Advertisement

ಘನ ತ್ಯಾಜ್ಯ ನಿರ್ವಹಣೆಗೆ ಸೇವಾ ಶುಲ್ಕ ವಸೂಲಿಗೆ ವಿರೋಧ

02:42 PM May 25, 2019 | Team Udayavani |

ಚಿಕ್ಕಬಳ್ಳಾಪುರ: ಸ್ಥಳೀಯ ನಗರಸಭೆ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಸ ಉತ್ಪಾದಿಸುವವರಿಗೆ ಘನ ತ್ಯಾಜ್ಯ ನಿರ್ವಹಣೆ ನಿಯಮ 2016ರ ಅಡಿ ಸೇವಾ ಶುಲ್ಕ ವಿಧಿಸುವ ನಗರಸಭೆ ಕ್ರಮಕ್ಕೆ ಖಾಸಗಿ ಆಸ್ಪತ್ರೆಗಳ ವೈದ್ಯರು, ಬಾರ್‌ ಆ್ಯಂಡ್‌ ರೆಸ್ಟೋರೆಂಟ್ ಮಾಲೀಕರು, ಹೋಟೆಲ್ ಹಾಗೂ ಕಲ್ಯಾಣ ಮಂಟಪದ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ.

Advertisement

ಇತ್ತೀಚೆಗೆ ನಗರಸಭೆ ಸಭಾಂಗಣದಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ಸೇವಾ ಶುಲ್ಕ ವಸೂಲಿ ಮಾಡುವ ನಗರಸಭೆ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಯಿತು. ಘನ ತ್ಯಾಜ್ಯ ನಿರ್ವಹಣೆ ಮಾಡುವುದು ಸ್ಥಳೀಯ ಸಂಸ್ಥೆಗಳ ಹೊಣೆಗಾರಿಕೆಯಾಗಿದೆ. ಅದನ್ನು ನಮ್ಮ ಮೇಲೆ ಹೊರಿಸಿದರೆ ಹೇಗೆ ಎಂದು ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದ ಮಾಲೀಕರು ನಗರಸಭೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ಹೊಸ ಮಂಡಳಿ ಬರಲಿ: ಭಾರತೀಯ ವೈದ್ಯಕೀಯ ಸಂಘ (ಐಎಂಎ) ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ.ವೆಂಕಟಾಚಲಪತಿ ಮಾತನಾಡಿ, ಇದು ತುಂಬಾ ಮಹತ್ವದ ನಿರ್ಧಾರ. ಹೀಗಾಗಿ ಇದನ್ನು ಆಡಳಿತ ಮಂಡಳಿ ಇಲ್ಲದೇ ಅಧಿಕಾರಿಗಳು ತೆಗೆದುಕೊಳ್ಳುವುದು ಬೇಡ. ಚುನಾವಣೆ ಮುಗಿದು ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರುವವರೆಗೆ ಅಧಿಕಾರಿಗಳು ಕಾಯಿರಿ. ಬಳಿಕ ಆಡಳಿತ ಮಂಡಳಿ ಸಭೆ ತೆಗೆದುಕೊಳ್ಳುವ ತೀರ್ಮಾನದಂತೆ ಕ್ರಮಕ್ಕೆ ಮುಂದಾಗಿ ಎಂದು ಹೇಳಿದರು.

ನಗರದ ಮಂಜುನಾಥ್‌ ಆಸ್ಪತ್ರೆ ಮಾಲೀಕ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್‌ ಮಾತನಾಡಿ, ನಗರದ ಸ್ವಚ್ಛತೆ, ಆರೋಗ್ಯ, ರಸ್ತೆ, ಕುಡಿಯುವ ನೀರು, ಒಳಚರಂಡಿ ನಿರ್ವಹಣೆ ನೋಡಿಕೊಳ್ಳುವುದು ನಗರ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ. ಅದಕ್ಕಾಗಿ ಸಾರ್ವಜನಿಕರು ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಾರೆ.

