Advertisement

ಜಿಲ್ಲಾಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ವಾರ್ಡ್‌

04:48 PM May 07, 2019 | sudhir |

ಮಂಗಳೂರು: ರಾಜ್ಯಾದ್ಯಂತ ಎಲ್ಲ ಸರಕಾರಿ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆಂದೇ ಪ್ರತ್ಯೇಕ ವಾರ್ಡ್‌ ಸಿದ್ಧವಾಗುತ್ತಿದೆ. ಇದರಿಂದ ಚಿಕಿತ್ಸೆಗಾಗಿ ಕಾದು ಸುಸ್ತಾಗುವುದರಿಂದ ಮುಕ್ತಿ ಸಿಗುವ ನಿರೀಕ್ಷೆ ಇದೆ.
ಈಗಾಗಲೇ ಮೊದಲ ಹಂತದಲ್ಲಿ ರಾಜ್ಯದ 15 ಆಸ್ಪತ್ರೆಗಳಲ್ಲಿ ನಿರ್ಮಾಣ ಕಾಮಗಾರಿ ಮುಗಿದಿದ್ದು, ಎರಡನೇ ಹಂತಕ್ಕೆ ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆ ಆಯ್ಕೆಯಾಗಿದೆ. ಪುತ್ತೂರು ತಾಲೂಕು ಆಸ್ಪತ್ರೆಯಲ್ಲೂ ವಾರ್ಡ್‌ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಮಿಷನ್‌ನಡಿ ಈ ವಾರ್ಡ್‌ಗಳು ನಿರ್ಮಾಣಗೊಳ್ಳಲಿವೆ.

Advertisement

ಈ ವಾರ್ಡ್‌ಗಳು ಹೇಗೆ?
ಹಿರಿಯ ನಾಗರಿಕರು ಎಲ್ಲರಂತೆ ಸರತಿ ಸಾಲಿನಲ್ಲಿ ನಿಂತು ಚಿಕಿತ್ಸೆ ಪಡೆಯಬೇಕು. ಈಗಿರುವ ವಾರ್ಡ್‌ಗಳಲ್ಲಿ ಹಿರಿಯರಿಗೆ ಪ್ರತ್ಯೇಕ ಆದ್ಯತೆ ಎಂದೇನಿಲ್ಲ. ಸಾಮಾನ್ಯ ರೋಗಿಗಳಂತೆ ಹಿರಿಯರೂ ತೊಂದರೆ ಅನುಭವಿ ಸಬೇಕು. ಈ ಎಲ್ಲ ಸಮಸ್ಯೆಗಳನ್ನು ಅವಲೋಕಿಸಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ವಾರ್ಡ್‌ ನಿರ್ಮಿಸಲಾಗುತ್ತದೆ.

2018-19ನೇ ಸಾಲಿನ ಮೊದಲ ಹಂತದಲ್ಲಿ 15 ಜಿಲ್ಲಾಸ್ಪತ್ರೆಗಳಲ್ಲಿ ಈ ವಾರ್ಡ್‌ ನಿರ್ಮಾಣಗೊಂಡಿದೆ. ಉಳಿದ 15 ಆಸ್ಪತ್ರೆಗಳನ್ನು 2019- 20ನೇ ಸಾಲಿನ ಎರಡನೇ ಹಂತಕ್ಕೆ ಆಯ್ಕೆ ಮಾಡಲಾಗಿದೆ. ಇತರ ವಾರ್ಡ್‌ಗಳಂತೆ ಎಲ್ಲ ವೈದ್ಯಕೀಯ ಸೌಲಭ್ಯಗಳನ್ನು ಈ ವಿಶೇಷ ವಾರ್ಡ್‌ ನಲ್ಲಿ ಕಲ್ಪಿಸಲಾಗುತ್ತದೆ. ಹಿರಿಯ ರೋಗಿಗಳ ಆರೈಕೆಗೆ ಮೀಸಲು ಮಾನವ ಸಂಪನ್ಮೂಲ ವನ್ನೂ ಒದಗಿಸಲು ಆರೋಗ್ಯ ಇಲಾಖೆ ಯೋಜಿಸಿದೆ. ವಾರ್ಡ್‌ ನಲ್ಲಿ ವೈದ್ಯರು, ಫಿಸಿಯೋಥೆರಪಿಸ್ಟ್‌, ಕೌನ್ಸಿಲರ್‌, ಟೆಕ್ನೀಶಿಯನ್‌ ರನ್ನು ನಿಯೋಜಿಸ ಲಾಗುತ್ತದೆ. ಈ ಪ್ರತ್ಯೇಕ ವಾರ್ಡ್‌ನಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಚಿಕಿತ್ಸೆ ನೀಡಲಾಗುತ್ತದೆ. ವಿಶೇಷ ಆರೈಕೆ ಬೇಕಾದ ಹಿರಿಯರಿಗೆ ಇದು ಸಹಕಾರಿಯಾಗಲಿದೆ.

