Advertisement

ನಾಳೆಯಿಂದ ಎರಡನೇ ಹಂತದ ಲಾಕ್‌ಡೌನ್‌

12:21 AM Apr 14, 2020 | Sriram |

ಬೆಂಗಳೂರು: ಕೇಂದ್ರ ಸರಕಾರ ಜಾರಿಗೊಳಿಸಿರುವ ಒಂದು ಹಂತದ ಲಾಕ್‌ಡೌನ್‌ ಪೂರೈಸಿರುವ ರಾಜ್ಯವು ಬುಧವಾರದಿಂದ ಎರಡನೇ ಹಂತಕ್ಕೆ ಸಿದ್ಧವಾಗುತ್ತಿದೆ. ಇನ್ನೊಂದೆಡೆ ರಾಜ್ಯದಲ್ಲಿ ಲಾಕ್‌ಡೌನ್‌ ಆರಂಭವಾಗಿ ಬರೋಬ್ಬರಿ ಒಂದು ತಿಂಗಳಾಗಿದೆ.

Advertisement

ಈ ಕೋವಿಡ್ 19 ಲಾಕ್‌ಡೌನ್‌ ಕ್ರಮದಿಂದ ರಾಜ್ಯಕ್ಕೆ ಸಿಕ್ಕಿದ್ದು. ಕೇವಲ “ಸೋಂಕು ನಿಯಂತ್ರಣ’ ಮಾತ್ರವಲ್ಲ! ಆರೋಗ್ಯ ವ್ಯವಸ್ಥೆಯ ಲೋಪ ಎತ್ತಿ ಹಿಡಿದು ಅದರ ಸುಧಾರಣೆಗೆ ಸಹಕಾರಿಯಾಗಿದೆ. ಜತೆಗೆ ತಂತ್ರಜ್ಞಾನದ ಸೂಕ್ತ ಬಳಕೆ, ಜನರ ಜೀವನ ಶೈಲಿಯ ಬದಲಾವಣೆಗೂ ಕಾರಣವಾಗಿದೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆಯಾಗುತ್ತಿದ್ದಂತೆ ರಾಜ್ಯ ಸರಕಾರದಿಂದ (ಮಾರ್ಚ್‌ 14) ಲಾಕ್‌ಡೌನ್‌ ಘೋಷಣೆಯಾಯಿತು. ಬಳಿಕ ಕೇಂದ್ರ ಸರಕಾರದ ಮೊದಲ ಹಂತದ ಕ್ರಮವಾದ 21 ದಿನಗಳ ಲಾಕ್‌ಡೌನ್‌ ಆರಂಭವಾಗಿ ಮಂಗಳವಾರ ಅಂತಿಮ ಹಂತ ತಲುಪಿದೆ. ಮುಂದೆ “ಸೀಲ್‌ಡೌನ್‌’ ಅಥವಾ “ವಿಭಿನ್ನ ಮಾದರಿ ಲಾಕ್‌ಡೌನ್‌’ ಜಾರಿಯಾಗಬಹುದು ಎಂಬ ಗೊಂದಲ ಎಲ್ಲರಲ್ಲಿದೆ.

ಈ ಎಲ್ಲದರ ನಡುವೆ ಈ ಲಾಕ್‌ಡೌನ್‌ ಕೇವಲ ರಾಜ್ಯವನ್ನು ಕೋವಿಡ್ 19 ಸೋಂಕಿತರ ಪಟ್ಟಿಯಲ್ಲಿ ಮೂರನೇ ಸ್ಥಾನದಿಂದ 15ನೇ ಸ್ಥಾನಕ್ಕೆ ಇಳಿಸಲು ಮಾತ್ರ ಸೀಮಿತವಾಗದೆ ವೈದ್ಯಕೀಯ ವ್ಯವಸ್ಥೆ ಬಲಿಷ್ಠಗೊಳಿಸಿದೆ. ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಶಿಸ್ತಿನ ಪಾಠ ಕಲಿಸಿ ಬದಲಾವಣೆಗೆ ನಾಂದಿ ಹಾಡಿದೆ. ಜತೆಗೆ ತಂತ್ರಜ್ಞಾನ ಪರಿಣಾಮಕಾರಿ ಬಳಕೆಗೂ ಮುನ್ನುಡಿ ಬರೆದಿದೆ ಎನ್ನುತ್ತಾರೆ ತಜ್ಞರು.

