Advertisement

ಬಂದಿದೆ ಪ್ರತ್ಯೇಕ ಸಿಪಿಯು ರಹಿತ ಸೌರಶಕ್ತಿ ಕಂಪ್ಯೂಟರ್‌!

12:00 PM Mar 12, 2018 | Team Udayavani |

ಹುಬ್ಬಳ್ಳಿ: ಸಂಪೂರ್ಣವಾಗಿ ಸೌರಶಕ್ತಿಯಾಧಾರಿತ ಕಂಪ್ಯೂಟರ್‌ನ್ನು ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ತಂತ್ರಜ್ಞಾನ ಅನ್ವೇಷಣೆ ಮತ್ತು ಉದ್ಯಮಶೀಲತಾ ಕೇಂದ್ರದ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ್ದು, ಇದಕ್ಕೆ ಪ್ರತ್ಯೇಕ ಸಿಪಿಯು ಅಗತ್ಯ ಇಲ್ಲ. 25 ಸಾವಿರ ರೂ.ಗೆ ಇದು ಲಭ್ಯವಾಗಲಿದೆ.

Advertisement

ತಂತ್ರಜ್ಞಾನ ಅನ್ವೇಷಣೆ ಮತ್ತು ಉದ್ಯಮಶೀಲತಾ ಕೇಂದ್ರ(ಸಿಟಿಐಇ)ದ ಉಪನ್ಯಾಸಕ ರಾಕೇಶ ತಾಪಸ್ಕರ್‌, ವಿದ್ಯಾರ್ಥಿಗಳಾದ ಹುಬ್ಬಳ್ಳಿಯ ಗೋಪನಕೊಪ್ಪದ ಪ್ರವೀಣ ಪಟ್ಟಣಶೆಟ್ಟಿ ಹಾಗೂ ಲಿಂಗರಾಜ ನಗರದ ಸಿದ್ದಲಿಂಗೇಶ ಸೊಬಗಿನ ಅವರು ಸೌರಶಕ್ತಿಯಾಧಾರಿತ ಕಂಪ್ಯೂಟರ್‌ ಅಭಿವೃದ್ಧಿ ಪಡಿಸಿದ್ದು, ವಿಶ್ವದಲ್ಲೇ ಇದು ಮೊದಲ ಸಾಧನೆ ಎನ್ನಲಾಗಿದೆ. ತಮ್ಮ ಸಲಕರಣೆಗಳ ಬೌದ್ಧಿಕ ಆಸ್ತಿ ಹಕ್ಕು(ಪೇಟೆಂಟ್‌)ನೋಂದಣಿಗೆ ಮುಂದಾಗಿದ್ದಾರೆ.

ವೋಲ್ಟ್ 10 ಬ್ರ್ಯಾಂಡ್‌ನ‌ಡಿ ಇದನ್ನು ಅಭಿವೃದ್ಧಿ ಪಡಿಸಲಾಗಿದ್ದು, ಕಳೆದೊಂದು ವರ್ಷದಿಂದ ಕಂಪ್ಯೂಟರ್‌ ಬಳಕೆ ಪ್ರಯೋಗವನ್ನು ಕೈಗೊಳ್ಳಲಾಗಿದೆ. ಮಹಾರಾಷ್ಟ್ರದ ಸೊಲ್ಲಾಪುರದ ಎಸ್‌ಎಸ್‌ಪಿ ಎಂಬ ಸ್ವಯಂ ಸೇವಾ ಸಂಸ್ಥೆ ಸೋಲಾರ್‌ ಕಂಪ್ಯೂಟರ್‌ಗೆ ಬೇಡಿಕೆ ಸಲ್ಲಿಸಿದೆ.

ಗ್ರಾಮೀಣ ಚಿಂತನೆ: ಗ್ರಾಮೀಣ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ವಿದ್ಯುತ್‌ ಕೊರತೆ ಅಧಿಕವಾಗಿದ್ದು, ಅವರಿಗೆ ಪ್ರಯೋಜನಕಾರಿ ಆಗಬೇಕು. ಸೌರಶಕ್ತಿ ಬಳಕೆ ಸಮರ್ಪಕವಾಗಿ ಆಗಬೇಕೆಂಬ ಪರಿಕಲ್ಪನೆ ಮೂಡಿದ್ದರಿಂದ ಸೌರಶಕ್ತಿಯಾಧಾರಿತ ಕಂಪ್ಯೂಟರ್‌, ಸರ್ವೆಲೆನ್ಸ್‌ ಕ್ಯಾಮೆರಾ, ಐಒಟಿ ಸಲಕರಣೆಗಳನ್ನು ಅಭಿವೃದ್ಧಿ ಪಡಿಸುವಂತೆ ಮಾಡಿದೆ.

