Advertisement

ಭದ್ರತೆ ಕಾರಣ; ಸೆಂಟ್ರಲ್‌ ನಿಲ್ದಾಣದ 2ನೇ ಪ್ರವೇಶ ದ್ವಾರಇನ್ನು ಬಂದ್!

09:59 AM Oct 24, 2018 | Team Udayavani |

ಮಹಾನಗರ: ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ಬಂದು ಹೋಗುವ ಪ್ರಯಾಣಿಕರಿಗೆ ಮುಖ್ಯ ದ್ವಾರದ ಹೊರತಾಗಿ ಅತ್ತಾವರ ಕಡೆಯಿಂದ ಮತ್ತೂಂದು ಪ್ರವೇಶ ದ್ವಾರ (ದ್ವಿತೀಯ ದ್ವಾರ)ವಿದೆ. ಆದರೆ ಪಾಲ್ಘಾಟ್‌ ರೈಲ್ವೇ ವಿಭಾಗ ಈಗ ಭದ್ರತೆ ಹಾಗೂ ಕಾಮಗಾರಿಯ ನೆಪವೊಡ್ಡಿ ಪ್ರಯಾಣಿಕರಿಗೆ ಹೆಚ್ಚು ಅನುಕೂಲಕರವಾಗಿರುವ 2ನೇ ಪ್ರವೇಶ ದ್ವಾರವನ್ನು ಮುಚ್ಚಲು ತೀರ್ಮಾನಿಸಿದೆ. ಇನ್ನು ಅತ್ತಾವರ ಕಡೆಯಿಂದ ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ಹೋಗ ಬಯಸುವರು ಕೂಡ ಹಂಪನಕಟ್ಟೆ ಮೂಲಕವಾಗಿಯೇ ಬಂದು ಮುಖ್ಯ ದ್ವಾರದಿಂದಲೇ ಪ್ರವೇಶ ಪಡೆಯಬೇಕಾಗಿದೆ.

Advertisement

ಅತ್ತಾವರ ಭಾಗದಲ್ಲಿರುವ ಎರಡನೇ ಪ್ರವೇಶ ದ್ವಾರವನ್ನು ಬಹಳಷ್ಟು ವರ್ಷಗಳಿಂದ ಪ್ರಯಾಣಿಕರು ಬಳಸುತ್ತಿದ್ದಾರೆ. ರೈಲ್ವೇ ಇಲಾಖೆ ಇದನ್ನು ಅಧಿಕೃತ ಪ್ರವೇಶ ದ್ವಾರವಾಗಿ ಪರಿಗಣಿಸಲಿರಲಿಲ್ಲ. ಆದರೆ ಇದನ್ನು ಅಭಿವೃದ್ಧಿಪಡಿಸಿ ಅಧಿಕೃತವಾಗಿ ದ್ವಿತೀಯ ಪ್ರವೇಶ ದ್ವಾರವಾಗಿ ಪರಿಗಣಿಸಬೇಕು ಹಾಗೂ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂಬುದಾಗಿ ಪ್ರಯಾಣಿಕರಿಂದ ಹಾಗೂ ರೈಲ್ವೇ ಬಳಕೆದಾರರಿಂದ ನಿರಂತರ ಬೇಡಿಕೆಯ ಹಿನ್ನೆಲೆಯಲ್ಲಿ ಪಾಲ್ಘಾಟ್‌ ವಿಭಾಗವು ಕಚ್ಚಾ ಸ್ಥಿತಿಯಲ್ಲಿದ್ದ ಈ ಪ್ರವೇಶ ದ್ವಾರ ರಸ್ತೆಯನ್ನು ದುರಸ್ತಿಗೊಳಿಸಿ ಪ್ರಯಾಣಿಕರು, ಆಟೋ ರಿಕ್ಷಾ ಹಾಗೂ ವಾಹನಗಳಿಗೆ ಮುಕ್ತಗೊಳಿಸಲಾಗಿತ್ತು. ಈ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಯ ದೃಷ್ಟಿಯಿಂದ ಸ್ಕ್ಯಾನಿಂಗ್‌ ವ್ಯವಸ್ಥೆ ಹಾಗೂ ಸಿಸಿ ಕೆಮರಾ ಅಳವಡಿಸಲಾಗಿತ್ತು.

