Advertisement

ಸಯಾನ್‌ ಗಣೇಶೋತ್ಸವದ ದ್ವಿತೀಯ ಪೂರ್ವಭಾವಿ ಸಭೆ

12:20 PM Jul 26, 2018 | |

ಮುಂಬಯಿ: ನಗರದ ಶ್ರೀಮಂತ ಗಣಪತಿ  ಪ್ರಸಿದ್ಧಿಯ ಜಿಎಸ್‌ಬಿ ಸೇವಾ ಮಂಡಲ ಸಯಾನ್‌ ಇದರ 64 ನೇ ವಾರ್ಷಿಕ ಗಣೇಶೋತ್ಸವದ ಪೂರ್ವ ತಯಾರಿಗಾಗಿ ಕಾರ್ಯಕರ್ತರ ದ್ವಿತೀಯ ಪೂರ್ವಭಾವಿ ಸಭೆಯು ಜು. 21 ರಂದು ಸಂಜೆ ಮಂಡಲದ ಸಯಾನ್‌ನ ಶ್ರೀ ಗುರು ಗಣೇಶ್‌ ಪ್ರಸಾದ್‌ ಸಭಾಗೃಹದಲ್ಲಿ ಜರಗಿತು.

Advertisement

ಕಿಂಗ್‌ಸರ್ಕಲ್‌ ಸುಕೃತೀಂದ್ರ ನಗರದಲ್ಲಿ ಸೆ. 13 ರಿಂದ ಸೆ. 17 ರವರೆಗೆ ಐದು ದಿನಗಳ ಕಾಲ ಗಣೇಶೋತ್ಸವವು ಶ್ರೀ ಕಾಶಿ ಮಠಾಧೀಶ ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿ ಅವರ ಅನುಗ್ರಹ ಹಾಗೂ ಆಶೀರ್ವಾದಗಳೊಂದಿಗೆ ಜರಗಲಿದೆ. ಪೂರ್ವಭಾವಿ ಸಭೆಯ ಆರಂಭದಲ್ಲಿ ಗಣೇಶೋತ್ಸವದ ಪ್ರಧಾನ ಅರ್ಚಕ ವೇದಮೂರ್ತಿ ಬಂಟ್ವಾಳ ಕೃಷ್ಣ ಭಟ್‌ ಇವರಿಂದ ಪ್ರಾರ್ಥನೆ ನಡೆಯಿತು.

ಗಣೇಶೋತ್ಸವ ಆಯೋಜನ ಸಮಿತಿಯ ಸಂಚಾಲಕ ಡಾ| ಭುಜಂಗ ಪೈ ಅವರು ಸಭೆಯ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ ಮಾತನಾಡಿ, ಕಳೆದ ವರ್ಷ ಇದೇ ಸಮಯದಲ್ಲಿ ಗಣೇಶೋತ್ಸವಕ್ಕೆ ಸಂಗ್ರಹಿಸಲಾದ ಮೊಬಲಗಿನ ವಿವರ ಹಾಗೂ ಪ್ರಸಕ್ತ ಸಭೆಯ ದಿನದವರೆಗೆ ಸಂಗ್ರಹಗೊಂಡ ಮೊತ್ತದ ವಿವರವನ್ನು ತಿಳಿಸಿದರು.

ಸೇವಾ ಮಂಡಳದ ಮಾಜಿ ಅಧ್ಯಕ್ಷ ಆರ್‌. ಜಿ. ಭಟ್‌ ಅವರು ಮಾತನಾಡಿ, ವರ್ಷದಿಂದ ವರ್ಷಕ್ಕೆ ನಮ್ಮ ಗಣೇಶೋತ್ಸವದ ಖರ್ಚು ಹೆಚ್ಚುತ್ತಾ ಬರುತ್ತಿದೆ. ಆದ್ದರಿಂದ ಸ್ವಯಂ ಸೇವಕರು, ಕಾರ್ಯಕರ್ತರು ಗಳಿಕೆಯನ್ನು ಅಧಿಕಗೊಳಿಸಲು ಪ್ರಯತ್ನಿಸಬೇಕು ಎಂದರು.

ವೇದಮೂರ್ತಿ ಕೃಷ್ಣ ಭಟ್‌ ಇವರು ಮಾತನಾಡಿ, ನಮ್ಮ ಗುರುವರ್ಯರಾದ ಶ್ರೀ ಕಾಶೀ ಮಠಾಧೀಶ ವೃಂದಾವನಸ್ಥ ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪ್ರೇರಣೆಯಿಂದ ನಮ್ಮ ಗಣೇಶೋತ್ಸವದಲ್ಲಿ ಅನ್ನದಾನವನ್ನು ಪ್ರಾರಂಭ ಮಾಡಲಾಯಿತು. ಭಕ್ತರು ಶ್ರದ್ಧಾಭಕ್ತಿಯಿಂದ ನಮ್ಮ ಗಣಪತಿಯನ್ನು ಸ್ತುತಿಸಿದಾಗ ಫಲ ಪ್ರಾಪ್ತಿಯಾಗುತ್ತದೆ ಎಂದು ನುಡಿದರು.

