Advertisement

ಸರ್ಪಶಾಪ ಮತ್ತು ಸಂತಾನ ಭಾಗ್ಯ ಅಂದರೆ ಇದು!

02:43 PM Apr 22, 2017 | |

ಭಾರತೀಯ ಸಂಸ್ಕೃತಿಯಲ್ಲಿ ಸರ್ಪಗಳಿಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಸರ್ಪ ನಾಶದ ಸಂಕೇತವೂ ಹೌದು. ಫ‌ಲವಂತಿಕೆಗೆ ಕೂಡಾ ಸರ್ಪ ಸಂಕೇತವಾಗಿದೆ. ನಮ್ಮ ಪುರಾಣದ ಪರಿಕಲ್ಪನೆಯಲ್ಲಿ ಸೃಷ್ಟಿಯ ನಂತರದ ಸ್ಥಿತಿ ಹಾಗೂ ಲಯಗಳಿಗೆ ಅಧಿಪತಿಗಳಾದ ವಿಷ್ಣು ಮಹೇಶ್ವರರು ಕ್ರಮವಾಗಿ ಸರ್ಪವನ್ನು ಹಾಸಿಗೆಯನ್ನಾಗಿಯೂ, ಸರ್ಪವನ್ನೇ ಅಲಂಕಾರವಾಗಿ ಕೊರಳಿಗೆ ಹಾರವನ್ನಾಗಿಯೂ ಉಪಯೋಗಿಸಿಕೊಂಡಿದ್ದಾರೆ. ಹಾಲ್ಗಡಲಲ್ಲಿ ತಣ್ಣನೆಯ ಮೈ ಆದಿಶೇಷನೆಂಬ ಹಾವಿನ ಮೇಲೆ ಮಲಗಿದ ವಿಷ್ಣುವಿಗೆ ಲಕ್ಷ್ಮೀ ದೇವಿ ಯಾವಾಗಲೂ ಕಾಲು ಒತ್ತುತ್ತಿರುತ್ತಾಳೆ. ತಣ್ಣನೆಯ ಮೈಯ ಆದಿಶೇಷನ ತಣ್ಣನೆಯ ತಟಸ್ಥ ಸ್ಥಿತಿ ವಿಷ್ಣುವಿಗೆ ಬಾಧಿಸಬಾರದೆಂದಾರೆ ಕಾಲೊತ್ತುತ್ತ ಕಾವಿನ ಜೀವಂತಿಕೆಯ ಘಟಕಗಳನ್ನು ವಿಷ್ಣುವಿನಲ್ಲಿ ಅಭಾದಿತಳಾಗಿಸುತ್ತಾಳೆ. ಹಾಗೆಯೇ ನಂಜುಂಡ ನಂಜನ್ನು ಕುಡಿದಾಗ ಪಾರ್ವತಿ ಶಿವನ ಕಂಠ ಸವರುತ್ತ ವಿಷವು ದೇಹದೊಳಗೆ ಪ್ರವೇಶಿಸದಂತೆ ತಡೆಯುತ್ತಾಳೆ. ಇದರಿಂದ ಶಿವನಿಗೆ ವಿಷದಿಂದ ಉಂಟಾಗುವ ಕಂಟಕ ತಪ್ಪುತ್ತದೆ. ಒಟ್ಟಿನಲ್ಲಿ ವಿಷಮಯವಾದ ಸರ್ಪ ಸೃಷ್ಟಿಯ ಸ್ಥಿತಿ ಹಾಗೂ ಲಯಗಳ ನಡುವೆ ಒಂದು ಸಮತೋಲನವನ್ನು ನೆರವೇರಿಸಿದೆ. 

Advertisement

ನೋಡಿ, ನಮ್ಮ ಪುರಾಣದ ಪ್ರಕಾರ ಆದಿಶೇಷ ಭೂಮಿಯನ್ನು ನೆತ್ತಿಯ ಮೇಲೆ  ಹೊತ್ತಿದ್ದಾನೆ. ಅದಕ್ಕೆ ಒಂದೆಡೆ ಒಂದೇ ಭಂಗಿಯಿಂದ ಎತ್ತಿದ ಹಾಗೆ ಚಡಪಡಿಕೆಯಾದಾಗ ಕೊರಳು ಕೊಂಕಿಸುತ್ತದೆ. ಆಗ ನಮಗೆ ಭೂಕಂಪನದ ಅನುಭವವಾಗುತ್ತದೆ ಎಂದು ಪುರಾಣ ಹೇಳುತ್ತದೆ. ಇಲ್ಲೂ ವಿನಾಶಕ್ಕೆ ಮತ್ತೆ ಸರ್ಪವೇ ಕಾರಣ. ಭೂಕಂಪ ಸರ್ಪದ ಕಾರಣದಿಂದಾಗಿ ಆಗುತ್ತದೆ.

