Advertisement

ಮಹಿಳೆಯರಿಗೆ ಸ್ವಯಂ ರಕ್ಷಣಾ ತರಬೇತಿ

11:01 PM Dec 07, 2019 | Lakshmi GovindaRaj |

ಬೆಂಗಳೂರು: ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗೃಹ ಇಲಾಖೆ ಮೂಲಕ ಮಹಿಳೆಯರಿಗೆ ಸ್ವಯಂ ರಕ್ಷಣಾ ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಹೈದರಾಬಾದ್‌ನಲ್ಲಿ ಪಶು ವೈದ್ಯೆ ಮೇಲೆ ನಡೆದ ಅತ್ಯಾಚಾರ ಪ್ರಕರಣದ ನಂತರ ಮಹಿಳಾ ಸುರಕ್ಷತೆ ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿಗಳು ಹಾಗೂ ಕಾನೂನು ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ 2015 ರಿಂದ 2019ರ ವರೆಗೆ 5,764 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 4,904 ಪ್ರಕರಣಗಳಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. 563 ಪ್ರಕರಣಗಳಲ್ಲಿ ಹಲವು ಕಾರಣಗಳಿಂದ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿಲ್ಲ. 329 ಪ್ರಕರಣಗಳ ಎಫ್ಎಸ್‌ಎಲ್‌ ವರದಿ ಬರಬೇಕಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕೆಳವರ್ಗದ ಮಹಿಳೆಯರ ಮೇಲೆ ಅತ್ಯಾಚಾರಗಳು ಹೆಚ್ಚಾಗಿವೆ. ಕಾರ್ಮಿಕ ವರ್ಗ ಹೆಚ್ಚಾಗಿರುವ ಕಡೆಗಳಲ್ಲಿ ಅತ್ಯಾಚಾರದ ಪ್ರಮಾಣ ಹೆಚ್ಚಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕೂಡ ಹೆಚ್ಚುತ್ತಿದೆ. ಸಮಾಜದಲ್ಲಿ ನೈತಿಕತೆಯ ಅಪಮೌಲ್ಯದಿಂದ ಈ ರೀತಿಯ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಹೆಣ್ಣು ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಲು ಸ್ವಯಂ ರಕ್ಷಣೆಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಈಗಾಗಲೇ ರಾಜ್ಯದಲ್ಲಿ ಸುಮಾರು 30 ಲಕ್ಷ ಮಹಿಳೆಯರು ರಕ್ಷಣೆಗೆ ಸ್ವಯಂಪ್ರೇರಿತರಾಗಿ ಮುಂದೆ ಬಂದಿದ್ದಾರೆ. ಅವರಿಗೆ ಸೂಕ್ತ ತರಬೇತಿ ನೀಡಲಾಗುವುದು. ಈ ಪಡೆಯಲ್ಲಿ ಇನ್ನಷ್ಟು ಮಹಿಳೆಯರನ್ನು ಸೇರಿಸಲು ಕ್ರಮ ವಹಿಸಲಾಗುವುದು. ರಾತ್ರಿ ಪಾಳಿಯಲ್ಲಿಯೂ ಮಹಿಳೆಯರು ರಕ್ಷಣೆಗೆ ಮುಂದಾಗುವಂತೆ ತರಬೇತುಗೊಳಿಸಲಾಗುವುದು ಎಂದು ಹೇಳಿದರು.

ನೈಟ್‌ ಬೀಟ್‌ಗೆ ಪ್ರಾಧಾನ್ಯತೆ: ರಾಜ್ಯದಲ್ಲಿ 22 ತಾತ್ಕಾಲಿಕ ಹಾಗೂ 12 ಖಾಯಂ ಪೊಲೀಸ್‌ ತರಬೇತಿ ಕೇಂದ್ರಗಳಿವೆ. ಎಲ್ಲ ಕಡೆಗಳಲ್ಲಿಯೂ ಮಹಿಳೆಯರು, ಕಾಲೇಜು ಯುವತಿ ಯರಿಗೆ ಸ್ವಯಂ ರಕ್ಷಣಾ ತರಬೇತಿ ನೀಡಲಾಗುವುದು. ಮಹಿಳೆಯರು ಸ್ವಯಂ ಪ್ರೇರಿತರಾಗಿ ಈ ತರಬೇತಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದರು. ರಾತ್ರಿ ಹೊತ್ತಿನಲ್ಲಿ ಅಪರಾಧ ವೈಭವೀಕರಣ ಗೊಳಿಸದೇ, ಕಾನೂನು ಸುವ್ಯವಸ್ಥೆ ಹೆಚ್ಚು ವೈಭವೀಕರಣ ಗೊಳ್ಳಬೇಕು. ಅದಕ್ಕಾಗಿ ಹಿರಿಯ ಅಧಿಕಾರಿಗಳು ನೈಟ್‌ ಬೀಟ್‌ ಗಸ್ತು ತಿರುಗುವ ಮೂಲಕ ಕಾನೂನು ಸುವ್ಯವಸ್ಥೆಗೆ ಹೆಚ್ಚು ಪ್ರಾಧಾನ್ಯತೆ ದೊರೆಯುವಂತೆ ಮಾಡಲಾಗುವುದು ಎಂದರು.

