Advertisement

ಜಾಣ್ಮೆಯ ನಡೆಯೋ, ತಿರುಗುಬಾಣವೋ…?

06:25 AM Mar 20, 2018 | Team Udayavani |

ಬೆಂಗಳೂರು:ಜೇನುಗೂಡಿಗೆ ಕಲ್ಲು ಎಂದೇ ವ್ಯಾಖ್ಯಾನಿಸುತ್ತಿದ್ದ ಲಿಂಗಾಯಿತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದು ಜಾಣ್ಮೆಯ ನಡೆಯೋ ಅಥವಾ ತಿರುಗುಬಾಣವಾಗಬಹುದೇ?

Advertisement

“ಲಿಂಗಾಯಿತ ಹಾಗೂ ವೀರಶೈವರನ್ನು (ಬಸವಧರ್ಮ-ತತ್ವ ಪಾಲಿಸುವ)ಅಲ್ಪಸಂಖ್ಯಾತರು ಎಂದು ಪರಿಗಣಿಸಿ ಅಲ್ಪಸಂಖ್ಯಾತ ಧಾರ್ಮಿಕ ಮಾನ್ಯತೆ ನೀಡಬಹುದು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಮೂಲಕ ಪರ-ವಿರೋಧ ಎರಡೂ ಬಣದವರನ್ನೂ  ಒಂದು ಹಂತದಲ್ಲಿ  ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದಾರೆ.

ಕಳೆದೊಂದು ವರ್ಷದ ಹಿಂದೆ ಇದ್ದಕ್ಕಿದ್ದಂತೆ ದಿಢೀರ್‌ ಮುಂಚೂಣಿಗೆ ಬಂದ ಪ್ರತ್ಯೇಕ ಧರ್ಮ ವಿಚಾರ ಪರ-ವಿರೋಧ, ವಾಗ್ವಾದ, ಸಂಘರ್ಷ ಎಲ್ಲವೂ ಮುಗಿಸಿ ಅಂತಿಮವಾಗಿ ರಾಜ್ಯ ಸರ್ಕಾರ ಕಾನೂನಾತ್ಮಕವಾಗಿಯೇ ಶಿಫಾರಸು ಪ್ರಕ್ರಿಯೆ “ಶಾಸ್ತ್ರ’ ಮುಗಿಸಿದೆ.

ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹೊಡೆತ ಅಥವಾ ಒಳ ಏಟು ಬೀಳದಂತೆ ಜಾಗ್ರತೆ ವಹಿಸಿ ಆದಷ್ಟೂ ಆಗುವುದಾದರೆ ಲಾಭವಾಗುವಂತೆ  ನೋಡಿಕೊಂಡು ಮುಂದಿನ ತಲೆಬಿಸಿ ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಿದ್ದಾರೆ.

ಅಳೆದೂ ತೂಗಿ ಸಾಕಷ್ಟು ಚರ್ಚೆ-ಸಮಾಲೋಚನೆಗಳ ನಂತರ ರಾಜ್ಯ ಸರ್ಕಾರ ಕೈಗೊಂಡಿರುವ ತೀರ್ಮಾನಕ್ಕೆ  ವಿರೋಧವೂ ವ್ಯಕ್ತ¤ವಾಗಿದೆ. ಎಲ್ಲೋ ಒಂದು ಕಡೆ ಸಮುದಾಯವನ್ನೇ ಒಡೆದರು ಎಂಬ ಕಳಂಕ ದೊಡ್ಡ ಮಟ್ಟದಲ್ಲಿ ಅಂಟಿಕೊಳ್ಳಬಹುದೇ ಎಂಬ ಪ್ರಶ್ನೆಯೂ ಎದ್ದಿದೆ.

