Advertisement

ಸಮುದ್ರ ಪೂಜೆ ಮುಗಿಸಿ ಕಡಲಿಗಿಳಿದ ನಾಡದೋಣಿಗಳು

01:20 AM Jul 13, 2017 | Team Udayavani |

ಕುಂದಾಪುರ: ಬಹಳಷ್ಟು ನಿರೀಕ್ಷೆಯ ನಾಡದೋಣಿ ಮೀನುಗಾರಿಕೆಗೆ ಬುಧವಾರ ಚಾಲನೆ ದೊರಕಿದೆ. ನಾಡದೊಣಿ ಮೀನುಗಾರಿಕೆ ಆರಂಭ ಆಳ ಸಮುದ್ರ ಮೀನುಗಾರಿಕೆಗೆ ವಿರಾಮ ನೀಡುತ್ತಿದ್ದಂತೆ ನಾಡದೊಣಿ ಮೀನುಗಾರಿಕೆ ಆರಂಭವಾಗಬೇಕಾಗಿತ್ತು. ಆದರೆ  ಸಮುದ್ರದಲ್ಲಿ ಅಗತ್ಯ ಪ್ರಮಾಣದ ತೂಫಾನ್‌ ಕಂಡು ಬಾರದೇ ಇರುವುದರಿಂದ ನಾಡದೋಣಿ ಮೀನುಗಾರಿಕೆಗೆ ಕೊಂಚ ತಡವಾದರೂ ಬುಧವಾರ ಮೀನುಗಾರರು ಸಂತಸದಿಂದ  ತಮ್ಮ ದೋಣಿಗಳಲ್ಲಿ ಮೀನುಗಾರಿಕೆಗೆ ತೆರಳಿದರು.

Advertisement

ಸಮುದ್ರ ಪೂಜೆಯ ಬಳಿಕ ಚಾಲನೆ 
ಮರವಂತೆಯಲ್ಲಿ ಮಂಗಳವಾರ ಕುಂದಾಪುರ ತಾಲೂಕು ಸಾಂಪ್ರದಾಯಿಕ ನಾಡದೋಣಿ  ಮೀನುಗಾರರ ಒಕ್ಕೂಟದ ವತಿಯಿಂದ ಶ್ರೀ ವರಾಹ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ನೆರವೇರಿ ಅನಂತರ ಸಮುದ್ರ ಪೂಜೆ ನಡೆಸಲಾಯಿತು. ಬುಧವಾರ ಗಂಗೊಳ್ಳಿಯ ಮಡಿ ತೀರದಲ್ಲಿಯೂ ಕೂಡ ಸಮುದ್ರ ಪೂಜೆಯ ಬಳಿಕ ನಾಡದೋಣಿ ಮೀನುಗಾರಿಕೆಗೆ ಚಾಲನೆ ನೀಡಲಾಯಿತು.

ಆಶಾವಾದದಿಂದ
ಸಮುದ್ರದಲ್ಲಿ  ತೂಫಾನ್‌ ಎದ್ದರೆ ಮಾತ್ರ ಮೀನುಗಳು ಹೇರಳವಾಗಿ ಲಭ್ಯ ಆಗುತ್ತವೆ. ಕಳೆದ ಬಾರಿ ನಾಡದೋಣಿ ಮೀನುಗಾರಿಕೆ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಆದರೆ ಈ ಬಾರಿಯಾದರೂ ಉತ್ತಮ ಮೀನುಗಾರಿಕೆಯ ಆಶಾಭಾವನೆಯೊಂದಿಗೆ ನಾಡದೋಣಿ ಮೀನುಗಾರರು ಕಡಲಿಗೆ ಇಳಿದಿದ್ದಾರೆ. ಒಟ್ಟಿನಲ್ಲಿ ಉತ್ತಮ ಮೀನು ಬೇಟೆಯ ನಿರೀಕ್ಷೆಯಲ್ಲಿ  ಮೀನುಗಾರರು ಕಡಲಿಗೆ ಇಳಿದಿದ್ದಾರೆ.

ಸಾಂಪ್ರದಾಯಿಕ ಮೀನುಗಾರಿಕೆ
ಗಂಗೊಳ್ಳಿಯ ಲೈಟ್‌ಹೌಸ್‌ ಬಳಿಯ ಮಡಿ ಪರಿಸರದಲ್ಲಿ  ಹಾಗೂ ಮರವಂತೆಯ ಹೊರ ಬಂದರು ಪ್ರದೇಶದಲ್ಲಿ  ಪ್ರತಿವರ್ಷ ನಡೆಯುತ್ತಿರುವ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ  ಮೀನುಗಾರರು ತೆರಳುವ ದೃಶ್ಯ ಕಂಡು ಬಂತು  ಉಡುಪಿಯ ಗಡಿ ಭಾಗವಾದ ಶಿರೂರಿನಿಂದ ಸಾಸ್ತಾನದ ಕೋಡಿಯ ತನಕದ ಸಾವಿರಾರು ಮೀನುಗಾರರು  ಮರವಂತೆ ಹಾಗೂ ಗಂಗೊಳ್ಳಿಯ ಮಡಿ ಪ್ರದೇಶದಲ್ಲಿ ನಾಡದೋಣಿ ಮೀನುಗಾರಿಕೆ ನಡೆಸುತ್ತಿದ್ದಾರೆ.

– ಉದಯ ಆಚಾರ್‌ ಸಾಸ್ತಾನ

Advertisement
Advertisement

Udayavani is now on Telegram. Click here to join our channel and stay updated with the latest news.

Next