Advertisement

ರಾಜಕೀಯಕ್ಕೆ ಮಣಿಯದೆ ಪಾರದರ್ಶಕ ಸೇವೆ ಸಲ್ಲಿಸಿ

07:44 AM Jun 18, 2019 | Lakshmi GovindaRaj |

ಮೈಸೂರು: ಇಲಾಖೆಯ ಮೇಲೆ ರಾಜಕೀಯ ಹಸ್ತಕ್ಷೇಪ ಬೀರದಂತೆ ಪಾರದರ್ಶಕತೆಯಿಂದ ಕೆಲಸ ಮಾಡಿ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್‌ ಹೇಳಿದರು. ಮೈಸೂರು ಕೇಂದ್ರ ಕಾರಾಗೃಹ ಕವಾಯತು ಮೈದಾನದಲ್ಲಿ ಕಾರಾಗೃಹ ಇಲಾಖೆಯ ತರಬೇತಿ ಸಂಸ್ಥೆ ಆಯೋಜಿಸಿದ್ದ 52ನೇ ಪ್ರಶಿಕ್ಷಣಾರ್ಥಿಗಳ ತಂಡದ ನಿರ್ಗಮನ ಪಥ ಸಂಚಲನದಲ್ಲಿ ಭಾಗವಹಿಸಿ ಗೌರವವಂದನೆ ಸ್ವೀಕರಿಸಿ, ಬಹುಮಾನ ವಿತರಿಸಿ ಮಾತನಾಡಿದರು.

Advertisement

ಮೆರಿಟ್‌ ಆಯ್ಕೆ: ಇಂದು ನಿರ್ಗಮನಗೊಂಡ ಪ್ರಶಿಕ್ಷಣಾರ್ಥಿಗಳಲ್ಲಿ ಬಹುತೇಕರು ಎಂಜಿನಿಯರಿಂಗ್‌ ಸೇರಿದಂತೆ ನಾನಾ ಪದವಿ ಪಡೆದಿದ್ದಾರೆ. ಆಯಾಯ ಪದವಿಗೆ ಉದ್ಯೋಗ ಸಿಗದೆ ಇರುವುದು ಒಂದೆಡೆಯಾದರೆ, ಉದ್ಯೋಗ ಲಭ್ಯವಾಗದೇ ಇರುವುದು ಮತ್ತೂಂದು ಕಾರಣವಾಗಿದೆ. ನಾವು ನಿಮ್ಮನ್ನು ಆಯ್ಕೆ ಮಾಡುವಾಗ ಯಾವ ಜಾತಿ, ಧರ್ಮ, ಭಾಷೆ ನೋಡದೆ ಪಾರದರ್ಶಕವಾಗಿ ಮೆರಿಟ್‌ ಮೇಲೆ ಆಯ್ಕೆ ಮಾಡಲಾಗಿದೆ. ನೀವು ಅದೇ ರೀತಿ ಪಾರದರ್ಶಕತೆಯಿಂದ ಕೆಲಸ ಮಾಡುವ ಮೂಲಕ ಇಲಾಖೆಯ ಮೇಲೆ ರಾಜಕೀಯ ಹಸ್ತಕ್ಷೇಪ ಬೀರದಂತೆ ನೋಡಿಕೊಳ್ಳಬೇಕಿದೆ. ಇದು ನಮ್ಮಲ್ಲೂ ಬರಬೇಕು ಎಂದರು ಎಂದರು.