ಆಸ್ಪತ್ರೆಗಳಿಗೆ ಸೇವಾ ಶುಲ್ಕ ಬೇಡ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಅನುದಾನ ನೀಡುತ್ತವೆ. ಆದ್ದರಿಂದ ತ್ಯಾಜ್ಯದ ನೆಪದಲ್ಲಿ ಸೇವಾ ಶುಲ್ಕ ವಿಧಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮೂಲಸೌಕರ್ಯ ಒದಗಿಸುವುದು ನಗರ ಸ್ಥಳೀಯ ಸಂಸ್ಥೆಗಳ ಕರ್ತವ್ಯ. ಅದಕ್ಕಾಗಿ ಶುಲ್ಕ ಪಡೆಯುವುದು ಅನೈತಿಕ ಕ್ರಮ ಎಂದು ತಮಿಳುನಾಡು ಗ್ರಾಹಕರ ವೇದಿಕೆ ಆದೇಶ ನೀಡಿದೆ. ಇಂತಹದೇ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಲ್ಲಿ ನಾಲ್ಕು ಪ್ರಕರಣಗಳ ವಿಚಾರಣೆ ಬಾಕಿ ಇದೆ. ಆಸ್ಪತ್ರೆಗಳು ಸೇವಾ ಕ್ಷೇತ್ರಗಳ ವ್ಯಾಪ್ತಿಗೆ ಬರುತ್ತವೆ. ಆದ್ದರಿಂದ ಆಸ್ಪತ್ರೆಗಳಿಗೆ ಸೇವಾ ಶುಲ್ಕ ವಿಧಿಸುವ ನಿರ್ಧಾರ ಕೈಬಿಡಬೇಕು ಎಂದು ಆಗ್ರಹಿಸಿದರು.

Advertisement

ಪರಿಸರ ಅಭಿಯಂತರರ ಗಮನಕ್ಕೆ: ನಗರಸಭೆ ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದಾಗಿ ನಗರದ ಅನೇಕ ಕಡೆಗಳಲ್ಲಿ ನೀರು ಹರಿಯದೇ ಅದ್ವಾನ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಅಧಿಕಾರಿಗಳು ಮೊದಲು ಗಮನ ಹರಿಸಲಿ ಎಂದು ತಿಳಿಸಿದರು.

ಚಿತ್ರಮಂದಿರದವರು ನಗರದಲ್ಲಿ ಎಲ್ಲೆಂದರಲ್ಲಿ ಪೋಸ್ಟರ್‌ಗಳನ್ನು ಅಂಟಿಸಿ, ಗಲೀಜು ಮಾಡುವುದು ನಿಲ್ಲಿಸಬೇಕು. ನಿಗದಿತ ಸ್ಥಳಗಳಲ್ಲಿ ಮಾತ್ರ ಪೋಸ್ಟರ್‌ ಅಂಟಿಸಬೇಕು. ನಗರಸಭೆ ವಾಹನಗಳಿಗೆ ತ್ಯಾಜ್ಯ ನೀಡಬೇಕು. ಪರವಾನಗಿ ನವೀಕರಣ ಮಾಡಿಸಬೇಕು. ಈ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆಂದು ಸಭೆಯಲ್ಲಿ ಉಪಸ್ಥಿತರಿದ್ದ ನಗರಸಭೆ ಪರಿಸರ ಅಭಿಯಂತರರಾದ ಶಿವಶಂಕರ್‌ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಕೇಂದ್ರದ ವೈದ್ಯ ಡಾ.ಸಿದ್ದಲಿಂಗಪ್ಪ, ಡಾ.ಎಚ್.ಎಸ್‌.ಮಧುಕರ್‌, ಡಾ.ರಜನಿ, ಹೋಟೆಲ್, ಬಾರ್‌, ರೆಸ್ಟೋರೆಂಟ್, ಕಲ್ಯಾಣ ಮಂಟಪಗಳ ಮಾಲೀಕರು ಉಪಸ್ಥಿತರಿದ್ದರು.

ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಶುಲ್ಕ ವಿಧಿಸಲಿ:

ಜೀವನ್‌ ಆಸ್ಪತ್ರೆಯ ಡಾ.ಐ.ಎಸ್‌.ರಾವ್‌ ಮಾತನಾಡಿ, ರಾಜ್ಯದಲ್ಲಿ ಮಾತ್ರ ಕೇಂದ್ರ ಸರ್ಕಾರ ಪ್ರಾಯೋಜಿತ ಆಯುಷ್ಮಾನ್‌ ಭಾರತ ಯೋಜನೆಯ ಲಾಭ ಬರೀ ಸರ್ಕಾರಿ ಆಸ್ಪತ್ರೆಗಳಿಗೆ ದೊರೆಯುವಂತೆ ಸೀಮಿತ ಮಾಡಲಾಗಿದೆ. ಉಚಿತವಾಗಿ ಎಲ್ಲ ಸರ್ಕಾರಿ ಸೌಲಭ್ಯಗಳು ಹೊಂದಿರುವ ಆಸ್ಪತ್ರೆಗಳು, ವೈದ್ಯರಿಗೆ ಸರ್ಕಾರ ಹಣ ಹರಿದು ಹೋಗುತ್ತಿದೆ. ಆದ್ದರಿಂದ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಶುಲ್ಕ ವಿಧಿಸಿ ವಸೂಲಿ ಮಾಡಲಿ ಎಂದು ಸಭೆಯಲ್ಲಿ ಭಾಗವಹಿಸಿದ್ದವರು ಸಲಹೆ ನೀಡಿದರು. ನಾವು ಆಸ್ಪತ್ರೆಯಲ್ಲಿ ಉತ್ಪಾದನೆಯಾಗುವ ಜೈವಿಕ ತ್ಯಾಜ್ಯ ವಿಲೇವಾರಿಗೆ ಖಾಸಗಿ ಕಂಪನಿಗಳ ಸಹಕಾರ ಪಡೆದಿದ್ದೇವೆ. ಇನ್ನು ನಗರಸಭೆ ವಾಹನಗಳಿಗೆ ನೀಡುವುದು ಸಾರ್ವಜನಿಕರಿಂದ ಉತ್ಪಾದನೆಯಾದ ತ್ಯಾಜ್ಯ. ಅದನ್ನು ತೆಗೆದುಕೊಂಡು ಹೋಗುವುದು ನಗರಸಭೆ ಕರ್ತವ್ಯ. ಅದಕ್ಕೆ ನಾವು ಶುಲ್ಕ ಕಟ್ಟಬೇಕು ಎನ್ನುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಪ್ರತಿಯೊಬ್ಬರಿಗೂ ಜವಾಬ್ದಾರಿ ಇರಲಿ:

ನಗರದ ಸ್ವಚ್ಛತೆ ಕಾಯ್ದುಕೊಂಡು ಪರಿಸರ ಸಂರಕ್ಷಣೆ ಮಾಡುವ ಜತೆಗೆ ಮುಂದಿನ ಪೀಳಿಗೆಗಾಗಿ ಯೋಜನಾ ಬದ್ಧವಾಗಿ ನಗರ ಅಭಿವೃದ್ಧಿ ಮಾಡುವುದು ನಗರಸಭೆ ಕರ್ತವ್ಯ. ಆದ್ದರಿಂದ ನಗರದ ಸ್ವಚ್ಛತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಪ್ರಮಾಣದ ಕಸ ಉತ್ಪಾದಕರಿಗೂ ಜವಾಬ್ದಾರಿ ಬರಲಿ ಎಂಬ ಉದ್ದೇಶಕ್ಕೆ ಸೇವಾ ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ ಎಂದು ನಗರಸಭೆ ಪರಿಸರ ಅಧಿಕಾರಿ ಶಿವಶಂಕರ್‌ ತಿಳಿಸಿದರು. ಪ್ರತಿಯೊಬ್ಬರೂ ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ನೀಡಬೇಕು. ಗ್ರಾಹಕರಿಗೆ ಕೂಡ ವರ್ತಕರು ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು. ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಿನ ಕಸ ಉತ್ಪಾದನೆಯಾಗುತ್ತಿದೆ. ಜತೆಗೆ ನಿಷೇಧಿತ ಪ್ಲಾಸ್ಟಿಕ್‌ ಗ್ಲಾಸ್‌ ಮತ್ತು ಬ್ಯಾಗನ್ನು ಕೆಲವರು ಕದ್ದುಮುಚ್ಚಿ ಬಳಕೆ ಮಾಡುತ್ತಿದ್ದು, ಕೂಡಲೇ ನಿಲ್ಲಿಸಬೇಕೆಂದು ತಾಕೀತು ಮಾಡಿದರು.
Advertisement

Udayavani is now on Telegram. Click here to join our channel and stay updated with the latest news.

Next