ಸೌರಶಕ್ತಿಯಾಧಾರಿತ ಕಂಪ್ಯೂಟರ್‌ಗೆ ಪ್ರತ್ಯೇಕ ಸಿಪಿಯು ಅಗತ್ಯವಿಲ್ಲ. ಮಾನಿಟರ್‌ ಹಿಂದುಗಡೆ ಸಣ್ಣ ಗಾತ್ರದಲ್ಲಿ ಸಿಪಿಯು ಜೋಡಿಸಲಾಗಿದೆ. ನೋಡುವುದಕ್ಕೆ ಲ್ಯಾಪ್‌ಟಾಪ್‌ನಂತೆ ಗೋಚರಿಸುವ ಕಂಪ್ಯೂಟರ್‌ ಅಂದಾಜು ಎರಡು ಕೆಜಿ ಮಾತ್ರ ತೂಕವಿದ್ದು, ಸುಲಭವಾಗಿ ಎಲ್ಲಿಗಾದರೂ ತೆಗೆದುಕೊಂಡು ಹೋಗಬಹುದಾಗಿದೆ.

Advertisement

ಎರಡು ತಾಸು ಬ್ಯಾಟರಿ ಬ್ಯಾಕ್‌ಅಪ್‌: ಕಂಪ್ಯೂಟರ್‌ ಮಾನಿಟರ್‌ಗೆ ಸಿಪಿಯು ಅಳವಡಿಕೆ ಜತೆಗೆ ಸೌರಶಕ್ತಿ ಸಣ್ಣ ಪ್ಯಾನಲ್‌ವೊಂದು ನೀಡಲಾಗುತ್ತದೆ. ಸೌರಶಕ್ತಿ ಬಳಕೆ ಮಾಡಿಕೊಂಡು ಕಂಪ್ಯೂಟರ್‌ನ್ನು ಬಳಸಬಹುದಾಗಿದೆ.
ಕಂಪ್ಯೂಟರ್‌ಗೆ ಸುಮಾರು 2 ತಾಸುಗಳ ಬ್ಯಾಟರಿ ಬ್ಯಾಕ್‌ಅಪ್‌ ನೀಡಲಾಗಿದೆ. ಕಂಪ್ಯೂಟರ್‌ ನಿರ್ವಹಣೆ
ಅತ್ಯಂತ ಸುಲಭವಾಗಿದ್ದು, ಒಂದು ವರ್ಷ ವಾರಂಟಿ ನೀಡಲಾಗುತ್ತಿದೆ. ಅದರೊಳಗೆ ಏನಾದರೂ ಸಮಸ್ಯೆ
ಕಂಡುಬಂದಲ್ಲಿ ಹೊಸ ಕಂಪ್ಯೂಟರ್‌ ನೀಡಲಾಗುತ್ತದೆ. ಸೌರಶಕ್ತಿಯಾಧಾರಿತ ಕಂಪ್ಯೂಟರ್‌ ಬ್ಯಾಟರಿಯನ್ನು
ಎರಡು ವರ್ಷಕ್ಕೊಮ್ಮೆ ಬದಲಾಯಿಸಬೇಕಾಗಿದ್ದು, ಸೌರಶಕ್ತಿ ಪ್ಯಾನಲ್‌ 20 ವರ್ಷದವರೆಗೂ ಏನೂ ಆಗುವುದಿಲ್ಲವಂತೆ. ಈ ಕಂಪ್ಯೂಟರ್‌ಗೆ ವೈಫೈ ಹಾಗೂ ಬ್ಲೂಟೂಥ್‌ ಸೌಲಭ್ಯ ನೀಡಲಾಗಿದ್ದು, ವೈರ್‌ಲೆಸ್‌ ಮೌಸ್‌ ಅಳವಡಿಸಲಾಗಿದೆ.

ಒಂದೂವರೆ ವರ್ಷದಲ್ಲಿ ಅಭಿವೃದ್ಧಿ: ಸಿಟಿಐಇ ಪ್ರಾಧ್ಯಾಪಕ ರಾಕೇಶ ತಾಪಸ್ಕರ್‌ ಅವರಿಗೆ ಸೌರಶಕ್ತಿ ಬಳಕೆ ಮಾಡಿಕೊಂಡು ಕಂಪ್ಯೂಟರ್‌ ಇನ್ನಿತರ ಸಲಕರಣೆ ಅಭಿವೃದ್ಧಿ ಪಡಿಸುವ ಚಿಂತನೆ ಇತ್ತಾದರೂ, ಇದನ್ನು ಕಾರ್ಯಗತಗೊಳಿಸುವ ವಿದ್ಯಾರ್ಥಿಗಳ ಅವಶ್ಯಕತೆ ಇತ್ತು. ಪ್ರಾಧ್ಯಾಪಕರ ಚಿಂತನೆ ಕಾರ್ಯಗತಕ್ಕೆ ವಿದ್ಯಾರ್ಥಿಗಳಾದ ಪ್ರವೀಣ ಪಟ್ಟಣಶೆಟ್ಟಿ ಹಾಗೂ ಸಿದ್ದಲಿಂಗೇಶ ಸೊಬಿನ ಅವರು ಮುಂದಾಗಿದ್ದರು. 2016ರಲ್ಲಿ ಸೌರಶಕ್ತಿ ಆಧಾರಿತ ಕಂಪ್ಯೂಟರ್‌ ತಯಾರಿಕೆಗೆ ಮುಂದಾದಾಗ ಪ್ರತ್ಯೇಕ ಸಿಪಿಯು ಇಲ್ಲದ ಕಂಪ್ಯೂಟರ್‌ ತಯಾರಿಕೆ ಸವಾಲಾಗಿತ್ತು. ಸಿಪಿಯುದಲ್ಲಿನ ತಂತ್ರಜ್ಞಾನವನ್ನೇ ಬಳಸಿಕೊಂಡು ಅದನ್ನು ಸಣ್ಣ ಪ್ರಮಾಣಕ್ಕಿಳಿಸಿ ಮಾನಿಟರ್‌ ಹಿಂಭಾಗದಲ್ಲಿ ಅಳವಡಿಕೆಗೆ ಸಾಕಷ್ಟು ಶ್ರಮ ವಹಿಸಲಾಗಿತ್ತು.

