ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಬಗ್ಗೆ ನಕ್ಸಲೀಯರು ಸಂಚು ರೂಪಿಸಿದ್ದ ಆಘಾತಕಾರಿ ಮಾಹಿತಿ ಹೊರಬಿದ್ದಿತ್ತು. ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನೆಗೂ ನಕ್ಸಲೀಯರಿಗೂ ನಂಟು ಇದೆ ಎಂಬ ಬಗ್ಗೆ “ರಿಪಬ್ಲಿಕ್ ಟಿವಿ’ ಬುಧವಾರ ವರದಿ ಮಾಡಿದೆ.
2017ರ ಮಾ.19ರಂದು ನಾಗ್ಪುರದಲ್ಲಿ ಈ ಬಗ್ಗೆ ಸಭೆಯೂ ನಡೆದಿತ್ತು. ಈ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ ಎಂಬ ಸುಳ್ಳು ವಿಚಾರವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಬೇಕು. ಕಲ್ಲು ತೂರಾಟ ಮಾಡಿ ಪೆಲೆಟ್ ಗನ್ನಿಂದ ಗಾಯಗೊಂಡವರಿಗೆ ಸುಪ್ರೀಂಕೋರ್ಟ್ನಲ್ಲಿ ಕಾನೂನು ನೆರವು ನೀಡುವ ಬಗ್ಗೆಯೂ ಚರ್ಚಿಸಲಾಗಿದೆ. ಈ ಸಭೆಯಲ್ಲಿ ಸದ್ಯ ಬಂಧನದಲ್ಲಿರುವ ಸುರೇಂದ್ರ ಗಡ್ಲಿಂಗ್ ಮತ್ತು ಶೋಮಾ ಸೆನ್ ಕೂಡ ಭಾಗವಹಿಸಿದ್ದರು. ಜತೆಗೆ ಸುಧಾ ಭಾರದ್ವಾಜ್ ಕಾಮ್ರೆಡ್ ಪ್ರಕಾಶ್ ಎಂಬಾತನಿಗೂ ಪತ್ರ ಬರೆದಿದ್ದಾನೆ. ಈ ಪತ್ರದ ವಿವರವೂ ಲಭ್ಯವಾಗಿದೆ.
ಕಾನೂನು ನೆರವು ನೀಡುವ ಬಗ್ಗೆ ಛತ್ತೀಸ್ಗಡದಲ್ಲಿರುವ ಜಗದಾಳು³ರ ಕಾನೂನು ಸೇವಾ ಸಮಿತಿ ಮತ್ತು ಬಸ್ತರ್ ಸಾಲಿಡಾರಿಟಿ ಸಮಿತಿಯ ಮೂಲಕ ನೆರವು ನೀಡುವ ಬಗ್ಗೆ ಚರ್ಚಿಸಲಾಗಿದೆ. ಅಂಕಿತ್ ಮತ್ತು ಗೌತಮ್ ನವಲಖಾ ಎಂಬುವರು ಕಣಿವೆ ರಾಜ್ಯದ ಪ್ರತ್ಯೇಕತಾವಾದಿ ನಾಯಕರ ಜತೆ ನಿಕಟ ಸಂಪರ್ಕದಲ್ಲಿದ್ದರು ಎಂಬ ಆಘಾತಕಾರಿ ವಿಚಾರ ಬಹಿರಂಗವಾಗಿದೆ.
ನಕ್ಸಲೀಯ ಸಂಘಟನೆಗಳ ಜತೆಗೆ ಸಂಬಂಧ ಹೊಂದಿದ್ದಕ್ಕಾಗಿ ದೆಹಲಿ ವಿವಿಯ ಪ್ರಾಧ್ಯಾಪಕ ಸಾಯಿಬಾಬಾ ಅವರಿಗೆ ಶಿಕ್ಷೆಯಾಗಿರುವುದು ನಗರ ಪ್ರದೇಶದಲ್ಲಿರುವ ನಕ್ಸಲ್ ಬೆಂಬಲಿಗೆ ಆಘಾತ ತಂದೊಡ್ಡಿದೆ. ಹೀಗಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಪ್ರತ್ಯೇಕತಾವಾದಿಗಳು ಉಗ್ರಗಾಮಿಗಳಿಗೆ ಹಣಕಾಸಿನ ನೆರವು ನೀಡುವ ರೀತಿಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ನಕ್ಸಲ್ ಬೆಂಬಲಿಗರಿಗೂ ಹಣಕಾಸು ನೆರವು ಸಿಗುವಂತಾಗಬೇಕು. ಈ ವಿಚಾರದಲ್ಲಿ ಕಾನೂನು ಕ್ರಮಗಳನ್ನು ಎದುರಿಸುವಂತಾದರೆ ಅದಕ್ಕೂ ಸಿದ್ಧವಾಗಬೇಕು ಎಂಬ ಆಘಾತಕಾರಿ ನಿರ್ಣಯವನ್ನೂ ಕೈಗೊಳ್ಳಲಾಗಿದೆ ಎಂದು ಚಾನೆಲ್ ವರದಿ ಮಾಡಿದೆ.
