Advertisement

ಸ್ವಸಹಾಯ ಗುಂಪುಗಳು ದೇಶಕ್ಕೆ ಮಾದರಿ

11:52 AM Nov 12, 2018 | |

ಬೀದರ: ಮಾಜಿ ಸಚಿವ ದಿ| ಗುರುಪಾದಪ್ಪ ನಾಗಮಾರಪಳ್ಳಿ ಅವರು ಡಿಸಿಸಿ ಬ್ಯಾಂಕ್‌ ಮೂಲಕ ಜಿಲ್ಲೆಯಲ್ಲಿ ರಚಿಸಿರುವ ಸ್ವಸಹಾಯ ಗುಂಪುಗಳು ಇಡೀ ದೇಶಕ್ಕೆ ಮಾದರಿಯಾಗಿವೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು.

Advertisement

ನಗರದ ಡಿಸಿಸಿ ಬ್ಯಾಂಕ್‌ ಕೇಂದ್ರ ಕಚೇರಿಯಲ್ಲಿ ರವಿವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಜಿಲ್ಲೆಯ ಸ್ವಸಹಾಯ ಗುಂಪುಗಳ ಆಶ್ರಯದಲ್ಲಿ ದಿ| ಗುರುಪಾದಪ್ಪ ನಾಗಮಾರಪಳ್ಳಿ ಅವರ 77ನೇ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಸ್ವಸಹಾಯ ಗುಂಪುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾಗಮಾರಪಳ್ಳಿ ಅವರು ಬೀದರ ಮಾತ್ರವಲ್ಲದೆ ರಾಜ್ಯದ ಸಹಕಾರ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದ್ದರು. ರಾಜಕೀಯ, ಸಹಕಾರ ಕ್ಷೇತ್ರದಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿದ್ದರು. ಹತ್ತು ಹಲವು ಸಂಸ್ಥೆಗಳನ್ನು ಹುಟ್ಟು ಹಾಕಿ ಅವುಗಳ ಬೆಳವಣಿಗೆಗೆ ಕಾರಣರಾಗಿದ್ದರು. ಸಹಕಾರ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ರಾಜ್ಯದ 21 ಡಿಸಿಸಿ ಬ್ಯಾಂಕ್‌ಗಳಲ್ಲಿ ಬೀದರ್‌ ಡಿಸಿಸಿ ಬ್ಯಾಂಕ್‌ ಸ್ವಸಹಾಯ ಗುಂಪುಗಳಿಗೆ ಅತಿ ಹೆಚ್ಚು ಸಾಲ ಕೊಡುತ್ತ ಬಂದಿದೆ. ಎಸ್‌ಎಸ್‌ ಜಿಗಳಿಗೆ ಸಾಲ ವಿತರಣೆಯಲ್ಲಿ ಬ್ಯಾಂಕ್‌ ಕಳೆದ ವರ್ಷದವರೆಗೂ ಮೊದಲ ಸ್ಥಾನದಲ್ಲಿತ್ತು. ಈ ವರ್ಷ ಕೋಲಾರ ಮುಂಚೂಣಿಯಲ್ಲಿದೆ. ಹೆಚ್ಚು ಶ್ರಮವಹಿಸಿ ಮತ್ತೆ ಮೊದಲನೆ ಸ್ಥಾನಕ್ಕೆ ಬರಬೇಕು ಎಂದು ಸಲಹೆ ನೀಡಿದರು. ಜಿಲ್ಲೆಯಲ್ಲಿ ಸ್ವಸಹಾಯ ಸಂಘಗಳಿಗೆ ಡಿಸಿಸಿ ಬ್ಯಾಂಕ್‌ ರೂ. 165 ಕೋಟಿ ಸಾಲ ಒದಗಿಸಿದ್ದು, ಸಾಲ ಮರುಪಾವತಿ ಪ್ರಮಾಣ ಶೇ.99ರಷ್ಟು ಇರುವುದು ಪ್ರಶಂಸನೀಯ ವಿಷಯ.

