ಉಡುಪಿ: ಉಡುಪಿ ಕೋರ್ಟ್ ಹಿಂಭಾಗದಲ್ಲಿ ಅಗಲ ಕಿರಿದಾದ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ವೇಗವಾಗಿ ಬಂದ ಮಹೇಂದ್ರ ಪಿಕಪ್ ವಾಹನವು ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡಿದ್ದ 6 ಬೈಕು, 2 ಕಾರುಗಳಿಗೆ ಢಿಕ್ಕಿ ಹೊಡೆದಿದ್ದು, ವಾಹನಗಳು ಜಖಂಗೊಂಡಿರುವುದು ಮಾತ್ರವಲ್ಲದೆ ಅದೇ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ತಾಯಿ, ಮಗುವಿಗೆ ವಾಹನ ಢಿಕ್ಕಿ ಹೊಡೆದು ಅವರು ಗಾಯಗೊಂಡಿದ್ದಾರೆ. ತಾಯಿ ಭಾರತಿಗೆ ಚಿಕ್ಕಪುಟ್ಟ ಗಾಯವಾಗಿದೆ. 3 ವರ್ಷದ ಮಗು ಭೂಮಿಕಾಳಿಗೆ ತೀವ್ರ ಸ್ವರೂಪದ ಗಾಯವಾಗಿದೆ. ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಸಮೀಪದ ವೈದ್ಯರಲ್ಲಿ ಮಗುವಿಗೆ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಗು ಪ್ರಾಣಾಪಾಯದಿಂದ ಪಾರಾಗಿದೆ.
ಕಿವಿ ತಮಟೆಗೆ ಪೆಟ್ಟು
ಘಟನೆಯನ್ನು ಕಂಡ ನಾಗರಿಕರು ಆಕ್ರೋಶಗೊಂಡು ಅಪಘಾತಕ್ಕೆ ಕಾರಣ ವಾದ ವಾಹನದ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಜನರ ಹೊಡೆತಕ್ಕೆ ಚಾಲಕನ ಕಿವಿ ತಮಟೆ ಒಡೆದು ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಚಾಲಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆ ಖಂಡನೀಯ
ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ಜನಸಾಮಾನ್ಯರಿಗೆ ಇಲ್ಲ. ತಪ್ಪಿಸ್ಥರನ್ನು ಶಿಕ್ಷಿಸುವ ಅಧಿಕಾರ ಇಲಾಖೆಯದ್ದು. ಚಾಲಕನ ಮೇಲೆ ನಡೆದ ಹಲ್ಲೆ ಅಮಾನವೀಯವಾದದ್ದು. ಅಪಘಾತ ಎನ್ನುವುದು ಬೇಕಂತಲೇ ಮಾಡುವ ಕೃತ್ಯವಲ್ಲ. ಹಾಗಾಗಿ ಚಾಲಕನ ಮೇಲಿನ ಹಲ್ಲೆ ಖಂಡನೀಯ ಎಂದು ಸಮಾಜ ಸೇವಕ ವಿಶು ಶೆಟ್ಟಿ ಅವರು ಖಂಡಿಸಿದ್ದಾರೆ.