ತಂತ್ರಜ್ಞಾನ ಯಶಸ್ವಿ ಬಳಕೆಗೆ ಬುನಾದಿ
ಅನೇಕರಿಗೆ ಇಂಟರ್‌ನೆಟ್‌, ಮೊಬೈಲ್‌, ಸಾಮಾಜಿಕ ಜಾಲತಾಣ ಎಂದರೆ ಮೋಜಿನ ವಸ್ತುಗಳಾಗಿದ್ದವು. ಆದರೆ ಸರಕಾರದಿಂದ ಹಿಡಿದು ಶಾಲೆಗಳು, ಆಸ್ಪತ್ರೆಗಳು, ಖಾಸಗಿ ಕಂಪೆನಿಗಳು ಸಹಿತ ಅನೇಕ ಕಡೆ ಈ ಸಾಮಾಜಿಕ ಜಾಲತಾಣ, ಮೊಬೈಲ್‌ ತಂತ್ರಜ್ಞಾನದ ಸೂಕ್ತ ಹಾಗೂ ಪರಿಣಾಮಕಾರಿ ಬಳಕೆಯಾಯಿತು. ಟೆಲಿಮೆಡಿಸಿನ್‌, ಆನ್‌ಲೈನ್‌ ತರಗತಿ, ಆನ್‌ಲೈನ್‌ ಕೆಲಸ (ವರ್ಕ್‌ ಫ್ರಂ ಹೋಮ್‌) ಹೆಚ್ಚು ಬಳಕೆಗೆ ಬಂದವು ಎನ್ನುತ್ತಾರೆ ತಂತ್ರಜ್ಞಾನ ವಲಯದ ತಜ್ಞರು.

Advertisement

ವೈದ್ಯಕೀಯ ವ್ಯವಸ್ಥೆ ಬಲಿಷ್ಠ
 ರಾಜ್ಯದ ಸರಕಾರಿ ಆಸ್ಪತ್ರೆಗಳು ಸೂಕ್ತ ನಿರ್ವಹಣೆ ಇಲ್ಲದೆ ಅನಾರೋಗ್ಯಕ್ಕೆ ತುತ್ತಾಗಿದ್ದವು. ಕೋವಿಡ್ 19 ಸೋಂಕಿತರಿಗೆ ಚಿಕಿತ್ಸೆ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಜಿಲ್ಲಾಸ್ಪತ್ರೆಗಳವರೆಗೂ ಎಲ್ಲ ಸರಕಾರಿ ಆಸ್ಪತ್ರೆಗಳೂ ಉನ್ನತೀಕರಣಗೊಂಡಿವೆ.
ರಾಜ್ಯದ ವೆಂಟಿಲೇಟರ್‌ ಸಮಸ್ಯೆ ಅರಿವಿಗೆ ಬಂದು, ಹೆಚ್ಚುವರಿ ಖರೀದಿಗೆ ಸರಕಾರ ಮುಂದಾಯಿತು.
ಆಸ್ಪತ್ರೆಗಳಿಗೆ ಅಗತ್ಯ ವೈದ್ಯಕೀಯ ಉಪಕರಣ ಪೂರೈಕೆಯಾದವು. ಹೆಚ್ಚುವರಿ ಬೆಡ್‌ಗಳು ಮಂಜೂರಾದವು.
ಖಾಸಗಿ ಆಸ್ಪತ್ರೆಗಳೂ ಚಿಕಿತ್ಸೆ ನೀಡಲು ತಯಾರಾದವು.
ರಾಜ್ಯದ 15 ಪ್ರಯೋಗಾಲಯಗಳಿಗೆ ಕೇಂದ್ರ ಸರಕಾರದ ಮಾನ್ಯತೆ ದೊರೆಯಿತು, ವೈದ್ಯರಿಗೆ ಅಗತ್ಯ ತರಬೇತಿ ಲಭ್ಯವಾಯಿತು.
ಮುಖ್ಯವಾಗಿ ಎಂಥ ಆರೋಗ್ಯ ತುರ್ತು ಪರಿಸ್ಥಿತಿ ಬಂದರೂ ನಿಭಾಯಿಸಬಲ್ಲ ವೈದ್ಯಕೀಯ ವ್ಯವಸ್ಥೆ ಇದೆ ಎಂಬ ವಿಶ್ವಾಸ ಬಂದಿದೆ.
ಜನರಿಗೆ ಮನೆಯಲ್ಲಿಯೇ ಉತ್ತಮ ಜೀವನ ಶೈಲಿಯಿಂದ ಹೇಗೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಮನವರಿಕೆಯಾಗಿದೆ.
-ಡಾ| ಸಿ.ಎನ್‌.ಮಂಜುನಾಥ್‌ ನಿರ್ದೇಶಕರು, ಜಯದೇವ ಹೃದ್ರೋಗ ಸಂಸ್ಥೆ

