Advertisement

ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಧ್ವಜ : ಹಳದಿ –ಕೆಂಪಿಗೂ ರಾಜಕೀಯ ರಂಗು

05:25 AM Jul 19, 2017 | Karthik A |

– ಪ್ರತ್ಯೇಕ ಧ್ವಜಕ್ಕೆ ಮಾನ್ಯತೆಗಾಗಿ ಪರಾಮರ್ಶಿಸಲು ಸಮಿತಿ
– ವಿವಾದಕ್ಕೆ ಕಾರಣವಾದ ಸರಕಾರದ ನಿರ್ಧಾರ

Advertisement

ಕಲ್ಪನೆ : 1960ರ ದಶಕದಲ್ಲಿ ಕನ್ನಡದ ಕಟ್ಟಾಳು ಮ.ರಾಮಮೂರ್ತಿ

ಹಳದಿ- ಕೆಂಪು: ಕರುನಾಡ ಸಂಸ್ಕೃತಿಯ ಅರಶಿಣ ಕುಂಕುಮದ ಸಾಂಕೇತಿಕ ರೂಪ


ಕನ್ನಡಿಗರಿಗೆ ರಾಷ್ಟ್ರಧ್ವಜ ಮೇಲೆ ಅಪಾರ ಗೌರವವಿರುವಂತೆಯೇ, ನಾಡಧ್ವಜದ ಮೇಲೂ ಪ್ರೀತಿ ಇದೆ. ಕರ್ನಾಟಕದ ಹೆಮ್ಮೆಯ ಕೆಂಪು ಮತ್ತು ಹಳದಿ ಬಣ್ಣದ ಬಾವುಟಕ್ಕೆ ರಾಜಕೀಯ ಬಣ್ಣ ಸೇರದಿರಲಿ, ಕನ್ನಡದ ಅಸ್ಮಿತೆಗೆ ಹಾಗೂ ರಾಷ್ಟ್ರೀಯತೆಗೆ ಚ್ಯುತಿಯಾಗದಿರಲಿ.

ಬೆಂಗಳೂರು: ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಧ್ವಜ ರೂಪಿಸಿ, ಅದಕ್ಕೆ ಕಾನೂನು ಮಾನ್ಯತೆ ನೀಡುವ ಸಲುವಾಗಿ ಪರಾಮರ್ಶಿಸಲು ರಾಜ್ಯ ಸರಕಾರ, ಒಂಬತ್ತು ಮಂದಿಯ ಸಮಿತಿ ರಚಿಸಿದ್ದು, ಇದು ರಾಷ್ಟ್ರವ್ಯಾಪಿ ವಿವಾದಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್‌ ಸರಕಾರ, ಪ್ರತ್ಯೇಕ ಧ್ವಜ ಇದ್ದರೆ ತಪ್ಪೇನು ಎಂಬ ಪ್ರಶ್ನೆ ಹಾಕಿದ್ದರೆ, ಭಾರತದಲ್ಲಿ ಒಂದು ದೇಶ ಒಂದೇ ಧ್ವಜ ನೀತಿ ಇದ್ದು ಕರ್ನಾಟಕಕ್ಕೆ ಮತ್ತೇಕೆ ಇನ್ನೊಂದು ಧ್ವಜ ಎಂದು ವಿಪಕ್ಷ ಬಿಜೆಪಿ ಪ್ರಶ್ನಿಸಿದೆ. ಸಂವಿಧಾನದಲ್ಲಿ ಪ್ರತ್ಯೇಕ ಧ್ವಜ ಮಾಡಲು ಅವಕಾಶವಿಲ್ಲ, ಇದಕ್ಕೆ ಸಮಿತಿ ರಚಿಸುವ ಅಗತ್ಯ ಏನಿತ್ತು ಎಂದು ಜೆಡಿಎಸ್‌ ಪ್ರಶ್ನಿಸಿದೆ. ರಾಜಕೀಯಕ್ಕೂ ಮಿಗಿಲಾಗಿ ಸಾಮಾಜಿಕ ಜಾಲತಾಣಗಳಲ್ಲೂ ಪ್ರತ್ಯೇಕ ಧ್ವಜ ವಿಚಾರ ಅಗ್ರಸ್ಥಾನ ಪಡೆದಿದ್ದು, ದಿನವಿಡೀ ಪರ – ವಿರೋಧದ ಚರ್ಚೆಗಳು ನಡೆದಿವೆ. ಅಲ್ಲದೆ ಹಿಂದಿ ಹೇರಿಕೆ ವಿಚಾರದಲ್ಲಿ ಇಡೀ ದೇಶದ ಗಮನ ಸೆಳೆದಿದ್ದ ಜಾಲತಾಣಿಗರು ಈ ವಿಚಾರದಲ್ಲೂ ‘ಕನ್ನಡ ಧ್ವಜ’ದ ಬೆನ್ನಿಗೆ ನಿಂತಿದ್ದಾರೆ. ಜೂ.6ರಂದೇ ರಾಜ್ಯ ಸರಕಾರ ಸಮಿತಿ ರಚಿಸಿ ಆದೇಶ ಹೊರಡಿಸಿದೆಯಾದರೂ ಈಗ ಬಯಲಿಗೆ ಬಂದಿದೆ.

