Advertisement

ಆರ್ಥಿಕ ಪ್ರೋತ್ಸಾಹಕ್ಕೆ ಬ್ಯಾಂಕ್‌ ಸೇವೆ ಅಗತ್ಯ: ಡೀಸಿ

09:59 PM Oct 04, 2019 | Lakshmi GovindaRaju |

ದೇವನಹಳ್ಳಿ: ಬ್ಯಾಂಕುಗಳು ಜನಸಾಮಾನ್ಯರಿಗೆ ಸಕಾಲದಲ್ಲಿ ಸಾಲ ನೀಡುವ ಮೂಲಕ ಸ್ವ-ಉದ್ಯೋಗಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ಹೇಳಿದರು. ನಗರದ ಗಿರಿಯಮ್ಮ ವೃತ್ತದಲ್ಲಿರುವ ಅಂಬೇಡ್ಕರ್‌ ಭವನದಲ್ಲಿ ಕೇಂದ್ರೀಯ ಹಣಕಾಸು ಸಚಿವಾಲಯ ನಿರ್ದೇಶನದ ಮೇರೆಗೆ ಕೆನರಾ ಬ್ಯಾಂಕ್‌ ನೇತೃತ್ವದಲ್ಲಿ ನಡೆದ ವಿಶೇಷ ಗ್ರಾಹಕ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಕೃಷಿ, ಸಣ್ಣ ಉದ್ದಿಮೆ, ಗೃಹ, ರಿಟೈಲ್‌, ವೈಯಕ್ತಿಕ, ವಾಹನ, ಶೈಕ್ಷಣಿಕ, ಮುದ್ರ, ಹೈನುಗಾರಿಕೆ, ಚಿನ್ನಾಭರಣದ ಸಾಲ-ಸೌಲಭ್ಯಗಳ ಕುರಿತು ಮಾಹಿತಿ ನೀಡಲು ಹಾಗೂ ಸಾಲ ಮಂಜೂರು ಮಾಡಲು ಜಿಲ್ಲೆಯ ವಿವಿಧ ಬ್ಯಾಂಕುಗಳು, ವಿಶೇಷ ಕೌಂಟರ್‌ ತೆರೆಯಲಾಗಿದ್ದು, ಮೊದಲ ದಿನವೇ ಜಿಲ್ಲೆಯ 16 ರಾಷ್ಟ್ರೀಯ ಬ್ಯಾಂಕುಗಳು ಸೇರಿದಂತೆ 203 ಶಾಖೆಗಳು 1092ಕ್ಕೂ ಅಧಿಕ ಗ್ರಾಹಕರಿಗೆ 37.8 ಕೋಟಿ ಮೌಲ್ಯದ ಸಾಲವನ್ನು ಸ್ಥಳದಲ್ಲೇ ಸಾಲ ಮಂಜೂರಾತಿ ಪತ್ರ ನೀಡುವ ಮೂಲಕ ಮೊದಲ ದಿನವೇ “ಗ್ರಾಹಕ ಸಂಪರ್ಕ ಕಾರ್ಯಕ್ರಮ’ಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದೆ ಎಂದು ಜಿಲ್ಲಾಧಿಕಾರಿ ಹರ್ಷ ವ್ಯಕ್ತಪಡಿಸಿದರು.

ಒಬ್ಬ ವ್ಯಕ್ತಿ ಅಭಿವೃದ್ಧಿ ಹೊಂದಬೇಕಾದರೆ ಮೊದಲು ಶಿಕ್ಷಣವನ್ನು ಪಡೆಯಬೇಕು ಹಾಗೂ ಸರ್ಕಾರ ಮತ್ತು ಬ್ಯಾಂಕಿನ ಸಾಲಗಳನ್ನು ಪಡೆದು ಅಭಿವೃದ್ಧಿಯಾಗಬೇಕು. ಸಾಲ ಸೌಲಭ್ಯದಿಂದ ವಂಚಿತರಾಗಿರುವವರಿಗೆ ಸ್ಥಳದಲ್ಲಿಯೇ ಸಾಲ ಮಂಜೂರು ಮಾಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದ್ದು, ಇದನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕೆಂದರಲ್ಲದೇ, ಅದೇ ರೀತಿ ತಾವು ಪಡೆದ ಸಾಲಗಳನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಬ್ಯಾಂಕಿನ ವಹಿವಾಟಿಗೂ ಸಹಕರಿಸಬೇಕೆಂದು ನಿರ್ದೇಶನ ನೀಡಿದರು.