ಸವಾಲುಗಳು ಬದಲಾವಣೆಗೆ ದಾರಿಯಾದವು
ಈ ಲಾಕ್‌ಡೌನ್‌ನಿಂದ ಸಾಕಷ್ಟು ಜನರಿಗೆ ಕಷ್ಟವಾಗಿರಬಹುದು. ಆಹಾರ, ಆರ್ಥಿಕತೆ ಸಮಸ್ಯೆಯೂ ಉಂಟಾಗಿದೆ. ಇಂತಹ ಸವಾಲುಗಳು ಬದಲಾವಣೆಗೆ ಅವಕಾಶ ಮಾಡಿಕೊಟ್ಟವು.
ಬಹುತೇಕ ಜನರು ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಲು ಈ ಲಾಕ್‌ಡೌನ್‌ನಲ್ಲಿ ಅವಕಾಶ ಸಿಕ್ಕಿತು.
ಮಿತಬಳಕೆ, ಸ್ವಯಂ ಶಿಸ್ತು, ಸಾಮಾಜಿಕ ಅಂತರ, ಸ್ವತ್ಛತೆ, ತಂತ್ರಜ್ಞಾನ ಸೂಕ್ತ ಬಳಕೆ, ಆರೋಗ್ಯಕರ ಊಟ ರೂಢಿ.
ಮದ್ಯಪಾನ, ಧೂಮಪಾನದಂಥ ಚಟಗಳಿಂದ ಸಾಕಷ್ಟು ಜನ ದೂರ.
ಕುಟುಂಬದಿಂದ ದೂರ ಇದ್ದವರು ಮನೆಯಲ್ಲಿ ಸಮಯ ಕಳೆದರು.
ವೈಯಕ್ತಿಕ ಅಧ್ಯಯನ, ಹವ್ಯಾಸಗಳಿಗೆ ಸಮಯ ಸಿಕ್ಕಿತು.
ಯಾವುದೇ ತುರ್ತು ಪರಿಸ್ಥಿತಿ ಎದುರಿಸಬಹುದು, ಕಷ್ಟ ಕಾಲವನ್ನು ಸರಳವಾಗಿ ನಿಭಾಯಿಸಬಹುದು ಎಂದು ಜನರಲ್ಲಿ ಆತ್ಮವಿಶ್ವಾಸ ಮೂಡಿತು.
ಕೋವಿಡ್ 19 ಸೋಂಕಿನಿಂದ ಜನರು ಹಿಂದಿಗಿಂತಲೂ ಸ್ವತ್ಛತೆಗೆ ಆದ್ಯತೆ ನೀಡಲಾರಂಭಿಸಿದ್ದಾರೆ. ಅದು ಕೈ ತೊಳೆಯುವುದರಿಂದ ಹಿಡಿದು ಮನೆ, ಸುತ್ತಮುತ್ತಲ ಪರಿಸರ ಸ್ವತ್ಛತೆಗೂ ಮುಂದಾಗಿದ್ದಾರೆ.
ಡಾ| ಬಿ.ಎನ್‌. ಗಂಗಾಧರ್‌, ನಿಮ್ಹಾನ್ಸ್‌ ನಿರ್ದೇಶಕ

-  ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next