ಏನು ಈ ಸರ್ಪ ಶಾಪ?
ಜಾತಕ ಶಾಸ್ತ್ರದಲ್ಲಿ 5ನೇ ಮನೆ ಸಂತಾನದ ಮನೆಯಾಗಿದೆ. ರಾಹು ಸರ್ಪದ ಸಂಕೇತವಾಗಿದ್ದಾನೆ. ಜಾತಕದಲ್ಲಿ ದೋಷ ಕಾರಕನಾದ ರಾಹುವು ಸಂತಾನದ ಮನೆಯನ್ನು ಬಾಧಿಸಿದ್ದಲ್ಲಿ ಹುಟ್ಟಿದ ಮಕ್ಕಳು ಸಾಯುವುದು, ಬಾಧೆ ಪಡುವುದು, ತಂದೆತಾಯಿಗಳನ್ನು ಗೋಳು ಹೊಯ್ದುಕೊಳ್ಳುವುದು ಸಂಭವಿಸುತ್ತದೆ. ಈ ರಾಹುವಿನ ಜೊತೆಗೆ ಕುಜ ಶನಿಗಳು ಕ್ಷೀಣ ಚಂದ್ರರು ಅಸ್ತಂಗತ ದೋಷ ಇರುವ ಸೂರ್ಯ ಇತ್ಯಾದಿ ವಿಚಾರಗಳಿಂದಾದ ಬಾಧೆ ಅಗಾಧವಾಗಿದ್ದಾಗ ಸಂತಾನ ಹೀನತೆ ಸಂತಾನನಾಶ ಮಕ್ಕಳಿಂದ ನಿರಂತರ ನೋವುಗಳು ಇತ್ಯಾದಿ ಸಂಭವಿಸುತ್ತ ಜೀವನಕ್ಕೆ ಅರ್ಥ ಕಳೆದುಬಿಡುತ್ತದೆ. ಬೇರೆಯವರ ಬಲಿ ಹೇಳಿಕೊಳ್ಳಲಾಗದ ತಮಗೆ ತಾವೇ ನಿಭಾಯಿಸಲಾಗದ ಸಮಸ್ಯೆಗಳಲ್ಲಿ ವ್ಯಕ್ತಿ ತೊಳಲಾಡುತ್ತಾನೆ.

ಸಂತಾನಭಾಗ್ಯಕ್ಕೆ ತೊಂದರೆ ಹಾಗೂ ವಿಳಂಬಕ್ಕೆ ಸರ್ಪಶಾಪ
ಮುಖ್ಯವಾಗಿ ಸಂತಾನ ಸ್ಥಾನಕ್ಕೆ ಸರ್ಪಶಾಪ ಅಂಟಿದಾಗ ಮಕ್ಕಳೂ ಹುಟ್ಟಿ ಬಾಧೆ ಹೊಂದುವುದು ಮಕ್ಕಳು ಸಾಯುವುದು ಇತ್ಯಾದಿಯಲ್ಲದೆ ಮಕ್ಕಳೇ ಆಗದಿರುವ ತಾಪತ್ರಯ ಎದುರಾಗಬಹುದು. ಸಂತಾನ ಸ್ಥಾನಕ್ಕೆ ದೋಷವಿದ್ದಾಗ ಎಂಬುದೇ ಅಲ್ಲ. ಭಾಗ್ಯ ಹಾಗೂ ಸುಖಸ್ಥಾನಗಳ ಸಂಬಂಧ ತಾನು ಪಡೆದ ದೋಷದಿಂದಾಗಿ ಯಾವುದೇ ರೀತಿಯಲ್ಲಿ, ಸಂತಾನ ಸ್ಥಾನದೊಂದಿಗೆ ಏನಾದರೂ ಬಹು ಮುಖ್ಯವಾದ ಕಿಂಚತ್‌ ಸಂಬಂದ ಹೊಂದಿದ್ದರೆ ಸಂತಾನ ಹೀನತೆ ಉಟಾಗಬಹುದು. ಹುಟ್ಟಿದ ಮಕ್ಕಳಿಂದ ಬಹುವಿಧವಾದ ಕಿರುಕುಳಗಳನ್ನು ಎದುರಿಸಬೇಕಾಗಬಹುದು. ಈ ನಿಟ್ಟಿನಲ್ಲಿ ಶನೈಶ್ಚರನೂ ಚಂದ್ರನೂ, ತಂತಮ್ಮ ಒಟ್ಟಾಗಿರುವ  ಸ್ಥಿತಿ ಅಥವಾ ಪರಸ್ಪರ ದೃಷ್ಟಿ ಹೊಂದಿದ್ದಾಗಲೂ ಸಂತಾನದ ವಿಷಯದಲ್ಲಿ ಕಿರುಕುಳಗಳು  ಕಟ್ಟಿಟ್ಟ ಬುತ್ತಿ. ಯಾವಾಗಲೂ ಶನೈಶ್ಚರನ ಜೊತೆಗಿನ ಚಂದ್ರಯುತಿ ಅನೇಕ ಕಿರಿಕಿರಿಗಳನ್ನು ಎದುರಿಗಿಡುತ್ತದೆ. ಶನಿಕಾಟದ ಸಂದರ್ಭದಲ್ಲಿ ವಿಪರೀತವಾಗಿ ಸಂತಾನದ ವಿಷಯದಲ್ಲಿ ಕಿರುಕುಳಗಳು ಎದುರಾದೀತು. ಅನೇಕ ಉದಾಹರಣೆಗಳೊಂದಿಗೆ ಈ ವಿಚಾರಗಳನ್ನು ಶ್ರುತಪಡಿಸಬಹುದಾಗಿದೆ. ಸ್ಪಷ್ಟವಾಗಿ ಇಂತ ಬವಣೆ, ಕಿರಕಿರಿ ಹೊಂದಿದವರ ಜಾತಕದಲ್ಲಿ ರಾಹು ದೋಷ, ಸರ್ಪದೋಷ ಖಂಡಿತಾ ಇರುತ್ತದೆ. ಹೀಗಾಗಿಯೇ ಭಾರತೀಯ ಸಂಸ್ಕೃತಿಯಲ್ಲಿ ಸರ್ಪಶಾಪ ಅಥವಾ ಸರ್ಪದೋಷವನ್ನು ಬಹು ಪ್ರಮುಖವಾಗಿ ಪರಿಗಣಿಸುತ್ತಾರೆ. 