ವೆನ್‌ಲಾಕ್‌ನಲ್ಲಿ 10 ಹಾಸಿಗೆ ಸಾಮರ್ಥ್ಯ
ವೆನ್‌ಲಾಕ್‌ನಲ್ಲಿ ನಿರ್ಮಾಣಗೊಳ್ಳಲಿರುವ ಹಿರಿಯರ ವಾರ್ಡ್‌ 10 ಹಾಸಿಗೆ ಸಾಮರ್ಥ್ಯವನ್ನು ಹೊಂದಿರಲಿದೆ. ಆದರೆ ಸ್ಥಳ ಅಂತಿಮವಾಗಿಲ್ಲ. ಈಗಿನ ಆಸ್ಪತ್ರೆಗೆ ಹೊಂದಿಕೊಂಡೇ ವಾರ್ಡ್‌ ಇರುವ ಸಾಧ್ಯತೆ ಹೆಚ್ಚಿದೆ. ಪುತ್ತೂರಿನಲ್ಲಿ 6 ಹಾಸಿಗೆ ಸಾಮರ್ಥ್ಯದ ವಾರ್ಡ್‌ ನಿರ್ಮಾಣಗೊಳ್ಳಲಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ರಾಮಕೃಷ್ಣ ರಾವ್‌ ತಿಳಿಸಿದ್ದಾರೆ.

ಹಂತಹಂತವಾಗಿ ನಿರ್ಮಾಣ
ವೃದ್ಧರಿಗಾಗಿ ಎಲ್ಲ ಜಿಲ್ಲೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಹಂತ ಹಂತವಾಗಿ ಪ್ರತ್ಯೇಕ ವಾರ್ಡ್‌ ನಿರ್ಮಿಸಲಾಗುತ್ತಿದೆ. 60 ವರ್ಷ ಮೀರಿದ ಹಿರಿಯ ನಾಗರಿಕರಿಗೆ ವಿಶೇಷ ಆರೈಕೆಗಾಗಿ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ.
-ಡಾ| ರಂಗಸ್ವಾಮಿ
ಉಪನಿರ್ದೇಶಕ, ಅಸಾಂಕ್ರಾಮಿಕ ರೋಗಗಳ ವಿಭಾಗ, ಆರೋಗ್ಯ
ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು

Advertisement

ಹೆಚ್ಚಿನ ಮಾಹಿತಿ ಅಲಭ್ಯ
ಹಿರಿಯ ನಾಗರಿಕರಿಗೆ ಪ್ರತ್ಯೇಕ ವಾರ್ಡ್‌ ನಿರ್ಮಾಣದ ಕ್ರಿಯಾಯೋಜನೆ ರಾಷ್ಟ್ರೀಯ ಆರೋಗ್ಯ ಮಿಷನ್‌ ಮುಂದಿದೆ. ಆದರೆ ಈವರೆಗೆ ಅನುದಾನ ಬಂದಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.
-ಡಾ| ರಾಜೇಶ್ವರೀ ದೇವಿ
ವೈದ್ಯಕೀಯ ಅಧೀಕ್ಷಕರು, ಜಿಲ್ಲಾ ವೆನ್‌ಲಾಕ್‌ ಸರಕಾರಿ ಆಸ್ಪತ್ರೆ

80 ಲಕ್ಷ ರೂ. ಮಿತಿ
ಪ್ರತಿ ಆಸ್ಪತ್ರೆಯಲ್ಲಿ ವಾರ್ಡ್‌ ನಿರ್ಮಾಣಕ್ಕೆ 80 ಲಕ್ಷ ರೂ.ಗಳ ಮಿತಿ ಇದೆ. ಒಂದೊಂದು ಆಸ್ಪತ್ರೆಗೆ ಒಂದೊಂದು ರೀತಿಯ ವೆಚ್ಚ ತಗಲುವುದರಿಂದ ಇಷ್ಟೇ ಎಂದು ಹೇಳಲಾಗದು. ವೆನ್‌ಲಾಕ್‌ ಆಸ್ಪತ್ರೆಯ ವಾರ್ಡ್‌ಗೂ ಕೆಎಚ್‌ಎಸ್‌ಆರ್‌ಡಿಯವರು ಟೆಂಡರ್‌ ಕರೆದು ಬಳಿಕ ಕಾಮಗಾರಿ ಆರಂಭವಾಗುತ್ತದೆ. ಆ ಬಳಿಕವಷ್ಟೇ ಖರ್ಚು ವೆಚ್ಚದ ಮಾಹಿತಿ ಗೊತ್ತಾಗುತ್ತದೆ ಎನ್ನುತ್ತಾರೆ ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು.

– ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next