Advertisement

ಬಿಜೆಪಿ ವಿರೋಧ: ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು, ಪ್ರತ್ಯೇಕ ಧ್ವಜಕ್ಕೆ ಸಂವಿಧಾನದಲ್ಲಿ ಮಾನ್ಯತೆ ಇಲ್ಲ. ಒಂದು ದೇಶ ಒಂದು ಧ್ವಜ ಇರಬೇಕು. ಅದರಿಂದ ಪ್ರತ್ಯೇಕ ಧ್ವಜದ ಅವಶ್ಯಕತೆ ಇಲ್ಲ. ಪ್ರತ್ಯೇಕ ಧ್ವಜ ಕೇಳುವುದು ತಪ್ಪು, ನಾವು ಇದನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ. ಕಾಶ್ಮೀರದಲ್ಲೂ ಪ್ರತ್ಯೇಕ ಧ್ವಜ ಇರಬಾರದು ಎಂಬುದು ಕರಂದ್ಲಾಜೆ ಅವರ ಅಭಿಪ್ರಾಯ. ಮಾಜಿ ಸಚಿವ ಗೋವಿಂದ ಕಾರಜೋಳ ಸಹ ಇದಕ್ಕೆ ಧ್ವನಿಗೂಡಿಸಿದ್ದಾರೆ.

ಒಂಬತ್ತು ತಜ್ಞ ಸಮಿತಿ: ಹಿರಿಯ ಸಾಹಿತಿ, ಪತ್ರಕರ್ತ ಡಾ| ಪಾಟೀಲ ಪುಟ್ಟಪ್ಪ ಹಾಗೂ ಸಮಾಜ ಸೇವಕ ಭೀಮಪ್ಪ ಗುಂಡಪ್ಪ ಗಡಾದ ಅವರು ಕನ್ನಡ ನಾಡಿಗೆ ಪ್ರತ್ಯೇಕ ಧ್ವಜದ ವಿನ್ಯಾಸವನ್ನು ಸಿದ್ಧಪಡಿಸಿ, ಅದಕ್ಕೆ ಕಾನೂನಿನ ಸ್ವರೂಪ ನೀಡುವಂತೆ ಸರಕಾರಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜವನ್ನು ರೂಪಿಸಿ, ಅದಕ್ಕೆ ಕಾನೂನು ಚೌಕಟ್ಟು ನೀಡಲು ಸರಕಾರದ ಹಂತದಲ್ಲಿ ಸಮಿತಿ ರಚಿಸಲು ಸರಕಾರ ನಿರ್ಧರಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರಕಾರದ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ ಆದೇಶ ಹೊರಡಿಸಿದೆ.

ಸಿಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಗೃಹ ಇಲಾಖೆ, ಕಾನೂನು ಇಲಾಖೆ, ಸಂಸದೀಯ ವ್ಯವಹಾರಗಳ ಇಲಾಖೆಗಳ ಸರಕಾರದ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರು ಈ ಸಮಿತಿಯ ಸದಸ್ಯರಾಗಿರುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶರು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಕನ್ನಡ ನಾಡಿಗೆ ಪ್ರತ್ಯೇಕ ಧ್ವಜದ ವಿನ್ಯಾಸ ಸಿದ್ದಪಡಿಸಿ, ಅದಕ್ಕೆ ಕಾನೂನಿನ ಸ್ವರೂಪ ನೀಡುವ ಕುರಿತು ವರದಿ ಸಲ್ಲಿಸುವಂತೆ ಸರಕಾರ ಸೂಚನೆ ನೀಡಿದೆ.