ಸರ್ಪ ಪ್ರತಿಷ್ಠೆ, ಸರ್ಪ ಸಂಸ್ಕಾರ ಇತ್ಯಾದಿ ರಾಹು ಜಪ, ಸಂತಾನ ಗೋಪಾಲ ಜಪ ಇತ್ಯಾದಿ ಪರಿಹಾರ ಸ್ವರೂಪವಾಗಿ ನೆರವೇರಿಸುತ್ತಾರೆ. ಈ ಸರ್ಪಶಾಪ ಜನ್ಮ, ಜನ್ಮಾಂತರದಿಂದ ಅಂಟಿಕೊಂಡು ಬಂದ ಸೂಚನೆಗಳು ಜಾತಕದಲ್ಲಿ ದೊರಕುತ್ತಿರುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಹಾವು ಹೊಡೆಯುವುದನ್ನಾಗಲೀ, ನೋಡುವುದಾಗಲೀ ಪಾಪ ಎಂದು ಪರಿಗಣಿಸಲ್ಪಟ್ಟಿದೆ. ಆದರೆ ಇಂಥದೊಂದು ಮೂಢನಂಬಿಕೆಯಲ್ಲಿ ನಖಶಿಖಾಂಥವಾಗಿ ಮುಳುಗುವುದೂ ಬೇಡ. ಅನಿವಾರ್ಯವಾದ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಸರ್ಪವನ್ನು ಹೊಡೆಯಲೇ ಬೇಕಾಗುತ್ತದೆ. ಹೀಗೆ ಹೊಡೆದಿದ್ದರಿಂದಾಗಿ ಸರ್ರನೆ ಒಬ್ಬನ ಜಾತಕದಲ್ಲಿ ಸರ್ಪ ಶಾಪ ಬಂದು ಬೇರು ಬಿಟ್ಟಿತು ಎಂದು ಅರ್ಥವಲ್ಲ. ಸರ್ಪಶಾಪದ ಕಲ್ಪನೆಯೇ ಬೇರೆ. ಆ ಕಲ್ಪನೆಯ ಪ್ರಕಾರ ಸರ್ಪವನ್ನು ಸಂಕೇತಿಸುವ ರಾಹು, ರಾಹುವನ್ನು ಒಳಗೊಳ್ಳುವ ಗ್ರಹಗಳು ಒಟ್ಟಾರೆಯಾದ ಅವರ ದುರ್ಬಲ ಸ್ಥಿತಿಯ ಸಂದರ್ಭದಲ್ಲಿ ಒಂದಿಷ್ಟು ತಡೆಯಲು ತೊಡಕಾಗುವ ಅಗಾಧ ಚಡಪಡಿಕೆ ಅಸಹಾಯಕತೆಗಳಿಗೆ ಕಾರಣವಾಗುತ್ತದೆ. ಇದು ಸತ್ಯ.

