Advertisement

ಬೆಂಗಳೂರಿಗೆ ಪ್ರತ್ಯೇಕ ಕಾನೂನು

11:54 AM Jul 17, 2018 | |

ಬೆಂಗಳೂರು: ಮಹಾನಗರದ ಸಮಗ್ರ ಅಭಿವೃದ್ಧಿಗಾಗಿ ಶೀಘ್ರವೇ ಪ್ರತ್ಯೇಕ ಕಾನೂನು ಜಾರಿಗೊಳಿಸುವುದಾಗಿ ಬೆಂಗಳೂರು ಅಭಿವೃದ್ಧಿ ಸಚಿವ ಹಾಗೂ ಡಿಸಿಎಂ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ.

Advertisement

ನಗರದ ಅಭಿವೃದ್ಧಿ ಕುರಿತು ಚರ್ಚಿಸಲು ವಿಧಾನಸೌಧದಲ್ಲಿ ಸೋಮವಾರ ಕರೆದಿದ್ದ ನಗರದ ಶಾಸಕರು ಮತ್ತು ಸಂಸದರ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಕಾನೂನು ರೂಪಿಸುವಂತೆ ಶಾಸಕರು ಮತ್ತು ಸಂಸದರು ಸಲಹೆ ನೀಡಿದ್ದಾರೆ. ಅದರಂತೆ ನೂತನ ಕಾನೂನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಈಗ ಬಿಬಿಎಂಪಿ ಕೆಎಂಸಿ ಕಾಯ್ದೆ ವ್ಯಾಪ್ತಿಯಲ್ಲಿದೆ. ಪ್ರತ್ಯೇಕ ಕಾಯ್ದೆ ರೂಪಿಸುವ ಕುರಿತ ಸಾಧಕ ಬಾಧಕಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ನಿವೃತ್ತ ಮುಖ್ಯಕಾರ್ಯದರ್ಶಿ ಬಿ.ಎಸ್‌.ಪಾಟೀಲ್‌ ನೇತೃತ್ವದ ಸಮಿತಿಯು ಬಿಬಿಎಂಪಿಯನ್ನು ಐದು ಪಾಲಿಕೆಗಳಾಗಿ ವಿಂಗಡಿಸಲು ಶಿಫಾರಸು ಮಾಡಿದೆ. ಸರ್ಕಾರ ನೂತನ ಕಾಯ್ದೆ ಜಾರಿಗೊಳಿಸಿದರೆ, ಅದರ ವ್ಯಾಪ್ತಿಗೆ ಹೊಸದಾಗಿ ರಚನೆಯಾಗುವ ಪಾಲಿಕೆಗಳೂ ಬರುತ್ತವೆ ಎಂದು ಹೇಳಿದರು.
 
ಪ್ಲಾಸ್ಟಿಕ್‌ ನಿಷೇಧಿಸಿದ್ದರೂ ಪ್ಲಾಸ್ಟಿಕ್‌ ಉತ್ಪಾದನೆ ಹಾಗೂ ಬಳಕೆ ನಿರಂತರವಾಗಿ ನಡೆಯುತ್ತಿದೆ. ಅದನ್ನು ತಡೆಗಟ್ಟಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅನುಮತಿ ಪಡೆಯದೇ ಫ್ಲೆಕ್ಸ್‌, ಬ್ಯಾನರ್‌ ಅಳವಡಿಸುವುದು ಹಾಗೂ ಅನುಮತಿ ಪಡೆಯದೆ ಕೇಬಲ್‌ ಹಾಕುವುದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಅನಧಿಕೃತವಾಗಿ ಕೇಬಲ್‌ ಹಾಕುವುದನ್ನು ತಪ್ಪಿಸಲು ಟೆಂಡರ್‌ ಶ್ಯೂರ್‌ ರಸ್ತೆಯಲ್ಲಿ ಅನುಮತಿ ಪಡೆದು ಕೇಬಲ್‌ ಹಾಕಿಕೊಳ್ಳಲು
ಸೂಚಿಸಲಾಗಿದೆ. ಕಸದ ಸಮಸ್ಯೆ ನಿವಾರಿಸಲು ವೇಸ್ಟ್‌ ಟು ಎನರ್ಜಿ ಎಂಬ ಯೋಜನೆ ರೂಪಿಸಿದ್ದು, ಕಸದಿಂದ ವಿದ್ಯುತ್‌ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತದೆ ಎಂದರು.