Advertisement

ವೀರಶೈವರಲ್ಲಿ ಬಸವಧರ್ಮ ತತ್ವ ಪಾಲಿಸುವವರು ಎಂಬ ಒಕ್ಕಣೆ ಇರುವುದರಿಂದ ಹಿಂದೂ ಧರ್ಮದ ಭಾಗ ಅಥವಾ ಹಿಂದೂ ಧರ್ಮದ ಆಚಾರ-ವಿಚಾರ ಪಾಲಿಸುವವರು ಮುಂದೇನು ಮಾಡುತ್ತಾರೆ ಎಂಬ ಪ್ರಶ್ನೆಯೂ ಇದೆ. ಅಂತವರು ಅಲ್ಪಸಂಖ್ಯಾತ ಮಾನ್ಯತೆಗಿಂತ ಹೆಚ್ಚಾಗಿ “ಬೌದ್ಧ, ಸಿಖ್‌, ಕ್ರೈಸ್ತ,  ಇಸ್ಲಾಂ ಧರ್ಮದಂತೆಯೇ ಲಿಂಗಾಯಿತ-ವೀರಶೈವ ವಿಶ್ವವ್ಯಾಪಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಸಿಗಲಿದೆ ಎಂಬ ಹೆಮ್ಮೆಯಿಂದ  ಮುಂದಿನ ದಿನಗಳಲ್ಲಿ ಒಪ್ಪಿ ಜತೆಗೂಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ, ಸರ್ಕಾರದ ನಿರ್ಧಾರ ಧಾರ್ಮಿಕ ಹಾಗೂ ರಾಜಕೀಯವಾಗಿ ಯಾವ ಮಟ್ಟದ ಲಾಭ-ನಷ್ಟಕ್ಕೆ ಕಾರಣವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಮತಬ್ಯಾಂಕ್‌ ಲೆಕ್ಕಾಚಾರ
ಆಡಳಿತಾರೂಢ ಕಾಂಗ್ರೆಸ್‌ ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಬುಟ್ಟಿಯಲ್ಲಿದ್ದ ಅತಿ ದೊಡ್ಡ ಲಿಂಗಾಯಿತ-ವೀರಶೈವ ಮತಬ್ಯಾಂಕ್‌ ಮೇಲೆ ಕಣ್ಣಿಟ್ಟು “ಪ್ರತ್ಯೇಕ ಧರ್ಮದ ಮಾನ್ಯತೆ’ ವಿಚಾರ ಹೆಚ್ಚೆಚ್ಚು ಪ್ರಸ್ತಾಪವಾಗುವಂತೆ ಮಾಡಿದರು ಎಂಬ ಮಾತುಗಳು ಇವೆ. ಆದರೂ ಸಂಪುಟದಲ್ಲಿನ ಪ್ರಭಾವಿ ಸಚಿವರಾದ ಎಂ.ಬಿ.ಪಾಟೀಲ್‌, ಡಾ.ಶರಣಪ್ರಕಾಶ್‌ ಪಾಟೀಲ್‌, ವಿನಯ ಕುಲಕರ್ಣಿ, ಬಸವರಾಜರಾಯರೆಡ್ಡಿ ಇದರಲ್ಲಿ ಸಿದ್ದರಾಮಯ್ಯ ಪಾತ್ರವಿಲ್ಲ ಎಂದು ಪ್ರಬಲವಾಗಿ ಪ್ರತಿಪಾದಿಸಿ ನಮ್ಮದೇ ಹೋರಾಟ ಎಂದು ಬಿಂಬಿಸಿಕೊಂಡಿದ್ದರು. 

ಮತ್ತೂಂದೆಡೆ ಹಿರಿಯ ಮುಖಂಡ ಶ್ಯಾಮನೂರು ಶಿವಶಂಕರಪ್ಪ, ಸಚಿವರಾದ ಈಶ್ವರ ಖಂಡ್ರೆ, ಎಸ್‌.ಎಸ್‌.ಮಲ್ಲಿಕಾರ್ಜುನ ಅವರು ಲಿಂಗಾಯಿತ ಜತೆಗೆ ವೀರಶೈವ ಸಹ ಸೇರಿಸಿಬೇಕು ಎಂದು ಪ್ರತಿಪಾದನೆ ಮಾಡುತ್ತಿದ್ದರು. ಸಂಪುಟದಲ್ಲಿ ಅವರಿಗೂ ಬೇಸರವಾಗದಂತೆ ತೀರ್ಮಾನ ಕೈಗೊಳ್ಳಲಾಗಿದೆ. ಹೀಗಾಗಿ, ಒಟ್ಟಾರೆ ಇದು ಕಾಂಗ್ರೆಸ್‌ಗೆ ರಾಜಕೀಯವಾಗಿಯೂ ಲಾಭವಾಗಬಹುದು ಎಂಬ ಲೆಕ್ಕಾಚಾರವೂ ಇದೆ.