Advertisement

ಯಾರು ಮಕ್ಕಳಿಂದ ತೊಂದರೆಗೊಳಗಾಗಿದ್ದಾರೆ ?
ಇಲ್ಲಿ ಅವರೆಲ್ಲ ಯಾರೆಂಬ ಹೆಸರುಗಳು ಬೇಡ. ಸೂಕ್ಷ್ಮವಾಗಿ ಅವರನ್ನು ಪ್ರಸ್ಥಾಪಿಸುತ್ತೇನೆ. ಜಾತಕಶಾಸ್ತ್ರದಲ್ಲಿ ಸರ್ಪದೋಷ ಶಾಪ ಹಾಗೂ ಇದನ್ನು ಸುತ್ತವರಿದು ಕಾಡುವ ಗ್ರಹಗಳು ಹೇಗೆ ಸಂತಾನದ ವಿಷಯದಲ್ಲಿ ವಿಳಂಬ, ಸಂತಾನಹೀನತೆ, ಮಕ್ಕಳ ಕಾಟ, ತಮ್ಮೆದುರೇ ಮಕ್ಕಳು ಪರದಾಡುವ ವಿಚಾರ ಗಮನಿಸುತ್ತಾರೆ. ಪರದಾಡುತ್ತಾರೆಂಬುದನ್ನು ಉದಾಹರಿಸಲು ಸರ್ಪಶಾಪ ಎಂಬುದು ಒಂದು ಕಟ್ಟುಕಥೆಯಲ್ಲ. 

ಬಹಳ ಪ್ರಮುಖ ಹೆಸರು ಗಳಿಸಿದ ನಮ್ಮ ದೇಶದ ದೊಡ್ಡ ರಾಜ್ಯದ ಮುಖ್ಯಮಂತ್ರಿಗಳೊಬ್ಬರಿಗೆ ಸಂತಾನ ಭಾಗ್ಯವಿರಲಿಲ್ಲ. ಚಾಣಾಕ್ಯ ಮುಖ್ಯಮಂತ್ರಿ ಎಂದು ಹೆಸರು ಗಳಿಸಿದ ಜನಾಕರ್ಷಣೆಯಿಂದ ಮಿಂಚಿದ ಮತ್ತೂಂದು ರಾಜ್ಯದ ಮುಖ್ಯಮಂತ್ರಿ ಮಗನಿಂದ ಅಂತ್ಯಕಾಲದಲ್ಲಿ ಯಾತನೆ ಪಟ್ಟರು. ಬಹು ಪ್ರಖ್ಯಾತ ಮಹಿಳೆಯೊಬ್ಬರು ಮಗನಿಂದ ಇನ್ನಿಲ್ಲದ ಸಂಕಟಗಳನ್ನು ಎದುರುಹಾಕಿಕೊಂಡರು. ಜನಪ್ರಿಯ ನಟರೊಬ್ಬರಿಗೆ ಸಂತಾನ ಭಾಗ್ಯ ಕೂಡಿಬರಲೇ ಇಲ್ಲ. ಇನ್ನೊಬ್ಬರು ಇದೇ ರೀತಿಯ ಪ್ರಖ್ಯಾತ ನಟ ತನ್ನ ಸಾವಿನ ದಿನಗಳ ವರೆಗೂ ತಮ್ಮ ಮಗನಿಂದಾಗಿ ಎದುರಿಸಿದ ಕಷ್ಟಗಳು ಅಷ್ಟಿಷ್ಟಲ್ಲ. ಸಾಹಿತಿಗಳು  ಮಾಜಿ ಮುಖ್ಯಮಂತ್ರಿಗಳು ಸಾಂಸ್ಕೃತಿಕ ವಕ್ತಾರರು ಎಂಬೆಲ್ಲಾ ದೊಡ್ಡ ಯಾದಿಯೇ ಇದೆ. ಸರ್ಪದೋಷ ಸರ್ಪಶಾಪ ಇವರನ್ನೆಲ್ಲ ಕಾಡಿ ಹಣ್ಣುಗಾಯಿ ನೀರುಗಾಯಿಯಾಗಿಸಿದೆ. 

ಅನಂತಶಾಸ್ತ್ರೀ 

Advertisement

Udayavani is now on Telegram. Click here to join our channel and stay updated with the latest news.

Next