Advertisement

ಗೋ.ಮಧುಸೂದನ್‌ಗೆ ಸೇರಿದ ಜಮೀನು ವಶ

03:45 AM Mar 12, 2017 | Team Udayavani |

ಚಾಮರಾಜನಗರ: ಜಿಲ್ಲೆಯ ಬಂಡೀಪುರ ಅರಣ್ಯ ಸಮೀಪ ಮಂಗಲ ಗ್ರಾಮದ ಸನಿಹ, ಕೃಷಿಗಾಗಿ ಎಂದು ಮಾಹಿತಿ ನೀಡಿ ಜಮೀನು ಖರೀದಿಸಿ ನಂತರ ಅದನ್ನು ಕೃಷಿಯೇತರ ಚಟುವಟಿಕೆಗೆ (ಟೈಗರ್‌ ರಾಂಚ್‌ ರೆಸಾರ್ಟ್‌ ನಿರ್ಮಾಣಕ್ಕಾಗಿ) ಬಳಸಿಕೊಂಡ ಹಿನ್ನೆಲೆಯಲ್ಲಿ ವಿಧಾನಪರಿಷತ್‌ ಮಾಜಿ ಸದಸ್ಯ ಗೋ. ಮಧುಸೂದನ್‌ ಹಾಗೂ ಅವರ ಸಂಬಂಧಿಯ 44 ಎಕರೆ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಮೈಸೂರು ಪ್ರಾದೇಶಿಕ ಆಯುಕ್ತರು ಆದೇಶ ನೀಡಿದ್ದಾರೆ.

Advertisement

ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಂತೆ ಇರುವ ಮಂಗಲ ಗ್ರಾಮದ ಬಳಿ ಸರ್ವೆ ನಂ.20ರಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಗೋ. ಮಧುಸೂದನ್‌ 24 ಎಕರೆ ಹಾಗೂ ಅವರ ಸಂಬಂಧಿ ಟಿ.ಎಲ್‌. ಜಯಲಕ್ಷ್ಮೀ ಎಂಬುವರು 20 ಎಕರೆ ಜಮೀನನ್ನು ಖರೀದಿಸಲು ಕರ್ನಾಟಕ ಭೂಸುಧಾರಣಾ ಕಾಯ್ದೆ 1961 ಕಲಂ 80ರಡಿ ನಂಜನಗೂಡು ಉಪ ವಿಭಾಗಾಧಿಕಾರಿಯವರಿಂದ 1995ರ ಜನವರಿಯಲ್ಲಿ ಅನುಮತಿ ಪಡೆದಿದ್ದರು. ಈ ವೇಳೆ ತಾವು ಕೃಷಿಕರು ಎಂದು ಮಧುಸೂದನ್‌ ದಾಖಲೆಗಳಲ್ಲಿ ಘೋಷಿಸಿಕೊಂಡಿದ್ದರು. ಆದರೆ ಕೃಷಿಕರೆಂಬುದಕ್ಕೆ ಸೂಕ್ತ ದಾಖಲೆಗಳಿರಲಿಲ್ಲ. ನಿಯಮದಂತೆ, ಆ ಜಮೀನನ್ನು ಕೃಷಿ ಉದ್ದೇಶಕ್ಕಾಗಿ ಬಳಸದೇ, ಟೈಗರ್‌ ರಾಂಚ್‌ ಹೆಸರಿನ ರೆಸಾರ್ಟ್‌ ಮಾಡಲು, ಭೂಮಿಯನ್ನು ಅಲಿನೇಷನ್‌ ಮಾಡಿಸಿದ್ದರು. ಬಂಡೀಪುರ ಅರಣ್ಯಕ್ಕೆ ಹೊಂದಿಕೊಂಡಿರುವುದರಿಂದ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕಿತ್ತು. ಅದನ್ನೂ ಉಲ್ಲಂ ಸಲಾಗಿತ್ತು. ಉಪವಿಭಾಗಾಧಿಕಾರಿಗಳ ಹಂತದಲ್ಲೇ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು.

ಕರ್ನಾಟಕ ಭೂಸುಧಾರಣಾ ಕಾಯ್ದೆ 1961ರ ಕಲಂ, 118 ಎ ರನ್ವಯ 2012 ಜುಲೈ 19ರಂದು ಜಿಲ್ಲಾಧಿಕಾರಿ ಹಾಗೂ ಹುಲಿ ಯೋಜನೆ ಹೆಚ್ಚುವರಿ ನಿರ್ದೇಶಕರು ಪುನರ್‌ ಪರಿಶೀಲನಾ ಅರ್ಜಿಯನ್ನು ಮೈಸೂರಿನ ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಿದ್ದರು. ಜಮೀನು ಖರೀದಿಸುವ ಮುನ್ನ ಕೃಷಿಗೆ ಎಂದು ಮಾಹಿತಿ ನೀಡಿ ಖರೀದಿಸಿದ ಬಳಿಕ ಕಾಯಿದೆಗೆ ವಿರುದ್ಧವಾಗಿ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗೆ ಬಳಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆ ಜಮೀನನ್ನು ಮುಟ್ಟುಗೋಲು ಹಾಕಿಕೊಂಡು, ಅದನ್ನು ಕಂದಾಯ ದಾಖಲೆಗಳಲ್ಲಿ ನಮೂದಿಸುವಂತೆ ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ ಜಿಲ್ಲಾಧಿಕಾರಿಯವರಿಗೆ ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next