Advertisement

ಯುವಜನರನ್ನು ಮತದಾನದತ್ತ ಸೆಳೆಯಲು ಸೆಲ್ಫೀ ಸ್ಪರ್ಧೆ

06:00 AM Apr 27, 2018 | Team Udayavani |

ಕುಂದಾಪುರ: ಯುವಜನರ ಸೆಲ್ಫೀ ಕ್ರೇಜನ್ನೇ ಬಳಸಿ ಮತದಾನದತ್ತ ಆಕರ್ಷಿಸಲು ತಾಲೂಕು ಆಡಳಿತ ಚುನಾವಣ ಆಯೋಗದ ಅನುಮತಿ ಕೇಳಿದೆ. ಒಂದು ವೇಳೆ ಒಪ್ಪಿಗೆ ಸಿಕ್ಕರೆ ಮತಗಟ್ಟೆಯಲ್ಲೂ ಸೆಲ್ಫೀ ಸ್ಪರ್ಧೆ ಖಚಿತ. ಜತೆಗೆ ಮತಗಟ್ಟೆಗಳೆಂದರೆ ಕಣ್ಣೆದುರು ಬರುವ ಪಕ್ಷಗಳ ಅಭ್ಯರ್ಥಿಗಳ ಏಜೆಂಟರು, ಪೊಲೀಸ್‌ ಸಿಬಂದಿಯ ಚಿತ್ರಣದ ಬದಲು ಅದೊಂದು ಚಟು ವಟಿಕೆಯ ಕೇಂದ್ರವನ್ನಾಗಿಸಲು ಯೋಜಿಸಲಾಗಿದೆ. ವಿಶೇಷವೆಂದರೆ ಬಿಸಿಲಿನಲ್ಲಿ ಸರದಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವ ಪದ್ಧತಿ ಬದಲಿಗೆ ಟೋಕನ್‌ ವ್ಯವಸ್ಥೆ ಪರಿಚಯಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

Advertisement

ಮತದಾನ ಹೆಚ್ಚಳಕ್ಕೆ ಸ್ಪರ್ಧೆ
ಮತದಾನದ ದಿನ ರಜೆ ಎಂದು ಸಿನಿಮಾ, ಕ್ರಿಕೆಟ್‌ನಲ್ಲಿ ಸಮಯ ಕಳೆದು ಹೋಗಬಾರದು. ಯುವಜನರು ಮತಗಟ್ಟೆಗೆ ಆಗಮಿಸಿ ಹಕ್ಕಿನ ಮತ ಚಲಾಯಿಸಬೇಕು ಎಂಬ ನಿಟ್ಟಿನಲ್ಲಿ ಸೆಲ್ಫೀ ಸ್ಪರ್ಧೆ ಆಯೋಜಿಸಲಾಗುತ್ತಿದೆ ಎಂಬುದು ತಾಲೂಕು ಆಡಳಿತದ ವಿವರಣೆ. ಆಯೋಗದ ಅನುಮತಿ ಸಿಕ್ಕರೆ ಈ ಸ್ಪರ್ಧೆ ನಡೆಯಲಿದೆ.

30ಕ್ಕಿಂತ ಕಡಿಮೆ ವಯಸ್ಸಿನ ಮತದಾರರು ಹೆಚ್ಚಿರುವ ಕಡೆಗಳಲ್ಲಿ ಈ ಸ್ಪರ್ಧೆ ಇರಲಿದೆ. ಟಚ್‌ ಸ್ಕ್ರೀನ್‌ ವ್ಯವಸ್ಥೆಯೂ ಇರಲಿದೆ. ಸೈಂಟ್‌ ಮೇರಿ ಪ್ರೌಢಶಾಲೆ, ಶ್ರಮಿಕ ವರ್ಗದ ಯುವಜನರಿಗಾಗಿ ಕೋಡಿಯ ಬ್ಯಾರೀಸ್‌ ಪ್ರೌಢಶಾಲೆ, ನಕ್ಸಲ್‌ ಬಾಧಿತ ಪ್ರದೇಶದವರಿಗಾಗಿ ಅಮಾಸೆಬೈಲು ಹಿ.ಪ್ರಾ. ಶಾಲೆ ಆಯ್ಕೆ ಮಾಡಲಾಗಿದೆ. ಮತ ಚಲಾಯಿಸಿದ ಬಳಿಕ ಹತ್ತಿರದಲ್ಲೇ ಇರುವ ಸೆಲ್ಫೀ ಪಾಯಿಂಟ್‌ನಲ್ಲಿ ನಿಂತು ಶಾಯಿ ಗುರುತಿನ ಬೆರಳು ತೋರಿಸಿ ಸೆಲ್ಫೀ ತೆಗೆದು ನಿರ್ದಿಷ್ಟ ಸಂಖ್ಯೆಯ ವಾಟ್ಸ್‌ ಆ್ಯಪ್‌ ಗೆ ಕಳುಹಿಸಬೇಕು. ಮತ ಎಣಿಕೆ ಬಳಿಕ ಆಯ್ಕೆಯಾದ ಐವರಿಗೆ ಟ್ಯಾಬ್‌ ಅಥವಾ ಫೋನ್‌ ಬಹುಮಾನ ಲಭ್ಯವಾಗಲಿದೆ.