ಕಾನೂನು ಅಡ್ಡಿ ಇಲ್ಲ
ರಾಜ್ಯಗಳು ತಮ್ಮದೇ ಆದ ಧ್ವಜವನ್ನು ರೂಪಿಸಿಕೊಳ್ಳಲು ಕಾನೂನಿನಲ್ಲಿ ಯಾವುದೇ ಅಡ್ಡಿ ಇಲ್ಲ. ಇದನ್ನು ಸುಪ್ರೀಂಕೋರ್ಟ್‌ ಎಸ್‌.ಆರ್‌.ಬೊಮ್ಮಾಯಿ ಪ್ರಕರಣದಲ್ಲಿ ಉಲ್ಲೇಖೀಸಿದೆ. ಸಂವಿಧಾನ ಒಕ್ಕೂಟ ವ್ಯವಸ್ಥೆಯೇ ಮೂಲ ತತ್ವಗಳಾಗಿದ್ದು, ರಾಜ್ಯಗಳು ಅದರ ಗಾಲಿಗಳಾಗಿರುತ್ತವೆ. ಹೀಗಾಗಿ ರಾಜ್ಯಗಳು ತಮ್ಮದೇ ಆದ ಧ್ವಜ ರೂಪಿಸಿಕೊಳ್ಳಲು ಸಂವಿಧಾನದಲ್ಲಿ ಯಾವುದೇ ನಿರ್ಬಂಧ ಹಾಕಿಲ್ಲ. ಆದರೆ, ನಾಡ ಧ್ವಜ ಹಾರಿಸುವ ಭರದಲ್ಲಿ ಯಾವುದೇ ಕಾರಣಕ್ಕೂ ರಾಷ್ಟ್ರಧ್ವಜಕ್ಕೆ ಅಗೌರವ ತೋರುವಂತಿಲ್ಲ. ನಾಡಧ್ವಜವನ್ನು ರಾಷ್ಟ್ರಧ್ವಜಕ್ಕಿಂತ ಕೆಳಗೆ ಹಾರಿಸಬೇಕು. ಈ ರೀತಿ ನಡಾವಳಿಗಳನ್ನು ರೂಪಿಸಿಕೊಂಡರೆ ಯಾವುದೇ ಧ್ವಜಗಳು ಅನಧಿಕೃತ ಅಲ್ಲ. ಆದರೂ, ಇನ್ನೂ ಕೆಲವು ಕಾನೂನಿನ ತೊಡಕುಗಳಿದ್ದು, ಈ ಬಗ್ಗೆ ಕೇಂದ್ರ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.

ಅವಕಾಶ ಇಲ್ಲ
ಭಾರತದಲ್ಲಿ ರಾಷ್ಟ್ರಧ್ವಜ ಬಿಟ್ಟರೆ ಇನ್ನೊಂದು ಬಾವುಟಕ್ಕೆ ಅವಕಾಶ ಸಾಧ್ಯವೇ ಇಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟವಾಗಿ ಹೇಳಿದೆ. ಬಾವುಟಕ್ಕೆ ಸಾಂವಿಧಾನಿಕ ಸ್ಥಾನಮಾನ ಇದೆಯೇ ಎಂಬ ಚರ್ಚೆ ತಾರಕಕ್ಕೇರಿರುವಾಗ ಈ ಸ್ಪಷ್ಟನೆ ಗಮನಾರ್ಹವಾಗಿದೆ. ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರ ಅವರದ್ದೇ ಆದ ಧ್ವಜ ಹಾರಿಸಲು ಅವಕಾಶವಿದೆ. ಉಳಿದಂತೆ ಬೇರೆ ಯಾವುದೇ ರಾಜ್ಯಗಳು ತಮ್ಮದೇ ಆದ ಧ್ವಜ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೊಂದು ವೇಳೆ ಜನರೇ ಪ್ರತ್ಯೇಕ ಧ್ವಜ ರೂಪಿಸಿಕೊಂಡರೆ ನಿರ್ಬಂಧಿಸಲಾಗದು ಎಂದು ಗೃಹ ಇಲಾಖೆಯ ವಕ್ತಾರರು ಹೇಳಿದ್ದಾರೆ.