ಸಹಕಾರ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಕೆಲಸಗಳು ಆಗಬೇಕಿದೆ. ನೆರೆಯ ಮಹಾರಾಷ್ಟ್ರದಲ್ಲಿ ಸಹಕಾರ ಕ್ಷೇತ್ರದಡಿ ಅತಿ ಹೆಚ್ಚು ಕೆಲಸಗಳನ್ನು ಮಾಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಸುಮಾರು 200 ಸಹಕಾರ ಸಕ್ಕರೆ ಕಾರ್ಖಾನೆಗಳು ಇವೆ. ಆದರೆ, ರಾಜ್ಯದಲ್ಲಿ 37 ಸಹಕಾರ ಸಕ್ಕರೆ ಕಾರ್ಖಾನೆಗಳು ಮಾತ್ರ ಇವೆ. ಅದರಲ್ಲೂ 30 ಬಂದ್‌ ಆಗಿದ್ದು, ಏಳು ಒದ್ದಾಡುತ್ತಿವೆ. ವ್ಯವಸ್ಥೆಯಲ್ಲಿ ಎಲ್ಲೋ ದೋಷ ಇರುವುದಕ್ಕೆ ಇದು ನಿದರ್ಶನವಾಗಿದೆ ಎಂದರು.

Advertisement

ಸಹಕಾರ ಕ್ಷೇತ್ರದಡಿ ಆಸ್ಪತ್ರೆ, ನ್ಪೋರ್ಟ್ಸ್ ಅಕಾಡೆಮಿ, ಹಾಲು ಮಹಾಮಂಡಳಿ ಮೊದಲಾದ ಸಂಸ್ಥೆಗಳು ಇವೆ. ಸಹಕಾರ ಕ್ಷೇತ್ರದ ಚಟುವಟಿಕೆಗಳು ಇನ್ನಷ್ಟು ವಿಸ್ತರಣೆ ಆಗಬೇಕಿದೆ ಎಂದು ಅಭಿಪ್ರಾಯಪಟ್ಟ ಅವರು, ಕಳೆದ ಬಜೆಟ್‌ನಲ್ಲಿ ಸ್ವಸಹಾಯ ಗುಂಪುಗಳಿಗೆ ಉದ್ಯೋಗ ಸೃಷ್ಟಿಸುವ ಚಟುವಟಿಕೆಗೆ ರೂ. 10 ಲಕ್ಷದ ವರೆಗೆ ಸಾಲ ಒದಗಿಸುವ ಕಾಯಕ ಯೋಜನೆ ಜಾರಿಗೆ ತರಲಾಗಿದೆ. ಈ ವರ್ಷ ಮೂರು ಸಾವಿರ ಗುಂಪುಗಳಿಗೆ ನೆರವು ನೀಡುವ ಗುರಿ ಇದೆ ಎಂದರು.

ಸಹಕಾರ ಕ್ಷೇತ್ರಕ್ಕೆ ಸಾಮಾಜಿಕ ಹೊಣೆಗಾರಿಕೆ ಇದೆ. ಈ ಕ್ಷೇತ್ರದ ಬೆಳವಣಿಗೆಯಾದರೆ ಇತರ ಎಲ್ಲ ಕ್ಷೇತ್ರಗಳಿಗೂ ಅನುಕೂಲವಾಗುತ್ತದೆ. ಸಹಕಾರ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರ ಅವಶ್ಯಕತೆ ಇದೆ. ಹಾಗಾದಲ್ಲಿ ಮಾತ್ರ ಸಹಕಾರ ಸಂಸ್ಥೆಗಳು ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯವಿದೆ ಎಂದರು.
 
ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ದಿ| ಗುರುಪಾದಪ್ಪ ನಾಗಮಾರಪಳ್ಳಿ ಅವರು ಡಿಸಿಸಿ ಬ್ಯಾಂಕ್‌ ಮೂಲಕ ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಿದ್ದನ್ನು ಸ್ಮರಿಸಿದರು. ಬ್ಯಾಂಕ್‌ ಮೂಲಕ ರೈತರಿಗೆ ನೆರವಾಗಿದ್ದರು . ಮಹಿಳಾ ಸಬಲೀಕರಣಕ್ಕಾಗಿ ಸ್ವಸಹಾಯ ಗುಂಪುಗಳನ್ನು ರಚಿಸಿದ್ದರು.