ಮಾದರಿ ಮತಗಟ್ಟೆ
ತೆಕ್ಕಟ್ಟೆಯ ಕುವೆಂಪು ಶಾಲೆ, ಕಾರ್ಕಡ ಹಿ.ಪ್ರಾ. ಶಾಲೆ, ಬಾರ್ಕೂರಿನ ಮೆರಿನೋಲ್‌ ಅನುದಾನಿತ ಹಿ.ಪ್ರಾ. ಶಾಲೆಗಳನ್ನು ಮಾದರಿ ಮತಗಟ್ಟೆ ಎಂದು ಗುರುತಿಸಲಾಗಿದೆ. ಮಹಿಳಾ ಮತಗಟ್ಟೆಗಳಾಗಿ ಮೇಲ್‌ಕಟ್ಕರಿ ಶಾಲೆ ಹಾಗೂ ವಡೇರಹೋಬಳಿಯ ಮಧುಸೂದನ ಕುಶೆ ಶಾಲೆ, ಅಂಗವಿಕಲ ಮತಗಟ್ಟೆಯಾಗಿ ಬೇಳೂರಿನ ಶಾಲೆಯನ್ನು ಗುರುತಿಸಲಾಗಿದೆ. 44 ಸೂಕ್ಷ್ಮ ಮತಗಟ್ಟೆಗಳಿದ್ದು, ಅಲ್ಲಿ 22 ಕಡೆ ನೇರಪ್ರಸಾರ, ಕೆಲವೆಡೆ ಮೈಕ್ರೋ ಅಬ್ಸರ್ವರ್‌ ಗಳ ಉಪಸ್ಥಿತಿ, ವಿಡಿಯೋಗ್ರಫಿ ಹಾಗೂ ಕೆಲವೆಡೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗುತ್ತದೆ.

ಹಿರಿಯರ ಮನೆಗೇ ವಾಹನ
ಹಿರಿಯ ನಾಗರಿಕರಿಗೆ ‘ಹಿರಿಯರ ಮತಗಟ್ಟೆ’ ಎಂದು ಪ್ರತ್ಯೇಕ ಮಾಡಲಾಗಿದೆ. ಜತೆಗೆ ಅವರ ಮನೆಯಿಂದ ಸರಕಾರಿ ವಾಹನದಲ್ಲಿ ಕರೆತಂದು ಮರಳಿ ಬಿಡುವ ವ್ಯವಸ್ಥೆ ಮಾಡಲಾಗಿದೆ. ನಡೆಯಲು ಕಷ್ಟ ಆಗುವವರಿಗೆ ಗಾಲಿಕುರ್ಚಿ ಇರಲಿದೆ. ಈಗಾಗಲೇ ಬೂತ್‌ ಮಟ್ಟದ ಅಧಿಕಾರಿಗಳು ಅಂಥವರನ್ನು ಮತಪಟ್ಟಿ ಯಲ್ಲಿ ಗುರುತಿಸಿ ಮಾಹಿತಿ ನೀಡುತ್ತಿದ್ದಾರೆ. ಇಂತಹ ಬೂತ್‌ ನಗರದ ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ ಇರಲಿದೆ.

Advertisement


ಸರದಿ ಸಾಲು ಇಲ್ಲ

ಇದು ಹೊಸ ಪ್ರಯೋಗ. ಮತದಾರರು ಬಂದ ಕೂಡಲೇ ಟೋಕನ್‌ ಪಡೆದು ವಿಶ್ರಾಂತಿ ಕೊಠಡಿಯಲ್ಲಿ ಕುಳಿತುಕೊಳ್ಳಬಹುದು. ಓದಲು ಪತ್ರಿಕೆ, ಕುಡಿಯಲು ನೀರು ಇರುತ್ತದೆ. ಟೋಕನ್‌ ಸಂಖ್ಯೆ ಕೂಗಿದಾಗ ನೇರವಾಗಿ ತೆರಳಿ ಮತದಾನ ಮಾಡಬಹುದು. ಒಂದು ಬಗೆಯಲ್ಲಿ ಬ್ಯಾಂಕ್‌ ನಂತೆಯೇ. ಇದಕ್ಕಾಗಿ ಹೆಚ್ಚುವರಿ ಸಿಬಂದಿಯ ಅಗತ್ಯವಿದ್ದು, ಎನ್‌.ಸಿ.ಸಿ. ಹಾಗೂ ಎನ್‌ಎಸ್‌ಎಸ್‌ನ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುತ್ತದೆ. ಕುಂದಾಪುರ ಕ್ಷೇತ್ರದ 218 ಮತಗಟ್ಟೆಗಳಲ್ಲೂ ಇಂತಹ ವ್ಯವಸ್ಥೆ ಮಾಡಲಾಗುತ್ತಿದ್ದು, ಈಗಾಗಲೇ 170 ಕಡೆ ವಿಶ್ರಾಂತಿ ಕೊಠಡಿ ಗುರುತಿಸಲಾಗಿದೆ. ಇತರೆಡೆ ವರಾಂಡದಲ್ಲೇ ಬೆಂಚ್‌ ಹಾಕಿ ಪತ್ರಿಕೆ, ನೀರಿನ ವ್ಯವಸ್ಥೆ ಮಾಡಲಾಗುತ್ತದೆ.

ಮತದಾನ ಪ್ರಮಾಣ
ಹೆಚ್ಚಿಸಲು ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ಆಯೋಗ ತಿಳಿಸಿದ ವಿಶೇಷ ಮತಗಟ್ಟೆಗಳಲ್ಲದೇ ಇಲ್ಲಿ ಯುವಜನರು, ಹಿರಿಯರು ಹಾಗೂ ಸರದಿಯಿಲ್ಲದ ಮತಗಟ್ಟೆಗಳ ಪ್ರಯೋಗ ನಡೆಸಲಾಗುತ್ತಿದೆ. ಮತದಾರರ ಪ್ರತಿಕ್ರಿಯೆ ಹೇಗೆ ಸಿಗುತ್ತದೆ ಎಂದು ಕಾದು ನೋಡಬೇಕು.
– ಟಿ. ಭೂಬಾಲನ್‌, ಚುನಾವಣಾಧಿಕಾರಿ, ಕುಂದಾಪುರ

— ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next