Advertisement

ಕರಾವಳಿಯಲ್ಲಿ  ಮಳೆಗಾಲದಲ್ಲೂ ಸೆಕೆ!

12:56 AM Aug 06, 2023 | Team Udayavani |

ಮಂಗಳೂರು: ಕರಾವಳಿ ಭಾಗದಲ್ಲಿ ಕೆಲವು ದಿನಗಳಿಂದ ಮಳೆಯ ತೀವ್ರತೆ ಕಡಿಮೆಯಾಗಿದ್ದು, ಮಳೆಗಾಲದಲ್ಲೂ ಸೆಕೆಯ ಅನುಭವ ಹೆಚ್ಚಾಗುತ್ತಿದೆ. ಹವಾಮಾನದಲ್ಲಾದ ಬದಲಾವಣೆಯ ಪರಿಣಾಮ ಕಳೆದ ಒಂದು ವಾರದಿಂದ ದಿನವಿಡೀ ಸೆಕೆಯ ವಾತಾವರಣ ಇದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

Advertisement

ಸದ್ಯ ಮುಂಗಾರು ದುರ್ಬಲಗೊಂಡಿದೆ. ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳ ಪ್ರಕಾರ ಸದ್ಯಕ್ಕೆ ಭಾರೀ ಮಳೆಯಾ ಗುವ ಮುನ್ಸೂಚನೆಯಿಲ್ಲ. ಇದೇ ಕಾರಣಕ್ಕೆ ಗರಿಷ್ಠ ಉಷ್ಣಾಂಶಲ್ಲಿ ವಾಡಿಕೆಗಿಂತ 2ರಿಂದ 3 ಡಿ.ಸೆ. ಏರಿಕೆಯಾಗಬಹುದು. ಕನಿಷ್ಠ ಉಷ್ಣಾಂಶದಲ್ಲಿಯೂ ಏರಿಳಿತ ಉಂಟಾಗುವ ಸಾಧ್ಯತೆ ಇದೆ. ಮಂಗಳೂರಿನಲ್ಲಿ ಶನಿವಾರ ಗರಿಷ್ಠ ಉಷ್ಣಾಂಶ 29.8 ಡಿ.ಸೆ. ಮತ್ತು ಕನಿಷ್ಠ 23.2 ಡಿ.ಸೆ. ಇತ್ತು. ಗರಿಷ್ಠ ಉಷ್ಣಾಂಶದಲ್ಲಿ ವಾಡಿಕೆಗಿಂತ 1 ಡಿ.ಸೆ. ಹೆಚ್ಚು ಇತ್ತು.

ಈ ವರ್ಷ ಕಡಿಮೆ ಮಳೆ
ಕರಾವಳಿ ಭಾಗದಲ್ಲಿ ಕಳೆದ ವರ್ಷ ಮುಂಗಾರು ಮಳೆ ಉತ್ತಮವಾಗಿ ಸುರಿದಿತ್ತು. 2022ರ ಆ. 8ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 10 ಮತ್ತು ಉಡುಪಿ ಜಿಲ್ಲೆಯಲ್ಲಿ ಶೇ. 6ರಷ್ಟು ಸೇರಿ ಕರಾವಳಿ ಭಾಗದಲ್ಲಿ ಶೇ. 3ರಷ್ಟು ಮಳೆ ಪ್ರಮಾಣ ಹೆಚ್ಚಾಗಿತ್ತು. ಆದರೆ ಈ ವರ್ಷ ಮುಂಗಾರು ಆಗಮನವೇ ತಡವಾಗಿದೆ. ಕೆಲವು ದಿನ ಭಾರೀ ಮಳೆಯಾಗಿತ್ತೇ ವಿನಾ ಸದ್ಯ ಮುಂಗಾರು ದುರ್ಬಲಗೊಂಡಿದೆ. 2023ರ ಆ. 8ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 19 ಮತ್ತು ಉಡುಪಿ ಜಿಲ್ಲೆಯಲ್ಲಿ ಶೇ. 13 ಸೇರಿದಂತೆ ಕರಾವಳಿ ಭಾಗದಲ್ಲಿ ಶೇ. 9ರಷ್ಟು ಮಳೆ ಕೊರತೆ ಇದೆ.

ಎಲ್‌ ನಿನೋ ಪ್ರಭಾವ
ರಾಜ್ಯದಲ್ಲಿ ಈ ಬಾರಿ ವಾಡಿಕೆಯಂತೆ ಮಳೆ ಸುರಿಯಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಈ ಹಿಂದೆ ಅಂದಾಜಿಸಿದ್ದರು. ಆದರೆ ಸದ್ಯದ ಮುನ್ಸೂಚನೆಯಂತೆ ಎಲ್‌ ನಿನೋ ಪ್ರಭಾವದಿಂದ ಹಿಂದೂ ಮಹಾಸಾಗರದಲ್ಲಿ ಮೋಡ ಗಳ ಸೃಷ್ಟಿ ಕಡಿಮೆಯಾಗಲಿದೆ. ಮೋಡಗಳ ಸೃಷ್ಟಿಯೇ ಕಡಿಮೆಯಾದರೆ ಮಳೆ ಸುರಿ ಯುವ ಪ್ರಮಾಣವೂ ಕಡಿಮೆಯಾಗುವ ಸಾಧ್ಯತೆಯಿದೆ. ಇದರ ಪರಿಣಾಮ ರಾಜ್ಯದಲ್ಲಿ ನಿರೀಕ್ಷೆಯಂತೆ ವಾಡಿಕೆ ಮುಂಗಾರು ಮಳೆ ಯಾಗುವ ಸಾಧ್ಯತೆ ಕಡಿಮೆ ಎಂದು ಸದ್ಯಕ್ಕೆ ಅಂದಾಜಿಸಬಹುದು.

ಕರಾವಳಿ ಭಾಗದಲ್ಲಿ ಕೆಲವು ದಿನಗಳಿಂದ ಮುಂಗಾರು ದುರ್ಬಲಗೊಂಡಿದೆ. ಮುನ್ಸೂಚನೆ ಪ್ರಕಾರ ಸದ್ಯಕ್ಕೆ ಭಾರೀ ಮಳೆಯ ಸಾಧ್ಯತೆ ಇಲ್ಲ. ಇದೇ ಕಾರಣಕ್ಕೆ ಉಷ್ಣಾಂಶದಲ್ಲಿಯೂ ಏರಿಳಿತವಾಗುತ್ತಿದೆ. ಮುಂದಿನ ಕೆಲವು ದಿನಗಳ ಕಾಲ ಸೆಕೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದ್ದು ಗರಿಷ್ಠ ಉಷ್ಣಾಂಶ 2ರಿಂದ 3 ಡಿ.ಸೆ. ಏರಿಕೆಯಾಗುವ ನಿರೀಕ್ಷೆ ಇದೆ.
– ಪ್ರಸಾದ್‌, ಭಾರತೀಯ ಹವಾಮಾನ ಇಲಾಖೆ ಅಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next