ನಿರುದ್ಯೋಗಿ ಯುವಕ, ಯುವತಿಯರಿಗೆ ಸ್ವ ಉದ್ಯೋಗ ಆರಂಭಿಸಲು ಶಾರದಾ ರುಡ್‌ಸೆಟ್‌ ಮೂಲಕ ಕೌಶಲ ತರಬೇತಿ ನೀಡಿದ್ದಾರೆ. ಜಿಲ್ಲೆಯ ಜನರ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ನಾನು ಹಾಗೂ ನನ್ನ ಸಹೋದರ ಸೂರ್ಯಕಾಂತ ನಾಗಮಾರಪಳ್ಳಿ ಚಿರಋಣಿಯಾಗಿದ್ದೇವೆ. ಜನರ ಸೇವೆಯನ್ನು ನಿರಂತರ ಮುಂದುವರಿಸಲಿದ್ದೇವೆ ಎಂದು ತಿಳಿಸಿದರು. 

ಸಂಸದ ಭಗವಂತ ಖೂಬಾ ಮಾತನಾಡಿ, ದಿ|ಗುರುಪಾದಪ್ಪ ನಾಗಮಾರಪಳ್ಳಿ ಅವರ ಜನ್ಮದಿನವನ್ನು ಸಹಕಾರ ದಿನವನ್ನಾಗಿ ಆಚರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದರು.

ಶಾಸಕ ರಹೀಮ್‌ಖಾನ್‌ ಮಾತನಾಡಿ, ಡಿಸಿಸಿ ಬ್ಯಾಂಕ್‌ನ ಚಟುವಟಿಕೆಗಳಿಗೆ ಎಲ್ಲ ಸಹಾಯ, ಸಹಕಾರ ನೀಡಲಾಗುವುದು ಎಂದು ತಿಳಿಸಿದರು. ಸ್ವಸಹಾಯ ಗುಂಪುಗಳು ಕಷ್ಟದ ಕಾಲದಲ್ಲಿ ಹೇಗೆ ತಮ್ಮ ಕೈಹಿಡಿದವು ಎನ್ನುವ ಕುರಿತು ಐದು ಸ್ವಸಹಾಯ ಸಂಘಗಳ ಸದಸ್ಯೆಯರು ಅನಿಸಿಕೆ ವ್ಯಕ್ತಪಡಿಸಿದರು. 

ನೂಪುರ ನೃತ್ಯ ಅಕಾಡೆಮಿಯ ಕಲಾವಿದರು ಆಕರ್ಷಕ ನೃತ್ಯ ಪ್ರದರ್ಶಿಸಿದರು. ಗುರುಪಾದಪ್ಪ ನಾಗಮಾರಪಳ್ಳಿ ಅವರ ಕುರಿತು ನೃತ್ಯ ರೂಪಕ, ಅವರ ಸಾಧನೆಯ ಹಾಡಿನ ಮೇಲೆ ಮಹಿಳೆಯರು ಪ್ರದರ್ಶಿಸಿದ ಕೋಲಾಟ ಗಮನ ಸೆಳೆದವು. ಡಾ| ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸುಪರ್‌ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಬಸವಕಲ್ಯಾಣ ಎಂಜಿನಿಯರಿಂಗ್‌ ಕಾಲೇಜು ಅಧ್ಯಕ್ಷ ದಿಲೀಪಕುಮಾರ ತಾಳಂಪಳ್ಳಿ, ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಆಸ್ಪತ್ರೆಯ ನಿರ್ದೇಶಕ ಸಂತೋಷಕುಮಾರ ತಾಳಂಪಳ್ಳಿ, ಪ್ರಥಮ ದರ್ಜೆ ಗುತ್ತಿಗೆದಾರ ಗುರುನಾಥ ಕೊಳ್ಳೂರ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ರಾಚಪ್ಪ ಪಾಟೀಲ, ವಿಜಯಕುಮಾರ ಪಾಟೀಲ ಗಾದಗಿ, ಮಹಮ್ಮದ್‌ ಸಲೀಮೊದ್ದಿನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next