅವರು, ಜಿಲ್ಲಾ ಕೇಂದ್ರವಾಗಲು ಪುತ್ತೂರಿನಲ್ಲಿ ಸ್ಥಳಾವಕಾಶದ ಕೊರತೆ ಇಲ್ಲ. ಬೇಕಾದಷ್ಟು ಜಾಗ ಇದೆ ಎಂದರು.

ಸಂಪೂರ್ಣ ಬೆಂಬಲ
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಇದರೊಳಗೆ ರಾಜಕೀಯ ಬರುವುದು ಬೇಡ. 4 ತಾಲೂಕಿನವರು ಒಂದೇ ಧ್ವನಿಯಾಗಿ ಹೋರಾಟ ನಡೆಸಬೇಕು. ಇದಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next