ಬಿಸಿಲು-ಮಳೆ ಎನ್ನದೆ ಕೆಲಸ: ಶಿಕ್ಷಕರು ಇಂದು ಬೆಳಗ್ಗೆ 10ಗಂಟೆಗೆ ಬಂದು ಸಂಜೆ ಐದು ಗಂಟೆಗೆ ಹೋಗುತ್ತಾರೆ. ನೆರಳಲ್ಲಿ ಪಾಠ ಮಾಡುತ್ತಾರೆ. ನಾನೇನು ಶಿಕ್ಷಕರನ್ನ ಬೊಟ್ಟು ಮಾಡ್ತಿಲ್ಲ. ಆದರೆ, ಪೊಲೀಸ್‌ ಇಲಾಖೆಯಲ್ಲಿ 12ರಿಂದ 14ಗಂಟೆ ಕಾಲ ಬಿಸಿಲು-ಮಳೆ ಎನ್ನದೆ ಕೆಲಸ ಮಾಡುತ್ತಾರೆ. ಇದಲ್ಲದೆ ಹಬ್ಬ, ಹರಿದಿನ ಬಂದಾಗ ತಮ್ಮ ಖುಷಿ ಬಿಟ್ಟು ಕರ್ತವ್ಯ ಮಾಡಿ ತ್ಯಾಗದ ಪ್ರತಿರೂಪವಾಗಿ ಕೆಲಸ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಇಲಾಖೆಯ ಸಿಬ್ಬಂದಿ ಶ್ರಮ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಸೌಲಭ್ಯ: ಕಾರಾಗೃಹ, ಅಗ್ನಿಶಾಮಕ ಠಾಣಾ ಸಿಬ್ಬಂದಿಗೂ ಪೊಲೀಸ್‌ರಂತೆ ಸೌಲಭ್ಯ: ರಾಘವೇಂದ್ರ ಔರಾದ್ಕರ್‌ ವರದಿ ಬಗ್ಗೆ ಚರ್ಚೆ ಮಾಡಲಾಗಿದ್ದು, ಗೃಹ ಇಲಾಖೆಯು ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿದ ಬಳಿಕ ಬೇಡಿಕೆಯನ್ನ ಸಮಗ್ರವಾಗಿ ಪರಿಗಣಿಸಿ ಈಡೇರಿಸಲಾಗುವುದು. ಅದೇ ರೀತಿ ಪೊಲೀಸ್‌ ಇಲಾಖೆ ಸಿಬ್ಬಂದಿಗೆ ದೊರೆಯುವ ಸೌಲಭ್ಯ, ಕಾರಾಗೃಹ, ಅಗ್ನಿಶಾಮಕ ಠಾಣಾ ಸಿಬ್ಬಂದಿಗೂ ದೊರೆಯುವಂತೆ ಪರಿಗಣಿಸಿ ಅನುಷ್ಠಾನ ಮಾಡುತ್ತೇವೆ ಎಂದರು.

ಕಾರಾಗೃಹ ಇಲಾಖೆ ಸಿಬ್ಬಂದಿಗೂ ವಸತಿ: ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ಸೇರಿ ಇನ್ನಿತರ ವ್ಯವಸ್ಥೆ ಕಲ್ಪಿಸಲು ಸರ್ಕಾರ ಸದಾ ಇರುತ್ತದೆ. ಮುಂದಿನ ದಿನದಲ್ಲಿ ಇಲಾಖೆಯ ಅಭಿವೃದ್ಧಿಗೆ ಪೂರಕವಾಗಿ ಸರಕಾರ ಕೆಲಸ ಮಾಡಲಿದೆ. ಇದರಲ್ಲಿ ಕಾರಾಗೃಹ ಇಲಾಖೆಗೆ ಆಗಿರುವ ತಾರತಮ್ಯ ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಕಾರಾಗೃಹ ಇಲಾಖೆ ಸಿಬ್ಬಂದಿಗೂ ವಸತಿಗೃಹಗಳನ್ನು ನಿರ್ಮಾಣ ಮಾಡಿಕೊಡಲಾಗುವುದು. ಮುಂದಿನ 2022 ರೊಳಗೆ ಎಲ್ಲಾ ಸಿಬ್ಬಂದಿಗೂ ಮನೆ ಸೌಲಭ್ಯ ಒದಗಿಸಲು ಕ್ರಮವಹಿಸಲಾಗುತ್ತದೆ ಎಂದು ತಿಳಿಸಿದರು.

Advertisement

ಪರಿವರ್ತನೆ ಅಗತ್ಯ: ಮೊದಲು ಬ್ರಿಟಿಷರ ಕಾಲದ ವ್ಯವಸ್ಥೆಯಲ್ಲಿ ಜೈಲುಗಳಿದ್ದವು. ನಂತರ ಪ್ರಜಾತಂತ್ರದ ವ್ಯವಸ್ಥೆ ಬಂದ ಮೇಲೆ ಜೈಲುಗಳು ಬದಲಾಗಿವೆ. ಈ ನಿಟ್ಟಿನಲ್ಲಿ ಸಿಬ್ಬಂದಿ ಪಾರದರ್ಶಕತೆಯ ಜತೆಗೆ ಮಾನವೀಯ ನೆಲೆಯಲ್ಲಿ ಕೆಲಸ ಮಾಡಬೇಕಿದೆ. ಯಾವುದೋ ಸಂದರ್ಭದಲ್ಲಿ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿ ಬಂದಿರುತ್ತಾರೆ. ಅಂಥವರಿಗೆ ನಾವು ಜೈಲಲ್ಲಿ ಶಿಕ್ಷೆ ಕೊಡಲು ಸಾಧ್ಯವಿಲ್ಲ.