ಸಾಲ-ಸೌಲಭ್ಯಗಳು ಬ್ಯಾಂಕು ಮತ್ತು ಫ‌ಲಾನುಭವಿಗಳ ನಡುವಿನ ನಿರಂತರ ಪ್ರಕ್ರಿಯೆಯಾಗಿದ್ದು, ಮಧ್ಯವರ್ತಿಗಳಿಗೆ ಅವಕಾಶ ಕಲ್ಪಿಸದೆ ನೇರವಾಗಿ ವಹಿವಾಟು ನಡೆಯುವಂತೆ ನೋಡಿಕೊಳ್ಳಬೇಕೆಂದರಲ್ಲದೇ, ಸರ್ಕಾರಿ ಫ‌ಲಾನುಭವಿಗಳಿಗೆ ನಿಗದಿತ ಅವಧಿಯಲ್ಲಿ ಬ್ಯಾಂಕಿನ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಆಗ ಮಾತ್ರ ಇಂತಹ ಕಾರ್ಯಕ್ರಮಕ್ಕೆ ಸಾರ್ಥಕತೆ ಸಿಗುವುದು ಎಂದು ತಿಳಿಸಿದರು. ನಗರ ಸೇರಿದಂತೆ ವಿವಿಧ ಹಳ್ಳಿಗಳಿಂದ ಕೃಷಿಕರು, ಉದ್ಯಮಿಗಳು, ನೌಕರರು, ಚಾಲಕರು, ಬ್ಯಾಂಕಿನ ಗ್ರಾಹಕರು, ಗ್ರಾಹಕೇತರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಲ ಸೌಲಭ್ಯದ ಮಾಹಿತಿ ಪಡೆದರು.

ಗ್ರಾಹಕ ಸಂಪರ್ಕ ಕಾರ್ಯಕ್ರಮಗಳನ್ನು ದೇಶಾದ್ಯಂತ ಎರಡು ಹಂತದಲ್ಲಿ 400 ಜಿಲ್ಲೆಗಳಲ್ಲಿ ಆಯೋಜಿಸಲಾಗಿದ್ದು, ಮೊದಲ ಹಂತದಲ್ಲಿ 250 ಜಿಲ್ಲೆಗಳಲ್ಲಿ ನಡೆಸಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಒಂದೊಂದು ರಾಷ್ಟ್ರೀಕೃತ ಬ್ಯಾಂಕಿನ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೆನರಾ ಬ್ಯಾಂಕು ಮಹಾ ಪ್ರಬಂಧಕರಾದ ಡಿ.ವಿಜಯ್‌ ಕುಮಾರ್‌ರವರು ಮಾಹಿತಿ ನೀಡಿದರು.

Advertisement

ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್‌ ಮಹಾಪ್ರಬಂಧಕ ಸಿ.ಎಸ್‌. ವಿಜಯಲಕ್ಷ್ಮೀ, ಸಹಾಯಕ ಪ್ರಬಂಧಕ ಶ್ರೀನಿವಾಸ್‌, ಜಿಲ್ಲಾ ಮ್ಯಾನೇಜರ್‌ ಮಧುಸೂಧನ್‌, ಎಂ.ಸಿ.ಎಸ್‌.ಎಲ್‌.ಬಿ.ಸಿ. ಉಪ ಮಹಾಪ್ರಬಂಧಕ ನಜೀರ್‌ಅಹಮದ್‌, ನಬಾರ್ಡ್‌ ಡಿಜಿಎಂ ಅರುಣ್‌ ಕುಮಾರ್‌ ಶರ್ಮ ಸೇರಿದಂತೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್‌ಗಳ ಮುಖ್ಯಸ್ಥರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next