ಸಿದ್ದರಾಮಯ್ಯ ಸಮರ್ಥನೆ
ರಾಜ್ಯಕ್ಕೆ ಪ್ರತ್ಯೇಕ ಧ್ವಜ ಇರಲಿ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮರ್ಥನೆ. ಕನ್ನಡ ನಾಡಿಗೆ ಪ್ರತ್ಯೇಕ ಧ್ವಜ ವಿನ್ಯಾಸಗೊಳಿಸಿ ಅದಕ್ಕೆ ಕಾನೂನಿನ ಸ್ವರೂಪ ನೀಡುವಂತೆ ಡಾ| ಪಾಟೀಲ ಪುಟ್ಟಪ್ಪ ಅವರು ಸಹಿತ ಕೆಲವು ಕನ್ನಡ ಹೋರಾಟಗಾರರು ಸಲ್ಲಿಸಿರುವ ಮನವಿಗಳ ಪರಿಶೀಲನೆಗೆ ಈ ಸಮಿತಿ ರಚಿಸಲಾಗಿದೆ ಎಂದಿದ್ದಾರೆ. ಅಲ್ಲದೆ ಈ ಸಮಿತಿ ನೀಡುವ ಶಿಫಾರಸು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಅಧಿಕೃತವಾಗಿ ನಾಡಗೀತೆ ಇದೆ. ಅದೇ ರೀತಿ ನಾಡಧ್ವಜ ಇದ್ದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ಆದರೆ ಈ ವಿಚಾರಕ್ಕೆ ವಿವಾದದ ಸ್ವರೂಪ ನೀಡುವ ಪ್ರಯತ್ನ ನಡೆದಿದೆ. ಬಿಜೆಪಿ ನಾಯಕರು ಇಂತಹ ವಿಷಯದಲ್ಲಿ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ತಜ್ಞರು ಏನಂತಾರೆ?
ರಾಜ್ಯಕ್ಕೆ ಪ್ರತ್ಯೇಕ ಧ್ವಜ ಮಾಡಿಕೊಳ್ಳಲು ಸಂವಿಧಾನದಲ್ಲಿ ಅವಕಾಶವಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕಿದೆ. ಆದರೆ ಸಂವಿಧಾನದ ಸಾಮಾನ್ಯ ತತ್ವಗಳಲ್ಲಿ ಒಂದು ದೇಶ ಒಂದು ಧ್ವಜ ಎಂಬ ನಿಯಮವಿದೆ. ಇಷ್ಟಕ್ಕೂ ಎಪ್ಪತ್ತು ವರ್ಷಗಳಲ್ಲಿ ಇಲ್ಲದ ನಾಡಧ್ವಜ ವಿಚಾರ ಈಗ ಏಕೆ ಬಂದಿದೆ. ಈಗಾಗಲೇ ರಾಜ್ಯಗಳ ನಡುವೆ ಗಡಿ ವಿವಾದ, ನೀರು ಹಂಚಿಕೆ ತಕರಾರುಗಳಿವೆ. ಹೀಗಿದ್ದಾಗ ಹೊಸ ಸಮಸ್ಯೆ ಏಕೆ?
– ಬಿ.ವಿ ಆಚಾರ್ಯ, ಮಾಜಿ ಎಜಿ

ವೈಯಕ್ತಿಕವಾಗಿ ಹೇಳುವುದಾದರೆ ಪ್ರತ್ಯೇಕ ಧ್ವಜ ರೂಪಿಸಿಕೊಳ್ಳುವುದು ಅನಧಿಕೃತ ಎಂದು ಹೇಳಲು ಆಗಲ್ಲ. ಆದರೆ ಇದು ರಾಷ್ಟ್ರಧ್ವಜಕ್ಕೆ ಅಗೌರವ ತರಬಾರದು ಅಷ್ಟೇ.
– ಕೆ.ಎನ್‌. ಭಟ್‌, ಮಾಜಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌

Advertisement

Udayavani is now on Telegram. Click here to join our channel and stay updated with the latest news.

Next