Advertisement

ನಗರದಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ನಿರ್ಭಯಾ ಯೋಜನೆಯಡಿ ಸಿಸಿ ಟಿವಿ ಅಳವಡಿಸಲು ತೀರ್ಮಾನಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 156 ಸರ್ಕಾರಿ ಶಾಲೆಗಳಿವೆ. ಅದರ ಹೊರತಾಗಿ 76 ಸರ್ಕಾರಿ ಶಾಲೆಗಳನ್ನು ಸರ್ಕಾರವೇ ನಡೆಸುತ್ತಿದ್ದು, ಅವುಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಲು ಶಾಸಕರು ಸಲಹೆ ನೀಡಿದ್ದಾರೆ. ಬಿಬಿಎಂಪಿಯಿಂದ ಪ್ರಸ್ತಾಪ ಬಂದ ತಕ್ಷಣ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

10 ಸಾವಿರ ಕೋಟಿ ಬಜೆಟ್‌: ಬಿಬಿಎಂಪಿಯ 10 ಸಾವಿರ ಕೋಟಿ ರೂ. ಬಜೆಟ್‌ಗೆ ಸರ್ಕಾರ ಒಪ್ಪಿಗೆ ನೀಡಿದೆ. ಜಲ ಮಂಡಳಿ ಹಾಗೂ ಮೆಟ್ರೊ ಯೋಜನೆ ಹೊರತುಪಡಿಸಿ 10 ಸಾವಿರ ಕೋಟಿ ರೂ. ಬಜೆಟ್‌ಗೆ ಅನುಮೋದನೆ ನೀಡಲಾಗಿದೆ. ನಗರದಲ್ಲಿ ಎಲ್‌ಇಡಿ ಬೀದಿ ದೀಪ ಅಳವಡಿಸಲು ನಿರ್ಧರಿಸಲಾಗಿದೆ. ರಾಜಕಾಲುವೆ ಹೂಳು ತೆಗೆದು, ಬಫ‌ರ್‌ ಝೋನ್‌ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜಕಾಲುವೆ ಸಮೀಕ್ಷೆ ನಡೆಯುತ್ತಿದ್ದು, ಒತ್ತುವರಿ ತೆರವು ಕಾರ್ಯ ಮುಂದಿನ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ನಗರದಲ್ಲಿ ಗುಂಡಿಗಳ ಸಮಸ್ಯೆ ಪರಿಹಾರಕ್ಕೆ ಟೆಂಡರ್‌ ಶ್ಯೂರ್‌ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಮೂಲಕ ಸಿಮೆಂಟ್‌ ರಸ್ತೆಗಳ ನಿರ್ಮಾಣ ಮಾಡಲಾಗುವುದು.

ಪೌರ ಕಾರ್ಮಿಕರ ವೇತನವನ್ನು ವಿಭಾಗವಾರು ಶೀಘ್ರವೇ ಅವರ ಖಾತೆಗೆ ಜಮಾ ಮಾಡುವಂತೆ ಸೂಚಿಸಲಾಗಿದೆ. ಗುತ್ತಿಗೆದಾರರ ವ್ಯಾಪ್ತಿಯಲ್ಲಿರುವ ಕಾರ್ಮಿಕರಿಗೆ ಗುತ್ತಿಗೆದಾರರೇ ವೇತನ ಪಾವತಿ ಮಾಡಬೇಕು ಎಂದು ತಿಳಿಸಿದರು.

ಪ್ರಮುಖರ ಗೈರುಹಾಜರಿ: ಉಪ ಮುಖ್ಯಮಂತ್ರಿ ಡಾ.ಪರಮೇಶ್ವರ್‌ ಅವರು ಕರೆದಿದ್ದ ಸಭೆಗೆ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಎಂ.ಕೃಷ್ಣಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್‌ ಹಾಗೂ ಡಿ.ವಿ.ಸದಾನಂದಗೌಡ ಅವರು ಗೈರುಹಾಜರಾಗಿದ್ದರು. 