ಬದಲಿಗೆ ಅವರ ಮನ:ಪರಿವರ್ತನೆ ಮಾಡಿ ಸಮಾಜದ ಮುಖ್ಯವಾಹಿನಿಗೆ ತರಬೇಕು. ಸನ್ನಢತೆ ಆಧಾರದಲ್ಲಿ ಬಿಡುಗಡೆಗೊಂಡು ಹೊಸ ಜೀವನ ಕಂಡುಕೊಳ್ಳುವಂತೆ ಮಾಡಬೇಕು ಎಂದು ಸಲಹೆ ನೀಡಿದರು. ಕೈದಿಗಳು ಏನಾದರೂ ಆರೋಗ್ಯದಲ್ಲಿ ವ್ಯತ್ಯಾಸಗೊಂಡರೆ ಚಿಕಿತ್ಸೆ ಕೊಡಿಸುವ ಜತೆಗೆ ಮಾನವೀಯತೆಯಿಂದ ಕಾಣಬೇಕು. ಏಕೆಂದರೆ ಅವರು ಜೈಲಿನ ಒಳಗೆ ಬಂದ ಮೇಲೆ ಮನುಷ್ಯರಾಗಲು ಯತ್ನಿಸಲಿದ್ದಾರೆ ಎಂದರು.

ಕ್ರಿಮಿನಲ್‌ಗ‌ಳ ಬಗ್ಗೆ ನಿಗಾ: ರಾಜ್ಯ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಎನ್‌.ಎಸ್‌.ಮೇಘರಿಕ್‌ ಮಾತನಾಡಿ, ಜೈಲಿನಲ್ಲಿ ಕೆಲಸ ಮಾಡುವಾಗ ಯಾವುದೇ ಆಯುಧ, ಅಸ್ತ್ರಗಳು ಇರಲ್ಲ. ಹೊರಗೆ ಹುಲಿಯಾಗಿದ್ದವರು ಒಳಗೆ ಇಲಿಯಾಗುತ್ತಾರೆ. ಕೆಲವೊಮ್ಮೆ ಇಲಿಯು ಹುಲಿಯಂತೆ ಕಚ್ಚುವ ಸಾಧ್ಯತೆ ಇರುವ ಕಾರಣ ಕ್ರಿಮಿನಲ್‌ಗ‌ಳು ಬಂದಾಗ ಬಹಳ ಜಾಗ್ರತೆಯಿಂದ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಾರಾಗೃಹ ಇಲಾಖೆ ಐಜಿಪಿ ರೇವಣ್ಣ, ನಗರಪೊಲೀಸ್‌ ಆಯುಕ್ತ ಕೆ.ಟಿ.ಬಾಲಕೃಷ್ಣ, ಎಸ್ಪಿ ಅಮಿತ್‌ಸಿಂಗ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಗಮನ ಸೆಳೆದ ಪಥ ಸಂಚಲನ: ಕಾರಾಗೃಹ ಕವಾಯತು ಮೈದಾನದಲ್ಲಿ 52ನೇ ಪ್ರಶಿಕ್ಷಣಾರ್ಥಿಗಳ ತಂಡದ ನಿರ್ಗಮನ ಪಥ ಸಂಚಲನದ ಹಿನ್ನೆಲೆಯಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ಪ್ರಧಾನ ದಳಪತಿ ಶ್ವೇತಾ ಬನ್ನಪ್ಪ ದಳವಾಯಿ ಅವರ ನೇತೃತ್ವದಲ್ಲಿ ಏಳು ತುಕಡಿಗಳು ಆಕರ್ಷಕ ನಿಧಾನ-ಕ್ಷಿಪ್ರಗತಿ ನಡಿಗೆಯಲ್ಲಿ ಪಥಸಂಚಲನ ನಡೆಸಿ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು.