ರಾಜ್ಯ ಸರಕಾರ ಏನೆಲ್ಲಾ ಅಂಶಗಳೊಂದಿಗೆ ಅಲ್ಪಸಂಖ್ಯಾತ ಧರ್ಮಕ್ಕೆ ಶಿಫಾರಸು ಮಾಡಿದೆ ಎಂಬುದರ ಬಗ್ಗೆ ಸರಕಾರದ ವರದಿ ನೋಡಿದ ನಂತರ ಪ್ರತಿಕ್ರಿಯಿಸುತ್ತೇವೆ. ರಾಜ್ಯ ಸರಕಾರದ ತೀರ್ಮಾನ ಕುರಿತಾಗಿ ಮುಂದಿನ ನಡೆ ಕುರಿತಾಗಿ ಮಂಗಳವಾರ ಜಗದ್ಗುರುಗಳು ಹಾಗೂ ಮಠಾಧೀಶರು ಸೇರಿ ಚರ್ಚೆ ನಡೆಸಲು ತೀರ್ಮಾನಿಸಿದ ಅನಂತರ ನಮ್ಮ ಅನಿಸಿಕೆ ಸ್ಪಷ್ಟಪಡಿಸುತ್ತೇವೆ.
– ಡಾ|ಚಂದ್ರಶೇಖರ ಶಿವಾಚಾರ್ಯಭಗವತ್ಪಾದರು, ಕಾಶಿ ಪೀಠ.

ನಾವು ಶ್ರೀಶೈಲದಲ್ಲಿದ್ದು, ಕರ್ನಾಟಕ ಸರಕಾರ ಕೈಗೊಂಡ ಶಿಫಾರಸು ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಸಿಕ್ಕ ಮಾಹಿತಿಯಂತೆ ಲಿಂಗಾಯತ ಮತ್ತು ವೀರಶೈವ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಶಿಫಾರಸು ಮಾಡಲಾಗಿದೆಯಂತೆ. ಇದು ಇನ್ನಷ್ಟು ಗೊಂದಲ ಮೂಡಿಸುವುದಾಗಿದೆ. ಎರಡೂ ಬಣಗಳು ಒಮ್ಮತ ತೀರ್ಮಾನ ನೀಡಿದರೆ ಮಾತ್ರ ಶಿಫಾರಸು ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೀಗ ಇದ್ದಕ್ಕಿದ್ದಂತೆ ಶಿಫಾರಸು ಮಾಡಿದ್ದಾರೆ.
– ಡಾ|ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು,ಶ್ರೀಶೈಲ ಪೀಠ

ಲಿಂಗಾಯತ ಅಲ್ಪಸಂಖ್ಯಾತ ಧರ್ಮಕ್ಕೆ ರಾಜ್ಯ ಸರಕಾರ ಶಿಫಾರಸು ಮಾಡಬಹುದಷ್ಟೆ.ಆದರೆ, ಸೌಲಭ್ಯ ನೀಡುವ ಅಧಿಕಾರ ಕೇಂದ್ರಕ್ಕಿದೆ. ವೀರಶೈವ-ಲಿಂಗಾಯತ ಒಂದೇ ಎಂಬುದರ ಎಲ್ಲ ದಾಖಲೆಗಳನ್ನು ಈಗಾಗಲೇ ಕೇಂದ್ರಕ್ಕೆ ಸಲ್ಲಿಸಿದ್ದೇವೆ. ಇವರೇನೇ ಶಿಫಾರಸು ಮಾಡಿದರೂ ಪ್ರಧಾನಿ ಬಳಿ ಹೋಗಿ ಮುಂದಿನ ಕ್ರಮ ಕೈಗೊಳ್ಳದಂತೆ ಒತ್ತಡ ತರುತ್ತೇವೆ. ಶಿಫಾರಸು ಬರಲಿ ಕೇಂದ್ರ ಮಟ್ಟದಲ್ಲಿ ನಾವೂ ನೋಡಿಕೊಳ್ಳುತ್ತೇವೆ.
– ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು,
ಕೇದಾರ ಪೀಠ