ಅಧಿಕಾರಿಗಳ ವಿರುದ್ಧ ಶಾಸಕರ ಆಕ್ರೋಶ
ನಗರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯದ ಕಾರಣ ಕ್ಷೇತ್ರದ ಜನ ನಮಗೆ ಬೈಯ್ಯುತ್ತಿದ್ದಾರೆ. ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ನಗರದ ಶಾಸಕರು ಪಕ್ಷ ಭೇದ ಮರೆತು ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಡಿಸಿಎಂ ಕರೆದಿದ್ದ ಸಭೆಯಲ್ಲಿ ಶಾಸಕರು ಆಕ್ರೋಶ ಹೊರ ಹಾಕಿದ್ದು, ಮಳೆ ಆರಂಭವಾದರೆ ನಗರದ ರಸ್ತೆಗಳು ತಿಪ್ಪೆಗುಂಡಿಯಂತೆ ಆಗುತ್ತವೆ. ರಸ್ತೆಗಳು ಹಾಳಾಗಿದ್ದು, ಗುಂಡಿ ಮುಚ್ಚಲು ಆಗುವುದಿಲ್ಲವೇ ಎಂದು ಜನರು ಪ್ರಶ್ನಿಸುತ್ತಾರೆ. ಬಿಡುಗಡೆಯಾದ ಹಣ ಶಾಸಕರ ಮನೆ ಸೇರಿರಬಹುದು ಎಂದು ಮಾತಾಡಿಕೊಳ್ಳುತ್ತಾರೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ನಾವು ಆರೋಪ ಎದುರಿಸುತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇದೇ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಪರಮೇಶ್ವರ್‌ ಕೂಡ ಪೌರ ಕಾರ್ಮಿಕರಿಗೆ ವೇತನ ನೀಡದ ಕಾರಣಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಪೌರ ಕಾರ್ಮಿಕರನ್ನು ಸರಿಯಾಗಿ ನಡೆಸಿಕೊಳ್ಳಿ. ಅಗತ್ಯಕ್ಕಿಂತ ಹೆಚ್ಚು ಪೌರ ಕಾರ್ಮಿಕರನ್ನು ನೇಮಿಸಿಕೊಂಡಿದ್ದೇಕೆ? ಈಗ ಅವರನ್ನು ಕೈ ಬಿಡುತ್ತಿರುವುದೇಕೆ? ಇಂತಹ ಘಟನೆಗಳಿಗೆ ಅವಕಾಶ ನೀಡಬೇಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರುಎಂದು ತಿಳಿದು ಬಂದಿದೆ. 

ನಗರದ ಸಮಗ್ರ ಯೋಜನಾ ವರದಿ ಸಿದ್ಧಪಡಿಸುವ ಕುರಿತು ತೀರ್ಮಾನಿಸಿಲ್ಲ. 24 ಗಂಟೆ ಮೆಟ್ರೋ ಸೇವೆ ಬಗ್ಗೆಯೂ ಚರ್ಚೆಯಾಗಿಲ್ಲ. ಬೆಂಗಳೂರು ಗ್ರಾಮಾಂತರ ಎಸ್ಪಿ ಭೀಮಾಶಂಕರ್‌ ಗುಳೇದ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಪಿಯಿಂದ ವರದಿ ಕೇಳಿದ್ದೇನೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು.
  ಡಾ.ಜಿ.ಪರಮೇಶ್ವರ್‌, ಉಪ ಮುಖ್ಯಮಂತ್ರಿ

ಡ್ರಗ್ಸ್‌ ಮಾರಾಟ ಮಾಡುವವರಿಗೆ 10 ವರ್ಷ, ಡ್ರಗ್ಸ್‌ ವ್ಯಸನಿಗಳಿಗೆ 2 ವರ್ಷ ಶಿಕ್ಷೆ ವಿಧಿಸುವುದು, ಈ ಕೃತ್ಯಗಳಲ್ಲಿ
ಭಾಗಿಯಾಗುವ ವಿದೇಶಿ ಪ್ರಜೆಗಳು ಮತ್ತೆ ಭಾರತಕ್ಕೆ ಬರದಂತೆ ಕಾನೂನು ರೂಪಿಸಲು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ನಗರದ ತುಂಬ ಸಿಸಿ ಟಿವಿ ಅಳವಡಿಸಲು ಸಲಹೆ ನೀಡಿದ್ದೇವೆ.
 ಎನ್‌.ಎ.ಹ್ಯಾರಿಸ್‌, ಶಾಂತಿನಗರ  ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next