52ನೇ ತಂಡದಲ್ಲಿ 9 ತಿಂಗಳ ಭದ್ರ ಬುನಾದಿ ತರಬೇತಿ ಪಡೆದ 170 ಜನ ಪ್ರಶಿಕ್ಷಣಾರ್ಥಿಗಳಲ್ಲಿ ನಾಲ್ವರು ಎಂಜಿನಿಯರ್‌, 24 ಸ್ನಾತಕೋತ್ತರ ಪದವೀಧರರು, 110 ಪದವೀಧರರು, 10 ಡಿಪ್ಲೊಮಾ, 22 ಮಂದಿ ಇತರ ವಿದ್ಯಾರ್ಥಿಗಳಿದ್ದಾರೆ.

ಪ್ರಶಿಕ್ಷಣಾರ್ಥಿಗಳಿಗೆ ದೈಹಿಕ, ಮಾನಸಿಕವಾಗಿ ತರಬೇತಿ ನೀಡಿ ಅವರನ್ನ ವೃತ್ತಿಗತವಾಗಿ ಸದೃಢರನ್ನಾಗಿಸುವ ಉದ್ದೇಶದಿಂದ ಒಳಾಂಗಣ ತರಬೇತಿಯಲ್ಲಿ ಅಪರಾಧಿಕಾ ಕಾನೂನು, ಲಘುಶಾಸನಗಳು, ಭಾರತ ಸಂವಿಧಾನ, ಸಮಾಜಶಾಸ್ತ್ರ, ಮನೋವಿಜ್ಞಾನ, ಅಪರಾಧಶಾಸ್ತ್ರ, ಮಾನವ ಹಕ್ಕುಗಳು, ಕಾರಾಗೃಹ ಆಡಳಿತದಲ್ಲಿ ತಂತ್ರಜ್ಞಾನ, ಶಸ್ತ್ರಾಸ್ತ್ರಗಳ ಉಪಯೋಗದ ಬಗ್ಗೆ ತರಗತಿ ನೀಡಲಾಗಿದೆ.

ಪ್ರಶಿಕ್ಷಣಾರ್ಥಿಗಳಿಗೆ ವಿವಿಧ ಪ್ರಶಸ್ತಿ: ಒಂಬತ್ತು ತಿಂಗಳ ತರಬೇತಿಯಲ್ಲಿ ಒಳಾಂಗಣ, ಹೊರಾಂಗಣ ತರಬೇತಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪ್ರಶಿಕ್ಷಣಾರ್ಥಿಗಳಿಗೆ ವಿವಿಧ ಪ್ರಶಸ್ತಿ ನೀಡಲಾಯಿತು. ಒಳಾಂಗಣ ವಿಭಾಗ: ಡಿ.ಟಿ.ಯುವರಾಣಿ (ಪ್ರಥಮ), ಅಕ್ಷತಾ ಶ್ರೀ.ಮುಗಳಖೋಡ (ದ್ವಿತೀಯ), ಹೊರಾಂಗಣ ವಿಭಾಗ: ಜಿ.ಜಿ.ಹೇಮಾವತಿ (ಪ್ರಥಮ), ರಾಧಾ ಸುರೇಶ್‌ ಡೊಣ್ಣಿ (ದ್ವಿತೀಯ), ಫೈರಿಂಗ್‌ ವಿಭಾಗ: ಜಿ.ಲಾವಣ್ಯ (ಪ್ರಥಮ), ಪಿ.ಪಿ.ಸವಿತಾ (ದ್ವಿತೀಯ), ಗುಡ್‌ ಕಂಡಕ್ಟ್: ಪ್ರತಿಭಾ ಪಾಟೀಲ, ಬೆಸ್ಟ್‌ ಪ್ರಾಸ್ಟಿಸಿಪೇಟ್‌: ದೀಪಾ ಬಾ.ನಿಂಬೋಜಿ, ಪಿಟಿಐ ಕಪ್‌: ಭಾರತಿ ಜನಾರ್ಧನ ನಾಯ್ಕ, ಐ.ಜಿ.ಕಪ್‌: ಸಿ.ಅಹಲ್ಯ, ಎಡಿಜಿಪಿ ಮತ್ತು ಐಜಿಪಿ ಕಪ್‌: ಶ್ರೀದೇವಿ ಬಿ.ಹಿಟ್ಟಣಗಿ, ಸರ್ವೋತ್ತಮ ಪ್ರಶಸ್ತಿ: ಶ್ವೇತಾ ಬನ್ನಪ್ಪ ದಳವಾಯಿ.

Advertisement

Udayavani is now on Telegram. Click here to join our channel and stay updated with the latest news.

Next