ಭದ್ರತೆ, ಕಾಮಗಾರಿ ನೆಪ
ಸೆಂಟ್ರಲ್‌ ನಿಲ್ದಾಣದಲ್ಲಿ ಈಗ ಇರುವ ಎರಡನೇ ಪ್ರವೇಶ ದ್ವಾರ ಅಧಿಕೃತವಲ್ಲ. ಇಲ್ಲಿ ಎರಡನೇ ಪ್ರವೇಶ ದ್ವಾರಕ್ಕೆ ಅವಕಾಶವಿಲ್ಲ. ಹೀಗಾಗಿ ಭದ್ರತಾ ಕಾರಣಗಳಿಂದಾಗಿ ಇದನ್ನು ಮುಚ್ಚಲಾಗುತ್ತಿದೆ ಎಂಬುದು ಇದರ ಹಿಂದಿರುವ ಮುಖ್ಯ ಕಾರಣವಾಗಿದೆ. ಆದರೆ ಪ್ರಯಾಣಿಕರಿಂದ ವ್ಯಕ್ತವಾಗುವ ವಿರೋಧವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಇದು ತಾತ್ಕಾಲಿಕ ಎಂದು ಪ್ರತಿಬಿಂಬಿಸಲಾಗುತ್ತಿದೆ. 

ಈ ಭಾಗದಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ ಈಗ ಮುಚ್ಚಲಾಗುತ್ತಿದೆ. ಕಾಮಗಾರಿಗಳು ಪೂರ್ತಿಯಾದ ಬಳಿಕ ಪ್ರವೇಶಕ್ಕೆ ಮುಕ್ತಗೊಳಿಸಲಾಗುವುದು ಎಂದು ಪಾಲ್ಘಾಟ್‌ ವಿಭಾಗೀಯ ಪ್ರಬಂಧಕರು ವಿವರಿಸುತ್ತಾರೆ.

ಮುಖ್ಯ ಪ್ರವೇಶ ದ್ವಾರದಲ್ಲಿ ದಟ್ಟನೆ
ಸೆಂಟ್ರಲ್‌ ರೈಲು ನಿಲ್ದಾಣದ ಪ್ರವೇಶ ದ್ವಾರದಲ್ಲಿ ವಾಹನ ಹಾಗೂ ಪ್ರಯಾಣಿಕರ ದಟ್ಟನೆ ಕಡಿಮೆ ಮಾಡುವ ಉದ್ದೇಶದಿಂದ ಎರಡನೇ ಪ್ರವೇಶ ದ್ವಾರವನ್ನು ಅಭಿವೃದ್ಧಿ ಪಡಿಸಲಾಗಿತ್ತು. ಇಲ್ಲಿಂದ ಎರಡನೇ ಹಾಗೂ ಮೂರನೇ ಫ್ಲ್ಯಾಟ್ ಫಾರಂ ಪ್ರವೇಶಿಸಲು ಅನುಕೂಲವಾಗಿತ್ತು. ವಯಸ್ಸಾದವರು, ರೋಗಿಗಳು ಕೂಡ ಪಾದಚಾರಿ ಮೇಲ್ಸೇತುವೆ ಹತ್ತುವ ಆವಶ್ಯಕತೆ ಇರುವುದಿಲ್ಲ. ಸಾಮಾನ್ಯವಾಗಿ ಬೆಳಗ್ಗೆ, ಸಂಜೆ ನಿಲ್ದಾಣದಲ್ಲಿ ಭಾರೀ ಜನ, ವಾಹನ ದಟ್ಟನೆ ಉಂಟಾಗುತ್ತದೆ. 2 ಪ್ರವೇಶ ದ್ವಾರಗಳ ಮೂಲಕ ಪ್ರಯಾಣಿಕರು ನಿಲ್ದಾಣದಿಂದ ನಿರ್ಗಮಿಸುವ ಅವಕಾಶ ಇದ್ದ ಕಾರಣ ಹೆಚ್ಚಿನ ಸಮಸ್ಯೆ ಆಗುತ್ತಿರಲಿಲ್ಲ. ಎರಡನೇ ಪ್ರವೇಶ ದ್ವಾರವನ್ನು ಮುಚ್ಚುವುದರಿಂದ ಭಾರಿ ದಟ್ಟನೆ ಉಂಟಾಗುವ ಸಾಧ್ಯತೆಗಳಿವೆ.