Advertisement

66 ಬಾಂಗ್ಲಾ ಪ್ರಜೆಗಳು ವಾಪಸ್‌: ಇದೇ ವೇಳೆ, ಅವಧಿ ಮುಗಿದ ನಂತರ ಉಳಿಯುವ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚಿ ಅವರ ದೇಶಗಳಿಗೆ ವಾಪಸ್‌ ಕಳುಹಿಸುವ ಕೆಲಸ ಆರಂಭವಾಗಿದ್ದು, ಈಗಾಗಲೇ 66 ಬಾಂಗ್ಲಾ ಪ್ರಜೆಗಳನ್ನು ಅವರ ದೇಶಕ್ಕೆ ವಾಪಸ್‌ ಕಳುಹಿಸಲಾಗಿದೆ. ನೈಜಿರಿಯನ್‌ ಪ್ರಜೆಗಳನ್ನೂ ವಾಪಸ್‌ ಕಳುಹಿಸುವ ಪ್ರಯತ್ನ ನಡೆದಿದೆ ಎಂದರು. ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಹಿಡಿದಿಡಲು ನೆಲಮಂಗಲದಲ್ಲಿ ನಿರಾಶ್ರಿತರ ಕೇಂದ್ರ 2020ರ ಜನವರಿ 1 ರಿಂದ ಅಧಿಕೃತವಾಗಿ ಆರಂಭವಾಗಲಿದ್ದು, ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಕೇಂದ್ರ ನಡೆಸಲಾಗುವುದು ಎಂದು ಬೊಮ್ಮಾಯಿ ಹೇಳಿದರು.

ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ಗಳ ಹೆಚ್ಚಳ: ರಾಜ್ಯದಲ್ಲಿ ಪೋಸ್ಕೋ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಆದರೆ, ನ್ಯಾಯದಾನ ವಿಳಂಬವಾಗುತ್ತಿದೆ. ಹೀಗಾಗಿ, ಕಾನೂನು ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಲಾಗಿದ್ದು, ಎಲ್ಲ ಜಿಲ್ಲೆಗಳಲ್ಲಿಯೂ ಪೋಸ್ಕೋ ಕೋರ್ಟ್‌ಗಳಿವೆ. ಅವುಗಳ ಸಂಖ್ಯೆಯನ್ನು ಹೆಚ್ಚಿಸಿ, ಶೀಘ್ರ ವಿಚಾರಣೆ ನಡೆಸಿ, ತೀರ್ಪು ಬರುವಂತೆ ನೋಡಿಕೊಳ್ಳಲು ಕ್ರಮ ವಹಿಸಲಾಗುವುದು ಎಂದು ಸಚಿವರು ಹೇಳಿದರು.

ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಡ್ರಗ್ಸ್‌ ಮಾಫಿಯಾಗೂ ಸಂಬಂಧವಿದ್ದು, ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ವಿವಿಧ ರೀತಿಯಲ್ಲಿ ಡ್ರಗ್ಸ್‌ ಪೂರೈಕೆಯಾಗುತ್ತಿದೆ. ಡ್ರಗ್ಸ್‌ ಮಾಫಿಯಾದಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಅದನ್ನು ಕಡಿಮೆ ಮಾಡಲು ಪೊಲೀಸ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ನಗರದಲ್ಲಿ ಪುಡಿ ರೌಡಿಗಳ ಹಾವಳಿ ತಡೆಗಟ್ಟಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. 20 ರಿಂದ 25 ವಯಸ್ಸಿನ ಯುವಕರೇ ಅಪರಾಧ ಕೃತ್ಯಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದಾರೆ. ಅದನ್ನು ನಿಯಂತ್ರಿಸಲು ಪೊಲೀಸ್‌ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.

“ಸುರಕ್ಷಾ ಆ್ಯಪ್‌’ ಬಿಡುಗಡೆ: ಈಗಾಗಲೇ ಬೆಂಗಳೂರಿನಲ್ಲಿ “ಸುರಕ್ಷಾ ಆ್ಯಪ್‌’ ಬಿಡುಗಡೆಗೊಳಿಸಲಾಗಿದ್ದು, ಇದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಅಲ್ಲದೇ ಸುರಕ್ಷಾ ಆ್ಯಪ್‌ ಮೂಲಕ ರಕ್ಷಣೆಗೆ ಬೇಡಿಕೆ ಬರುವ ಕರೆಗಳಿಗೆ 9 ನಿಮಿಷದ ಬದಲು ಕನಿಷ್ಠ 5 ರಿಂದ 7 ನಿಮಿಷಗಳಲ್ಲಿ ಪೊಲೀಸರು ಸ್ಪಂದಿಸಿ ಕ್ರಮ ಕೈಗೊಳ್ಳಲು ತಂತ್ರಜ್ಞಾನವನ್ನು ಉನ್ನತೀಕರಣಗೊಳಿಸಲಾಗುವುದು ಎಂದು ಸಚಿವರು ಹೇಳಿದರು.

ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ಸಲುವಾಗಿಯೇ ಬೆಂಗಳೂರಿನಲ್ಲಿ 270 ಹಾಗೂ ರಾಜ್ಯದಲ್ಲಿ 183 ಹೊಯ್ಸಳ ವಾಹನಗಳಿವೆ. ಹೊಯ್ಸಳ ವಾಹನಗಳನ್ನು 500ಕ್ಕೆ ಹೆಚ್ಚಿಸಲು ಚಿಂತನೆ ನಡೆದಿದ್ದು, ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗಿದೆ. ರಾತ್ರಿ ವೇಳೆ ಗಸ್ತು ತಿರುಗುವ ವಾಹನಗಳಿಗೆ ಜಿಪಿಎಸ್‌ ವ್ಯವಸ್ಥೆ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next