ವಿವಾದ ಕುರಿತಾಗಿ ಎರಡೂ ಬಣಗಳು ಒಟ್ಟಾಗಿ ಬಂದರೆ ಮಾತ್ರ ಶಿಫಾರಸು ಕೈಗೊಳ್ಳುವೆ ಎಂದು ಸಿಎಂ ಹೇಳಿದ್ದರು. ಆದರೆ
ಮಾತಿಗೆ ತಪ್ಪಿ ಇದೀಗ ಏಕಪಕ್ಷೀಯವಾಗಿ ಶಿಫಾರಸು ಮಾಡಿರುವುದು ನೋವು ತರಿಸಿದೆ. ನ್ಯಾ|ನಾಗಮೋಹನ ದಾಸ ನೇತೃತ್ವದ ಸಮಿತಿ ಒಂದು ಮಠಕ್ಕೆ ಭೇಟಿ ನೀಡಲಿಲ್ಲ. ಅಭಿಪ್ರಾಯ ಸಂಗ್ರಹಿಸಲಿಲ್ಲ. ಅದೇಗೆ ಸರ್ವಸಮ್ಮತ ವರದಿ ನೀಡಲು ಸಾಧ್ಯ?

– ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು,ಉಜ್ಜಯಿನಿ ಪೀಠ.

ಸಿಎಂ ನೇತೃತ್ವದ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ಐತಿಹಾಸಿಕ ನಿರ್ಣಯ. ಕೇಂದ್ರವೂ ಕೂಡಲೇ ವರದಿಯನ್ನು
ಜಾರಿಗೊಳಿಸುವ ಮೂಲಕ ಸಮುದಾಯದ ಬಹುದಿನಗಳ ಬೇಡಿಕೆ ಈಡೇರಿಸಬೇಕು. ಈ ತೀರ್ಮಾನ ಲಿಂಗಾಯತರು,
ಬಸವಾಭಿಮಾನಿಗಳ ಹೋರಾಟಕ್ಕೆ ಸಂದ ಜಯವಾಗಿದೆ.

– ಡಾ. ಬಸವಲಿಂಗ ಪಟ್ಟದ್ದೇವರು, ಭಾಲ್ಕಿ

ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುವುದಕ್ಕಾಗಿ ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸಂಪುಟ ಒಪ್ಪಿಗೆ ನೀಡಿರುವುದು ಐತಿಹಾಸಿಕ ನಿರ್ಣಯ. ಇದರಿಂದ ರಾಜ್ಯದ ಲಿಂಗಾಯತರು ಧಾರ್ಮಿಕ ಅಲ್ಪಸಂಖ್ಯಾತರಾಗುವುದರಿಂದ ಸಂವಿಧಾನ ಬದ್ಧ ಎಲ್ಲ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗಲಿದೆ.
– ಡಾ| ಶ್ರೀ ಸಿದ್ಧರಾಮ ಸ್ವಾಮೀಜಿ,
ನಾಗನೂರು ರುದ್ರಾಕ್ಷಿಮಠ

ಲಿಂಗಾಯತ- ವೀರಶೈವ ರಾಗಿ ಬಸವ ತತ್ವ ಅನುಸರಿ ಸುತ್ತಿರುವವರ ದಶಕಗಳ ಹೋರಾಟಕ್ಕೆ ಸರ್ಕಾ ರದ ಬೆಂಬಲ
ಸಿಕ್ಕಂತಾಗಿದೆ. ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ನಡೆಸಿದ ಮಠಾಧೀ ಶರಿಗೆ,ರಾಜಕೀಯ ನೇತಾರ ರಿಗೆ, ಬಸವ
ಪ್ರೇಮಿಗಳಿಗೆ ಮತ್ತು ಹೋರಾಟವನ್ನು ಬೆಂಬಲಿಸಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ.

– ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ತರಳಬಾಳು ಜಗದ್ಗುರು ಶಾಖಾ ಮಠದ ಪೀಠಾಧ್ಯಕ್ಷರು, ಸಾಣೆಹಳ್ಳಿ

ಸರ್ಕಾರದ ಈ ನಡೆಯಿಂದ ಯುಗಾದಿ ಹಬ್ಬದ ಸಂಭ್ರಮದಲ್ಲಿರುವ ಕನ್ನಡಿಗರು ಹಾಗೂ ಲಿಂಗಾಯತರಿಗೆ ಅತ್ಯಂತ ಆನಂದವನ್ನುಂಟು ಮಾಡಿದೆ. 900 ವರ್ಷಗಳ ಹಿಂದೆ ಬಸವಣ್ಣ ಕಂಡ ಪ್ರತ್ಯೇಕ ಲಿಂಗಾಯತ ಧರ್ಮದ ಕನಸು ಇಂದು ಸಾಕಾರಗೊಂಡಿದೆ
– ಜಗದ್ಗುರು ತೋಂಟದ ಸಿದ್ಧಲಿಂಗ ಸ್ವಾಮೀಜಿ, ಗದಗ

ರಾಜ್ಯ ಸರ್ಕಾರದ ನಿರ್ಧಾರದಿಂದಾಗಿ ಬಸವಣ್ಣನವರ ತತ್ವ, ಸಿದ್ಧಾತಕ್ಕೆ ಮನ್ನಣೆ ಸಿಕ್ಕಂತಾಗಿದೆ. ಲಿಂಗಾಯತ ಪ್ರತ್ಯೇಕ
ಧರ್ಮಕ್ಕಾಗಿ ಕಳೆದ ಐದಾರು ತಿಂಗಳಿಂದ ತೀವ್ರ ಸ್ವರೂಪದ ಚಳವಳಿ ಮಾಡಲಾಗಿತ್ತು. ಇದೊಂದು ಜನಪರ ಚಳವಳಿ. ಅದಕ್ಕೆ ನ್ಯಾಯ ಸಿಕ್ಕಿದಂತಾಗಿದೆ .

– ಡಾ| ಶಿವಮೂರ್ತಿ ಮುರುಘಾ ಶರಣರು, ಮುರುಘಾ ಮಠ

ಕಾಂಗ್ರೆಸ್‌ ಶವಪೆಟ್ಟಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊನೆಯ ಮೊಳೆ ಹೊಡೆದಿದ್ದಾರೆ. ರಾಜ್ಯ ಸರ್ಕಾರ ಕಳುಹಿಸಿದ ಎಲ್ಲ
ವಿಚಾರಕ್ಕೂ ಕೇಂದ್ರ ಸರ್ಕಾರ ಸೀಲ್‌ ಹಾಕಿ ಕಳಿಸಬೇಕೆಂದಿಲ್ಲ. ವಿಚಾರ ವಿಮರ್ಶೆ ನಂತರ ತೀರ್ಮಾನಕ್ಕೆ ಬರಲಾಗುತ್ತದೆ.

–  ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

ಧರ್ಮದ ವಿಷಯವನ್ನು ಧರ್ಮಾಧಿಕಾರಿಗಳಿಗೆ ಬಿಡಬೇಕು. ಈ ವಿಚಾರದಲ್ಲಿ ರಾಜಕೀಯ ಪಕ್ಷಗಳು ತಲೆ ತೂರಿಸಬಾರದು
ಎಂದು ಮೊದಲೇ ಹೇಳಿದ್ದೆ. ಆದರೆ ಸಿಎಂ ಸಿದ್ದರಾಮಯ್ಯ ಹಿಡನ್‌ ಅಜೆಂಡಾ ಇಟ್ಟುಕೊಂಡು ಸಮಿತಿ ರಚಿಸಿ ತರಾತುರಿಯಲ್ಲಿ ವರದಿ ಪಡೆದು ಕೊಂಡು ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ.

– ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮ ಎಂದು ಸಿದ್ದರಾಮಯ್ಯ ನೇತೃತ್ವದ ಸಂಪುಟ ಶಿಫಾರಸು ಮಾಡಿದೆ. ವೋಟ್‌ ಬ್ಯಾಂಕ್‌ ರಾಜಕೀಯಕ್ಕಾಗಿ ಅವರು ಬೆಂಕಿ ಜತೆ ಸರಸವಾಡುತ್ತಿದ್ದಾರೆ.
– ಪಿ.ಮುರಳೀಧರ್‌ ,ಬಿಜೆಪಿ ರಾಜ್ಯ ಉಸ್ತುವಾರಿ

ಧರ್ಮದ ವಿಷಯವಾಗಿ ಯಾವುದೇ ರಾಜಕೀಯ ಪಕ್ಷವೂ ನಿರ್ಧರಿಸಬಾರದು ಎಂಬುದು ತಮ್ಮ ನಿಲುವು. ಪಕ್ಷದ ನಿಲುವೂ
ಅದೇ ಆಗಿದೆ. ಪಕ್ಷದ ನಿಲುವು ಏನೆಂಬುದನ್ನು ಮೊದಲೇ ತಿಳಿಸಿದ್ದೇನೆ. ಇದರಲ್ಲಿ ಪಕ್ಷ ಹಸ್ತಕ್ಷೇಪ ಮಾಡುವುದಿಲ್ಲ.

– ಡಾ.ಜಿ.ಪರಮೇಶ್ವರ್‌ ಕೆಪಿಸಿಸಿ ಅಧ್ಯಕ್ಷ

ಬಸವಣ್ಣನವರು ಸ್ಥಾಪಿಸಿದ ಧರ್ಮದ ಮಾನ್ಯತೆಗಾಗಿ ಹೋರಾಟ ನಡೆಸಿದ್ದೇವೆ. ರಾಜಕೀಯ ಉದ್ದೇಶಕ್ಕಾಗಿ ಹೋರಾಟ ಮಾಡಿಲ್ಲ. ಬಸವ ತತ್ವ ಒಪ್ಪುವ ವೀರಶೈವರೂ ಲಿಂಗಾಯತರು ಎಂದು ಒಪ್ಪಿಕೊಂಡಿದೆ.
– ಡಾ. ಶರಣ ಪ್ರಕಾಶ್‌ ಪಾಟೀಲ್‌, ಜಾಗತಿಕ ಲಿಂಗಾಯತ ಮಹಾಸಭೆ ರಾಜ್ಯಾಧ್ಯಕ್ಷ.
(ವೈದ್ಯಕೀಯ ಶಿಕ್ಷಣ ಸಚಿವ)

ನಮಗೆ ಇಂದು ಅತ್ಯಂತ ಸಂತಸದ ದಿನ. ಸ್ವತಃ ಮುಖ್ಯಮಂತ್ರಿ ಅವರೇ ಬಸವಣ್ಣನ ಅನುಯಾಯಿ. ಅವರು ರಾಜಕೀಯ ಲಾಭಕ್ಕಾಗಿ ಮಾಡುತ್ತಿದ್ದಾರೆಂಬ ಆರೋಪ ಸತ್ಯಕ್ಕೆ ದೂರ. ನಮ್ಮ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತ ಹೋರಾಟಗಾರರಿಗೆ ಅಭಿನಂದನೆಗಳು.
– ವಿನಯ್‌ ಕುಲಕರ್ಣಿ, ಬಸವ ಸೇನೆ ರಾಷ್ಟ್ರೀಯ
ಅಧ್ಯಕ್ಷ (ಗಣಿ ಮತ್ತು ಭೂವಿಜ್ಞಾನ ಸಚಿವ)

ಲಿಂಗಾಯತ ಅಲ್ಪಸಂಖ್ಯಾತ ಧರ್ಮ ಮಾನ್ಯತೆಗೆ ಸರಕಾರ ಶಿಫಾರಸು ಮಾಡಿರುವುದು ಲಿಂಗಾಯತ ಮಠಾಧೀಶರು,
ಸಮಾಜದ ಜನರ ಹೋರಾಟಕ್ಕೆ ಸಂದ ಜಯವಾಗಿದೆ. ಲಿಂಗಾಯತ ಬದುಕಿನ ಪ್ರಶ್ನೆಯಾಗಿ ಕಳೆದೊಂದು ವರ್ಷದಿಂದ
ಹೋರಾಟ ನಡೆದಿತ್ತೆ ವಿನಃ ಯಾರ ವಿರುದ್ಧವೂ ಅಲ್ಲ.

–  ಬಸವರಾಜ ಹೊರಟ್ಟಿ,
ಜಾಗತಿಕ ಲಿಂಗಾಯತ ಮಹಾಪರಿಷತ್ತು ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next