ನವದೆಹಲಿಯಲ್ಲಿರುವ ಜವಾಹರ್ಲಾಲ್ ನೆಹರೂ ವಿವಿ ಮತ್ತು ಮುಂಬೈನಲ್ಲಿರುವ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್ಎಸ್)ನಲ್ಲಿರುವ ಕೆಲವು ಸಂಶೋಧನಾ ವಿದ್ಯಾರ್ಥಿಗಳನ್ನು ಹಣ ಸಂಗ್ರಹಕ್ಕಾಗಿ ನಿಯೋಜಿಸಲಾಗಿದೆ. ಕಾಮ್ರೆಡ್ ಪ್ರಶಾಂತ್ ಬಂಧನದ ಬಳಿಕ ಸಂಘಟನೆಗೆ ಧನ ಸಹಾಯ ನಿಂತು ಹೋಗಿದೆ ಎಂದು ಪತ್ರದಲ್ಲಿ ಪ್ರಸ್ತಾಪ ಮಾಡಲಾಗಿದೆ. ಈ ಬಗ್ಗೆ ಸುಧಾ ಭಾರದ್ವಾಜ್ ಅವರಿಂದ ಸ್ಪಷ್ಟನೆ ಬಯಸಿದಾಗ ಅವರು ಯಾವುದೇ ರೀತಿಯ ಹೇಳಿಕೆ ನೀಡಲು ಒಪ್ಪಲಿಲ್ಲ ಎಂದು ಚಾನೆಲ್ ಹೇಳಿಕೊಂಡಿದೆ.
ಇಬ್ಭಾಗದತ್ತ ಪಿಡಿಪಿ?
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಹಾಗೂ ಬಿಜೆಪಿ ಮೈತ್ರಿ ಸರ್ಕಾರ ಉರುಳುತ್ತಿದ್ದಂತೆಯೇ ಪಿಡಿಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಇದರಿಂದಾಗಿ ಶೀಘ್ರದಲ್ಲೇ ಪಕ್ಷ ಒಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ವಿರುದ್ಧ ಪಕ್ಷದ ಶಾಸಕ ಇಮ್ರಾನ್ ರಜಾ ಅನ್ಸಾರಿ ತಿರುಗಿಬಿದ್ದಿದ್ದಾರೆ. ಇವರೊಂದಿಗೆ ಇತರ ಹಲವು ಶಾಸಕರೂ ಇದ್ದಾರೆ ಎನ್ನಲಾಗಿದೆ. ಪಕ್ಷ ಕೆಟ್ಟದಾಗಿ ನಡೆಸಿಕೊಂಡಿ ದ್ದರಿಂದಾಗಿ ಪಕ್ಷ ತೊರೆಯಲು ಹಲವು ಶಾಸಕರು ಸಜ್ಜಾಗಿದ್ದಾರೆ ಎಂದು ಅನ್ಸಾರಿ ಇತ್ತೀಚೆಗೆ ಹೇಳಿ ದ್ದರು. ಪಿಡಿಪಿ 28 ಶಾಸಕರನ್ನು ಹೊಂದಿದ್ದು, 14 ರಿಂದ 15 ಶಾಸಕರು ಪಕ್ಷ ತೊರೆಯುವ ಸಾಧ್ಯತೆ ಯಿದೆ ಎನ್ನಲಾಗಿದೆ. ಅಲ್ಲದೆ ಪಕ್ಷದ ಅಧ್ಯಕ್ಷ ಸ್ಥಾನದಿಂದ ಮೆಹಬೂಬಾರನ್ನು ಕೆಳಗಿಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬ ಶಂಕೆಯಿದೆ ಎಂದು ಪಿಡಿಪಿ ಮೂಲಗಳು ತಿಳಿಸಿವೆ.