Advertisement

ಸೌಲಭ್ಯ ಕಡಿತ ಸಲ್ಲದು
ಮಂಗಳೂರು ರೈಲು ನಿಲ್ದಾಣದಲ್ಲಿ ಸೌಲಭ್ಯಗಳನ್ನು ಹೆಚ್ಚಿಸುವ ಬದಲು ಇರುವ ಸೌಲಭ್ಯಗಳನ್ನು ಕಡಿತಗೊಳಿಸಲು ರೈಲ್ವೇ ಇಲಾಖೆ ಮುಂದಾಗುತ್ತಿರುವುದು ಸರಿಯಲ್ಲ. ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ರೈಲುಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರಯಾಣಿಕರು ಹಾಗೂ ವಾಹನಗಳ ದಟ್ಟನೆಯೂ ಅಧಿಕವಾಗುತ್ತಿದೆ. ಆದುದರಿಂದ ಎರಡನೇ ಪ್ರವೇಶ ದ್ವಾರ ಇಲ್ಲಿಗೆ ಅವಶ್ಯವಾಗಿದೆ. ಇಲ್ಲಿ ಭದ್ರತಾ ವ್ಯವಸ್ಥೆಯ ಸಮಸ್ಯೆ ಇದ್ದರೆ ಇಲಾಖೆ ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕಾಗಿತ್ತು. ಅದನ್ನು ಬಿಟ್ಟು ಮುಚ್ಚಲು ಕ್ರಮಕೈಗೊಂಡಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವತ್ರಿಕವಾಗಿ ಕೇಳಿಬರುತ್ತಿದೆ.

ತಡೆ ನಿರ್ಮಾಣ
ಎರಡನೇ ಪ್ರವೇಶ ದ್ವಾರದಲ್ಲಿ ಪ್ರವೇಶ ನಿರ್ಬಂಧಕ್ಕೆ ಈಗಾಗಲೇ ಎರಡು ಬದಿ ಕಂಬಗಳನ್ನು ಅಳವಡಿಸಲಾಗಿದೆ. ಇದಕ್ಕೆ ಅಡ್ಡಪಟ್ಟಿಗಳನ್ನು ಜೋಡಿಸಲಾಗುತ್ತದೆ. ಇದಕ್ಕೆ ಪ್ರಯಾಣಿಕರು, ರಿಕ್ಷಾ, ವಾಹನಗಳ ಚಾಲಕರು, ಸಾರ್ವಜನಿಕರಿಂದಲೂ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಇಲ್ಲಿ ಪ್ರವೇಶ ನಿರ್ಬಂಧದಿಂದ ಪ್ರಯಾಣಿಕರು ಮುಖ್ಯ ಪ್ರವೇಶ ದ್ವಾರವನ್ನೇ ಅವಲಂಬಿಸಬೇಕಾಗುತ್ತದೆ. ನಾವು ಈಗಾಗಲೇ ಸಂಸದರ ಗಮನಕ್ಕೆ ಇದನ್ನು ತಂದಿದ್ದೇವೆ ಎಂದು ರಿಕ್ಷಾಚಾಲಕರು ಹೇಳಿದ್ದಾರೆ. 

ಮುಚ್ಚದಂತೆ ಸೂಚನೆ
ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಎರಡನೇ ಪ್ರವೇಶ ದ್ವಾರ ಮುಚ್ಚಲು ಮುಂದಾಗಿರುವುದು ಗಮನಕ್ಕೆ ಬಂದಿದೆ. ಈ ಪ್ರವೇಶ ದ್ವಾರವನ್ನು ಮುಚ್ಚದಂತೆ ಈಗಾಗಲೇ ಪಾಲ್ಗಾಟ್‌ ವಿಭಾಗೀಯ ಪ್ರಬಂಧಕರಿಗೆ ನಾನು ಸೂಚನೆ ನೀಡಿದ್ದೇನೆ.
ನಳಿನ್‌ ಕುಮಾರ್‌ ಕಟೀಲು,
  ಸಂಸದರು

ಪ್ರವೇಶ ದ್ವಾರ ಮುಚ್ಚಲು ಕ್ರಮ 
ಸೆಂಟ್ರಲ್‌ ನಿಲ್ದಾಣದಲ್ಲಿ ಎರಡನೇ ಪ್ರವೇಶ ದ್ವಾರವನ್ನು ಮುಚ್ಚಲು ಕ್ರಮವಹಿಸಲಾಗಿದೆ. ಈ ಭಾಗದಲ್ಲಿ ನಿರ್ಮಾಣ ಕಾಮಗಾರಿಗಳು ನಡೆಯಲಿದೆ. ಅದುದರಿಂದ ಪ್ರವೇಶವನ್ನು ನಿರ್ಬಂಧಿಸಲೇ ಬೇಕಾಗುತ್ತದೆ.
ಪ್ರತಾಪ್‌ಸಿಂಗ್‌ ಸಮಿ,
  ವಿಭಾಗೀಯ ಪ್ರಬಂಧಕರು,
  ಪಾಲ್ಘಾಟ್‌ ವಿಭಾಗ

‡ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next