ವಿವಿಧ ಕೈಗಾರಿಕಾ ವಲಯಗಳಿಗೆ ತೆರಳಿ ಕೆಲವೊಂದು ಪ್ರಯೋಗ ಕೈಗೊಳ್ಳಲಾಗಿತ್ತು. ಅದೇ ರೀತಿ ಕೆಎಲ್‌ಇ
ತಾಂತ್ರಿಕ ವಿವಿ ರೂಪಿಸಿರುವ ಮೇಕರ್ ಲ್ಯಾಬ್‌ನಲ್ಲಿಯೂ ಹಲವು ಪ್ರಯೋಗ ಕೈಗೊಳ್ಳಲಾಗಿತ್ತು. ಸುಮಾರು 50
ಪ್ರಯೋಗಗಳು ಒಂದಿಲ್ಲ ಒಂದು ರೀತಿಯಲ್ಲಿ ವಿಫ‌ಲ ಕಂಡಿದ್ದವು. ಸುಧಾರಣೆಯ ಹಾದಿಯಲ್ಲಿ ಕೊನೆಗೂ
ಸೌರಶಕ್ತಿಯಾಧಾರಿತ ಕಂಪ್ಯೂಟರ್‌ ಯಶಸ್ವಿಯಾಗಿತ್ತು.

ಸೌರಶಕ್ತಿಯಾಧಾರಿತ ಕಂಪ್ಯೂಟರ್‌ ತಯಾರಿಕೆಗೆ ನಾವು ಸಿದ್ಧರಿದ್ದೇವೆ. ಉತ್ಪಾದನೆ ಉದ್ಯಮಿಗಳು ಮುಂದೆ ಬರಬೇಕಾಗಿದೆ ಎಂಬುದು ವಿದ್ಯಾರ್ಥಿಗಳಾದ ಪ್ರವೀಣ ಪಟ್ಟಣಶೆಟ್ಟಿ ಹಾಗೂ ಸಿದ್ದಲಿಂಗೇಶ ಸೊಬಗಿನ ಅವರ
ಅನಿಸಿಕೆ. ವಿಶದಲ್ವೇ ಮೊದಲು ಸೌರಶಕ್ತಿಯಾಧಾರಿತ ಕಂಪ್ಯೂಟರ್‌ ತಯಾರಿ ಚಿಂತನೆ ಮೂಡಿದಾಗ ಅದರ ಸಾಕಾರ ಸವಾಲು ನಮ್ಮ ಮುಂದಿತ್ತು. ಇಬ್ಬರು ವಿದ್ಯಾರ್ಥಿಗಳು ಸಮಯವನ್ನು ಲೆಕ್ಕಿಸದೆ ಇದನ್ನು ರೂಪಿಸಲು
ಇಳಿಸಿದ್ದರು. ಹಲವು ಸಮಸ್ಯೆ, ವೈಫ‌ಲ್ಯಗಳ ನಡುವೆಯೂ ಯಶಸ್ಸಿನ ನಗೆ ಬೀರಿದ್ದೇವೆ.  ಕುಲಪತಿ ಡಾ| ಅಶೋಕ ಶೆಟ್ಟರ ಅವರ ಮಾರ್ಗದರ್ಶನ ಹಾಗೂ ಸಹಕಾರ, ಪ್ರೊ| ನಿತಿನ್‌ ಕುಲಕರ್ಣಿಯವರ ಪ್ರೋತ್ಸಾಹ ನಮ್ಮ ಈ ಸಾಧನೆಗೆ ಬೆನ್ನು ತಟ್ಟುವ ಕಾರ್ಯ ಮಾಡಿದೆ. ಮುಂದೆ ಇನ್ನಷ್ಟು ಸುಧಾರಣೆ ಯತ್ನ ಮುಂದುವರಿಸಿದ್ದೇವೆ. ಸಂಪೂರ್ಣ
ಸೌರಶಕ್ತಿಯಾಧಾರಿತ ಕಂಪ್ಯೂಟರ್‌ ತಯಾರಿ ವಿಶ್ವದಲ್ಲೇ ಮೊದಲೆನ್ನುವ ಹೆಮ್ಮೆ ನಮ್ಮದಾಗಿದೆ.
 ರಾಕೇಶ ತಾಪಸ್ಕರ್‌, ಉಪನ್ಯಾಸಕ ಸಿಟಿಐಇ

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next