Advertisement

ಡಾ| ಭುಜಂಗ ಪೈ ಅವರು ಮಾತನಾಡಿ, ಗಣೇಶೋತ್ಸವದ ಪೂರ್ಣ ಕಾರ್ಯಗಳು ಸಾಂಗವಾಗಿ ನೆರವೇರಲು 45 ವಿವಿಧ ಉಪಸಮಿತಿಗಳ ಹೆಸರನ್ನು ವಾಚಿಸಿದರು. ಆಯಾಯ ಸಮಿತಿಗಳಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುವ ಭಕ್ತರು ತಮ್ಮ ಹೆಸರನ್ನು ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದರು.

ಸ್ವಯಂ ಸೇವಕರಾದ ಶ್ರೀನಿವಾಸ ಪ್ರಭು, ಸಹ ಸಂಚಾಲಕ ಜಿ. ಡಿ. ರಾವ್‌ ಅವರು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು. ಸಹ ಸಂಚಾಲಕ ನ್ಯಾಯವಾದಿ ಎಂ. ವಿ. ಕಿಣಿ ಅವರು ಮಾತನಾಡಿ, ಅತೀ ಕಡಿಮೆ ಸಮಯ ಉಳಿದಿರುವುದರಿಂದ ಪ್ಲಾಸ್ಟಿಕ್‌ ಚಿಲದ ಬದಲಿಗೆ ಬೇರೆ ವ್ಯವಸ್ಥೆ ಮಾಡುವುದಕ್ಕಿಂತ ಈ ವರ್ಷ ಪ್ಲಾಸ್ಟಿಕ್‌ ಚೀಲವನ್ನು ಉಪಯೋಗಿಸಲು ಸರಕಾರಕ್ಕೆ ಮನವಿ ಸಲ್ಲಿಸುವಂತೆ ವಿನಂತಿಸಿದರು. ಸೇವಾ ಮಂಡಳದ ಉಪಾಧ್ಯಕ್ಷ ಯಶವಂತ್‌ ಕಾಮತ್‌ ಅವರು ಮಾತನಾಡಿ, ಕಿಂಗ್‌ಸರ್ಕಲ್‌ ಸುಕೃತೀಂದ್ರ ನಗರದಲ್ಲಿ ಗಣೇಶೋತ್ಸವದ ಪೆಂಡಾಲಿನ ಕೆಲಸಗಳು 15 ದಿನಗಳ ಹಿಂದೆ ಪ್ರಾರಂಭಗೊಂಡಿದೆ. ಪೆಂಡಾಲಿನ ಪೂರ್ಣ ಕಾಮಗಾರಿಯು ಕ್ಲಪ್ತ ಸಮಯದಲ್ಲಿ ಪೂರ್ಣಗೊಳ್ಳಲಿದೆ. ಗಣಪತಿ ವಿಸರ್ಜನಾ ಟ್ರಾಲಿಯನ್ನು ಸುಧಾರಿಸುವುದಾಗಿ ಅವರು ತಿಳಿಸಿದರು.

ಸೇವಾ ಮಂಡಳದ ಕಾರ್ಯಕಾರಿ ಸಮಿತಿಯ ಸದಸ್ಯ ಪ್ರಶಾಂತ್‌ ಮಲ್ಯ ಅವರು ಮಾತನಾಡಿ, ಸ್ವಯಂಸೇವಕರು ತಮ್ಮ ವರ್ಷದ ಹೊಸ ಗುರುತು ಪತ್ರವನ್ನು ಸೇವಾ ಮಂಡಳದ ಕಾರ್ಯಾಲಯದಿಂದ ಪಡೆದುಕೊಳ್ಳಬೇಕು ಎಂದು ಸೂಚಿಸಿದರು. ಮಂಡಳದ ಜೊತೆ ಕೋಶಾಧಿಕಾರಿ ವಿಷ್ಣು ಕಾಮತ್‌ ಇವರು ಮಾತನಾಡಿ, ಸೇವಾ ಮಂಡಳದ ಮೊಬೈಲ್‌ ಆ್ಯಪ್‌ನ ಬಗ್ಗೆ ವಿವರಿಸಿ, ಇಂದಿನ ಡಿಜಿಟಲ್‌ ಯುಗದಲ್ಲಿ ನಾವು ಅದರ ಲಾಭವನ್ನು ಪಡೆದುಕೊಳ್ಳಬೇಕು ಎಂದರು.

ಸಭೆಯಲ್ಲಿ ಮಂಡಳದ ಕಾರ್ಯಕಾರಿ ಸಮಿತಿಯ ಸದಸ್ಯರು, ಸ್ವಯಂ ಸೇವಕರು, ಕಾರ್ಯಕರ್ತರು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಮಂಡಳದ ಕಾರ್ಯದರ್ಶಿ ಶಿವಾನಂದ ಭಟ್‌ ಅವರು ವಂದಿಸಿದರು. ಮುಂದಿನ ಪೂರ್ವಭಾವಿ ಸಭೆಯು ಆ. 4 ರಂದು ಸಂಜೆ 7.35 ಕ್ಕೆ ಜಿಎಸ್‌ಬಿ ಸೇವಾ ಮಂಡಲ, ಶ್ರೀ ಗುರುಗಣೇಶ ಪ್ರಸಾದ್‌ ಸಭಾಗೃಹ ಸಯಾನ್‌ ಪೂರ್ವದಲ್ಲಿ ನಡೆಯಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next