Advertisement

ಮನುಕುಲದ ತಲ್ಲಣಗಳ ಕೈಗನ್ನಡಿ “ತಲ್ಲಣ’

11:10 PM Mar 28, 2019 | mahesh |

ಮಾನಸಿಕ ತೊಂದರೆಗಳಿರುವ ವ್ಯಕ್ತಿಗಳಿಗೆ ಅವರದ್ದೇ ಆದ ಪ್ರಪಂಚವಿದೆ,ಅವರದ್ದೇ ಆದ ಬದುಕಿದೆ, ಮನಸ್ಥಿತಿಯಿದೆ. ಅವರ ಮನದಲ್ಲಿ ಯಾವುದೇ ಕಲ್ಮಶಗಳಿಲ್ಲ. ಆದರೆ ಅವರನ್ನು ಹುಚ್ಚರು ಅನ್ನೋ ಮೊದ್ಲು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಬೇಕಾಗುತ್ತದೆ,

Advertisement

ಸಮಾಜದಲ್ಲಿ ಅನಾಚಾರ,ದುಷ್ಕೃತ್ಯಗಳು ತಾಂಡವವಾಡುತ್ತಲೇ ಇದೆ. ಭ್ರಷ್ಟಾಚಾರ,ಲಂಚಕೋರತನ, ಹಿರಿ ಜೀವಗಳ ಮೇಲಿನ ಅಸಡ್ಡೆ , ಹೊನ್ನು,ಹೆಣ್ಣು,ಮಣ್ಣಿನ ವ್ಯಾಮೋಹ ಮನುಷ್ಯನನ್ನು ಮೃಗಸದೃಶವನ್ನಾಗಿಸಿದೆ. ಇವನ್ನೆಲ್ಲಾ ಖಂಡಿಸಬೇಕಾಗಿದ್ದ ಬುದ್ಧಿವಂತ,ವಿಚಾರವಂತ ಮನುಷ್ಯನೇ ಅವುಗಳನ್ನು ಪ್ರೋತ್ಸಾಹಿಸುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿ. ಇದಕ್ಕೆಲ್ಲ ಹಿಡಿದ ಕೈಗನ್ನಡಿಯೆಂಬಂತೆ ಇದೆ “ತಲ್ಲಣ’ ಪ್ರಹಸನ. ಈ ಪ್ರಹಸನದಲ್ಲಿ ಮಾನಸಿಕ ಅಸ್ವಸ್ಥರೆಂದು ಹುಚ್ಚಾಸ್ಪತ್ರೆ ಸೇರಿದ ವ್ಯಕ್ತಿಗಳು ಸಮಾಜದಲ್ಲಾಗುತ್ತಿರುವ ತಲ್ಲಣಗಳ ಎಳೆಯನ್ನು ಬಿಚ್ಚುತ್ತಾ ಹೋಗುತ್ತಾರೆ.ಶಾಂತಿಧಾಮವೆಂದು ಆ ಚಿಕಿತ್ಸಾಲಯಕ್ಕೆ ಹೆಸರಿಡಲಾಗಿದೆ. ಎಸ್‌ಡಿಎಂ ರಂಗ ಅಧ್ಯಯನ ಕೇಂದ್ರ ಉಜಿರೆ ತಂಡದ ಪ್ರಸ್ತುತಿ,ಸ್ಮಿತೇಶ್‌ ಬಾರ್ಯ ರವರ ಪರಿಕಲ್ಪನೆ ಹಾಗೂ ನಿರ್ದೇಶನ ಮತ್ತು ಯಶವಂತ್‌ ಬೆಳ್ತಂಗಡಿ ಇವರ ಸಹಕಾರದಲ್ಲಿ ತಲ್ಲಣ ಪ್ರಹಸನ ಮನೋಜ್ಞವಾಗಿ ಮೂಡಿಬಂದಿದೆ. ವಿದ್ಯಾರ್ಥಿಗಳು ತಮ್ಮ ಅಭಿನಯದಿಂದ ಜನರ ಮನಸ್ಸನ್ನು ಗೆದ್ದಿ¨ªಾರೆ. ಸುಶ್ರಾವ್ಯವಾದ ಹಿನ್ನೆಲೆ ಗಾಯನವೂ ಪ್ರಹಸನದ ಯಶಸ್ವಿಗೆ ಕಾರಣವಾಗಿದೆ.

ಹುಚ್ಚಾಸ್ಪತ್ರೆಯ ರೋಗಿಗಳ ದಿನನಿತ್ಯದ ಕೀಟಲೆಗಳಿಂದ ಪ್ರಾರಂಭವಾಗುವ ಪ್ರಹಸನ ಕ್ರಮೇಣ ತನ್ನ ತೀವ್ರತೆಯನ್ನು ಹೆಚ್ಚಿಸುತ್ತಾ ಹೋಗುತ್ತದೆ. ಹಿಂದಿನ ಕಾಲಕ್ಕೂ ಇಂದಿನ ಸಮಾಜಕ್ಕೂ ಇರುವ ವ್ಯತ್ಯಾಸವನ್ನು ತಿಳಿಸುತ್ತಾ ಹೋಗುತ್ತದೆ ಧರ್ಮ,ಮತ,ಜಾತಿಗಳನ್ನು ಮರೆತು ಎಲ್ಲರೂ ಒಂದಾಗಿ ಕಲೆತು ಭೇದಭಾವವಿಲ್ಲದೇ ಊರ ಜಾತ್ರೆಯನ್ನು ಸಂಭ್ರಮದಿಂದ ಬರಮಾಡಿಕೊಳ್ಳುವ ಕಾಲವೊಂದಿತ್ತು.ಆದರೆ ಇಂದು ಅದೇ ಜಾತಿಗಳ ನಡುವೆ ಕಲಹ ಒಡಮೂಡಿ ಕೋಮುವಾದಕ್ಕೆ ಎಡೆಮಾಡಿಕೊಟ್ಟದೆ ಎನ್ನುವಾಗ ಪಾತ್ರಧಾರಿಗಳ ಕಣ್ಣಲ್ಲಿ ವಿಷಾದದ ಛಾಯೆ ಎದ್ದು ಕಾಣುತ್ತದೆ.

ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯಗಳಿಗೆ ಮಾರ್ದನಿಯಾಗಿದೆ ಈ ಪ್ರಹಸನ. ಸಮಾಜ ಎಷ್ಟೇ ಸ್ವತಂತ್ರವಾಗಿದೆ ಎಂದರೂ ಒಬ್ಬ ಹೆಣ್ಣಿಗೆ ಒಂಟಿಯಾಗಿ ತಿರುಗಾಡಲು ಸಾದ್ಯವಾಗುತ್ತಿಲ್ಲ.ಹಾಡುಹಗಲೇ ಕಾಮಪಿಶಾಚಿಗಳ ದಾಹಕ್ಕೆ ನಲುಗಿಹೋಗುವ,ತನ್ನನ್ನು ರಕ್ಷಿಸಿ ಕೊಳ್ಳಲಾಗದೇ ಹೋಗುವ ಅವಳ ಅಸಹಾಯಕತೆಯನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಲಾಗಿದೆ.

ನಿರುದ್ಯೋಗ ಅನ್ನೋದು ಬೃಹತ್‌ ಸಮಸ್ಯೆಯಾಗಿ ಪರಿಣಮಿಸಿರುವ ಸಂದರ್ಭದಲ್ಲಿ ಉದ್ಯೋಗ ಕೊಡಿಸುತ್ತೇವೆಂದು ಪೊಳ್ಳು ಭರವಸೆ ನೀಡಿ ಹಣ ಕೀಳುವ ದಲ್ಲಾಳಿಗಳ ಬಗೆಗಿನ ಚಿತ್ರಣ ಕೂಡಾ ಈ ಪ್ರಹಸನ ನಮ್ಮ ಕಣ್ಣ ಮುಂದೆ ತೆರೆದಿಡುತ್ತದೆ. ಯಾವುದೇ ಕುಂದುಕೊರತೆಗಳೆದುರಾಗಬಾರದು ಎಂದು ಮುಚ್ಚಟೆಯಾಗಿ ಬೆಳೆಸಿದ ಮಕ್ಕಳೇ ವೃದ್ಧ ತಂದೆತಾಯಿಯನ್ನು ವೃದ್ಧಾಶ್ರಮಗಳಿಗೆ ಅಟ್ಟುತ್ತಿರುವ ಹೃದಯ ವಿದ್ರಾವಕ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿರುವ ಸಮಾಜದಲ್ಲಿ ನಾವಿಂದು ಬದುಕುತ್ತಿದ್ದೇವೆ ಎನ್ನುವ ಕಹಿ ಸತ್ಯವನ್ನು ನಮ್ಮ ಮುಂದೆ ತಲ್ಲಣ ತೆರೆದಿಡುತ್ತದೆ.

Advertisement

ಅನ್ಯಾಯಗಳನ್ನು ಕಂಡು ಕಾಣದಂತೆ ಅದನ್ನು ನೀರೆರೆದು ಪೋಷಿಸುತ್ತಿರುವ ಮಾನವ ಕುಲಕ್ಕೆ ಪ್ರಶ್ನೆಯೆಂಬಂತೆ ಮಾನಸಿಕ ತೊಂದರೆಗಳಿರುವ ವ್ಯಕ್ತಿಗಳಿಗೆ ಅವರದ್ದೇ ಆದ ಪ್ರಪಂಚವಿದೆ,ಅವರದ್ದೇ ಆದ ಬದುಕಿದೆ, ಮನಸ್ಥಿತಿಯಿದೆ. ಅವರ ಮನದಲ್ಲಿ ಯಾವುದೇ ಕಲ್ಮಶಗಳಿಲ್ಲ. ಆದರೆ ಅವರನ್ನು ಹುಚ್ಚರು ಅನ್ನೋ ಮೊದ್ಲು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಬೇಕಾಗುತ್ತದೆ, ಅವರ ಹುಚ್ಚಿಗೆ ಮಾತ್ರೆ ತಗೊಳ್ತಾರೆ, ಆದ್ರೆ ನಮ್ಮ ಹುಚ್ಚಿಗೆ…?ಈ ಪ್ರಶ್ನೆಯ ಮೂಲಕ ಪ್ರಹಸನ ಕೊನೆಗೊಳ್ಳುತ್ತದೆ. ಉತ್ತಮ ರಂಗಸಜ್ಜಿಕೆ,ಬೆಳಕು,ಹಿನ್ನಲೆ ಧ್ವನಿ ಮತ್ತು ಸಂಗೀತ ತಲ್ಲಣ ಕ್ಕೆ ಇನ್ನಷ್ಟು ಮೆರುಗನ್ನು ನೀಡಿದೆ.

ರಶ್ಮಿ ಯಾದವ್‌ ಕೆ.

Advertisement

Udayavani is now on Telegram. Click here to join our channel and stay updated with the latest news.

Next